ಮೆಣಸಿನ ಕಾಯಿಗೆ ಸಿಗದ ಬೆಲೆ; ಫ್ರೀಯಾಗಿ ಹಂಚಿದ ಕೊಡಗಿನ ರೈತ
ಮಡಿಕೇರಿ, ಏಪ್ರಿಲ್ 01: ಇಡೀ ದೇಶವೇ ಕೊರೊನಾ ಸೋಂಕಿನ ಭೀತಿಯಲ್ಲಿ ಮುಳುಗಿದೆ. ದೇಶಾದ್ಯಂತ ಲಾಕ್ ಡೌನ್ ಮಾಡಿದ್ದರೂ ಸದ್ಯಕ್ಕೆ ಕೃಷಿ ಚಟುವಟಿಕೆಗಳಿಗೆ, ರೈತರ ಉತ್ಪನ್ನಗಳನ್ನು ಮಾರಾಟ ಮಾಡಲು ತಡೆಯಿಲ್ಲ ಎಂದೂ ಸರ್ಕಾರವೇ ರೈತರಿಗೆ ಅನುಮತಿ ನೀಡಿದೆ.
ಆದರೆ ಕೃಷಿಕರು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಕನಿಷ್ಠ ಪಕ್ಷ ಸಾಗಾಟ ಮಾಡಿದ ಕೂಲಿಯೂ ದೊರೆಯದ ಪರಿಸ್ಥಿತಿ ಇದೆ. ಲಾಕ್ ಡೌನ್ ನಿಂದಾಗಿ ಬೆಲೆಯಲ್ಲಿ ಭಾರೀ ಇಳಿತವಾಗಿದ್ದು, ರೈತ ವರ್ಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಮೈಸೂರಿನಲ್ಲಿ ಮೊನ್ನೆಯಷ್ಟೇ ರೈತರೊಬ್ಬರು ಲೋಡುಗಟ್ಟಲೆ ಟೊಮೆಟೊ ಬೆಳೆಯನ್ನು ಎಸೆದಿದ್ದರು. ಬೆಳಗಾವಿಯಲ್ಲಿ ಹಾಲನ್ನು ಚೆಲ್ಲಲಾಗಿತ್ತು. ಈ ನಡುವೆ ಕೊಡಗಿನಲ್ಲೂ ಮೆಣಸಿನಕಾಯಿಗೆ ಬೆಲೆ ಸಿಗದೇ ರೈತರೊಬ್ಬರು ಕಂಗಾಲಾಗಿದ್ದಾರೆ.
ಭತ್ತದ ನಂತರ ಹಸಿ ಮೆಣಸಿನಕಾಯಿ ಬೆಳೆ
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿ ಭತ್ತದ ಬೆಳೆ ಕೊಯ್ಲು ಮುಗಿದ ನಂತರ ಅದೇ ಖಾಲಿ ಬಿದ್ದಿರುವ ಗದ್ದೆಗಳಿಗೆ ಹಸಿ ಮೆಣಸಿನ ಕಾಯಿ ಬೆಳೆಯಲಾಗುತ್ತದೆ. ಇದರಿಂದಾಗಿ ರೈತರು ಒಂದಷ್ಟು ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಆದರೆ ರೈತರ ಆರ್ಥಿಕತೆಗೆ ನೆರವಾಗುತ್ತಿದ್ದ ಮೆಣಸಿನ ಕಾಯಿ ಅವರಿಗೆ ಈ ಬಾರಿ ಕಷ್ಟ ತಂದೊಡ್ಡಿದೆ.
ತಾಳ್ಮೆವಹಿಸಲು ರೈತರಿಗೆ ಮನವಿ ಮಾಡಿದ ಕೃಷಿ ಸಚಿವ ಬಿಸಿ ಪಾಟೀಲ್
ಹೊರ ರಾಜ್ಯಗಳಿಗೆ ಮಾರಾಟವಾಗುತ್ತಿದ್ದ ಮೆಣಸಿನಕಾಯಿ
ಪ್ರತಿ ವಾರವೂ ಸೋಮವಾರಪೇಟೆ ಮತ್ತು ಶನಿವಾರಸಂತೆಯಲ್ಲಿ ಫೆಬ್ರುವರಿಯಿಂದ ಜೂನ್ ತಿಂಗಳವರೆಗೆ 10ರಿಂದ 15 ಲಾರಿ ಲೋಡುಗಳಷ್ಟು ಹಸಿ ಮೆಣಸಿನಕಾಯಿ ಹೊರ ರಾಜ್ಯಗಳಿಗೆ ಮಾರಾಟವಾಗುತ್ತಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಮಹಾರಾಷ್ಟ್ರ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಿಂದ ಲಾರಿಗಳೇ ಬರುತ್ತಿಲ್ಲ. ಹಾಗಾಗಿ ಬೆಳೆ ಬೆಳೆದಿರುವ ರೈತರು ಕಷ್ಟ ಅನುಭವಿಸುತ್ತಿದ್ದಾರೆ.
