ಈರುಳ್ಳಿ ಬೆಳೆಗೆ ತಗುಲುವ ಕೊಳೆರೋಗ ನಿವಾರಣೆಗೆ ತಜ್ಞರ ಸಲಹೆ
ಪ್ರಾಯಶಃ ಕೃಷಿಯಲ್ಲಿ ಈರುಳ್ಳಿ ಮತ್ತು ಟೊಮ್ಯಾಟೋ ಬೆಳೆಯಷ್ಟು ಸುದ್ದಿಯಾಗುವ ಬೆಳೆ ಇನ್ನೊಂದಿರಲಿಕ್ಕಿಲ್ಲ. ಬರ, ನೆರೆಗೆ ಬೆಳೆ ಹಾಳಗಿದ್ದಕ್ಕೋ, ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ ರಸ್ತೆಗೆ ಸುರಿವ ಸನ್ನಿವೇಶ ಎದುರಾಗುವುದಕ್ಕೋ, ಹೆಚ್ಚು ಬೆಲೆ ಬಂದದ್ದಕ್ಕೋ ಅಥವಾ ಇಂಥವೇ ಇನ್ನಾವುದಾದರೂ ಕಾರಣಕ್ಕೆ ಇವೆರಡೂ ಬೆಳೆಗಳು ಸುದ್ದಿಯಲ್ಲಿರುತ್ತವೆ.
ಇದೀಗ ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ವಾರಗಳಿಂದ ಸುರಿದ ಮಳೆಯಿಂದ ಮತ್ತು ಮುಂದುವರೆಯುತ್ತಿರುವ ಜಿಟಿ ಜಿಟಿ ಹನಿಗಳಿಂದಾಗಿ ಸಾವಿರಾರು ಎಕರೆಯಲ್ಲಿ ಬೆಳೆದಿರುವ ಈರುಳ್ಳಿ ಬೆಳೆಗೆ ಕೊಳೆ ರೋಗ ಬಂದು ದುರ್ಗದ ಈರುಳ್ಳಿ ಬೆಳೆ ನಾಶವಾಗುತ್ತಿರುವ ಕಾರಣ ಬೆಳೆ ಮತ್ತು ಬೆಳೆಗಾರರು ಸುದ್ದಿಯಲ್ಲಿದ್ದಾರೆ. ಕಳೆದ ವರ್ಷ ಈರುಳ್ಳಿ ಬೆಲೆ ಏರಿಕೆ ಕಂಡಿದ್ದರಿಂದ ಇಲ್ಲಿನ ರೈತರು ಭರ್ಜರಿ ಈರುಳ್ಳಿ ಬೆಳೆದಿದ್ದರು. ಉತ್ತಮ ಇಳುವರಿಯಿಂದ ಒಳ್ಳೆಯ ಲಾಭವನ್ನೇ ಗಳಿಸಿದ್ದರು. ಆದರೆ ಈ ಬಾರಿ ಕೊರೊನಾ ಸೋಂಕಿನಿಂದ ಲಾಕ್ ಡೌನ್ ಮಾಡಿದ್ದು, ಈರುಳ್ಳಿ ದರ ಕುಸಿತವಾಯಿತು. ಈಗ ಮಳೆ ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದೆ.
ಗುಂಡ್ಲುಪೇಟೆಯಲ್ಲಿ ನಷ್ಟಕ್ಕೆ ಕಂಗೆಟ್ಟು ಈರುಳ್ಳಿ ಹೊಲವನ್ನು ಟ್ರ್ಯಾಕ್ಟರ್ ನಿಂದ ಉಳುಮೆ ಮಾಡಿದ ರೈತ
ಏನಿದು ಕೊಳೆರೋಗ?
ಇದೊಂದು ಶಿಲೀಂದ್ರ ರೋಗ. ಭೂಮಿಯಲ್ಲಿ ತೇವಾಂಶ ಹೆಚ್ಚಾದಾಗ ಈರುಳ್ಳಿ ಬೆಳೆಗೆ ಈ ರೋಗ ಬರುತ್ತದೆ. ಇದೀಗ ಚಿತ್ರದುರ್ಗದಲ್ಲೂ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಹೀಗಾಗಿ ಭೂಮಿ ತೇವಾಂಶ ಹೆಚ್ಚಾಗಿ ಕೊಳೆ ರೋಗ ಈರುಳ್ಳಿಗೆ ತಗುಲಿದೆ. ಇದರಿಂದ ಈರುಳ್ಳಿ ಬೆಳೆದಿದ್ದ ರೈತರು ಬೇಸ್ತು ಬಿದ್ದಿದ್ದಾರೆ.
