ಕೃಷಿ ಸಚಿವ ಬಿ.ಸಿ. ಪಾಟೀಲರೇ ಇದೇ ನಿಮ್ಮ ಸಾಧನೆ...!
ಬೆಂಗಳೂರು, ಅ. 01: ಈ ಮೊದಲು ಬೆಳೆ ಸಮೀಕ್ಷೆಯನ್ನು (ಅತಿವೃಷ್ಟಿ-ಅನಾವೃಷ್ಟಿ) ಸರ್ಕಾರಿ ನೌಕರರು ಮಾಡುತ್ತಿದ್ದರು. ಸಮೀಕ್ಷೆ ಮಾಡಿಸಲು ಸರ್ಕಾರಿ ನೌಕರರನ್ನು ಕಾಯ್ದು ಕಾಯ್ದು ಸಾಕಾಗಿ ಹೋಗುತ್ತಿತ್ತು. ಅಧಿಕಾರಿಗಳು, ಸಿಬ್ಬಂದಿ ಇವತ್ತು-ನಾಳೆ ಅಂತ ಎನ್ನುತ್ತಿದ್ದರೇ ಹೊರತು ಸಕಾಲದಲ್ಲಿ ಬಂದು ಸಮೀಕ್ಷೆ ಮಾಡುತ್ತಲೇ ಇರಲಿಲ್ಲ. ಒಂದೊಮ್ಮೆ ಅಧಿಕಾರಿ ಬೇಗ ಬಂದರೆ ಅವರ ಕೈ ಕೆಳಗೆ ಕೆಲಸ ಮಾಡುವ ಸಿಬ್ಬಂದಿ ಇರುತ್ತಿರಲಿಲ್ಲ.
ಕೊನೆಗೊಂದು ದಿನ ಬೆಳೆ ಸಮೀಕ್ಷೆಗೆ ಬರುತ್ತಿದ್ದ ಅಧಿಕಾರಿ ಹಾಗೂ ಸಿಬ್ಬಂದಿ ತಲಾ ಐನೂರು ರೂ. ಗಳು ಅಥವಾ ತಲಾ ಸಾವಿರ ರೂಪಾಯಿಗಳನ್ನು ಲಂಚ ಕೊಡಬೇಕಾಗುತ್ತಿತ್ತು. ಅವರು ಕರೆದುಕೊಂಡು ಬರುತ್ತಿದ್ದ ಫೋಟೊಗ್ರಾಫರ್ ಕಡೆಯಿಂದಲೇ ಫೋಟೊ ತೆಗೆಸಿ ಕೊಡಬೇಕಾಗುತ್ತಿತ್ತು. ಫೋಟೊ ತೆಗೆದು ಕೊಡುವವನಿಗೆ ಮತ್ತೆ ಇನ್ನೂರು ರೂಪಾಯಿಗಳನ್ನು ಕೊಡಬೇಕಾಗಿತ್ತು.
ಇಷ್ಟೆಲ್ಲ ಆದ ಮೇಲೂ ಸರ್ಕಾರದಿಂದ ರೈತರಿಗೆ ಪ್ರತಿ ಎಕರೆಗೆ ಬರುತ್ತಿದ್ದ ಬೆಳೆ ಹಾನಿ ಪರಿಹಾರ ಅಬ್ಬಬ್ಬಾ ಎಂದರೆ ಒಂದು ಸಾವಿರ ರೂಪಾಯಿಗಳಿಂದ ಒಂದೂವರೆ ಸಾವಿರ ರೂಪಾಯಿಗಳು ಮಾತ್ರ. ಒಂದೊಮ್ಮೆ ಅಧಿಕಾರಿಗಳಿಗೆ ಲಂಚ ಕೊಡದೇ, ಇದು ಸರ್ಕಾರದಿಂದ ರೈತರಿಗೆ ಕೊಡುವ ಪರಿಹಾರದ ಹಣ. ನಿಮಗೇಕೆ ಐನೂರು, ಸಾವಿರ ರೂಪಾಯಿಗಳನ್ನು ಕೊಡಬೇಕು ಎಂದು ಪ್ರಶ್ನಿಸಿದರೆ ಮುಗಿದೇ ಹೋಯ್ತು. ನಮ್ಮ ಬೆಳೆ ಪರಿಹಾರದ ಅರ್ಜಿಗಳು ಅಲ್ಲಿಯೇ ಅವರ ಕಚೇರಿಗಳಲ್ಲಿಯೇ ಬಿದ್ದಿರುವಂತೆ ಮಾಡುತ್ತಿದ್ದರು.
