ರೈತರಿಂದ ನೇರ ಗ್ರಾಹಕರಿಗೆ: ಹೀಗೊಂದು ಹೆಜ್ಜೆ...
ಪ್ರೀತಿಯ ರೈತರೇ ಮತ್ತು ಗ್ರಾಹಕರೇ, ಒಂದೆರಡು ಸರಳ ಹಾಗೂ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ಹುಡುಕೋಣ. ಮೊದಲಿಗೆ ನಿಮ್ಮ ಗ್ರಾಮದಲ್ಲಿ ಏನೆಲ್ಲಾ ಹಣ್ಣು, ತರಕಾರಿ, ಆಹಾರ ಧಾನ್ಯಗಳನ್ನು ಬೆಳೆಯಲಾಗುತ್ತಿದೆ ಎಂದು ಪಟ್ಟಿ ಮಾಡಿ. ಸಾಧ್ಯವಾದರೆ ಅವುಗಳ ಪ್ರಮಾಣ ಅಂದಾಜು ಮಾಡಿ. ಅವೆಲ್ಲವೂ ಮಾರಾಟವಾಗುತ್ತಿರುವುದು ಎಲ್ಲಿ ಎಂದು ತಿಳಿಯಿರಿ. ಮತ್ತೆ ನಿಮ್ಮದೇ ಊರಿನ ಜನ ಅವೇ ಹಣ್ಣು ತರಕಾರಿ ಆಹಾರ ಧಾನ್ಯಗಳನ್ನು ಎಲ್ಲಿಂದ ಕೊಂಡು ತರುತ್ತಿದ್ದಾರೆ ಎಂಬುದನ್ನೂ ಅರಿಯಿರಿ. ಇಷ್ಟು exercise ಮನಸ್ಸಿನಲ್ಲೇ ಮಾಡಿದ ಮೇಲೆ ಮುಂದಕ್ಕೆ ಹೋಗೋಣ.
ನಿಮ್ಮ ಹಳ್ಳಿಯಲ್ಲಿ ಬೆಳೆದ ಹಣ್ಣು, ತರಕಾರಿ ದೂರದ ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರಗಳಲ್ಲಿ ಮಾರಾಟವಾಗುತ್ತವೆ. ಅಲ್ಲಿಂದ ನಿಮ್ಮೂರಿನ ಅಂಗಡಿಯವ ಹೋಲ್ ಸೇಲ್ ಲೆಕ್ಕದಲ್ಲಿ ಅವುಗಳನ್ನು ಕೊಂಡು ನಿಮ್ಮೂರಿನ ಅಂಗಡಿಯಲ್ಲಿ ತಂದಿಟ್ಟುಕೊಂಡು ರೀಟೇಲ್ ಲೆಕ್ಕದಲ್ಲಿ ಮಾರಾಟ ಮಾಡುತ್ತಾನೆ. ಅವುಗಳನ್ನು ಕೊಳ್ಳಲು ನೀವೇ ಗಿರಾಕಿಗಳಾಗಿರುತ್ತೀರಿ.
ಅವುಗಳನ್ನು ಕೊಳ್ಳುವ ಗ್ರಾಹಕರು ನೀವೇ
ಇಲ್ಲಿ ಬೆಳೆಗಾರ ಮತ್ತು ಗ್ರಾಹಕನ ನಡುವಿನ ಅಂತರ ಗಮನಿಸಿ. ಮೊದಲಿಗೆ ಬೆಳೆದ ಬೆಳೆ ಜಿಲ್ಲಾ ಕೇಂದ್ರಕ್ಕೆ ಸಾಗಿಸಲು ಒಂದು ವಾಹನ, ಎತ್ತಿಳಿಸಲು ಕೂಲಿ, ಅಲ್ಲಿ ಮಾರುಕಟ್ಟೆಯಲ್ಲಿ ಮಾರಾಟ. ಮತ್ತದೇ ವಸ್ತುಗಳು ದಲ್ಲಾಳಿಗಳ ಮತ್ತು ಅಂಗಡಿ ವ್ಯಾಪಾರಸ್ಥರ ಮುಖೇನ ಹಿಮ್ಮುಖವಾಗಿ ಚಲಿಸಿ ನಿಮ್ಮೂರಿನಲ್ಲೇ ಅಂಗಡಿಯ ಸರಕುಗಳಾಗುತ್ತವೆ. ಈಗ ಅವುಗಳನ್ನು ಕೊಳ್ಳುವ ಗ್ರಾಹಕರು ನೀವೇ ಆಗಿರುತ್ತೀರಿ. ಅಥವಾ ನಿಮ್ಮೂರಿನವರೇ ಆಗಿರುತ್ತಾರೆ.