ಮೆಣಸಿನಕಾಯಿ ಸುರಿದು ಉಚಿತವಾಗಿ ಕೊಟ್ಟ ನಿವೃತ್ತ ಯೋಧ
ಕೊಡ್ಲಿಪೇಟೆ ಹೊಸ ಮುನ್ಸಿಪಾಲ್ಟಿ ನಿವಾಸಿ ನಿವೃತ್ತ ಯೋಧ ದೇವರಾಜ್ ಅವರು ಒಂದು ಎಕರೆಯಲ್ಲಿ ಬೆಳೆದಿದ್ದ ಹಸಿ ಮೆಣಸಿಕಾಯಿ ಕಟಾವಿಗೆ ಬಂದಿತ್ತು. ಕಟಾವನ್ನೂ ಮಾಡಿ ಕೊಡ್ಲಿಪೇಟೆಗೆ ಮಾರಾಟಕ್ಕೆ ತಂದಿದ್ದರು. ಆದರೆ ಕಡಿಮೆ ದರಕ್ಕೆ ನೀಡಿದರೂ ಖರೀದಿದಾರರೇ ಇರಲಿಲ್ಲ. ಇದರಿಂದ ಮನನೊಂದ ಅವರು, ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿ ಮೆಣಸಿನಕಾಯಿಯನ್ನು ಸುರಿದು ಜನರಿಗೆ ಉಚಿತವಾಗಿ ತೆಗೆದುಕೊಂಡು ಹೋಗುವಂತೆ ಕೂಗಿ ಹೇಳಿದ್ದಾರೆ. ಇದನ್ನು ಕಂಡು ಜನರು ಮುಗಿಬಿದ್ದು ತಮಗೆ ಬೇಕಾದಷ್ಟು ಮೆಣಸಿನಕಾಯಿಯನ್ನು ಬಾಚಿಕೊಂಡು ಹೋಗಿದ್ದಾರೆ. ಸುಮಾರು 20 ಕೆ.ಜಿ ತೂಕದ ಹತ್ತು ಚೀಲದಷ್ಟು ಮೆಣಸಿನಕಾಯಿ ರಸ್ತೆಯಲ್ಲಿ ಸುರಿದದ್ದನ್ನು ಒಂದೂ ಬಿಡದೆ ತೆಗೆದುಕೊಂಡು ಹೋಗಿದ್ದಾರೆ.
ಕೊರೊನಾದ ಬಿಸಿ; ಭತ್ತ ಬೆಳೆದ ಬಳ್ಳಾರಿ ರೈತರು ಕಂಗಾಲು
ಕೆ.ಜಿ.ಗೆ 40ರೂ ಮಾರಾಟವಾಗುತ್ತಿರುವ ಮೆಣಸಿನಕಾಯಿ
ಹಸಿಮೆಣಸಿನಕಾಯಿ ದರ ಈಗಲೂ ಚಿಲ್ಲರೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕೆ.ಜಿ.ಯೊಂದಕ್ಕೆ 40 ರೂಪಾಯಿಗಳಂತೆ ಮಾರಾಟ ಆಗುತ್ತಿದೆ. ಚೀಲವೊಂದಕ್ಕೆ ಕನಿಷ್ಠ ಪಕ್ಷ 250 ರಿಂದ 300 ರೂಪಾಯಿಗಳ ದರ ಸಿಗುತಿತ್ತು. ಕೆಲವೊಮ್ಮೆ 400-500ಕ್ಕೆ ಏರಿದ್ದೂ ಇದೆ. ಕೆಲವೊಮ್ಮೆ ಚೀಲಕ್ಕೆ 50-60 ರೂಪಾಯಿಗಳಿಗೆ ದರ ಕುಸಿದ ನಿದರ್ಶನವೂ ಇದೆ. ಆದರೆ ಕೊರೊನಾದಿಂದಾಗಿ ಕಂಗಾಲಾಗಿರುವ ಈ ಸಮಯ ರೈತರನ್ನೂ ಸಂಕಷ್ಟಕ್ಕೆ ಸಿಲುಕಿಸಿದೆ.