ಕೃಷಿ ಕಾಯ್ದೆ: ರೈತರೊಂದಿಗಿನ ಅಮಿತ್ ಶಾ ಸಭೆ ವಿಫಲ
ನವದೆಹಲಿ, ಡಿಸೆಂಬರ್ 8: ಭಾರತ್ ಬಂದ್ ಬೆನ್ನಲ್ಲೇ ಕೃಷಿ ಕಾಯ್ದೆಗಳ ಕುರಿತು ರೈತ ಮುಖಂಡರ ಜತೆ ಗೃಹ ಸಚಿವ ಅಮಿತ್ ಶಾ ಮಂಗಳವಾರ ತಡರಾತ್ರಿವರೆಗೆ ನಡೆಸಿದ ಸಭೆ ವಿಫಲವಾಗಿದೆ. ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಆಗ್ರಹಿಸಿ ರೈತರು ಮಂಗಳವಾರ ಭಾರತ್ ಬಂದ್ಗೆ ಕರೆ ನೀಡಿದ್ದರು. ಬಂದ್ ಮುಕ್ತಾಯದ ಬಳಿಕ ಅಮಿತ್ ಶಾ ಅವರು ರೈತರ ಮನವೊಲಿಸಲು ಸಭೆಗೆ ಆಹ್ವಾನಿಸಿದ್ದರು.
ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದುಕೊಳ್ಳುವುದಿಲ್ಲ, ಆದರೆ ಕೆಲವು ತಿದ್ದುಪಡಿಗಳನ್ನು ಮಾಡುತ್ತೇವೆ ಎಂದು ಅಮಿತ್ ಶಾ ಮತ್ತೊಮ್ಮೆ ರೈತ ಮುಖಂಡರಿಗೆ ಆಫರ್ ನೀಡಿದರು. ಆದರೆ ಇದಕ್ಕೆ ರೈತರು ಒಪ್ಪಲಿಲ್ಲ. ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯುವುದು ಒಂದೇ ಮಾರ್ಗ ಎಂದು ಪಟ್ಟುಹಿಡಿದರು.
'ಯೆಸ್' ಅಥವಾ 'ನೋ': ಅಮಿತ್ ಶಾಗೆ ರೈತರ ಎರಡೇ ಆಯ್ಕೆ
ಅಮಿತ್ ಶಾ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು 13 ರೈತ ಸಂಘಟನೆಗಳ ಪ್ರಮುಖರೊಂದಿಗೆ ಐಸಿಎಆರ್ನಲ್ಲಿ ಸುದೀರ್ಘ ಚರ್ಚೆ ನಡೆಸಿದರು. ಯಾವ ಕಾರಣಕ್ಕೂ ಕಾಯ್ದೆ ಹಿಂದಕ್ಕೆಪಡೆದುಕೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತು. ಲಿಖಿತ ರೂಪದಲ್ಲಿ ಪ್ರಸ್ತಾವ ಸಲ್ಲಿಸುವುದಾಗಿ ಸರ್ಕಾರ ತಿಳಿಸಿತು.
ಕೇಂದ್ರದ ಸಚಿವರು ಮತ್ತು ಅಧಿಕಾರಿಗಳ ಜತೆಗೆ ಬುಧವಾರ ಆರನೇ ಸುತ್ತಿನ ಮಾತುಕತೆಯನ್ನು ಆಯೋಜಿಸಲಾಗಿತ್ತು. ಆದರೆ, ಅದು ನಡೆಯುವುದಿಲ್ಲ ಎಂದು ಅಮಿತ್ ಶಾ ಜತೆಗಿನ ಸಭೆಯ ಬಳಿಕ ರೈತರು ತಿಳಿಸಿದರು. ಸರ್ಕಾರವು ನಾಳೆ ನಮಗೆ ತಿದ್ದುಪಡಿ ಪ್ರಸ್ತಾವವನ್ನು ನೀಡಲಿದೆ ಎಂದು ಹೇಳಿದರು.
'ನಾಳೆ ನಾವು ದೆಹಲಿ-ಹರಿಯಾಣ ನಡುವಿನ ಸಿಂಘು ಗಡಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಸಲಿದ್ದೇವೆ' ಎಂದು ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲಾಹ್ ತಿಳಿಸಿದ್ದಾರೆ.
ಬುಧವಾರ ಬೆಳಿಗ್ಗೆ 10.30ಕ್ಕೆ ಕೇಂದ್ರ ಸಚಿವ ಸಂಪುಟದ ಸಭೆ ಆಯೋಜಿಸಲಾಗಿದೆ. ಇದರಲ್ಲಿ ಕೃಷಿ ಕಾಯ್ದೆಗಳ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಜತೆಗೆ ರಾಹುಲ್ ಗಾಂಧಿ, ಶರದ್ ಪವಾರ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಲಿದ್ದು, ಕೃಷಿ ಕಾಯ್ದೆಗಳ ವಿರುದ್ಧ ಮನವಿ ಸಲ್ಲಿಸಲಿದ್ದಾರೆ.