ಬಿಟಿ ಬಗ್ಗೆ ವಕಾಲತ್ತು; ರಾತ್ರಿ ಕಂಡ ಬಾವಿಗೆ ಹಗಲು ಬಿದ್ದ ರೈತರು...
ನಮ್ಮೂರು- ನಮ್ಮ ಬೆಳೆ- ನಮ್ಮದೇ ಆಹಾರ
ಹೀಗೆ ಬೆಳೆದ ಬೆಳೆ ಅಂತಿಮವಾಗಿ ಬಳಕೆದಾರನ ತಟ್ಟೆಗೆ ಬರುವ ಮುನ್ನ ಎಷ್ಟು ದೂರ ಸಂಚರಿಸಿತು ಅದಕ್ಕಾಗಿ ಎಷ್ಟು ಸಮಯ ಹಿಡಿಯಿತು ಎನ್ನುವುದನ್ನು Food Mile ಎಂದು ಕರೆಯಲಾಗುತ್ತದೆ. ಈ ಫುಡ್ ಮೈಲ್ ಅಂತರ ಕಡಿಮೆ ಮಾಡಿದರೆ ಬೆಳೆಗಾರ ಹಾಗೂ ಗ್ರಾಹಕ ಇಬ್ಬರಿಗೂ ಲಾಭವಾಗುತ್ತದೆ ಎಂಬುದೊಂದು ಲೆಕ್ಕಾಚಾರವಿದೆ. ಅದರ ಜೊತೆಗೆ "ನಮ್ಮೂರು- ನಮ್ಮ ಬೆಳೆ- ನಮ್ಮದೇ ಆಹಾರ" ಎಂಬ ಸ್ವಾವಲಂಬನೆಯ ಮಾದರಿಯೂ ಆಗುತ್ತದೆ.
ಸ್ಥಳೀಯ ಮಾರುಕಟ್ಟೆ ರೂಪಿಸಿಕೊಳ್ಳಲು ಸ್ವಾವಲಂಬನೆ ಬೇಕು
ಇದನ್ನೇ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರು ರೈತರಿಗೆ ಸ್ವಾವಲಂಬನೆಯ ಮಾರುಕಟ್ಟೆ ಎಂದು ಹೇಳಿದ್ದು. ಈ ಚಿಂತನೆ ಪ್ರೊ.ಎಂ.ಡಿ.ಎನ್ ತಲೆಯಲ್ಲಿ ಮೊಳೆತು ರೈತರಿಗೆ ಮುಟ್ಟಿಸುವ ಸಂದರ್ಭದಲ್ಲಿ ಒಮ್ಮೆ ಎಲ್ಲಿಗೋ ಪ್ರಯಾಣ ಮಾಡುವಾಗ ಏರ್ ಪೋರ್ಟ್ ನಲ್ಲಿ ಖ್ಯಾತ ನಟ ರಜನಿಕಾಂತ್ ಎದುರಾಗುತ್ತಾರೆ. ಅಲ್ಲಿ ಸಿಕ್ಕ ಬಿಡುವಿನ ಸಮಯದಲ್ಲಿ ಪ್ರೊ.ಎಂ.ಡಿ.