ಮಳೆ ತಂದ ಅವಾಂತರದಿಂದ ಈರುಳ್ಳಿ ಸೇರಿ ತರಕಾರಿ ಬೆಲೆ ಗಗನಕ್ಕೆ
ಬೆಂಗಳೂರು, ನವೆಂಬರ್ 28: ಕರ್ನಾಟಕದಲ್ಲಿ ಕೆಲವೇ ತಿಂಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ತರಕಾರಿ ಬೆಳೆಗಳು ನಾಶವಾಗಿದ್ದು ಬೆಲೆ ಗಗನಕ್ಕೇರಿದೆ.
ಇನ್ನೂ 20 ದಿನ ತರಕಾರಿ ಬೆಲೆ ಕಡಿಮೆ ಆಗೋಲ್ಲ!
"ಮಳೆಯಿಂದಾಗಿ ಈರುಳ್ಳಿ, ಟೊಮೆಟೋ ಮತ್ತು ಬಟಾಟೆಯಂಥ ದಿನ ಬಳಕೆಯ ತರಕಾರಿಗಳ ಅಲಭ್ಯತೆ ಉಂಟಾಗಿದೆ," ಎನ್ನುತ್ತಾರೆ ಹಾಪ್ ಕಾಮ್ಸ್ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಗೋಪಾಲ್ ಗೌಡ.
ಇಂದಿನ ಹಾಪ್ ಕಾಮ್ಸ್ ದರಗಳನ್ನೇ ನೋಡುವುದಾದರೆ ಈರುಳ್ಳಿ ಬೆಲೆ ಕೆಜಿ 67ರೂಪಾಯಿ ಮುಟ್ಟಿದೆ, ಟೊಮೆಟೋ ದರ 42 ರೂಪಾಯಿ ಇದೆ. ಅಲ್ಲದೆ ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿದೆ. ಇದರ ಜತೆಗೆ ಉಳಿದ ತರಕಾರಿಗಳೂ ಸಾಮಾನ್ಯ ವರ್ಗದವರ ಕೈಗೆಟುಕದಾಗಿದೆ.
ಅರ್ಧ ಶತಕದ ಗಡಿ ದಾಟಿದ ತರಕಾರಿಗಳ ಬೆಲೆ!
ಕಳೆದ ವಾರ ಕೇಂದ್ರ ಸರಕಾರ ಕನಿಷ್ಠ ಈರುಳ್ಳಿ ರಫ್ತು ಬೆಲೆಯನ್ನು 850ಡಾಲರ್ ಗೆ ನಿಗದಿಪಡಿಸಿದ್ದು ಇದರಿಂದ ಮುಂದಿನ 20-25 ದಿನಗಳಲ್ಲಿ ಬೆಲೆ ಇಳಿಕೆ ಆಗಬಹುದು ಎಂದು ಗೋಪಾಲ್ ಅಂದಾಜಿಸಿದ್ದಾರೆ.
ಸಾಮಾನ್ಯವಾಗಿ ಚಳಿಗಾಲದಲ್ಲಿ ಟೊಮೆಟೋ ಮತ್ತು ಈರುಳ್ಳಿ ಬೆಲೆಗಳು ಕಡಿಮೆ ಇರುತ್ತವೆ. ಆದರೆ ಮಳೆಗಾಲ ಮುಗಿಯುವ ವೇಳೆ ರಾಜ್ಯದಾದ್ಯಂತ ಸುರಿದ ಮಳೆಯಿಂದಾಗಿ ಬೆಳೆ ನಾಶ, ಕಟಾವು ಮುಂದೂಡಿಕೆಯಂಥ ಸಮಸ್ಯೆಗಳಿಂದ ಬೆಳೆಗಳ ಅಲಭ್ಯತೆ ಉಂಟಾಗಿದ್ದು ಬೆಲೆ ಏರಿಕೆಯಾಗಿದೆ.
ಮಹಾರಾಷ್ಟ್ರ, ಮಧ್ಯ ಪ್ರದೇಶ, ಬಿಹಾರ ಮತ್ತು ಗುಜರಾತ್ ಜತೆ ಕರ್ನಾಟಕವೂ ದೇಶದ ಪ್ರಮುಖ ಈರುಳ್ಳಿ ಉತ್ಪಾದಿಸುವ ರಾಜ್ಯವಾಗಿದೆ. ಹೀಗಾಗಿ ಇಲ್ಲಿನ ಇಳುವರಿ ಕೊರತೆಯ ಬಿಸಿ ದೇಶದ ಮಾರುಕಟ್ಟೆಯನ್ನೂ ತಟ್ಟಲಿದೆ.