ಕೃಷಿ ಕಾಯ್ದೆಗಳ ಪರ ಬಿ.ಸಿ ಪಾಟೀಲ್ ಬ್ಯಾಟಿಂಗ್: ರನ್ ಔಟ್ ಮಾಡಿದ ರೈತ ಮುಖಂಡರು
ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ ಮೂರು ಕಾಯಿದೆಗಳ ವಿರುದ್ಧ ಇಡೀ ದೇಶದ ರೈತರು ಹೋರಾಟ ಮಾಡುತ್ತಿದ್ದರೆ, ಕರ್ನಾಟಕದ ಕೃಷಿ ಸಚಿವ ಬಿ.ಸಿ ಪಾಟೀಲ್ ಅಧಿವೇಶನ ಮುಗಿದ ಬಳಿಕ ತಮ್ಮ ಸಹೋದ್ಯೋಗಿಗಳೊಂದಿಗೆ ರಾಜ್ಯ ಪ್ರವಾಸ ಕೈಗೊಂಡು ಕಾಯಿದೆಗಳ ಅನುಕೂಲತೆ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುವುದಾಗಿ ಹೇಳುತ್ತಿದ್ದಾರೆ.
"ರೈತರು ಬಾರುಕೋಲು ಹಿಡಿದು ಚಳವಳಿ ಮಾಡುವಂಥದ್ದೇನೂ ಇಲ್ಲ, ರೈತರ ಅನುಕೂಲಕ್ಕಾಗಿಯೇ ಕಾಯಿದೆಗಳನ್ನು ತರಲಾಗಿದೆ" ಎಂದೂ ಹೇಳಿದ್ದಾರೆ. ಸಚಿವರ ಮಾತು ಕೇಳಿದ ಮೇಲೆ "ಒನ್ಇಂಡಿಯಾ ಕನ್ನಡ' ರೈತ ಸಂಘದ ಹಿರಿಯ ಮುಖಂಡ ವೀರಸಂಗಯ್ಯ ಅವರನ್ನು ಮಾತನಾಡಿಸಿದಾಗ ಅವರ ಪ್ರತಿಕ್ರಿಯೆ ಹೀಗಿದೆ.
ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್
ಬರ್ರಿ ನಮ್ಮ ನಿಜ ಪರಿಸ್ಥಿತಿ ತಿಳಿಸ್ತೀವಿ
""ಬಿ.ಸಿ ಪಾಟೀಲರಿಗೆ ಈ ಕಾನೂನಿನ ಬಗ್ಗೆ ಕನಿಷ್ಟ ತಿಳುವಳಿಕೆ ಇಲ್ಲದ ಸ್ಥಿತಿ ಇದೆ. ಜಾತಿ ಆಧಾರವಾಗಿ ಜನರ ಮನಸ್ಸು ಗೆಲ್ಲಬಹುದೆಂಬ ವಿಶ್ವಾಸ ಇಟ್ಕೊಂಡಿರಬೇಕು, ಅದು ನಡೆಯೋಲ್ಲ. ಹಿಂದೆ ಅವರೇ "ರೈತರು ಹೇಡಿಗಳು" ಅಂದಿದ್ದರು. ಹಿರೇಕೆರೂರು ಅವರದ್ದೇ ಕ್ಷೇತ್ರ. ಅಲ್ಲಿ ನೆರೆ ಹಾವಳಿಯಿಂದ ಭೂಮಿಯಲ್ಲಿ ನೀರು ನಿಂತಿತ್ತು. ಅಂತಹ ಸಂದರ್ಭದಲ್ಲಿ ಸರ್ಕಾರ ಅವರಿಗೆ ಏನು ಮಾಡಿದೆ? ಸರ್ಕಾರ ಏನಾದರೂ ನೆರವಿಗೆ ನಿಲ್ತಾ? ರೈತರಿಗೆ ಸಾಲ ಕಟ್ಟಿ ಅಂಥಾ ನೋಟೀಸ್ ಕೊಟ್ರಲ್ಲಾ ಅಂಥ ಪರಿಸ್ಥಿತಿಯಲ್ಲಿ ಸ್ವಾಭಿಮಾನಿ ರೈತನ ಪಾಡೇನು? ರೈತ ಹೇಡಿಯಲ್ಲ, ಸರ್ಕಾರ ರಣಹೇಡಿ'' ಎಂದು ವಾಗ್ದಾಳಿ ನಡೆಸಿದ ವೀರಸಂಗಯ್ಯ, ""ಹಳ್ಳಿಗೆ ಬರ್ರಿ ನಮ್ಮ ನಿಜ ಪರಿಸ್ಥಿತಿ ತಿಳಿಸ್ತೀವಿ. ಮನೆ ಮನೆಗೆ ಜಾಗೃತಿಗೊಳಿಸುವ ಕಾರ್ಯ ಆರಂಭವಾಗಿದೆ. ಹಳ್ಳಿಗಳನ್ನು ದಾಟಿ ಅರಿವಾಗುತ್ತದೆ. ನಮ್ಮ ಮಕ್ಕಳ ಪ್ರಶ್ನೆಗಳಿಗೆ ನಿಮ್ಮಿಂದ ಉತ್ತರ ಕೊಡೋಕಾಗಲ್ಲ" ಎಂದು ಸವಾಲು ಎಸೆದಿದ್ದಾರೆ.