ಮಳೆ ಆರ್ಭಟಕ್ಕೆ ಚಿತ್ರದುರ್ಗ, ಚಾಮರಾಜನಗರದಲ್ಲಿ ಕೊಳೆಯುತ್ತಿರುವ ಬೆಳೆಗಳು
ಅರ್ಜಿಯನ್ನು ಯಾಕೆ ಕಳುಹಿಸಿಲ್ಲ ಎಂದು ಕೇಳಿದರೆ, ಅರ್ಜಿಯನ್ನು ಕಳುಹಿಸುತ್ತಿದ್ದ ಅಧಿಕಾರಿಗಳು ರೈತರಿಗೆ ಮತ್ತೊಂದು ಕಿರಿಕ್ ಮಾಡುತ್ತಿದ್ದರು. ರೈತರ ಬೆಳೆಯ ಫೋಟೊ ಬಿಟ್ಟು ಮತ್ಯಾವುದೋ ಹೊಲದ ಫೋಟೊ ಹಚ್ಚಿ ಅರ್ಜಿ ಕಳುಹಿಸುತ್ತಿದ್ದರು. ನಂತರ ಮೇಲಾಧಿಕಾರಿಗಳು ಖುದ್ದು ಬೆಳೆ ಪರಿಶೀಲನೆಗೆ ಬಂದಾಗ ಅರ್ಜಿಯೊಂದಿಗಿನ ಫೋಟೊದಲ್ಲಿರುವ ಬೆಳೆಯೇ ಬೇರೆ, ಹೊಸದಲ್ಲಿರುವ ಬೆಳೆಯೆ ಬೇರೆಯಾಗಿರುತ್ತಿತ್ತು. ಇಷ್ಟೇ ಅಲ್ಲ ಅಧಿಕಾರಿಗಳು ತಾವು ಭಾರಿ ಪ್ರಾಮಾಣಿಕರು ಅಂತ ತೋರಿಸಿಕೊಳ್ಳಲು ರೈತರೇ ಅಪ್ರಾಮಾಣಿಕರು, ಮೋಸಗಾರರು ಎಂದು ಜನರ ಎದುರೇ ಬೈದು ಹೋಗುತ್ತಿದ್ದರು.
ರೈತರ ಸಹಾಯಕ್ಕಾಗಿ 'ರೈತ ಬೆಳೆ ಸಮೀಕ್ಷೆ ಅಪ್ಲಿಕೇಶನ್' ಬಿಡುಗಡೆ
ಕೆಳ ಹಂತದ ಪರಿಸ್ಥಿತಿಯೇ ಹೀಗಿರುವಾಗ ರೈತರು ಉದ್ಧಾರ ಆಗುವುದಾದರೂ ಹೇಗೆ? ಹೀಗಾಗಿಯೇ ಬಹಳಷ್ಟು ಕೃಷಿಕರ ಮಕ್ಕಳು ಈ ರೈತಾಪಿ ಕೆಲಸದ ಸಹವಾಸವೇ ಬೇಡ ಎಂದು ಬೆಂಗಳೂರು ಕಡೆಗೆ ಮುಖ ಮಾಡುತ್ತಿದ್ದಾರೆ ಎನ್ನುತ್ತಾರೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಿರೇಹುಲ್ಲಾಳ ಗ್ರಾಮದ ಯುವ ರೈತ ಸಂಜೀವ್. ಬಿಜೆಪಿ ಸರ್ಕಾರದ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣಾ ತಿದ್ದುಪಡಿ ಕಾಯಿದೆಗಳ ರೈತ ವಿರೋಧಿ ನೀತಿ ಹೊರತಾಗಿಯೂ ರಾಜ್ಯ ಬಿಜೆಪಿ ಸರ್ಕಾರದ ಈ ನೀತಿ ರೈತರ ಮನ್ನಣೆ ಗಳಿಸಿದೆ. ರೈತ ಬೆಳೆ ಸಮೀಕ್ಷೆ ಆ್ಯಪ್ ಕುರಿತು ರೈತರು ಮತ್ತು ಸರ್ಕಾರದ ಮಾಹಿತಿ ಮುಂದಿದೆ.
ತಪ್ಪಿದ ಮಧ್ಯವರ್ತಿಗಳ ಹಾವಳಿ!
