400 ಜನ ರೈತ ಹೋರಾಟಗಾರರಿಂದ ದಯಾ ಮರಣಕ್ಕೆ ಅರ್ಜಿ ಹಾಕಲು ನಿರ್ಧಾರ!
ಹುಬ್ಬಳ್ಳಿ , ಏಪ್ರಿಲ್ 20 : ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಹುಬ್ಬಳ್ಳಿಯ ಮೂರು ಸಾವಿರ ಮಠದಿಂದ ಏ.25ರಂದು ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರೈತಸೇನಾ ಅಧ್ಷಕ್ಷ ವೀರೇಶ ಸೊಬರದ ಮಠ ಹೇಳಿದರು.
'ನೀರು ಮೊದಲು, ಧರ್ಮ ಆಮೇಲೆ': ಕಳಸಾ-ಬಂಡೂರಿ ಹೋರಾಟಗಾರರ ಒತ್ತಾಯ
ರೈತ ಹುತಾತ್ಮ ವೀರಗಲ್ಲು ಎದುರು ಮಹದಾಯಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ನಡೆದ 1009ನೇ ದಿನ ಧರಣಿಯಲ್ಲಿ ಮಾತನಾಡಿದ ಅವರು ಯೋಜನೆ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸಿವೆ. ರೈತರ ಜೊತೆ ಎರಡೂ ಸರ್ಕಾರಗಳು ಚೆಲ್ಲಾಟವಾಡುತ್ತಿವೆ. ಹೋರಾಟ 1010 ದಿನ ಪೂರೈಸಿದರೂ ಯೋಜನೆ ಅನುಷ್ಠಾನವಾಗಿಲ್ಲ. ಸರ್ಕಾರದ ನಿಲುವುಗಳಿಂದ ಮಾನಸಿಕ ಹಿಂಸೆಯಾಗುತ್ತಿದೆ. ಹೀಗಾಗಿ ದೆಹಲಿ ಚಲೋ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ರಾಷ್ಟ್ರಪತಿ ಮಧ್ಯಪ್ರವೇಶ ಮಾಡಿ ಸಮಸ್ಯೆ ಇತ್ಯರ್ಥ ಮಾಡಬೇಕು ಎಂದು ರಾಷ್ಟ್ರಪತಿಗಳಲ್ಲಿ ಮನವಿ ಸಲ್ಲಿಸಲಾಗುವುದು. ಇಲ್ಲವಾದರೆ ಸರ್ಕಾರದ ಬೇಜವಾಬ್ದಾರಿ ಖಂಡಿಸಿ ದಯಾ ಮರಣಕ್ಕೆ ಅಂದೇ ಅರ್ಜಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.
ಸುಮಾರು 400 ಜನ ರೈತ ಹೋರಾಟಗಾರರಿಂದ ದಯಾ ಮರಣಕ್ಕೆ ಅರ್ಜಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ. ಮೇ 5 ರಂದು ಚುನಾವಣೆಯಲ್ಲಿ ಮತದಾನ ಮಾಡುವ ಬಗ್ಗೆ ನಿರ್ಧಾರ ತಗೆದುಕೊಳ್ಳಲಾಗುವದು. ಯಾವುದೇ ಕಾರಣಕ್ಕೂ ರೈತ ಸಂಘಟನೆ ಮತದಾನ ಬಹಿಷ್ಕಾರ ಮಾಡುವುದಿಲ್ಲ. ರೈತರ ಮತದ ಮಹತ್ವ ಏನು ಎಂಬುದನ್ನು ರಾಜಕೀಯ ನಾಯಕರಿಗೆ ಪಾಠ ಕಲಿಸಲಾಗುವುದು ಎಂದು ಆಕ್ರೋಶಭರಿತರಾಗಿ ನುಡಿದರು.
ಹೋರಾಟಗಾರರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಎಲ್ಲ ರೈತರನ್ನು ದಿಲ್ಲಿಗೆ ಕೆರೆದುಕೊಂಡು ಹೋಗಲು ಆಗುವುದಿಲ್ಲ, ದಾನಿಗಳು ಧನಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
ಹೋರಾಟ ವೇದಿಕೆಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ, ಉಪಾಧ್ಯಕ್ಷ ರಮೇಶ ನಾಯ್ಕರ, ಎಸ್.ಬಿ.ಜೋಗನ್ನವರ, ಎಂ.ಎಂ.ನಂದಿ, ಎಸ್.ಬಿ.ಕೊಣ್ಣೂರ, ವಿಜಯ ಕೋತಿನ, ಲಕ್ಷ್ಮಣ ಮುನೇನಕೊಪ್ಪ, ಎಂಕಪ್ಪ ಹುಜರತ್ತಿ, ಈರಣ್ಣ ಗಡಗಿಶೆಟ್ರ, ಸಂಭಾಜಿ ಜಾಧವ, ಅರ್ಜುನ ಮಾನೆ, ಸಿ.ಎ.ಜಿನಗಾ, ಕಾಡಪ್ಪ ಕಾಕನೂರ, ಯಲ್ಲವ್ವ ಹನಸಿ, ಸಾವಕ್ಕ ಹನಸಿ, ರಾಯವ್ವ ಕಟಗಿ, ಮಾಬೂಬಿ ಕೆರೂರ, ಯಮನಪ್ಪ ಬಡಿಗೇರ, ಮಲ್ಲಪ್ಪ ನಾಯ್ಕರ, ಚನ್ನಬಸಪ್ಪ ಕಗದಾಳ, ದೇವಕ್ಕ ಚಲವನ್ನವರ, ಎಂಕಪ್ಪ ಹುಜರತ್ತಿ ಮುಂತಾದವರಿದ್ದರು.