ಬರೋದು ಬಂತು “ಅಚ್ಚೇ ದಿನ್” ರೈತರಿಗೇ ಬರಬೇಕಾ...!
ಮೊನ್ನೆಯಷ್ಟೇ (ಸೆ.20) ರಾಜ್ಯ ಸಭೆಯಲ್ಲಿ ಅಂಗೀಕಾರವಾದ ಕೃಷಿ ಮಸೂದೆಯ ಬಗ್ಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿದೆ. ಸರ್ಕಾರದ ಕೃಪಾಪೋಷಿತ ಆರ್ಥಿಕ ತಜ್ಞರು ಇದೊಂದು ಮಹತ್ವದ ತೀರ್ಮಾನವೆಂದರೆ, ನೆಲಮೂಲದ ಆರ್ಥಿಕ ತಜ್ಞರು ಇದೊಂದು ರೈತರ ಮರಣಶಾಸನ ಎಂದು ಬಣ್ಣಿಸಿದ್ದಾರೆ. ಒಂದು ಸಣ್ಣ ಉದಾಹರಣೆಯ ಮೂಲಕ ಈ ಹೊಸ ಕಾಯಿದೆಯ ಬಗ್ಗೆ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡೋಣ...
ಈ ಕಾಯಿದೆ ಪ್ರಕಾರ ಈಗಿರುವ ಎ.ಪಿ.ಎಂ.ಸಿ ಗಳು ಹಾಗೆಯೇ ಇರುತ್ತವಂತೆ. ಇದಕ್ಕೆ ಪರ್ಯಾಯವಾಗಿ ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಯಾರಿಗೆ ಬೇಕಾದರೂ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆಯಂತೆ. ಇದರಿಂದ ರೈತರಿಗೆ ಮಾರುವ ಹಕ್ಕು ಮತ್ತು ಅವಕಾಶಗಳ ಬಾಗಿಲು ತೆರೆದು ಉತ್ತಮ ಬೆಲೆಗೆ ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಬಹುದಂತೆ. ಆಲ್ರೈಟ್...
ನಾನೊಬ್ಬ ರೈತ...
ನಾನೊಬ್ಬ ರೈತ. ನನ್ನದು ತೆಂಗಿನ ತೋಟವಿದೆ. ಈವರೆಗೆ ನಾನು ಎ.ಪಿ.ಎಂ.ಸಿಯಲ್ಲಿ ಕೊಬ್ಬರಿ ಮಾರಾಟ ಮಾಡುತ್ತಿದ್ದೆ. ಉತ್ತಮ ಗುಣಮಟ್ಟದ ಕೊಬ್ಬರಿಗೆ ಮಾರುಕಟ್ಟೆಯಲ್ಲಿ ನನಗೆ 10 ರೂಪಾಯಿ ಸಿಗುತ್ತಿತ್ತೆನ್ನಿ. ಇದೀಗ ನನ್ನ ಮನೆ ಬಾಗಿಲಿಗೆ ಬಂದ ವ್ಯಾಪಾರಿ (ಕಂಪನಿಗಳು) ನನ್ನಲ್ಲಿರುವ ಎಲ್ಲ ಕೊಬರಿಯನ್ನು-ಯಾವುದೇ ಗ್ರೇಡಿಂಗ್ ಮಾಡದೆ 12 ರೂಪಾಯಿಗೆ ಕೊಂಡು ಹೋಗುತ್ತಾನೆ. ನನಗೆ ಟ್ರಾನ್ಸ್ ಪೋರ್ಟ್ ಉಳಿಯಿತು. ಮನೆ ಬಾಗಿಲ ಮುಂದೆ ಎರಡು ರೂಪಾಯಿ ಹೆಚ್ಚಿಗೆ ಸಿಗುವಂತಾಯಿತು. ಐ ಯಾಮ್ ಹ್ಯಾಪಿ.