'ರೈತ ಬೆಳೆ ಸಮೀಕ್ಷೆ ಆ್ಯಪ್' ಮೂಲಕ ರೈತರೇ ಬೆಳೆ ಸಮೀಕ್ಷೆ ಮಾಡಲು ಅವಕಾಶ ಕಲ್ಪಿಸಿರುವುದು ಉತ್ತಮ ವಿಚಾರ ಎಂದು ಅವರು ಹೇಳಿದ್ದಾರೆ.
ರೈತರು ತಮ್ಮ ಮೊಬೈಲ್ನಲ್ಲಿ ಆ್ಯಪ್ ಇನ್ಸ್ಟಾಲ್ ಮಾಡಿಕೊಂಡು, ಅದರಿಂದ ತಮ್ಮ ಬೆಳೆಯನ್ನು ತಾವೇ GPS ಮೂಲಕ ಅಪ್ಲೋಡ್ ಮಾಡುವುದರಿಂದ ಸರ್ಕಾರದ ಅನುನದಾನ ನೇರವಾಗಿ ರೈತರ ಕೈಗೆ ಸಿಗಲಿದೆ. ಇದರಿಂದ ಮಧ್ಯವರ್ತಿಗಳ ಹಾವಳಿಯನ್ನು ರಾಜ್ಯ ಸರ್ಕಾರದ ಕೃಷಿ ಇಲಾಖೆ ತಪ್ಪಿಸಿದಂತಾಗಿದೆ. ಈ ವಿಚಾರದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರಿಗೆ ರೈತರು ಧನ್ಯವಾದ ಹೇಳಲೇ ಬೇಕು ಎಂಬುದು ಇಡೀ ನಾಡಿನ ಬಹುತೇಕ ರೈತರ ಅಭಿಪ್ರಾಯವಾಗಿದೆ.
ಬೆಳೆ ಸಮೀಕ್ಷೆ ಸಫಲ
ಇದೇ ಸಂದರ್ಭದಲ್ಲಿ ಈ ಮಹತ್ವದ ರೈತ ಬೆಳೆ ಸಮೀಕ್ಷೆ ಕುರಿತು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಮಾತನಾಡಿದ್ದಾರೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ರೈತ ಬೆಳೆ ಆ್ಯಪ್ ಸಮೀಕ್ಷೆ ಯೋಜನೆ ಜಾರಿಯಾಗಿ ಸುಮಾರು ಒಂದೂವರೆ ತಿಂಗಳು ಕಳೆದಿವೆ. ರೈತ ಬೆಳೆ ಆ್ಯಪ್ ಸಮೀಕ್ಷೆ ಸೆ. 23ಕ್ಕೆ ಅಂತ್ಯಗೊಂಡಿದ್ದು, ಯಶಸ್ವಿಯಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಪ್ರಾಯೋಗಿಕ ಹಂತದಲ್ಲಿಯೇ ಶೇಕಡಾ 88ಕ್ಕೂ ಹೆಚ್ಚಿನ ಪ್ರಗತಿಯನ್ನು ಸಾಧಿಸಿರುವುದು ಕೇಂದ್ರ ಸರ್ಕಾರದ ಗಮನ ಸೆಳೆದಿದೆ. ಅಂದರೆ ರೈತರೇ ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಈ ಯೋಜನೆ ಕಡಿಮೆ ಅವಧಿಯಲ್ಲಿಯೇ ಇಡೀ ದೇಶದ ಗಮನ ಸೆಳೆದಿದೆ. ರೈತರೇ ಬೆಳೆ ಸಮೀಕ್ಷೆ ನಡೆಸುವ ಪ್ರಾಯೋಗಿಕ ಹಂತವನ್ನು ಈ ಬಾರಿ ಪರಿಚಯಿಸಲಾಗಿದೆ ಎಂದಿದ್ದಾರೆ.
ದಾಖಲೆ ಅವಧಿಯಲ್ಲಿ ಪೂರ್ಣ
ಇದೇ ಮೊದಲ ಬಾರಿಗೆ ರೈತರೇ ಸ್ವತಃ ಬೆಳೆ ಸಮೀಕ್ಷೆ ನಡೆಸಿ ತಾವೇ ಪ್ರಮಾಣಪತ್ರ ನೀಡುವ ರೈತಬೆಳೆ ಸಮೀಕ್ಷೆ ಇದಾಗಿದ್ದು, ಕೇವಲ 1 ತಿಂಗಳು 15 ದಿನಗಳೊಳಗೆ ಕಳೆದ 2 ವರ್ಷಗಳ ಇತಿಹಾಸವನ್ನೇ ಈ ಸಮೀಕ್ಷೆ ಬದಲಿಸಿದೆ.
