ಗುಬ್ಬಿ ತಾಲೂಕಿನಲ್ಲಿ ಕಾಡಾನೆ ದಾಳಿಗೆ ಐದನೇ ಬಲಿ
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿ ಕಾಡಾನೆ ದಾಳಿಗೆ ಐದನೇ ಬಲಿಯಾಗಿದೆ. ಹೊಸಕೆರೆ ಗ್ರಾಮದ ರೈತ ರಂಗಯ್ಯ ಜಮೀನಿಗೆ ತೆರಳಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ
ಗುಬ್ಬಿ, ಫೆಬ್ರವರಿ 14: ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆಗೆ ಮಂಗಳವಾರ ಮತ್ತೊಂದು ಸೇರ್ಪಡೆಯಾಗಿದೆ. ತಾಲೂಕಿನ ಹೊಸಕೆರೆ ಗ್ರಾಮದ ರೈತ ರಂಗಯ್ಯ (50) ಕಾಡಾನೆ ದಾಳಿಯಲ್ಲಿ ಮೃತಪಟ್ಟಿದ್ದಾರೆ. ತೋಟದ ಬಳಿ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಇದರೊಂದಿಗೆ ಆನೆ ದಾಳಿಯಿಂದ ಗುಬ್ಬಿ ತಾಲೂಕಿನಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ. ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆ ಕಾರ್ಯ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಸರಿಗಷ್ಟೇ ಇಲಾಖೆ ಇದೆ. ಆದರೆ ನಮ್ಮ ಪ್ರಾಣ ಹೋದರೂ ಕೇಳೋರು ಗತಿ ಇಲ್ಲ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.[ಕಾಡಾನೆ ತುಳಿದು ಗುಬ್ಬಿಯ ಇಬ್ಬರು ರೈತರು ಸಾವು]
ತಾಲೂಕಿನಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದರೂ ಅರಣ್ಯ ಇಲಾಖೆಯಾಗಲೀ ಜನಪ್ರತಿನಿಧಿಗಳಾಗಲಿ ನಮ್ಮ ಸಮಸ್ಯೆ ಏನು, ಇದಕ್ಕೆ ಶಾಶ್ವತ ಪರಿಹಾರ ಮಾಡಿಕೊಡೋಣ ಎಂಬ ಬಗ್ಗೆ ಮಾತುಕತೆ ನಡೆಸಿಲ್ಲ. ನಮ್ಮಿಂದ ಮತ ಪಡೆಯುವಾಗ ಇರುವ ಕಾಳಜಿ ಇಂಥ ಸನ್ನಿವೇಶದಲ್ಲಿ ಇದ್ದಿದ್ದರೆ ಅರಣ್ಯ ಇಲಾಖೆಯವರಿಗೆ ಚುರುಕು ಮುಟ್ಟಿಸುತ್ತಿದ್ದರು. ಆದರೆ ಅವರಿಗೇ ಕಾಳಜಿಯಿಲ್ಲ ಎಂದು ಗ್ರಾಮಸ್ಥರು ಹೇಳಿದರು.