ಕೃಷಿ ಸಂಬಂಧಿತ ಮಸೂದೆ ಅಂಗೀಕಾರ ವಿರೋಧಿಸಿ ಅವಿಶ್ವಾಸ ಮಂಡನೆ
ಮುಂದಿನ ವರ್ಷ 13 ರೂಪಾಯಿ ಕೊಡುತ್ತೇನೆ. ಆದರೆ ಗ್ರೇಡಿಂಗ್ ಮಾಡೋಣವೆಂದು ಅದೇ ವ್ಯಾಪಾರಿ ಹೇಳುತ್ತಾನೆ. ಅದೂ ನನಗೆ ಓಕೆ. ಅದಾದ ಮತ್ತೊಂದು ವರ್ಷಕ್ಕೆ ನನ್ನ ಮನೆ ಬಾಗಿಲಿಗೆ ಬಂದ ವ್ಯಾಪಾರಿ ಕೊಬ್ಬರಿಗಿಟುಗು ಇಷ್ಟೇ ಗಾತ್ರವಿರಬೇಕು. ಇಂತಿಷ್ಟು ಗ್ರಾಂ ತೂಕವಿರಬೇಕು. ಬಣ್ಣ, ರುಚಿ ಒಂದೇ ತೆರನಾಗಿರಬೇಕು. ಅಚ್ಚುಕಟ್ಟಾಗಿ ಬಾಕ್ಸ್ ಪ್ಯಾಕಿಂಗ್ ಮಾಡಿರಬೇಕು. ಹೀಗೆ ಹತ್ತಾರು ಕಂಡೀಷನ್ಸ್ ನೊಂದಿಗೆ ಬರುತ್ತಾನೆ. ಆಗ ನನ್ನ ಬಳಿ ಇರುವ ಕೊಬ್ಬರಿಯ ಬಹು ದೊಡ್ಡ ಮೊತ್ತ ಆತನಿಗೆ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಅಷ್ಟರಲ್ಲಿ ಎ.ಪಿ.ಎಂ.ಸಿ ಕೋಮಾಗೆ ಜಾರಿರುತ್ತದೆ. ಬೇರೆಲ್ಲೂ ಮಾರಾಟ ಮಾಡಲು ಸಾಧ್ಯವಿಲ್ಲದ ನಾನು ಅದೇ ವ್ಯಾಪಾರಿ (ಕಂಪನಿ)ಯ ಮುಂದೆ ಕೈಜೋಡಿಸಿ ನಿಲ್ಲುತ್ತೇನೆ. ಆಗ ಅವನು ಆಯ್ತು ಎಲ್ಲಾ ಕೊಬ್ಬರಿ ಗಿಟುಕುಗಳನ್ನು ತುಂಬಿಕೊಂಡು ಹೋಗುತ್ತೇನೆ. ನಿನಗೆ 5 ರೂಪಾಯಿ ಕೊಡಬಹುದಷ್ಟೇ ಅನ್ನುತ್ತಾನೆ. ನನಗೆ ವಿಧಿ ಇಲ್ಲ, ಕೊಟ್ಟು ಕೈತೊಳೆದುಕೊಳ್ಳುತ್ತೇನೆ. ಹಿಂದೆ ಹತ್ತು ರೂಪಾಯಿಗೆ ಮಾರಾಟ ಮಾಡುತ್ತಿದ್ದವನು ಕೆಲವೇ ವರ್ಷಗಳಲ್ಲಿ ಐದು ರೂಪಾಯಿಗೆ ಮಾರುವ ಪರಿಸ್ಥಿತಿಗೆ ತಲುಪಿದ್ದೇನೆ...
ಅಂಕ 2...