ಭೂ ಸುಧಾರಣೆ ಕಾಯಿದೆ ಮತ್ತು ರಾಜಕಾರಣ
ಭೂ ಸುಧಾರಣೆ ವಿಷಯವೂ ನಿಮಗೆ ಹೇಳಿ ಬಿಡುತ್ತೇನೆ ಎಂದವರು, "ಈ ಭೂಸುಧಾರಣೆ ಕಾಯಿದೆ ಸಂಬಂಧ 79ಎ ಕೃಷಿಕರಲ್ಲದವರು ಯಾವುದೇ ಕಾರಣಕ್ಕೆ ರೈತರ ಭೂಮಿಯನ್ನು ಕೊಂಡುಕೊಳ್ಳುವಂತಿಲ್ಲ ಎಂಬ ಅಂಶವನ್ನು ಖಾತ್ರಿಪಡಿಸುತ್ತದೆ.
79ಬಿ 25 ಲಕ್ಷದವರೆಗೆ ಆದಾಯ ಮಿತಿ ಇರುವವರು ಕೃಷಿ ಭೂಮಿಯನ್ನು ಕೊಳ್ಳಬಹುದು ಎಂಬುದನ್ನು ಖಾತ್ರಿಪಡಿಸುತ್ತದೆ.
79ಸಿ ಮೇಲಿನ ಎರಡೂ ನಿಯಗಳನ್ನು ಉಲ್ಲಂಘಿಸಿದರೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬಹುದು ಎಂಬುದನ್ನು ಖಾತ್ರಿಪಡಿಸುತ್ತದೆ.
ಕರ್ನಾಟಕ ರಾಜ್ಯದಲ್ಲಿ 13,000 ಜನರ ಮೇಲೆ ಈ ರೀತಿಯ ಕೇಸುಗಳು ದಾಖಲಾಗಿದ್ದವು. ಅವುಗಳಲ್ಲಿ 5000 ಕ್ಕಿಂತ ಹೆಚ್ಚು ಬೆಂಗಳೂರು ಸುತ್ತಮುತ್ತಲಿನ ಕೇಸುಗಳು. ಇನ್ನುಳಿದವು 58 ನಗರಗಳ ಆಜೂ ಬಾಜೂ ಇರುವಂತಹವು. ಈ ಎಲ್ಲಾ ಕೇಸುಗಳು ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ಮುಖಂಡರದ್ದೇ ಆಗಿವೆ. ಹಾಗಾಗಿ ಇವುಗಳ ತಿದ್ದುಪಡಿಯಲ್ಲಿ ಎಲ್ಲರಿಗೂ ಆಸಕ್ತಿ ಬಂದಿದೆ ಎಂದು ವಾಸ್ತವಾಂಶವನ್ನು ಬಿಡಿಸಿಟ್ಟರು.
