ಅಜ್ಜನ ಹೋರಾಟಕ್ಕೆ ಮೊಮ್ಮಗಳೇ ದೃಷ್ಟಿ ಸಂವೇದನೆ!
ಬೆಂಗಳೂರು, ಆ. 14: ರೈತರ ಹೋರಾಟಗಾರ, ರಾಜ್ಯ ರೈತ ಸಂಘದ ಮುಖಂಡ ಹಾಗೂ ಅಜ್ಜ ಕೆ.ಟಿ. ಗಂಗಾಧರ್ ಅವರು ರಾಜ್ಯದ ರೈತರಿಗೆ ಸಂದೇಶವೊಂದನ್ನು ಕೊಡುತ್ತಿರುವಾಗ ಅತ್ಯಂತ ಗಂಭೀರವಾಗಿ ಆಲಿಸುತ್ತಿರುವ ಈ ಮಗುವಿನ ಹೆಸರು ದೃಷ್ಟಿ ರಘುಸಂವೇದನ್. ರೈತ ನಾಯಕ ಕೆ.ಟಿ. ಗಂಗಾಧರ್ ಅವರ ಪುತ್ರ ರಘು ಸಂವೇದನ್ ಅವರ ಪುತ್ರಿ. ಅಕ್ಕ ಧೃತಿ ರಾಘುಸಂವೇದನ್ ಬಂದು ಮಾತನಾಡಿಸಿದರೂ, ಸುಮ್ಮನಿರುವಂತೆ ಸಂಜ್ಞೆಯಲ್ಲಿಯೇ ಹೇಳುವ ಅವಳ ಪ್ರೌಢಿಮೆ ನಿಜಕ್ಕೂ ಗಮನ ಸೆಳೆಯುತ್ತಿದೆ. ದಿ. ಪ್ರೊ. ನಂಜುಂಡಸ್ವಾಮಿ ಅವರ ಸಮಕಾಲೀನ ಹೋರಾಟಗಾರರಾದ ಕೆ.ಟಿ. ಗಂಗಾಧರ್ ಅವರು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರೈತರಲ್ಲಿ ಮನವಿ ಮಾಡುತ್ತಿರುವಾಗ ದೃಷ್ಟಿ ರಘುಸಂವೇದನ್ ತೋರಿಸಿರುವ ಸಂವೇದನೆ ಗಮನ ಸೆಳೆದಿದೆ.
ಅಷ್ಟಕ್ಕೂ ಕೆ.ಟಿ. ಗಂಗಾಧರ್ ಅವರು ನಾಡಿನ ರೈತರಿಗೆ ಕೊಟ್ಟಿರುವ ಸಂದೇಶ ಇಷ್ಟು. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ದೇಶದ ರೈತರು ಆತಂಕದಲ್ಲಿದ್ದೇವೆ. ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು 'ಉಳುವವನೇ ಭೂಮಿಯ ಒಡೆಯ ಎಂಬುದನ್ನು ಉಳ್ಳವನೇ ಭೂಮಿಯ ಒಡೆಯ' ಎಂದು ಮಾಡಲು ತರಾತುರಿಯ ಸಿದ್ಧತೆ ನಡೆದಿವೆ. ನಾಳೆ ಸ್ವಾತಂತ್ರ್ಯ ದಿನಾಚರಣೆಯನ್ನು ಗೌರವಿಸಿ, ನಮ್ಮ ಹಕ್ಕಿನ ರಕ್ಷಣೆಗೆ ಕರಾಳ ದಿನಾಚರಣೆಯನ್ನು ಆಚರಿಸಲು ರಾಜ್ಯಾದ್ಯಂತ ರೈತರು ತೀರ್ಮಾನಿಸಿದ್ದೇವೆ. ನಾಳೆ ಧ್ವಜಾರೋಹಣ ನಡೆಸಿ ಕಪ್ಪು ಬಟ್ಟೆಯನ್ನು ಬಾಯಿಗೆ ಹಾಗೂ ರಟ್ಟೆಗೆ ಕಟ್ಟಿ ನಮ್ಮ ನಮ್ಮ ಮನೆಗಳ ಮುಂದೆ ಕುಳಿತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯತ್ಶಕ್ತಿ ಕಾಯ್ದೆ, ಬೀಜ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು. ನಮ್ಮ ಹೋರಾಟ ಸ್ವಾತಂತ್ರ್ಯ ದಿನಾಚರಣೆಯನ್ನು ಗೌರವಿಸಿ ಮಾಡುವ ಪ್ರತಿರೋಧ ಮಾತ್ರ. ಸ್ವಾತಂತ್ರ್ಯ ದಿನಾಚರಣೆಗೆ ಅಗೌರವ ಸೂಚಿಸುವುದು ಅಲ್ಲ ಎಂದು ಕೆ.ಟಿ. ಗಂಗಾಧರ್ ಸ್ಪಷ್ಟವಾಗಿ ಹೇಳಿದ್ದಾರೆ.
ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ನೋಡಬಹುದಂತೆ. ಹಾಗೆಯೇ ಮಕ್ಕಳ ಭವಿಷ್ಯವನ್ನು ಅವರು ಬೆಳೆವ ಸಮಯದಲ್ಲೇ ಕಾಣಬಹುದು. ಅಜ್ಜಾ ಕಥೆ ಹೇಳು ಎಂದು ಕೇಳಬೇಕಾದ ಮೊಮ್ಮಗಳು ಅಜ್ಜನ ಹೋರಾಟದ ಕರೆಯನ್ನು ತನ್ಮಯತೆಯಿಂದ ಆಲಿಸುತ್ತಿರುವುದು ಕಂಡಿದ್ದು ಫೇಸ್ಬುಕ್ನಲ್ಲಿ. ಬಹುತೇಕ ಮನಸ್ಸುನ್ನು ಘಾಸಿಗೊಳಿಸುವಂತಹ ಪೋಸ್ಟ್ಗಳೇ ಕಾಣುವ ಫೇಸ್ಬುಕ್ನಲ್ಲಿ, ಈ ಮಗುವಿನ ಸಂವೇದನಾ ಶೀಲತೆ ಗಮನ ಸೆಳೆಯುತ್ತಿದೆ. ಫೇಸ್ಬುಕ್ ಪೋಸ್ಟ್ನಿಂದ ಬೆಂಗಳೂರಿನ ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿ ಪ್ರದೇಶ ಹೊತ್ತಿ ಉರಿದಿದೆ. ಮತ್ತೊಂದೆಡೆ ಫೇಸ್ಬುಕ್ ಈ ಪೋಸ್ಟ್ನಲ್ಲಿ ದೃಷ್ಟಿ ರಾಘು ಸಂವೇದನ್ ಎಲ್ಲರ ದೃಷ್ಟಿ ಸೆಳೆಯುತ್ತಿದ್ದಾಳೆ.