ಹೋರಾಟನಿರತ ರೈತರಿಗೆ ಗುಂಡಿಕ್ಕಲು ಸಂಚು; ವ್ಯಕ್ತಿ ಸೆರೆ
ನವದೆಹಲಿ, ಜನವರಿ 23: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ಕೈಗೊಂಡಿರುವ ರೈತ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿದ್ದ ವ್ಯಕ್ತಿಯೊಬ್ಬನನ್ನು ರೈತರೇ ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಶುಕ್ರವಾರ ರೈತರು ಈ ಶಂಕಿತ ವ್ಯಕ್ತಿಯನ್ನು ಸೆರೆ ಹಿಡಿದಿದ್ದಾರೆ. ಜನವರಿ 26ರಂದು ನಡೆಸಲು ಉದ್ದೇಶಿಸಲಾಗಿರುವ ತಮ್ಮ ಟ್ರ್ಯಾಕ್ಟರ್ ಜಾಥಾಗೆ ಅಡ್ಡಿ ತರುವ ಉದ್ದೇಶದಿಂದ ಪೊಲೀಸ್ ಸಮವಸ್ತ್ರದಲ್ಲಿ ಈತ ಬಂದಿದ್ದ. ನಮ್ಮನ್ನು ಗುಂಡಿಕ್ಕಿ ಕೊಲ್ಲುವ ಸಂಚು ರೂಪಿಸಿದ್ದ ಎಂದು ಆರೋಪಿಸಿ ಶುಕ್ರವಾರ ತಡರಾತ್ರಿ ಪತ್ರಿಕಾ ಗೋಷ್ಠಿ ನಡೆಸಿದ ರೈತ ಮುಖಂಡರು ಹರಿಯಾಣ ಪೊಲೀಸರಿಗೆ ಈತನನ್ನು ಒಪ್ಪಿಸಿದ್ದಾರೆ.
ಕೊನೆಯಾಗದ ಸರ್ಕಾರ ರೈತರ ನಡುವಿನ ಬಿಕ್ಕಟ್ಟು; ಮುಂದಿನ ಹೋರಾಟಕ್ಕೆ ಸಜ್ಜು
ಸಿಂಘು ಗಡಿಯ ಪ್ರತಿಭಟನಾ ಸ್ಥಳದಲ್ಲಿ ಈತನನ್ನು ಸೆರೆ ಹಿಡಿಯಲಾಗಿದೆ. ಕೇಂದ್ರದ ವಿರುದ್ಧದ ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ರೈತ ಮುಖಂಡ ಕುಲವಂತ ಸಿಂಘ್ ಸಿಂಧು ಆರೋಪಿಸಿದ್ದಾರೆ.
ಮಾಧ್ಯಮ ಗೋಷ್ಠಿ ವೇಳೆ ಸೆರೆಯಾದ ವ್ಯಕ್ತಿಯು, ತಾನು ನಾಲ್ಕು ಪ್ರಮುಖ ರೈತ ಮುಖಂಡರನ್ನು ಶನಿವಾರ ಗುಂಡಿಕ್ಕಲು ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಜನವರಿ 26ರ ಗಣರಾಜ್ಯೋತ್ಸವದಂದು ಪೊಲೀಸರ ಮೇಲೆ ಗುಂಡು ಹಾರಿಸಿ ಗಲಭೆ ಎಬ್ಬಿಸುವ ಪಿತೂರಿ ಮಾಡಿದ್ದಾಗಿ ತಿಳಿಸಿದ್ದಾನೆ.
ಕೇಂದ್ರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ 26ರಿಂದಲೂ ದೆಹಲಿ ಗಡಿಗಳಲ್ಲಿ ಸುಮಾರು 40 ರೈತ ಸಂಘಟನೆಯ ರೈತ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಶುಕ್ರವಾರ ನಡೆದ ಹನ್ನೊಂದನೇ ಮಾತುಕತೆಯೂ ವಿಫಲವಾಗಿದ್ದು, ಕೃಷಿ ಕಾಯ್ದೆಗಳ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ರೈತ ಮುಖಂಡರು ಪುನರುಚ್ಚರಿಸಿದ್ದಾರೆ. ಗಣರಾಜ್ಯೋತ್ಸವ ದಿನದಂದು ನಗರದಲ್ಲಿ ಟ್ರ್ಯಾಕ್ಟರ್ ಜಾಥಾ ಹಮ್ಮಿಕೊಳ್ಳುವುದು ಖಚಿತ ಎಂದು ಹೇಳಿದ್ದಾರೆ.