ಕಾಯಿದೆ ಬದಲಾವಣೆ ಇಲ್ಲ
ಬಿ.ಸಿ ಪಾಟೀಲರು ತಮ್ಮ ಮಾತು ಮುಂದುವರೆಸುತ್ತಾ, ""ಈಗಾಗಲೇ ಒಂದು ಸಾರಿ ಪ್ರವಾಸ ಮಾಡಿದ್ದೇವೆ. ಆದರೆ ಎಲ್ಲಿಯೂ ಕೂಡ ಯಾವ ರೈತರಿಂದಲೂ ಕಾಯಿದೆ ಬಗ್ಗೆ ಅಪಸ್ವರ ಬಂದಿಲ್ಲ. ವಿಧಾನಸಭೆ ಅಧಿವೇಶನ ನಡೆಯುವಾಗ ಇಂತಹ ಪ್ರತಿಭಟನೆ ಸಹಜ. ಇದರಿಂದ ಸಾರ್ವಜನಿಕರಿಗೆ ಸುಮ್ಮನೆ ತೊಂದರೆ ಕೊಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾಯಿದೆ ಬದಲಾವಣೆ ಇಲ್ಲ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಸ್ಪಷ್ಟಪಡಿಸಿದೆ ಎಂದು ಹೇಳಿದರು. ಆ ಬಗ್ಗೆ ಹಿರಿಯ ರೈತ ಮುಖಂಡ ಕೆ.ಟಿ.ಗಂಗಾಧರ್ ಅವರನ್ನು ಮಾತನಾಡಿಸಿದಾಗ "ನೋಡಿ 1983 ರಲ್ಲಿ ರಾಮಕೃಷ್ಣ ಹೆಗಡೆ ಅಧಿಕಾರ ವಹಿಸಿಕೊಂಡರು. ಆಗ 101 ಸಿ ಸಾಲ ವಸೂಲಿ ಕಾಯಿದೆ ತಿದ್ದುಪಡಿ ತಂದರು. ನಾವು ರಾಜ್ಯದ ಎಲ್ಲಾ ಭಾಗಗಳಿಂದ ಪಾದಯಾತ್ರೆಯಲ್ಲಿ ಬೆಂಗಳೂರಿಗೆ ಹೋದ್ವಿ. ಆಗ ಚಳವಳಿ ಸಕ್ಸಸ್ ಆಗ್ಲಿಲ್ಲ.
ಭಾಜಪ ಸರ್ಕಾರ ತಂದವರು ರೈತರೇ
""ಅದಕ್ಕೆ ಕಾರಣ ಹುಡುಕ್ತಾ ಹೋದ್ರೆ ಗೋಚರವಾಗೋದೇನಪ್ಪ ಅಂದ್ರೆ, ನಾವೇ ರೈತರು ಕಾಂಗ್ರೆಸ್ ವಿರುದ್ಧ ಹೆಗಡೆಯನ್ನು ಗೆಲ್ಸಿದ್ವಿ. 136 ಜನರನ್ನು ಕೊಂದ ಕಾಂಗ್ರೆಸ್ ಪಕ್ಷಕ್ಕೆ ಮತ ಇಲ್ಲ ಅಂದ್ವಿ. ಆಗ ರೈತರು ಹೆಗಡೆಯನ್ನು ಆಯ್ಕೆ ಮಾಡಿದರು. ಆಗ ಹುಟ್ಟಿಕೊಂಡಿದ್ದೇ ಈ ಪಾಪದ ಪಿಂಡ. ಈ ಉದಾಹರಣೆ ಯಾಕಪ್ಪ ಅಂದರೆ ರಾಜ್ಯದಲ್ಲಿ ಭಾಜಪ ಸರ್ಕಾರ ತಂದವರು ರೈತರೇ. ಹಿಂದಿನ ಸರ್ಕಾರಗಳು ತಪ್ಪು ಮಾಡಿವೆ ಅಂತಾ. ಈಗ ನಾವೇ ಗೆಲ್ಲಿಸಿದ ಸರ್ಕಾರದ ಬಗ್ಗೆ ಪೂರ್ಣವಾದ ಪ್ರತಿರೋಧ ಇನ್ನೂ ಬಂದಿಲ್ಲ. ಅಷ್ಟೇ ಮಾತ್ರಕ್ಕೆ ನಾವು ಮಾಡಿದ್ದೇ ಸರಿ ಅಂತಾ ಸರ್ಕಾರ ಅಂದ್ಕೊಂಡರೆ ಹೆಗಡೆಗೆ ಅದ ಗತಿ ಇವರಿಗೂ ಆಗುತ್ತದೆ. ಬಿ.