ತಜ್ಞ ಡಾ.ಎಂ. ನಾರಾಯಣಸ್ವಾಮಿ ಸಲಹೆ
ಸಾಮಾನ್ಯವಾಗಿ ಪ್ಯುಸೇರಿಯಂ ಕೊಳೆರೋಗ, ಫೈಥಿಯಂ ಮತ್ತು ಆಲ್ಟರ್ನೇರಿಯಾ ಕೊಳೆರೋಗಗಳು ಈರುಳ್ಳಿಗೆ ಬರುತ್ತವೆ. ಈ ರೋಗಗಳು ಶಿಲೀಂದ್ರಗಳಿಂದ ಬರುವಂಥವು. ತೇವಾಂಶ ಹೆಚ್ಚಾದಾಗ ಕಾಂಡ ಭಾಗ ಕುಸಿಯುವುದು, ಭೂಮಿ ಮಟ್ಟದಲ್ಲಿ ಕೊಳೆಯುವುದು, ಗಡ್ಡೆಗಳು ಕೊಳೆಯುವುದು ಸಾಮಾನ್ಯ. ಇಂಥ ಸಂದರ್ಭಗಳಲ್ಲಿ ರೈತರು ಈರುಳ್ಳಿ ಬೆಳೆಗೆ ಕ್ಲೋರೋಥಲೋನಿಲ್ (ಕವಚ್) 2 ಗ್ರಾಂ/ಲೀಟರ್ + ಸೂಡೋಮೊನಾಸ್-ಬ್ಯಾಸಿಲಸ್ 5 ಗ್ರಾಂ/ಲೀಟರ್ ನೀರಿಗೆ ಬೆರೆಸಿ ಸಸಿಗಳು ಚೆನ್ನಾಗಿ ನೆನೆಯುವಂತೆ ಸಿಂಪರಣೆ ಕೊಡಬೇಕು. ನಂತರ ಐದಾರು ದಿನಗಳು ಬಿಟ್ಟು ಕಾಪರ್ ಹೈಡ್ರಾಕ್ಸೈಡ್ (ಕೋಸೈಡ್) 1.5 ಗ್ರಾಂ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಜೊತೆಗೆ ಥಯೋಫನೇಟ್ ಮೇಥೈಲ್ 70% WP 2 ಗ್ರಾಂ/ಲೀ (ವಿಶೇಷ್) ಕೊಡಬೇಕು.
preventive ಸಿಂಪರಣೆಯೂ ಮಾಡುತ್ತಾರೆ
ಈ ರೋಗ ಈರುಳ್ಳಿಗೆ ತಗುಲದಂತೆ preventive ಆಗಿ ಕೂಡ ರೈತರು ಸಿಂಪರಣೆಗಳನ್ನು ಕೊಡುತ್ತಾರೆ. ಆದರೆ ಹೊಸದಾಗಿ ಈರುಳ್ಳಿ ಬೆಳೆಯುವ ರೈತರು ತಜ್ಞರ ಸಲಹೆಯನ್ನು ಪಡೆದುಕೊಂಡೇ preventive spray ಕೊಡುವುದು ಉತ್ತಮ.
ನಿರಂತರ ಮಳೆ; ಚಿತ್ರದುರ್ಗದಲ್ಲಿ ನೂರಾರು ಎಕರೆ ಈರುಳ್ಳಿಗೆ ತಗುಲಿದ ಕೊಳೆರೋಗ
70%ರಷ್ಟು ಈರುಳ್ಳಿ ಬೆಳೆಗೆ ಕೊಳೆರೋಗ
ಚಿತ್ರದುರ್ಗದಲ್ಲಿ ಈರುಳ್ಳಿ ಒಳ್ಳೆ ಇಳುವರಿ ಬರುವ ಸಮಯದಲ್ಲಿ ರೋಗಬಾಧೆ ಆವರಿಸಿದ್ದು, ಈರುಳ್ಳಿಗಳು ಮುರುಟಿದಂತೆ ಕಾಣುತ್ತಿವೆ. ಈ ಜಿಲ್ಲೆಯಲ್ಲಿ ಸಾವಿರ ಕೆ.ಜಿಗಟ್ಟಲೆ ಈರುಳ್ಳಿ ಬೆಳೆಯುತ್ತಿದ್ದು, ಈ ಬಾರಿ ಜಿಲ್ಲೆಯ 70% ಈರುಳ್ಳಿ ಕೊಳೆರೋಗಕ್ಕೆ ತುತ್ತಾಗಿದೆ. ಚಿತ್ರದುರ್ಗ ಜಿಲ್ಲೆಯ ದ್ಯಾಮವ್ವನಹಳ್ಳಿ, ಕಲ್ಲಹಳ್ಳಿ, ಲಿಂಗಾವರಹಟ್ಟಿ ಸೇರಿ ಅನೇಕ ಗ್ರಾಮಗಳಲ್ಲಿ ಪ್ರತಿ ವರ್ಷ ಈರುಳ್ಳಿ ಬೆಳೆಯುತ್ತಾರೆ. ಆದರೆ ಈರುಳ್ಳಿ ಬೆಳೆಗೆ ಈ ಬಾರಿ ಕೊಳೆ ರೋಗ ಕಾಣಿಸಿಕೊಂಡಿರುವುದು ರೈತರಲ್ಲಿ ಆತಂಕ ತಂದಿದೆ.