ದೆಹಲಿ ಹಿಂಸಾಚಾರ ಪರಿಣಾಮ: ಬಜೆಟ್ ದಿನದ ಸಂಸತ್ ಕಡೆಗೆ ರೈತರ ಮೆರವಣಿಗೆ ರದ್ದು
ನವದೆಹಲಿ, ಜನವರಿ 28: ಗಣರಾಜ್ಯೋತ್ಸವ ದಿನದಂದು ಆಯೋಜಿಸಲಾಗಿದ್ದ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಹಿಂಸಾಚಾರ ನಡೆದ ಬಳಿಕ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಸಂಘಟನೆಗಳ ಹೋರಾಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಫೆಬ್ರವರಿ 1ರ ಬಜೆಟ್ ದಿನದಂದು ನಡೆಸಲು ಉದ್ದೇಶಿಸಿದ್ದ ಸಂಸತ್ತಿನಡೆಗೆ ಕಾಲ್ನಡಿಗೆ ಜಾಥಾವನ್ನು ಮುಂದೂಡಲಾಗಿದೆ.
ಆದರೆ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಗಳು ಮುಂದುವರಿಯಲಿದ್ದು, ಜನವರಿ 30ರಂದು ದೇಶದಾದ್ಯಂತ ಉಪವಾಸ ನಿರಶನ ಹಾಗೂ ಸಾರ್ವಜನಿಕ ಸಭೆಗಳು ನಡೆಯಲಿವೆ ಎಂದು ರೈತ ಸಂಘಟನೆಗಳು ತಿಳಿಸಿವೆ.
ಕೃಷಿ ಕಾಯ್ದೆಗೆ ವಿರೋಧ: ಬಜೆಟ್ ದಿನದಂದು ರೈತರಿಂದ ಕಾಲ್ನಡಿಗೆ ಮೆರವಣಿಗೆ
'ಹುತಾತ್ಮರ ದಿನದಂದು ನಾವು ರೈತರ ಪ್ರತಿಭಟನೆಯ ಭಾಗವಾಗಿ ಸಾರ್ವಜನಿಕ ಸಭೆಗಳನ್ನು ದೇಶದಾದ್ಯಂತ ನಡೆಸಲಿದ್ದೇವೆ. ಅಲ್ಲದೆ ಒಂದು ದಿನದ ಉಪವಾಸ ನಿರಶನ ಕೂಡ ಮಾಡಲಿದ್ದೇವೆ. ಮಂಗಳವಾರದ ಹಿಂಸಾಚಾರದ ಕಾರಣದಿಂದ ಫೆ. 1ರಂದು ನಡೆಸಲು ಉದ್ದೇಶಿಸಲಾಗಿದ್ದ ಸಂಸತ್ ಮೆರವಣಿಗೆಯನ್ನುಮುಂದೂಡಲಾಗಿದೆ' ಎಂದು ಭಾರತೀಯ ಕಿಸಾನ್ ಒಕ್ಕೂಟದ ಬಲಬೀರ್ ಎಸ್ ರಾಜೇವಾಲ್ ತಿಳಿಸಿದ್ದಾರೆ.
ರೈತ ಸಂಘಟನೆಗಳ ಮನಸು ಕೆಡಿಸಿದ ದೆಹಲಿ ಹಿಂಸಾಚಾರ?
ಮಂಗಳವಾರ ನಡೆದ ಮೆರವಣಿಗೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಟ್ರ್ಯಾಕ್ಟರ್ಗಳು ಮತ್ತು ಲಕ್ಷಾಂತರ ಜನರು ಭಾಗವಹಿಸಿದ್ದರು. ಶೇ 99.9ರಷ್ಟು ಪ್ರತಿಭಟನೆ ಶಾಂತಿಯುತವಾಗಿತ್ತು ಎಂದು ಹೇಳಿದ್ದಾರೆ. ಮುಂದೆ ಓದಿ.
