ಈ ರೈತನ ಆದಾಯ ವಾರ್ಷಿಕ ರು.22 ಲಕ್ಷಗಳು!
ಮಿಶ್ರ ಬೇಸಾಯ ವಿಧಾನದಲ್ಲಿ ಐವತ್ತೊಂದು ವರ್ಷದ ಹೆಚ್ ಸದಾನಂದ ರೈತರಿಗೆ ಹೊಸ ದಾರಿಯನ್ನು ತೋರಿಸಿಕೊಟ್ಟಿದ್ದಾರೆ. ತನ್ನ ಜಮೀನಿನಲ್ಲಿ 30ಕ್ಕೂ ಹೆಚ್ಚು ವಿಧವಾದ ಬೆಳೆಗಳನ್ನು ಬೆಳೆದು ಹೊಸ ಸಾಧನೆಯನ್ನು ಮಾಡಿದ್ದಾರೆ. ಅರ್ಧ ಎಕರೆ ಪ್ರದೇಶದಲ್ಲಿ ಟೋಮೆಟೋ ಮತ್ತರ್ಧ ಎಕರೆಯಲ್ಲಿ ಅಡಿಕೆ ಬೆಳೆದು ಕ್ರಮವಾಗಿ ರು.2 ಲಕ್ಷ ಹಾಗೂ ರು.50,000 ಗಳಿಸಿದ್ದಾರೆ.
ಅಡಿಕೆ ಬೆಳೆಯ ಜೊತೆಗೆ ಶುಂಠಿ ಬೆಳೆದು ವಾರ್ಷಿಕ ರು.70,000 ಇಳುವರಿ ತಂದಿದೆ. ಅಡಿಕೆ ತೋಟದಲ್ಲಿ 250 ಗಿರಿರಾಜ ಕೋಳಿಗಳನ್ನು ಬೆಳೆಸಿ ಪ್ರತಿ ಮೂರು ತಿಂಗಳಿಗೊಮ್ಮೆ ಮಾರಾಟ ಮಾಡಲಾಗುತ್ತದೆ. ಕುಕ್ಕುಟೋದ್ಯಮದಿಂದ ವಾರ್ಷಿಕ ರು.1 ಲಕ್ಷ ಆದಾಯವನ್ನು ಸದಾನಂದ ಗಳಿಸಿದ್ದಾರೆ. ಕೋಳಿ ಗೊಬ್ಬರ ಅಡಿಕೆ ತೋಟಕ್ಕೆ ಲಾಭದಾಯವಾಗಿ ಪರಿಣಮಿಸಿದೆ ಎನ್ನುತ್ತಾರೆ ಸದಾನಂದ
ಮುಕ್ಕಾಲು ಎಕರೆ ಪ್ರದೇಶದಲ್ಲಿ ಗುಲಾಬಿ ಬೆಳೆದು ವಾರ್ಷಿಕ ರು.4 ಲಕ್ಷ ಸಂಪಾದನೆ ಬರುತ್ತದೆ. ಕಾಲು ಎಕರೆ ಪ್ರದೇಶದಲ್ಲಿ ಹಸಿರು ಮನೆಯೊಂದನ್ನು ನಿರ್ಮಿಸಿ ಅದರಲ್ಲಿ ಉತ್ಕೃಷ್ಟವಾದ ಗುಲಾಬಿ ಜೊತೆಗೆ ದೊಣ್ಣೆ ಮೆಣಸಿನಕಾಯಿ ಬೆಳೆದಿದ್ದಾರೆ. ಪ್ರತಿ ಆರು ತಿಂಗಳಿಗೆ ಕಟಾವಿಗೆ ಬರುವ ದೊಣ್ಣೆ ಮೆಣಸಿನಕಾಯಿಯಿಂದ ವಾರ್ಷಿಕ ರು.5.4 ಲಕ್ಷ ಹಾಗೂ ಗುಲಾಬಿಯಿಂದ ವಾರ್ಷಿಕ ರು.2.5 ಲಕ್ಷ ಗಳಿಸುತ್ತಾರೆ.
