ರೈತರ ಛಕ್ಕಾ ಜಾಮ್; ದೆಹಲಿ ಗಡಿಗಳಲ್ಲಿ ಡ್ರೋಣ್ ಹದ್ದಿನ ಕಣ್ಣು
ನವದೆಹಲಿ, ಫೆಬ್ರುವರಿ 06: ಕೃಷಿ ಕಾಯ್ದೆಗಳ ವಿರುದ್ಧ ರೈತರು ದೇಶದಾದ್ಯಂತ ಇಂದು ಛಕ್ಕಾ ಜಾಮ್- ಹೆದ್ದಾರಿ ತಡೆ ನಡೆಸಲಿದ್ದಾರೆ. ದೆಹಲಿಯಲ್ಲಿ ಪ್ರತಿಭಟನಾನಿರತ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಹಲವು ರಾಜ್ಯಗಳಲ್ಲಿ ಹೆದ್ದಾರಿ ತಡೆ ನಡೆಸಲಾಗುತ್ತಿದೆ.
ರೈತರ ಛಕ್ಕಾ ಜಾಮ್ ಪ್ರಯುಕ್ತ ದೆಹಲಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಟಿಕ್ರಿ, ಘಾಜಿಪುರ ಹಾಗೂ ಸಿಂಘು ಗಡಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಟಿಕ್ರಿ ಗಡಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಡ್ರೋಣ್ ಕ್ಯಾಮೆರಾಗಳನ್ನು ನಿಯೋಜಿಸಲಾಗಿದೆ.
ಗರಿಷ್ಠ ಸಂಯಮ ಕಾಪಾಡಿ: ವಿಶ್ವಸಂಸ್ಥೆ ಮಾನವಹಕ್ಕುಗಳ ಆಯೋಗ ಮನವಿ
ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಕೈಗೊಂಡಿರುವ ರೈತರು ಫೆಬ್ರುವರಿ 6ರಂದು ಪ್ರತಿಭಟನೆಯ ಭಾಗವಾಗಿ ಛಕ್ಕಾ ಜಾಮ್ ನಡೆಸುವುದಾಗಿ ಸೋಮವಾರ ಘೋಷಿಸಿದ್ದರು. ಹೀಗಾಗಿ ದೆಹಲಿ-ಎಎನ್ ಸಿಆರ್ ಹಾಗೂ ದೆಹಲಿ ರಾಜಸ್ಥಾನದ ಗಡಿಯಾದ ಶಹಜಹಾನ್ ಪುರದಲ್ಲಿ ಅತ್ಯಧಿಕ ಮಟ್ಟದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ದೆಹಲಿ ಪೊಲೀಸರು, ಪ್ಯಾರಾ ಮಿಲಿಟರಿ ಹಾಗು ಮೀಸಲು ಪಡೆಯ ಸುಮಾರು 50,000 ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮೆಟ್ರೋ ಸ್ಟೇಷನ್ ಗಳನ್ನು ಬಂದ್ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಗಡಿಗಳಲ್ಲಿ ಬಹು ಹಂತದ ಬ್ಯಾರಿಕೇಡ್, ಸರಳುಗಳನ್ನು ಹಾಕಲಾಗಿದೆ. ಕೆಂಪು ಕೋಟೆ ಸುತ್ತಮುತ್ತ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ನವೆಂಬರ್ 26ರಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಹನ್ನೊಂದು ಮಾತುಕತೆಗಳು ನಡೆದಿದ್ದು, ಯಾವುದೇ ಒಪ್ಪಂದಕ್ಕೆ ಬರಲಾಗಿಲ್ಲ. ಜೊತೆಗೆ ಗಣರಾಜ್ಯೋತ್ಸವ ದಿನದಂದು ರೈತರ ಟ್ರ್ಯಾಕ್ಟರ್ ಜಾಥಾ ಸಂದರ್ಭ ದೊಡ್ಡ ಮಟ್ಟದಲ್ಲಿ ಗಲಭೆ ಏರ್ಪಟ್ಟಿತ್ತು.