ಮೆರವಣಿಗೆ ರದ್ದು
ಫೆಬ್ರವರಿ 1ರ ಬಜೆಟ್ ದಿನದಂದು ನಾವು ಸಂಸತ್ ಕಡೆಗೆ ಕಾಲ್ನಡಿಗೆ ಮೆರವಣಿಗೆ ಮಾಡಲು ಉದ್ದೇಶಿಸಿದ್ದೆವು. ಆದರೆ ಅದನ್ನು ರದ್ದುಗೊಳಿಸಿದ್ದೇವೆ. ಜನವರಿ 30ರಂದು ದೇಶದಾದ್ಯಂತ ಸಾರ್ವಜನಿಕ ಸಮಾವೇಶ ಮತ್ತು ಉಪವಾಸ ಮುಷ್ಕರ ನಡೆಯಲಿದೆ ಎಂದು ರೈತ ಮುಖಂಡ ದರ್ಶನ್ ಪಾಲ್ ತಿಳಿಸಿದ್ದಾರೆ.
ಪ್ರತಿಭಟನೆ ಹಿಂಪಡೆದ ಒಕ್ಕೂಟಗಳು
ಭಾರತೀಯ ಕಿಸಾನ್ ಒಕ್ಕೂಟ (ಭಾನು) ಮತ್ತು ಅಖಿಲ ಭಾರತ ಕಿಸಾನ್ ಸಂಘರ್ಷ ಸಂಯೋಜನಾ ಸಮಿತಿಗಳು ದೆಹಲಿ ಗಡಿಗಳಿಂದ ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡಿವೆ. 'ಕೆಂಪುಕೋಟೆಯಲ್ಲಿ ನಡೆದ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ. ಇದರ ನೈತಿಕ ಹೊಣೆಯನ್ನು ಒಪ್ಪಿಕೊಳ್ಳುತ್ತೇವೆ. ಈ ಘಟನೆಯ ಬಗ್ಗೆ ಸೂಕ್ತ ತನಿಖೆಯಾಗಬೇಕು' ಎಂದು ಪ್ರತಿಭಟನೆಗೆ ಬೆಂಬಲ ನೀಡಿರುವ ಸ್ವರಾಜ್ ಇಂಡಿಯಾ ಮುಖಂಡ ಯೋಗೇಂದ್ರ ಯಾದವ್ ಹೇಳಿದ್ದಾರೆ.
ರೈತರ ಪ್ರತಿಭಟನೆ ವೇಳೆ ಹಿಂಸಾಚಾರ: ಪೊಲೀಸರು ನೀಡಿದ ಹೇಳಿಕೆಯಲ್ಲೇನಿದೆ?
ತಪ್ಪಿತಸ್ಥರನ್ನು ಬಿಡುವುದಿಲ್ಲ
ಟ್ರ್ಯಾಕ್ಟರ್ ಮೆರವಣಿಗೆ ಸಂದರ್ಭದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಮತ್ತು ಹಿಂಸಾಚಾರದಲ್ಲಿ ಭಾಗಿಯಾದ ರೈತ ಮುಖಂಡರು ಹಾಗೂ ಯಾವ ತಪ್ಪಿತಸ್ಥರನ್ನೂ ಬಿಡುವುದಿಲ್ಲ ಎಂದು ದೆಹಲಿ ಪೊಲೀಸ್ ಆಯುಕ್ತ ಎಸ್ ಎನ್ ಶ್ರೀವಾಸ್ತವ ಎಚ್ಚರಿಕೆ ನೀಡಿದ್ದಾರೆ. ಟ್ರ್ಯಾಕ್ಟರ್ ಮೆರವಣಿಗೆಯು ಮಧ್ಯಾಹ್ನದ ಬಳಿಕ ಸಂಜೆ 5 ಗಂಟೆಯವರೆಗೂ ನಡೆಯಬೇಕಿತ್ತು. ಜತೆಗೆ ಅನೇಕ ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ ಅವುಗಳನ್ನು ಪಾಲಿಸದೆ ರೈತರು ದ್ರೋಹ ಎಸಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
394 ಪೊಲೀಸ್ ಸಿಬ್ಬಂದಿಗೆ ಗಾಯ
ದೆಹಲಿ ಪೊಲೀಸರು ತೀವ್ರ ಪ್ರತಿರೋಧ ತೋರಿಸಿದ ಕಾರಣ ಒಂದೇ ಒಂದು ಜೀವಹಾನಿಯಾಗಿಲ್ಲ. ಇದುವರೆಗೂ 25 ಎಫ್ಐಆರ್ಗಳನ್ನು ದಾಖಲಿಸಲಾಗಿದೆ. 394 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಹಿಂಸಾಚಾರದಲ್ಲಿ 30 ಪೊಲೀಸ್ ವಾಹನಗಳಿಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.