ಸಿ.ಪಾಟೀಲರು ಉಡಾಫೆ ಮಾಡಬಾರದು. ನಾಳೆ ರೈತರು ಮತ ಚೇಂಜ್ ಮಾಡ್ತಾರೆ. ಆಗ ಇದೇ ಕ್ಯಾಂಡಿಡೇಟ್ ಕಾಂಗ್ರೆಸ್ ನಿಂದ ನಿಲ್ತಾರೆ. ಇವರೆಲ್ಲಾ ಅವಕಾಶವಾದಿಗಳಾಗಿದ್ದಾರೆ. ಈಗಿನ ಕರ್ನಾಟಕದ ರಾಜಕಾರಣ ಅವಕಾಶವಾದಿತನವೇ ಹೊರತು, ಸಿದ್ಧಾಂತಕ್ಕೆ ಬದ್ಧವಿಲ್ಲ. ಬಿ.ಸಿ.ಪಾಟೀಲ್ ಕೂಡಾ ಅವಕಾಶವಾದಿ ಅಷ್ಟೇ'' ಎಂದರು.
ರಾಜಕೀಯ ಭಾಷಣ ಮಾಡಬಾರದು
ಇವರಿಗೆ ಒಂದು ಪ್ರಶ್ನೆ ಈಗ್ಲೇ ಕೇಳಬೇಕಿದೆ. ಸುಗ್ರೀವಾಜ್ಞೆ ಮೂಲಕ ಏಕೆ ಕಾಯಿದೆ ತಂದರು? ಫ್ಲೋರ್ ಆಫ್ ದ ಹೌಸ್ ನಲ್ಲಿ ಇವರಿಗೆ ಚರ್ಚೆ ಮಾಡಿ ತರೋಕಾಗದೆ ಇರುವವರು ಜನರ ಮುಂದೆ ಏನು ಮಾತಾಡ್ತಾರಂತೆ. ಬರಲಿ, ಏನೇನು ಒಳ್ಳೇದು ಇದ್ಯೋ ಹೇಳಲಿ. ನಮ್ಮ ಜನ ಪ್ರಶ್ನೆ ಮಾಡ್ತಾರೆ, ಅದಕ್ಕೆ ಉತ್ತರ ಕೊಡಲಿ. ಜನಕ್ಕೆ ಒಪ್ಪಿಗೆ ಇದರೆ ಒಪ್ಕೊಳ್ಳಿ. ಅವರು ಕರೆಯೋ ಸಭೆಗೆ ಹೋಗ್ತೀವಿ. ನಮ್ಮ ಪ್ರಶ್ನೆಗಳಿಗೆ ಉತ್ತರ ಹೇಳಲಿ. ""ಸಿ.ಟಿ. ರವಿ ಅವ್ರೂ ಇಂಥದ್ದೇ ಮಾತುಗಳನ್ನಾಡಿದ್ದಾರೆ. ಅವರೂ ಬರಲಿ, ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಲಿ. ಅವರ್ಯಾರೂ ರಾಜಕೀಯ ಭಾಷಣ ಮಾಡಬಾರದು. ಕಾಯಿದೆ ಬಗ್ಗೆ ಮಾತಾಡಲಿ. ಆರ್.ಎಸ್.ಎಸ್ ನವರೂ ಇದನ್ನು ವಿರೋಧಿಸುತ್ತಿರುವ ಕಾನೂನುಗಳಿವು. ಅದೇನು ಮಾತನಾಡುತ್ತಾರೋ ಪಾಟೀಲ್ ನೋಡೋಣ. ನಿನ್ನೆಯಿಂದ ಮೋದಿ, ಅಮಿತ್ ಶಾ ಕಾಯಿದೆಗಳಿಗೆ ತಿದ್ದುಪಡಿ ತರುವುದಿಲ್ಲ ಅಂದಿದ್ದಾರೆ. ಮುಂದೆ ಚುನಾವಣೆ ಬರುತ್ತೆ, ಜನ ಉತ್ತರ ಕೊಡ್ತಾರೆ ಎಂದು ಕೆ.ಟಿ ಗಂಗಾಧರ್ ಕಟುವಾಗಿ ಉತ್ತರಿಸಿದ್ದಾರೆ.
