ಹಾವೇರಿಯಲ್ಲಿ ಕಳಪೆ ಬಿತ್ತನೆ ಬೀಜ ವಿತರಣೆ: ಕೃಷಿ ಇಲಾಖೆ ಮೌನ
ಹಾವೇರಿ, ಜೂನ್ 3: ಹಾವೇರಿ ಜಿಲ್ಲೆಯಲ್ಲಿ ಕಳಪೆ ಬೀಜದ ಭೂತ ಬಿಟ್ಟುಬಿಡದೇ ಕಾಡುತ್ತಿದ್ದು, ಇಷ್ಟೆಲ್ಲಾ ಆಗುತ್ತಿದ್ದರೂ ಕೃಷಿ ಇಲಾಖೆ ಮಾತ್ರ ಸುಮ್ಮನಾಗಿ ಕುಳಿತಿದೆ.
ಕಳಪೆ ಸೋಯಾಬಿನ್ ಬೀಜ ವಿತರಣೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ವಿಷಯದಲ್ಲಿ ಕೃಷಿ ಇಲಾಖೆಯು ಜಾಣ ಕುರುಡುತನ ಮೆರೆಯುತ್ತದೆಯೆ ಎಂಬ ಪ್ರಶ್ನೆ ಕಾಡುತ್ತಿದೆ.
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೃಷಿ ಸಚಿವ ಬಿ.ಸಿ.ಪಾಟೀಲ್
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಾರನಬೀಡ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಕಳಪೆ ಬೀಜ ವಿತರಿಸಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದ್ದು, ಸಹಕಾರಿ ಸಂಘದ ಮುಂದೆ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಗುಣಮಟ್ಟದ ಸೋಯಾಬೀನ್ ಬೀಜ ನೀಡುವುದಾಗಿ ಸಹಕಾರಿ ಸಂಘದ ಮ್ಯಾನೇಜರ್ ನಾಗಪ್ಪನು ರೈತರಿಗೆ ಭರವಸೆ ನೀಡಿದ್ದನು. ಹೀಗಾಗಿ ಸಹಕಾರಿ ಸಂಘದ ಬಳಿ ನೂರಾರು ರೈತರು ಜಮಾಯಿಸಿದ್ದರು.
ಗುಣಮಟ್ಟದ ಬೀಜ ವಿತರಿಸುತ್ತೇವೆಂದು ಅಧಿಕಾರಿಗಳು ಸುಳ್ಳು ಹೇಳಿ, ಕಳಪೆ ಬೀಜ ವಿತರಿಸಿದ್ದಾರೆ. ಉತ್ತಮ ಗುಣಮಟ್ಟದ ಬೀಜವನ್ನೇ ವಿತರಿಸುವಂತೆ ರೈತರು ಆಗ್ರಹಿಸಿದ್ದಾರೆ. ತಡರಾತ್ರಿಯವರೆಗೂ ರೈತರಿಂದ ಧರಣಿ ನಡೆದರೂ ಅಧಿಕಾರಿಗಳು ಮಾತ್ರ ಕ್ಯಾರೇ ಎಂದಿಲ್ಲ.