ಎನ್ ಈ ವಿಚಾರವನ್ನು ರಜನಿಕಾಂತ್ ಅವರಿಗೆ ಹೇಳುತ್ತಾರೆ. ಅದಕ್ಕೆ ಪ್ರತಿಯಾಗಿ ರಜನಿಕಾಂತ್ ಇದಕ್ಕೆ ನಾನು ಐದು ಕೋಟಿ ರುಪಾಯಿಗಳನ್ನು(ಅಂದಿನ ಐದು ಕೋಟಿ ಇಂದು ನೂರು ಕೋಟಿ ಇರಬಹುದು) ದೇಣಿಗೆ ಕೊಡಲು ಸಿದ್ಧ ಮುಂದುವರೆಸಿ ಎಂದು ಹೇಳಿದಾಗ ಎಂಡಿಎನ್ " ಹಾಗೆ ಬಂಡವಾಳ ಹೂಡಿ ರೈತರಿಗೆ ಸ್ವಾವಲಂಬನೆಯ ಪಾಠ ಹಾಗೂ ಬೆಳೆದ ಬೆಳೆಗೆ ಸ್ಥಳೀಯ ಮಾರುಕಟ್ಟೆ ರೂಪಿಸಿಕೊಳ್ಳಲು ಹೇಳಿದರೆ ಅದು ಉದ್ದಿಮೆ ಆಗಬಲ್ಲದು ಸ್ವಾವಲಂಬನೆ ಹಾಗೂ ಲೋಕಲ್ ಮಾರ್ಕೆಟ್ ಚಳುವಳಿ ಆಗುವುದಿಲ್ಲ. ನಿಮ್ಮ ಒಳ್ಳೆಯ ಮನಸ್ಸಿಗೆ ಧನ್ಯವಾದ" ಎಂದು ಹೇಳಿ ನವಿರಾಗಿ ಅವರ ದೇಣಿಗೆಯನ್ನು ನಿರಾಕರಿಸುತ್ತಾರೆ.
ರೈತರೇ.. ಕಳೆನಾಶಕಕ್ಕೆ ಯೂರಿಯಾ ಮಿಶ್ರಣ ಬೇಡ: ಕೃಷಿ ತಜ್ಞರ ಅಭಿಪ್ರಾಯ
ರೈತರಿಂದ ನೇರ ಗ್ರಾಹಕರಿಗೆ
ಇದೀಗ ನಾಲ್ಕೈದು ದಿನಗಳ ಹಿಂದೆ ಪ್ರೊ.ಎಂಡಿಎನ್ ಅವರ ಮಗ ಪಚ್ಚೆ ನಂಜುಂಡಸ್ವಾಮಿ "ರೈತರಿಂದ ನೇರ ಗ್ರಾಹಕರಿಗೆ" ಎಂಬ ಫೇಸ್ ಬುಕ್ ಪೇಜ್ ಮಾಡಿದ್ದಾರೆ. ಇದರ ಉದ್ದೇಶ ಬೆಳೆಗಾರ ಮತ್ತು ಗ್ರಾಹಕನ ನಡುವಿನ ಸಮಸ್ಯಾತ್ಮಕ ಕೊಂಡಿಗಳನ್ನು ಕಳಚಿ ಇವರಿಬ್ಬರ ನಡುವೆ ನೇರ ಸಂಪರ್ಕ, ಸಂವಹನ ಹಾಗೂ ಮಾರಾಟ ಮಾಡುವುದಾಗಿದೆ. ತನ್ಮೂಲಕ ರೈತನಿಗೆ ಉತ್ತಮ (ವೈಜ್ಞಾನಿಕ) ಬೆಲೆ ಸಿಗುವಂತೆ ಮಾಡುವುದು ಉದ್ದೇಶ. ಫೇಸ್ ಬುಕ್ ಮುಖೇನ ಮಾಡಹೊರಟಿರುವ ಇದು ಮಹತ್ವದ ಕಲ್ಪನೆ. ಅದಕ್ಕಾಗಿ ಮೊದಲಿಗೆ ಅವರಿಗೆ ಅಭಿನಂದನೆ ಸಲ್ಲಿಸಿ ಮುಂದಕ್ಕೆ ಹೋಗೋಣ.
