ಕೃಷಿ ಕಾಯ್ದೆ ಪ್ರತಿಭಟನೆ: ಮತ್ತೊಬ್ಬ ರೈತ ಆತ್ಮಹತ್ಯೆ
ಟಿಕ್ರಿ, ಮಾರ್ಚ್ 8: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಗುಂಪಿನಲ್ಲಿ ಮತ್ತೊಂದು ಆತ್ಮಹತ್ಯೆ ನಡೆದಿದೆ. ಹಿಸಾರ್ ಮೂಲದ 48 ವರ್ಷದ ರೈತ ರಾಜ್ಬೀರ್ ಸಿಂಗ್ ಅವರು ಟಿಕ್ರಿ ಗಡಿ ಸಮೀಪದ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಭಾನುವಾರ ಬೆಳಿಗ್ಗೆ ಪತ್ತೆಯಾಗಿದ್ದಾರೆ.
ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿರುವ ಪೊಲೀಸರು, ಈ ಸಂಬಂಧ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಮೂರು ಕೃಷಿ ಕಾಯ್ದೆಗಳ ವಿರುದ್ಧ ಕಳೆದ ನೂರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯ ವೇಳೆ ರಾಜಧಾನಿ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ಎಂಟನೆಯ ಆತ್ಮಹತ್ಯೆ ಇದು.
ಇತ್ತ ದೆಹಲಿಯ ಮೈಕೊರೆಯುವ ಚಳಿಯಲ್ಲಿ ರೈತರು: ಅತ್ತ, ಕೋಲ್ಕತ್ತಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ
ರಾಜ್ಬೀರ್ ಅವರ ಕುರ್ತಾದ ಜೇಬಿನಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದೆ ಎಂದು ಈ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿರುವ ಇತರೆ ರೈತರು ತಿಳಿಸಿದ್ದಾರೆ. 'ಈ ಘಟನೆ ಬಗ್ಗೆ ಇತರೆ ರೈತರಿಂದ ನಮಗೆ ಮಾಹಿತಿ ಬಂದಿತ್ತು. ಅವರು ಬೈಪಾಸ್ ಸಮೀಪದ ಮರವೊಂದಕ್ಕೆ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಡೆತ್ ನೋಟ್ ಕೂಡ ಸಿಕ್ಕಿದೆ. ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯದಿರುವ ಕ್ರಮದಿಂದ ಹತಾಶರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ' ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಿಸಾರ್ನ ಸಿಸಾಯ್ ಗ್ರಾಮದವರಾದ ರಾಜ್ಬೀರ್, ಪ್ರತಿಭಟನೆ ನಡೆಯುತ್ತಿರುವ ಪ್ರಮುಖ ಸ್ಥಳದಿಂದ 11 ಕಿಮೀ ದೂರದ ಟೆಂಟ್ ಒಂದರಲ್ಲಿ ವಾಸಿಸುತ್ತಿದ್ದರು.