ಕಳೆದ ಆಗಸ್ಟ್ 15 ರಂದು ಸಮೀಕ್ಷೆಗೆ ಚಾಲನೆ ನೀಡಲಾಗಿತ್ತಾದರೂ ಆಗಸ್ಟ್ ಅಂತ್ಯದಿಂದ ಇದು ಪರಿಣಾಮಕಾರಿಯಾಗಿ ಜಾರಿಯಾಗಿತ್ತು. ಮಳೆ, ನೆಟ್ವರ್ಕ್ ಸಮಸ್ಯೆ ಆರಂಭಿಕ ಹಂತದಲ್ಲಿ ಕಂಡುಬಂದಿತ್ತಾದರೂ ಇವೆಲ್ಲವನ್ನು ಸರಿಪಡಿಸಿಕೊಂಡು ಹಾಗೂ ರಾಜ್ಯಾದ್ಯಂತ ಬೆಳೆ ಸಮೀಕ್ಷೆಯನ್ನು ಉತ್ಸವದಂತೆ ಪರಿಗಣಿಸಿದ್ದರಿಂದ ಹಾಗೂ ಕೃಷಿ ಸಚಿವರು ಮತ್ತು ಇಲಾಖೆ ರೈತ ಬೆಳೆ ಸಮೀಕ್ಷೆ ಆ್ಯಪ್ ಗೆ ಹೆಚ್ಚಿನ ಒತ್ತು ನೀಡಿದ್ದರು. ಅಲ್ಲದೇ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರೇ ಸ್ವತಃ ತಮ್ಮ ಜಮೀನಿನಲ್ಲಿ ನಿಂತು ಸಮೀಕ್ಷೆ ನಡೆಸಿ ಎಲ್ಲರಿಗೂ ಮಾದರಿಯಾಗಿದ್ದರು.
ಖಾಸಗಿ ವ್ಯಕ್ತಿಗಳನ್ನು ಬಳಸಿಕೊಂಡು ಸರ್ವೆ
2017 ರಿಂದ ರಾಜ್ಯದಲ್ಲಿ ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ಪ್ರಾರಂಭವಾಗಿದ್ದು, 3 ಸಾವಿರ ಪ್ಲಾಟ್ಗಳನ್ನು ರೈತರೇ ಅಪ್ಲೋಡ್ ಮಾಡಿದ್ದಾರೆ. ಉಳಿದವನ್ನು ಸರ್ಕಾರಿ ಅಧಿಕಾರಿಗಳು ಅಪ್ಲೋಡ್ ಮಾಡಿದ್ದರು. ಮುಂಗಾರು ಹಂಗಾಮಿಗೆ ಸರ್ಕಾರಿ ಅಧಿಕಾರಿಗಳನ್ನು ಉಪಯೋಗಿಸಿ ಸಮೀಕ್ಷೆ ಮಾಡಲಾಗುತ್ತಿತ್ತು. 2018 ರಲ್ಲಿ ಖಾಸಗಿ ವ್ಯಕ್ತಿಗಳ ಮೂಲಕ ಬೆಳೆ ಸಮೀಕ್ಷೆ ಕೈಗೊಳ್ಳಲಾಗಿತ್ತು. 2019ರಲ್ಲಿ ಪೂರ್ವ ಮುಂಗಾರು, ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕೈಗೊಂಡು 2 ಕೋಟಿ 5 ಲಕ್ಷ ಪ್ಲಾಟ್ಗಳಲ್ಲಿ ಸರ್ವೆ ಮಾಡಲಾಗಿತ್ತು. ಇದಕ್ಕಾಗಿ 4 ತಿಂಗಳ ಸಮಯಾವಕಾಶ ನೀಡಲಾಗಿತ್ತು.
ಆದರೆ ಈ ಬಾರಿ ರೈತರೇ ಸ್ವತಃ ತಾವೇ ಬೆಳೆ ಸಮೀಕ್ಷೆ ನಡೆಸುವ ಯೋಜನೆ ಇದಾಗಿದ್ದು, 1 ಕೋಟಿ 83 ಲಕ್ಷಕ್ಕೂ ಹೆಚ್ಚಿನ ಪ್ಲಾಟ್ ಗಳನ್ನು ರೈತರೇ ಅಪ್ಲೋಡ್ ಮಾಡಿದ್ದಾರೆ. 2 ಕೋಟಿ 20 ಲಕ್ಷ ಗುರಿಯಿದ್ದು, ಕಡಿಮೆ ಅವಧಿಯಲ್ಲಿಯೇ 1 ಕೋಟಿ 83 ಲಕ್ಷಕ್ಕೂ ಹೆಚ್ಚಿನ ಪ್ಲಾಟ್ ಗಳು ಅಂದರೆ ನಿಗದಿತ ಕಡಿಮೆ ಅವಧಿಯಲ್ಲಿ ಶೇ.88 ಕ್ಕೂ ಪ್ಲಾಟ್ ಸಮೀಕ್ಷೆಯಲ್ಲಿ ಅಪ್ಲೋಡ್ ಆಗುವ ಮೂಲಕ ಸಾಧನೆಯಾಗಿದೆ.