ಎಷ್ಟು ಸಾಧ್ಯವೋ ಅಷ್ಟೂ ವಿಕೇಂದ್ರೀಕರಣ ಮಾಡಬೇಕು
ಫೇಸ್ ಬುಕ್ ನಲ್ಲಿ ರಾಜ್ಯದ ಎಲ್ಲ ಭಾಗದ ಜನರಿದ್ದಾರೆ, ಇರುತ್ತಾರೆ. ಒಂದು ಸಣ್ಣ ಉದಾಹರಣೆ ತೆಗೆದುಕೊಳ್ಳೋಣ. ಬೀದರ್ ಜಿಲ್ಲೆಯ ಯಾವುದೋ ಗ್ರಾಮದ ರೈತ ಚಾಮರಾಜನಗರದ ಒಬ್ಬ ಗ್ರಾಹಕನಿಗೆ ಅವನು ಬೆಳೆದ ಬೆಳೆ ನೇರವಾಗಿ ಮಾರಾಟ ಮಾಡಲು ಇರಬಹುದಾದ ತೊಡಕುಗಳ ಬಗ್ಗೆ ಯೋಚಿಸಬೇಕಿದೆ. ಹಾಗಾಗಿ ಈ ಗುಂಪನ್ನು ಎಷ್ಟು ಸಾಧ್ಯವೋ ಅಷ್ಟೂ ವಿಕೇಂದ್ರೀಕರಣ ಮಾಡಬೇಕು. ಅದು ಪೇಜ್ ನಲ್ಲಿ ಸಾಧ್ಯವೋ ಇಲ್ಲವೋ ನನಗೆ ಅದರ ಬಗ್ಗೆ ಹೆಚ್ಚು ಜ್ಞಾನವಿಲ್ಲ. ಆದರೂ ಅನಿಸಿದ್ದನ್ನು ಹೇಳಿಬಿಡುತ್ತೇನೆ. ತಂತ್ರಜ್ಞಾನದ ಪರಿಣಿತಿ ಉಳ್ಳವರು ಅದರ ಸಾಧ್ಯತೆಗಳನ್ನು ವಿಸ್ತರಿಸಲಿ.
ಎಲ್ಲ ಸದಸ್ಯರದ್ದು ಒಂದು ಗುಂಪು ಮಾಡಬೇಕು
ಒಂದೇ ಗ್ರೂಪಿನಡಿ ನೋಂದಾವಣಿಯಾದ ಎಲ್ಲ ಸದಸ್ಯರದ್ದು ಒಂದು ಗುಂಪು. ಅದರೊಳಗೆ ಜಿಲ್ಲಾವಾರು, ತಾಲ್ಲೂಕುವಾರು ಉಪಗುಂಪುಗಳು. ಬೆಳೆಗಾರದ್ದು ಒಂದು ಗುಂಪಾದರೆ, ಉಪ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವವರದ್ದು ಮತ್ತೊಂದು ಗುಂಪಾಗಲಿ. ಇದಾದ ಮೇಲೆ ಗ್ರಾಹಕರದ್ದು ಒಂದು ಗುಂಪು. ಒಟ್ಟಾರೆ ರೈತ ಮತ್ತು ಗ್ರಾಹಕ ನೇರವಾಗಿ ಸಂಪರ್ಕದಲ್ಲಿರಬೇಕು, ಸುಲಭದ ಸಂವಹನ ಸಾಧ್ಯವಾಗಬೇಕು. ಒಂದೇ ಜಿಲ್ಲೆ ಅಥವಾ ತಾಲ್ಲೂಕಿನ ಉತ್ಪನ್ನಗಳು ಅಲ್ಲಿಯ ಗ್ರಾಹಕರಿಗೇ ಮಾರಾಟವಾದರೆ ಉತ್ತಮ. ಅದರಿಂದ food mile ಕಡಿಮೆ ಮಾಡಬಹುದು. ಅಂತರ ಜಿಲ್ಲಾ ವಹಿವಾಟು ಬೇಡವೆಂದಲ್ಲ. ಈಗಾಗಲೇ ಹೇಳಿದಂತೆ Food Mile ಕಡಿಮೆಯಾದರೆ ರೈತ ಹಾಗೂ ಗ್ರಾಹಕ ಇಬ್ಬರಿಗೂ ಲಾಭ. ಅದೊಂದು WIN WIN SITUATION.
