ಹಬ್ಬನಕುಪ್ಪೆ ಗ್ರಾಮದ ಬಡಕೃಷಿಕನ ಮಗಳು ಕೃಷಿ ವಿಜ್ಞಾನಿಯಾದಳು
ಮೈಸೂರು, ಜುಲೈ 29: ಕೃಷಿ ಕುಟುಂಬದಲ್ಲಿ ಹುಟ್ಟಿ, ಕೃಷಿಯಲ್ಲಿನ ಏಳು ಬೀಳುಗಳನ್ನು ಕಂಡು, ಕೃಷಿಯಲ್ಲೇ ಏನಾದರೂ ಸಾಧಿಸಬೇಕೆಂದು ಹೊರಟ ಬಡ ಕೃಷಿಕನ ಮಗಳೊಬ್ಬಳು ಕೃಷಿ ಕ್ಷೇತ್ರದ ಕೃಷಿ ಸಂಶೋಧನಾ ವಿಜ್ಞಾನಿ (ಎ.ಆರ್.ಎಸ್) ಅತ್ಯುನ್ನತ ಹುದ್ದೆಗೆ ನಡೆದ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯ ಕೃಷಿ ವಿಸ್ತರಣಾ ವಿಭಾಗದಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಹಬ್ಬನಕುಪ್ಪೆ ಗ್ರಾಮದ ರೈತ ರಾಜೇಗೌಡ-ಲಲಿತಮ್ಮ ದಂಪತಿ ಪುತ್ರಿ ಎಚ್.ಆರ್.ರಮ್ಯಾ ಸಾಧನೆಗೈದ ಯುವತಿ.
ಮೈಸೂರಿನಲ್ಲಿ ಮಳೆಯಿಲ್ಲದೆ ನೆಲಕಚ್ಚಿದ ಬೆಳೆ: ಕಣ್ಣೀರಾದ ರೈತ
ದೇಶದ ಕೃಷಿ ವಿಸ್ತರಣಾ ವಿಭಾಗದಲ್ಲಿನ ಆರು ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಎಚ್.ಆರ್.ರಮ್ಯಾ ಮೂರನೇ ಸ್ಥಾನ ಗಳಿಸಿರುವುದು ರಾಜ್ಯಕ್ಕೆ ತಂದ ಕೀರ್ತಿಯಾಗಿದೆ. ಪ್ರಸ್ತುತ ರಮ್ಯಾ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ (ಎನ್.ಡಿ.ಆರ್.ಐ) ಯು.ಜಿ.ಸಿ. ಫೆಲೋಷಿಪ್ ನೊಂದಿಗೆ ಪಿಎಚ್.ಡಿ. ವ್ಯಾಸಂಗ ಮಾಡುತ್ತಿದ್ದಾರೆ.
ಇವರು ಆಂಧಪ್ರದೇಶದ ಕೃಷಿ ವಿ.ವಿ.ಯಲ್ಲಿ ಜಿ.ಆರ್.ಎಫ್ ಫೆಲೋಷಿಪ್ ನೊಂದಿಗೆ ಎಂ.ಎಸ್.ಸಿ (ಅಗ್ರಿ) ಸ್ನಾತಕೋತ್ತರ ಪದವಿಯಲ್ಲಿ ಮೊದಲ ಸ್ಥಾನ ಗಳಿಸಿದ್ದರೆ, ಬೆಂಗಳೂರು ಕೃಷಿ ವಿ.ವಿ.ಯಲ್ಲಿ ಬಿ.ಎಸ್.ಸಿ (ಅಗ್ರಿ)ಯನ್ನು ಮೆರಿಟ್ ಸ್ಕಾಲರ್ಶಿಪ್ನೊಂದಿಗೆ ಪೂರೈಸಿದ್ದು, ಇದೀಗ ಕೃಷಿ ವಿಸ್ತರಣಾ ವಿಭಾಗದ ವಿಜ್ಞಾನಿಯಾಗಿ ಹೊರಹೊಮ್ಮಿದ್ದಾರೆ. ಕಡುಬಡತನದಲ್ಲಿ ಹುಟ್ಟಿಬೆಳೆದ ಇವರು, ಪ್ರಾಥಮಿಕ ಶಿಕ್ಷಣ ಪಿರಿಯಾಪಟ್ಟಣ ತಾಲೂಕು ಕಂಪ್ಲಾಪುರದ ನಾಗಾ ವಿದ್ಯಾಸಂಸ್ಥೆ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಜವಾಹರ್ ನವೋದಯ ಶಾಲೆಯಲ್ಲಿ ಪಡೆದುಕೊಂಡಿದ್ದಾರೆ. ರಂಗಭೂಮಿ, ಜಾನಪದ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಇವರಿಗೆ ಆಸಕ್ತಿ.
ಕೃಷಿಯಲ್ಲಿ ಖುಷಿ ಕಾಣುವ ರುದ್ರೇಶ್ವರ ಸ್ವಾಮೀಜಿ
ಈ ಕುರಿತು ಮಾತನಾಡಿರುವ ರಮ್ಯಾ, "ಕೃಷಿ ಕುಟುಂಬದಲ್ಲೇ ನಾನು ಬೆಳೆದಿದ್ದರಿಂದ ಕೃಷಿಕರ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದೇನೆ. ಆದ್ದರಿಂದ ಇದೇ ಕ್ಷೇತ್ರವನ್ನು ಆರಿಸಿಕೊಂಡಿದ್ದೇನೆ. ಎಲ್ಲ ಹಂತದಲ್ಲೂ ಇದ್ದ ಶಿಕ್ಷಕರ-ಪೋಷಕರ ಪ್ರೇರಣೆ ಇಂತಹ ಉನ್ನತ ಹುದ್ದೆ ಪಡೆಯಲು ಸಹಕಾರಿಯಾಗಿದೆ. ಕೃಷಿಯಲ್ಲಿನ ಸಮಸ್ಯೆಗಳಾದ ಗ್ರಾಮೀಣ ಯುವಕರ ವಲಸೆ, ಮಾರುಕಟ್ಟೆ ಸೌಲಭ್ಯ-ಬೆಲೆಯ ವೈಪರೀತ್ಯ, ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಕೌಶಲ್ಯ ಈ ವಿಷಯಗಳ ಕೇಂದ್ರಿತವಾದ, ರೈತಸ್ನೇಹಿ ತಂತ್ರಜ್ಞಾನ, ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿ ಪಡೆಯುವ ಬಗೆಗೆ ಕೃಷಿ ಸಂಶೋಧನೆ ಕೈಗೊಂಡಿದ್ದೇನೆ. ಇದು ಕೃಷಿಕರಿಗೆ ನೆರವಾಗಲಿದೆ" ಎಂದು ತಮ್ಮ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.