ವ್ಯಾಪಾರಿ ಹೊಸ ರೂಪದಲ್ಲಿ ನನಗೆ ಸಹಾಯ ಮಾಡಲು ಬರುತ್ತಾನೆ. ನೋಡು ನಾಗೇಶ. ನಿನಗೆಷ್ಟು ಭೂಮಿ ಇದೆ. ಅಲ್ಲಿಗೆ ಬೇಕಾದ ಬೀಜ, ಗೊಬ್ಬರ, ಔಷಧಿ, ಎಲ್ಲಾ ನಾನೇ ಒದಗಿಸುತ್ತೇನೆ. ನೀನು ಬೆಳೆವುದಷ್ಟೇ ಕೆಲಸ. ಬೆಳೆದದ್ದನ್ನು ನಾನೇ ಕೊಳ್ಳುತ್ತೇನೆ ಎಂದು ನನಗೆ ಮಹತ್ವದ ಯೋಜನೆಯೊಂದನ್ನು ತಿಳಿಸುತ್ತಾನೆ. ಅಷ್ಟರಲ್ಲಿ ಅರ್ಧ ಹಣ್ಣಾಗಿರುವ ನಾನು ಒಪ್ಪಿಕೊಂಡು ನನ್ನದೇ ಹೊಲದಲ್ಲಿ ವ್ಯಾಪಾರಿ ಹೇಳಿದ್ದನ್ನು ಬೆಳೆಯುತ್ತಿರುತ್ತೇನೆ. ನನ್ನದೇ ಹೊಲದಲ್ಲಿ ನಾನು ಕೂಲಿಯಾಗಿರುತ್ತೇನೆ! ಆಗ ನನ್ನ ಪಾಲಿಗೆ "ಅಚ್ಚೇ ದಿನ್" ಬಂದಿರುತ್ತದೆ. ನಾವು ಹಳ್ಳಿ ಪಳ್ಳೀವು ನಮಗೆ ಅಚ್ಚೇ ದಿನ್ ಅರ್ಥ ಆಗುವುದಿಲ್ಲ!
ಹಿಂದೆ ಕೋಟಿಗಾನಹಳ್ಳಿ ರಾಮಯ್ಯ ಹೇಳಿದ ಕಥೆ...
ಒಂದು ಸಿಂಹಕ್ಕೆ ಸುಂದರಿಯೊಬ್ಬಳ ಮೇಲೆ ಪ್ರೇಮವಾಗುತ್ತೆ. ಸಿಂಹ ಅದನ್ನು ಸುಂದರಿಯ ಬಳಿ ಹೇಳಿಕೊಂಡಾಗ, ಸುಂದರಿ ನನಗೂ ನಿನ್ನ ಕಂಡರೆ ಇಷ್ಟ ಆದರೆ ನಿನ್ನ ಪಂಜ ಉಗುರುಗಳನ್ನು ಕಂಡರೆ ನನಗೆ ಭಯ. ಅದನ್ನು ಕಿತ್ತುಹಾಕಿ ಬಾ ಎನ್ನುತ್ತಾಳೆ. ಸಿಂಹ ಹಾಗೆಯೇ ಮಾಡುತ್ತದೆ. ನಿನ್ನ ಕೋರೆ ಹಲ್ಲುಗಳೆಂದರೆ ನನಗೆ ಭಯ ಎನ್ನುತ್ತಾಳೆ ಸುಂದರಿ. ಕೋರೆ ಹಲ್ಲನ್ನೂ ಕಿತ್ತು ಬರುತ್ತದೆ ಸಿಂಹ. ನಿನ್ನ ಕೇಸರಿ ಚೆನ್ನಾಗಿಲ್ಲ ಎನ್ನುತ್ತಾಳೆ, ಕೇಸರಿಯನ್ನೂ ಹರಿದೆಸೆದು ಸಿಂಹ ಬಂದು ಸುಂದರಿಯ ಮುಂದೆ ನಿಲ್ಲುತ್ತದೆ. ಈಗ ಸುಂದರಿ ಬಲಿಷ್ಠವಾಗಿದ್ದಾಳೆ. ಸಿಂಹ ಎಲ್ಲವನ್ನೂ ಕಳಕೊಂಡು ತರಗೆಲೆಯಂತಾಗಿದೆ. (ಅಸ್ಪಷ್ಟ ನೆನಪು...)