ಕಾಂಗ್ರೆಸ್ ಮತ್ತು ಎಪಿಎಂಸಿ
2019ರ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎ.ಪಿ.ಎಂ.ಸಿ ರದ್ದು ಮಾಡುವ ಪ್ರಸ್ತಾಪವಿತ್ತು. ಮುಕ್ತ ಮಾರುಕಟ್ಟೆ ಮಾಡುವ ಭರವಸೆಯನ್ನೂ ನೀಡಿದ್ದರು. ಈಗ ನಾವದನ್ನು ಮಾಡಿರುವುದಕ್ಕೆ ನಮ್ಮನ್ನು ಮೆಚ್ಚಬೇಕೇ ಹೊರತು, ರಾಜಕೀಯಕ್ಕಾಗಿ ವಿರೋಧಿಸುವುದಲ್ಲ ಎಂದು ಪಾಟೀಲ್ ಕಾಂಗ್ರೆಸ್ ಬಗ್ಗೆ ಮಾತನಾಡಿದ್ದಾರೆ. ಈ ವಿಷಯವಾಗಿ ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಡಾ.ಎಲ್.ಹನುವಂತಯ್ಯ ಅವರ ಪ್ರತಿಕ್ರಿಯೆ ಹೀಗಿದೆ. "ಕಾಂಗ್ರೆಸ್ ತರಬೇಕು ಅಂತ ಹೊರಟಿದ್ದ ಕಾಯಿದೆ ಬೇರೆ. ಅದರಲ್ಲಿ ರೈತರಿಗೆ ಕನಿಷ್ಟ ಬೆಂಬಲ ಬೆಲೆಯ ಪ್ರೊಟೆಕ್ಷನ್ ಸಿಗಬೇಕು ಅನ್ನೋದಿತ್ತು. ಆದರೆ ಈಗ ಇವರು ಏನು ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಬಾಗಿಲು ತೆಗೆದಿದ್ದಾರೆ. ಆರಂಭದಲ್ಲಿ ರೈತರಿಗೆ ಸ್ವಲ್ಪ ಒಳ್ಳೆ ಬೆಲೆ ಸಿಗಬಹುದಾದರೂ, ಮುಂದಿನ ದಿನಗಳಲ್ಲಿ ರೈತರು ಬಹಳ ಕಷ್ಟ ಅನುಭವಿಸಬೇಕಾಗುತ್ತೆ. No gurantee to MSP ರೈತ ವಿರೋಧಿ ಅಲ್ಲದೇ ಮತ್ತೇನು.'' ಇನ್ನು ಬಿ.ಸಿ.ಪಾಟೀಲರು ಮನವರಿಕೆ ಮಾಡಿಕೊಳ್ಳಬೇಕಾದ್ದೇನು ಅಂದರೆ 'ಇಡೀ ಉತ್ತರ ಭಾರತದ ರಾಜಕೀಯೇತರ ರೈತ ಸಂಘಟನೆಗಳು ಈಗ ಚಳವಳಿಯಲ್ಲಿ ತೊಡಗಿರುವುದು. ರಾಜಕೀಯ ಪಕ್ಷಗಳು ಅವರಿಗೆ ಸ್ವಯಂಪ್ರೇರಿತವಾಗಿ ಬೆಂಬಲ ಸೂಚಿಸ್ತಿವೆಯೇ ಹೊರತು, ಅದರಲ್ಲಿ ರಾಜಕೀಯ ಬೆರೆಸಿಲ್ಲ. ಇಂಥ ಒಂದು ಐತಿಹಾಸಿಕ ಹೋರಾಟಕ್ಕೆ ಪಾಟೀಲರು ಅವಮಾನ ಮಾಡುತ್ತಿದ್ದಾರೆ.'