ಎಲ್ಲವನ್ನೂ ರೈತರ ಮನೆಬಾಗಿಲಿನಿಂದ ಕಂಪನಿಗಳು ಕೊಳ್ಳುತ್ತವೆ
ಮೊನ್ನೆ ತಾನೇ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಇನ್ನು ಮುಂದೆ ರೈತರು ಬೆಳೆದ ಉತ್ಪನ್ನಗಳನ್ನು ಅವರ ಮನೆ ಬಾಗಿಲಿನಿಂದ ಕೊಂಡು ತರುವ ಅವಕಾಶ ಕಲ್ಪಿಸಲಾಗಿದೆ. ಕೊರೊನಾ ವೈರಸ್ ರೋಗ ಇಲ್ಲದಿದ್ದರೆ ಇಷ್ಟೊತ್ತಿಗೆ ಹತ್ತಾರು ಮಲ್ಟಿ ನ್ಯಾಷನಲ್ ಕಂಪನಿಗಳು ಕಾರ್ಯಾರಂಭ ಮಾಡಿರುತ್ತಿದ್ದವು. ಮೊದಲಿಗೆ ರೈತರು ಕೊಟ್ಟ ಎಲ್ಲವನ್ನೂ ಉದಾಹರಣೆಗೆ ಪಪ್ಪಾಯಿ ಎನ್ನಿ. ಕಾಯಿ, ಹಣ್ಣು, ಕೊಳೆತು ಹೋಗಿರುವ ಹಣ್ಣುಗಳು ಎಲ್ಲವನ್ನೂ ರೈತರ ಮನೆಬಾಗಿಲಿನಿಂದ ಈ ಕಂಪನಿಗಳು ಕೊಳ್ಳುತ್ತವೆ. ತುಸುಕಾಲದ ನಂತರ ಕಾಯಿ ಹಾಗೂ ಇನ್ನೊಂದೆರಡು ದಿನಗಳಲ್ಲಿ ಹಣ್ಣಾಗುವಂಥ ಫಲ ಮಾತ್ರ ಕೊಳ್ಳುತ್ತೇವೆ ಎನ್ನುತ್ತಾರೆ. ಮತ್ತೆ ಸ್ವಲ್ಪದಿನ ಬಿಟ್ಟು ಇದೇ ಸೈಜು ಬೇಕು. ಇಷ್ಟೇ ದಿನಗಳಲ್ಲಿ ಹಣ್ಣಾಗುವಂತಿರಬೇಕು ಎನ್ನುತ್ತಾರೆ.
ಭವಿಷ್ಯದ ಮಾರುಕಟ್ಟೆ ಸಮಸ್ಯೆಗಳಿವೆ
ಮೊದಲಿಗೆ ರೈತನಿಂದ ಕಸವನ್ನೂ ಕೊಂಡು ಹೋಗುತ್ತಿದ್ದ ಕಂಪನಿಗಳು ಕೊನೆಗೆ ಗ್ರೇಡಿಂಗ್ ಹೆಸರಿನಲ್ಲಿ ರೈತರು ಬೆಳೆದದ್ದೆಲ್ಲವನ್ನೂ ಕೊಳ್ಳಲು ಸಾಧ್ಯವಿಲ್ಲವೆನ್ನುತ್ತಾರೆ. ಅಷ್ಟರಲ್ಲಿ ಸ್ಥಳೀಯವಾದ ಮಾರುಕಟ್ಟೆಯೂ ಇಲ್ಲವಾಗಿ ರೈತರು ಕಂಗಾಲಾಗುತ್ತಾರೆ. ಇದೆಲ್ಲವೂ ನಾವು ಈಗಲೇ ಊಹಿಸಬಹುದಾದ ಭವಿಷ್ಯದ ಮಾರುಕಟ್ಟೆ ಸಮಸ್ಯೆಗಳು. ಅಷ್ಟರಲ್ಲಿ ರೈತರಿಂದ ಗ್ರಾಹಕರಿಗೆ ಎನ್ನುವ ಮಹತ್ವಾಕಾಂಕ್ಷಿ ಗುಂಪು Strategic position ನಲ್ಲಿ ಕುಳಿತಿರಬೇಕು.
ಈಗ ಪಚ್ಚೆ ನಂಜುಂಡಸ್ವಾಮಿ ಇಟ್ಟಿರುವ ಹೆಜ್ಜೆ ಫಲ ಕಾಣಬೇಕಾದರೆ ಸಾವಿರ ಸಾವಿರ ಗಾವುದ ನಡೆಯಬೇಕಿದೆ. ಅವರಿಗೂ, ಗುಂಪಿಗೂ, ಗುಂಪಿನಲ್ಲಿರುವ ರೈತರಿಗೂ, ಗ್ರಾಹಕರಿಗೂ ಶುಭವಾಗಲಿ.