8 ಸಂಸದರ ಅಮಾನತು: ಸಂಸತ್ತಿನ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ
ಲಾಭದಾಯಕ ಬೆಲೆಗೆ ರೈತರ ಹೋರಾಟ
ತಾವು ಬೆಳೆದ ಬೆಳೆಗೆ ವೈಜ್ಞಾನಿಕ/ನ್ಯಾಯಯುತವಾದ/ಲಾಭದಾಯಕ ಬೆಲೆ ಕೊಡಿ ಎಂಬುದು ರೈತರ ಹಲವು ದಶಕಗಳ ಹೋರಾಟ. ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ) ಗಿಂತ ಕಡಿಮೆ ಮೊತ್ತಕ್ಕೆ ವ್ಯಾಪಾರ ವಹಿವಾಟು ನಡೆಸುವುದು ಕಾನೂನು ರೀತ್ಯಾ ಅಪರಾಧವಾಗಬೇಕು. ಹಾಗೊಂದು ಕಾನೂನು ತರಬೇಕು ಎಂಬುದು ಈಚಿನ ಕೆಲ ವರ್ಷಗಳ ಕೂಗು.
ಎಂ.ಎಸ್.ಸ್ವಾಮಿನಾಥನ್ ವರದಿಯಲ್ಲಿ ಹೇಳಿರುವ ಹಾಗೆ C2 + 50% ಬೆಲೆ ಕೊಡಬೇಕು ಎಂಬ ಹೋರಾಟವೂ ದೇಶದೆಲ್ಲೆಡೆ ನಡೆದೇ ಇದೆ. ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣಾ ಪ್ರಚಾರ ಮಾಡಿ ಈ ಹಿಂದಿನ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಖುದ್ದು ಮೋದಿಯವರೇ C2 + 50% ಅನುಷ್ಠಾನಕ್ಕೆ ತರುವುದಾಗಿ ಆಶ್ವಾಸನೆ ನೀಡಿದ್ದರು. (C2 + 50% ಎಂದರೆ ಬೆಳೆ ಉತ್ಪಾದನಾ ಸಮಗ್ರ ವೆಚ್ಚ ಮತ್ತು ಅದರ ಮೇಲೆ ಶೇಕಡಾ 50ರಷ್ಟು ಲಾಭ). ಆದರೆ ಐದು ವರ್ಷಗಳ ಆಡಳಿತದಲ್ಲಿ ಅದರ ಬಗ್ಗೆ ಮೋದಿ ಚಕಾರವೆತ್ತಲಿಲ್ಲ. ಇದೀಗ ಮತ್ತೈದು ವರ್ಷಗಳ ಆಳ್ವಿಕೆ ಅವರ ನೇತೃತ್ವದಲ್ಲಿಯೇ ಮುಂದುವರೆದಿದೆ.
ರೈತರ ಸುಸ್ಥಿರ ಅಭಿವೃದ್ಧಿಯೇ ಬುಡಮೇಲು
ರೈತರ ಬೇಡಿಕೆ ಹೀಗಿರುವಾಗ ಕೇಂದ್ರ ಸರ್ಕಾರ ಹೊಸ ಕಾನೂನುಗಳನ್ನು ತರುವ ಮೂಲಕ " ರೈತರ ಸುಸ್ಥಿರ ಅಭಿವೃದ್ಧಿ" ಯ ಮೂಲ ಆಶಯವನ್ನೇ ಬುಡಮೇಲು ಮಾಡುತ್ತಿದೆ.