ರಾಹುಲ್ ಗಾಂಧಿ ಬಗ್ಗೆ ಮಾತು ಹರಿಬಿಟ್ಟ ಪಾಟೀಲ್
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಗ್ಗೆ ಮಾತು ಹರಿಬಿಟ್ಟಿರುವ ಪಾಟೀಲ್ "ರೈತರ ಬಗ್ಗೆ ಮಾತನಾಡುವ ಎಐಸಿಸಿ ನಾಯಕ ರಾಹುಲ್ ಗಾಂಧಿ ಎಂದಿಗೂ ಹೊಲಕ್ಕೆ ಹೋಗಿ ಕೆಸರು ತುಳಿದಿಲ್ಲ. ಅವರಿಗೆ ಹೊಲ ಉಳುಮೆ, ಬಿತ್ತುವುದು ಏನೂ ಗೊತ್ತಿಲ್ಲ. ಅವರ ಮುಂದೆ ಬೆಳೆಗಳನ್ನು ಇಟ್ಟರೆ ಯಾವ ಬೆಳೆ ಎನ್ನುವುದೇ ಗೊತ್ತಿಲ್ಲ. ಇವತ್ತಿಗೂ ರಾಹುಲ್ ಗಾಂಧಿಗೆ ಹಾಲು ಎಲ್ಲಿ ಬರುತ್ತದೇ ಎಂಬುದೇ ಗೊತ್ತಿಲ್ಲ. ಅಕ್ಕಿ ಎಲ್ಲಿಂದ ಬರುತ್ತದೆ ಎಂದು ಕೇಳಿದರೆ ಭತ್ತದಿಂದ ಬರುತ್ತದೆ ಎಂದು ಹೇಳಲು ಗೊತ್ತಿಲ್ಲ. ಪಾಪ ಅವರು ಎಲ್ಲೋ ಹೈಫೈ ನಲ್ಲಿ ವಿದೇಶದಲ್ಲಿ ಓದಿಕೊಂಡು ಬಂದಿರುವುದರಿಂದ ಅವರಿಗೆ ರೈತನ ಕಷ್ಟ ಏನು ಗೊತ್ತಿಲ್ಲ ಎಂದು ಬಿ.ಸಿ.ಪಾಟೀಲ್ ರಾಹುಲ್ ಬಗ್ಗೆ ಲೇವಡಿ ಮಾಡಿದ್ದಾರೆ.
ನೈತಿಕ ಹಕ್ಕು ಬಿ.ಸಿ.ಪಾಟೀಲರಂಥ ಪಕ್ಷಾಂತರಿಗಳಿಗಿಲ್ಲ
ರಾಹುಲ್ ಬಗ್ಗೆ ಹಗುರವಾಗಿ ಮಾತನಾಡಿರುವ ಬಿ.ಸಿ.ಪಾಟೀಲ್ ಅವರಿಗೆ ಡಾ.ಎಲ್ ಹನುಮಂತಯ್ಯ ಉತ್ತರ ನೀಡಿದ್ದಾರೆ. "ರಾಷ್ಟ್ರ ಮಟ್ಟದ ನಾಯಕರಾದ ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಬಿ.ಸಿ.ಪಾಟೀಲರಂತಹ ಪಕ್ಷಾಂತರಿಗಳಿಗೆ ಇಲ್ಲ." ಅವರು ನಾಲಿಗೆ ಮತ್ತು ಬುದ್ಧಿಯನ್ನು ಸ್ತಿಮಿತದಲ್ಲಿಟ್ಕೊಂಡು ಮಾತನಾಡಬೇಕು. ನಾವೂ ಮೋದಿ ಬಗ್ಗೆ ಬೇಕಾದ್ದು ಮಾತನಾಡಬಹುದು. ಆದರೆ ಹಾಗೆಲ್ಲಾ ಮಾತನಾಡಬಾರದೆಂಬ ಕನಿಷ್ಟ ವಿವೇಕ ನಮಗಿದೆ. ಅವರಿಗೂ ನಮ್ಮ ವಿವೇಕ ಬರಲಿ ಎಂದು ಹೇಳಿದರು.