ತೋಟದಲ್ಲಿ ಚಿಕ್ಕ ಕೊಳವೊಂದನ್ನು ಮಾಡಿ ಅದರಲ್ಲಿ ಮೀನುಗಾರಿಕೆಯನ್ನು ಮಾಡುತ್ತಾರೆ. ತೋಟದ ಸುತ್ತಲೂ ತೆಂಗು, ಹಲಸು, ಕಾಫಿ, ಪರಂಗಿ, ಸಪೋಟ ಹಾಗೂ ನಿಂಬೆ ಗಿಡಗಳನ್ನು ನೆಟ್ಟು ನಂದನವನವನ್ನೇ ನಿರ್ಮಿಸಿದ್ದಾರೆ ಸದಾನಂದ. ಹೈನುಗಾರಿಕೆಯನ್ನು ಮಾಡುತ್ತಿದ್ದು ದಿನಕ್ಕೆ 80 ರಿಂದ 100 ಲೀಟರ್ ಹಾಲು ಉತ್ಪಾದಿಸಲಾಗುತ್ತಿದೆ.
ಸಗಣಿ ಹಾಗೂ ಗೋಬರ್ ಗ್ಯಾಸ್ ತ್ಯಾಜ್ಯದಿಂದ ಹೊಲಕ್ಕೆ ಉತ್ತಮ ಗೊಬ್ಬರವೂ ಸಿಗುತ್ತಿದೆ. ಕೊಳವೆ ಬಾವಿ ಮೇಲೆ ಆಧಾರಪಟ್ಟಿರುವ ಸದಾನಂದ ರು.50 ಸಾವಿರದಲ್ಲಿ(ಸಬ್ಸಿಡಿ ಹೊರತುಪಡಿಸಿ) ಹನಿನೀರಾವರಿ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಹನಿ ನೀರಾವರಿಯಿಂದ ತ್ರೀ ಫೇಸ್ ಕರೆಂಟ್ ಇದ್ದರೆ ಇಡೀ ನನ್ನ ಹೊಲಕ್ಕೆ ನೀರು ಹರಿಸಬಹುದು ಎನ್ನುತ್ತಾರೆ ಸದಾನಂದ. ಇದರಿಂದ ದಿನಕ್ಕೆ ರು.400 ಕೂಲಿ ಖರ್ಚು ಉಳಿಯುತ್ತದಂತೆ.
ಆಸಕ್ತಿಕರವಾದ ವಿಚಾರವೆಂದರೆ ಸದಾನಂದ ಉತ್ತಮ ತಳಿಯ ನಾಯಿಗಳನ್ನು ಸಾಕಿರುವುದು. ರಾಟ್ ವ್ಹೀಲರ್ ಮತ್ತು ಗ್ರೇಟ್ ಡೇನ್ ನಾಯಿಗಳಿಂದ ವಾರ್ಷಿಕ ರು.1.2 ಲಕ್ಷ ಸಂಪಾದನೆಯಾಗುತ್ತದೆ. ಸದಾನಂದರಿಗೆ ಕೇಂದ್ರ ಸರಕಾರ ಕೃಷಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸದಾನಂದರ ಹೊಲ ನೋಡಲು ಕೃಷಿ ವಿಜ್ಞಾನಿಗಳು, ವಿಐಪಿಗಳು ಹಾಗೂ ದೇಶ ವಿದೇಶಗಳಿಂದ ಜನ ಬರುತ್ತಲೇ ಇರುತ್ತಾರೆ. ಸದಾನಂದರ ಜೊತೆ ನೇರವಾಗಿ ಮಾತನಾಡುವವರು ಮೊಬೈಲ್ ಸಂಖ್ಯೆ 93420 22146 ಸಂಪರ್ಕಿಸಬಹುದು.