ಕೃಷಿ ಅಧಿಕಾರಿಗಳಿಂದ ನಕಲಿ ಬೀಜ ದಾಸ್ತಾನು ಮೇಲೆ ದಾಳಿ
ಹಾವೇರಿ, ಏಪ್ರಿಲ್ 24: ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ನಕಲಿ ಬೀಜ ಮಾರಾಟ ಮಳಿಗೆಗಳ ಮೇಲೆ ಕೃಷಿ ಇಲಾಖೆ ಅಧಿಕಾರಗಳು ದಾಳಿ ಮಾಡಿದ್ದಾರೆ. ಕೃಷಿ ಸಚಿವ ಬಿ.ಸಿ ಪಾಟೀಲ್ ರ ಆದೇಶ ಮತ್ತು ರೈತರ ನಿರಂತರ ದೂರಿನ ಮೇಲೆ ಅಕ್ರಮ ನಕಲಿ ಬೀಜ ದಾಸ್ತಾನುಗಳ ಮೇಲೆ ದಾಳಿ ನಡೆಸಲಾಗಿದೆ.
ನಕಲಿ ಮೆಕ್ಕೆಜೋಳ ಬೀಜ ಸಂಗ್ರಹಿಸಿದ್ದ ಕೋಲ್ಡ್ ಸ್ಟೋರೇಜ್ ಗಳ ಮೇಲೆ, ಖಚಿತ ಮಾಹಿತಿ ಮೇರೆಗೆ ಕೃಷಿ ಅಧಿಕಾರಿಗಳು ಮತ್ತು ಪೋಲಿಸರು ಜಂಟಿ ದಾಳಿ ಮಾಡಿದ್ದಾರೆ. ಈ ಮೂಲಕ ಕೃಷಿ ಸಚಿವರ ತವರು ಜಿಲ್ಲೆಯಲ್ಲಿ ಅಕ್ರಮಕ್ಕೆ ತಡೆಯೊಡ್ಡಲಾಗಿದೆ
ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ಸೂರ್ಯ ಕೋಲ್ಡ್ ಸ್ಟೋರೇಜ್ ಮೇಲೆ ರೇಡ್ ಮಾಡಿದ ವೇಳೆ 295 ಟನ್ ನಕಲಿ ಮೆಕ್ಕೆಜೋಳದ ಬೀಜಗಳು ಪತ್ತೆಯಾಗಿವೆ. ಸುಮಾರು 3.5 ಕೋಟಿ ಮೌಲ್ಯದ ನಕಲಿ ಬೀಜವಾಗಿವೆ.
ಬ್ಯಾಡಗಿ ನಗರದ ಹರಿಪ್ರಸಾದ್ ಎಂಬುವವರಿಗೆ ಕೋಲ್ಡ್ ಸ್ಟೋರೇಜ್ ಸೇರಿದೆ. ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರು ಬಳಿಯ ವಕ್ರತುಂಡ ಎಂಬ ಗೋದಾಮಿನ ಮೇಲೂ ದಾಳಿ ಮಾಡಲಾಗಿದೆ.
ಈ ವೇಳೆ ಹಲವು ಕಂಪನಿಗಳ ಹೆಸರಲ್ಲಿರುವ ನಕಲಿ ಬೀಜಗಳು ಪತ್ತೆಯಾಗಿವೆ. ರೈತರಿಗೆ ವಿತರಿಸಲು ನಕಲಿ ಬೀಜಗಳನ್ನು ಸ್ಟೋರೇಜ್ ಮಾಲೀಕರು ದಾಸ್ತಾನು ಮಾಡಿದ್ದರು.
ಸೂರ್ಯ ಕೋಲ್ಡ್ ಸ್ಟೋರೆಜ್ ಮೇಲೆ ಹಲವು ಭಾರಿ ರೈತರು ದೂರು ನೀಡಿದ್ದರು. ಕೃಷಿ ಇಲಾಖೆ ನಿರ್ದೇಶಕ ಮಂಜುನಾಥ, CPI ಭಾಗ್ಯವತಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ಕೊರೊನಾ ವೈರಸ್ ನಿಯಂತ್ರಿಸಲು ಲಾಕ್ ಡೌನ್ ಮಾಡಲಾಗಿದ್ದು, ಇದನ್ನೇ ದುರ್ಬಳಕೆ ಮಾಡಿಕೊಂಡು ಲಾಕ್ ಡೌನ್ ಮುಗಿದ ಬಳಿಕ ರೈತರಿಗೆ ನಕಲಿ ಬೀಜ ಮಾರಾಟ ಮಾಡಲು ಯತ್ನಿಸಿದ್ದ ಎನ್ನಲಾಗಿದೆ.