ಬಂಡೀಪುರ ಅರಣ್ಯದಂಚಿನಲ್ಲಿ ಕಾಡಾನೆ ದಾಳಿಯಿಂದ ಟೊಮಾಟೊ ಬೆಳೆ ನಾಶ
ಚಾಮರಾಜನಗರ, ನವೆಂಬರ್ 27: ಬಂಡೀಪುರ ಅರಣ್ಯದಿಂದ ನಾಡಿಗೆ ಬಂದು ಜಮೀನಿಗೆ ನುಗ್ಗಿ ರೈತರು ಬೆಳೆದ ಬೆಳೆಗಳನ್ನು ತಿಂದು ಅಭ್ಯಾಸವಾಗಿರುವ ಕಾರಣ ಕಾಡಾನೆಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳುವುದೇ ಕಾಡಂಚಿನ ಗ್ರಾಮಗಳ ರೈತರಿಗೆ ಸವಾಲಾಗಿದೆ. ಈ ಸಮಸ್ಯೆ ಕುರಿತು ಅರಣ್ಯಾಧಿಕಾರಿಗಳು ಸ್ಪಂದಿಸದಿರುವುದು ಕೂಡ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ.
ಇದೀಗ ಬೆಳೆಗಳ ಫಸಲು ಕೊಯ್ಲಿಗೆ ಬಂದಿದ್ದು, ಈ ಸಂದರ್ಭವೇ ಕಾಡಾನೆಗಳು ಜಮೀನಿಗೆ ಲಗ್ಗೆಯಿಡುತ್ತಿರುವುದರಿಂದ ರೈತರು ಹಗಲು ರಾತ್ರಿ ಎನ್ನದೆ ಜಮೀನಿನಲ್ಲಿ ಕಾಯುವುದು ಮಾಮೂಲಿಯಾಗಿದೆ. ಅರಣ್ಯದಲ್ಲಿ ಈಗ ಕಾಡಾನೆಗಳಿಗೆ ಆಹಾರ ದೊರೆತರೂ ಅವು ಕಾಡಿನಲ್ಲಿ ನಿಲ್ಲದೆ ನೇರವಾಗಿ ರೈತರ ಜಮೀನಿನತ್ತ ಬರುತ್ತಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ.
ನಾಗರಹೊಳೆ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಯಿಂದ ಬೆಳೆ ನಾಶ
ಬಂಡೀಪುರ ಅಭಯಾರಣ್ಯ ವಾಪ್ತಿಯ ಓಂಕಾರ ವಲಯ ಕಾಡಂಚಿನ ಗ್ರಾಮವಾದ ಮಂಚಹಳ್ಳಿಗೆ ಲಗ್ಗೆಯಿಟ್ಟ ಕಾಡಾನೆಗಳು ಗ್ರಾಮದ ಶಿವು ಎಂಬುವರು ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಟೊಮೆಟೊ ಬೆಳೆಯನ್ನು ನಾಶ ಮಾಡಿವೆ. ಇದರಿಂದ ಅಪಾರ ಪ್ರಮಾಣದ ನಷ್ಟವುಂಟಾಗಿದೆ.
ಓಂಕಾರ ವಲಯದ ಕಾಡಂಚಿನ ಗ್ರಾಮಗಳಿಗೆ ಕಾಡಾನೆಗಳು ಲಗ್ಗೆಯಿಡುವುದು ಹೊಸತೇನಲ್ಲ. ಆದರೆ ಇತ್ತೀಚೆಗೆ ಇವುಗಳ ಹಾವಳಿ ಹೆಚ್ಚಾಗಿದೆ. ಈ ವ್ಯಾಪ್ತಿಯಲ್ಲಿ ರೈತರು ಹುರುಳಿ, ಟೊಮೆಟೊ ಬೆಳೆಗಳನ್ನು ಬೆಳೆದಿದ್ದು ಅವುಗಳನ್ನು ತಿಂದು ತುಳಿದು ಹಾಳು ಮಾಡುತ್ತಿವೆ. ಆದರೆ ನಷ್ಟಗೊಂಡ ಬೆಳೆಗಳಿಗೆ ಅರಣ್ಯ ಇಲಾಖೆಯಿಂದ ಬರುವ ಪರಿಹಾರ ರೈತರಿಗೆ ಸಾಕಾಗುವುದಿಲ್ಲ ಮತ್ತು ವರ್ಷಾನುಗಟ್ಟಲೆ ಕಚೇರಿಗೆ ಪರಿಹಾರ ಹಣ ಕೇಳಲು ಅಲೆಯಬೇಕಾಗಿದೆ.
ಕಳೆದ ಒಂದು ವಾರದಿಂದ ಕಾಡಾನೆಗಳು ಅರಣ್ಯದಿಂದ ಧಾವಿಸಿ ಬರುತ್ತಿವೆ. ಹೀಗೆ ಬರುವ ಕಾಡಾನೆಗಳು ಶ್ರೀಕಂಠಪುರ, ಹೊರೆಯಾಲ, ರಂಗೂಪುರ ಹಾಗೂ ಕುರುಬರ ಹುಂಡಿ ಗ್ರಾಮದ ಹೊರ ವಲಯಗಳಲ್ಲಿ ರಾತ್ರಿ ಮಾತ್ರವಲ್ಲ ಹಗಲು ಹೊತ್ತಿನಲ್ಲಿಯೇ ಜಮೀನುಗಳಿಗೆ ನುಗ್ಗಿ ಬೆಳೆ ನಾಶಮಾಡುತ್ತಿವೆ. ಈ ಕುರಿತು ಮಾತನಾಡಿರುವ ಮಂಚಹಳ್ಳಿ ಗ್ರಾಮದ ರೈತ ಶಿವು, ಹತ್ತಾರು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಾಡಾನೆಗಳು ಜಮೀನಿಗೆ ದಾಳಿ ಮಾಡುತ್ತಿರುವ ವಿಷಯ ತಿಳಿಸಿದ್ದರೂ ಸಿಬ್ಬಂದಿ ಸ್ಪಂದಿಸುತ್ತಿಲ್ಲ. ದೂರವಾಣಿ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಇದರ ಜೊತೆ ಅರಣ್ಯದಿಂದ ಹೊರಗೆ ಬರುವ ಕಾಡಾನೆಗಳ ಜೀವಕ್ಕೂ ಆಪತ್ತು ಕಂಡು ಬರುತ್ತಿದೆ. ಇನ್ನಾದರೂ ಸಂಬಂಧಿಸಿದ ಅರಣ್ಯಾಧಿಕಾರಿಗಳು ಇತ್ತ ಗಮನಹರಿಸಿ ಕಾಡಾನೆಗಳು ಅರಣ್ಯದಿಂದ ನಾಡಿಗೆ ಬರುವುದನ್ನು ತಪ್ಪಿಸುವ ಕೆಲಸ ಮಾಡಬೇಕಾಗಿದೆ.