ರೈತರ ಖಾತೆಗೆ ನೇರ ಪರಿಹಾರ
ಮುಂಗಾರು, ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕೈಗೊಂಡು 2 ಕೋಟಿ 5 ಲಕ್ಷ ಪ್ಲಾಟ್ ಗಳ ಸರ್ವೆ ಮಾಡಲಾಗಿತ್ತು. ಕಳೆದ ಬಾರಿ ಬೆಳೆ ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶದಿಂದ ಕೋವಿಡ್ 19 ಸಂದರ್ಭದಲ್ಲಿ ಮೆಕ್ಕೆಜೋಳ ಬೆಳೆದ ರೈತರಿಗೆ ತಲಾ 5 ಸಾವಿರದಂತೆ 7 ಲಕ್ಷದ 29 ಸಾವಿರ ರೈತರಿಗೆ ನೇರವಾಗಿ ಅವರ ಖಾತೆಗೆ ಪರಿಹಾರ ನೀಡಲು ಅನುಕೂಲವಾಗಿದೆ.
ಕಳೆದ ಬಾರಿಯ ದತ್ತಾಂಶ ಉಪಯೋಗಿಸಿಕೊಂಡು 5,81,896 ರೈತ ಫಲಾನುಭವಿಗಳಿಗೆ 3164.27 ಕೋಟಿ ಮೌಲ್ಯದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ, ತೊಗರಿ, ಬಿಳಿಜೋಳ ಖರೀದಿ ಮಾಡಿ ರೈತರ ಖಾತೆಗೆ ನೇರವಾಗಿ ಹಣ ವರ್ಗಾಯಿಸಲಾಗಿದೆ. ತೋಟಗಾರಿಕಾ ಬೆಳೆಗಳಾದ 20,292 ಹೂ ಬೆಳೆಗಾರರಿಗೆ 14.50 ಕೋಟಿ ರೂ. 35,819 ತರಕಾರಿ ಬೆಳೆಗಾರರಿಗೆ 31.04 ಕೋಟಿ ರೂ. 35,959 ಹಣ್ಣುಬೆಳೆಗಾರರಿಗೆ 26.55 ಕೋಟಿ ರೂ. ಒಟ್ಟು 92,070 ಫಲಾನುಭವಿಗಳಿಗೆ 72.09 ಕೋಟಿ ರೂ. ಮೌಲ್ಯದ ಪರಿಹಾರ ನೀಡಲು ಸಾಧ್ಯವಾಗಿತ್ತು.
2019 ರ ಬೆಳೆ ವಿಮೆ ಯೋಜನೆಗೆ 1,33,717 ರೈತರಿಗೆ ಬೆಳೆ ಸಮೀಕ್ಷೆ ದತ್ತಾಂಶವನ್ನು ತಾಳೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಈ ಬಾರಿಯ ದತ್ತಾಂಶವನ್ನು ಬೆಳೆ ವಿಮೆ ಯೋಜನೆ ಇತ್ಯರ್ಥಪಡಿಸಲು, ಪ್ರಾಕೃತಿಕ ವಿಕೋಪ ಹಾನಿ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪರಿಹಾರ ಪಡೆಯಲು, ರಾಜ್ಯ ಹಾಗೂ ಕೇಂದ್ರ ಬೆಳೆ ಆಧಾರಿತ ಪ್ರೋತ್ಸಾಹ ಧನ ನೀಡಲು, ರಾಜ್ಯದ ಬೆಳೆ ವಿಸ್ತೀರ್ಣ ಮರು ಹೊಂದಾಣಿಕೆ ಹಾಗೂ ಬೆಳೆ ಉತ್ಪಾದನೆ ಲೆಕ್ಕ ಹಾಕಲು ಸರ್ಕಾರ ಬಳಸಿಕೊಂಡಿದೆ.