ಮೊನ್ನೆಯಷ್ಟೇ ನರೇಂದ್ರ ಮೋದಿ ಸರ್ಕಾರದ ಕೃಪಾ ಪೋಷಿತ ಕ್ಯಾಬಿನೆಟ್ ವಿರೋಧ ಪಕ್ಷಗಳು ಎಬ್ಬಿಸಿದ ಗದ್ದಲದ ನಡುವೆಯೂ ಎರಡು ಮಸೂದೆಗಳು ಧ್ವನಿ ಮತದಲ್ಲಿ ಅಂಗೀಕಾರವಾಗಿವೆ. ಈ ಸಂದರ್ಭದಲ್ಲಿ ಮೈಕುಗಳನ್ನು ಮುರಿದು, ಟೇಬಲ್ ಗಳ ಮೇಲೆ ಹತ್ತಿ, ಪೇಪರುಗಳನ್ನು ತೂರಿಧ್ವನಿ ಮತಕ್ಕೆ ಹಾಕುವುದನ್ನು ತಪ್ಪಿಸಲು ವಿರೋಧ ಪಕ್ಷಗಳು ವ್ಯರ್ಥ ಪ್ರಯತ್ನ ನಡೆಸಿದವು.
ಅಂಗೀಕಾರಗೊಂಡ ಮಸೂದೆಗಳು
ಮಸೂದೆ: ಕೃಷಿ ಉತ್ಪನ್ನಗಳ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ 2020 ಮತ್ತು ರೈತರ (ಸಶಕ್ತತೆ ಮತ್ತುರಕ್ಷಣೆ) ಒಪ್ಪಂದ ಖಾತ್ರಿ ಬೆಲೆ ಮತ್ತು ಕೃಷಿ ಸೇವೆಗಳ ಮಸೂದೆ 2020 ಕಳೆದ ವಾರವಷ್ಟೇ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದವು.
ಯಾರು ವಿರೋಧ ವ್ಯಕ್ತಪಡಿಸಿದರು: ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ತೆಲಂಗಾಣರಾಷ್ಟ್ರ ಸಮಿತಿ, ಸಮಾಜವಾದಿ ಪಕ್ಷ, ದ್ರಾವಿಡ ಮುನ್ನೇತ್ರ ಖಜಗಮ್, ರಾಷ್ಟ್ರೀಯ ಜನತಾದಳ, ಆಮ್ಆದ್ಮಿ ಪಾರ್ಟಿ ಮತ್ತು ಎಡಪಕ್ಷಗಳು ಮಸೂದೆಯನ್ನು ವಿರೋಧಿಸಿದ್ದಲ್ಲದೆ ಮತ್ತೆ ಲೋಕಸಭೆಗೆ ವಿಸ್ತ್ರೃತ ಚರ್ಚೆಗಾಗಿ ಕಳುಹಿಸಿಕೊಡಬೇಕಾಗಿ ವಾದಿಸಿದವು. ಕಾಂಗ್ರೆಸ್ಸಿನ ಸಂಸದ ಪ್ರತಾಪ್ ಸಿಂಗ್ ಬಾಜ್ವರೈತರ ಮರಣಶಾಸನಕ್ಕೆ ತಾವು ಸಹಿ ಹಾಕುವುದಿಲ್ಲವೆಂದು ಹೇಳಿದರು.
ಯಾರು ಮಸೂದೆ ಪರ ನಿಂತರು: ಭಾರತೀಯ ಜನತಾ ಪಕ್ಷದ ಒಕ್ಕೂಟದ ಪಕ್ಷಗಳಲ್ಲಿ ಜೆ.ಡಿ.ಯು ಮತ್ತು ವೈಎಸ್ ಆರ್ ಕಾಂಗ್ರೆಸ್ ಈ ಮಸೂದೆಗೆ ಒಪ್ಪಿಗೆ ಸೂಚಿಸಿದವು. ಎಐಎಡಿಎಂಕೆ ಮಸೂದೆಯ ವಿರುದ್ಧ ಮಾತನಾಡಿತು.