ರೈತರ ನಷ್ಟ ತಗ್ಗಿಸಿ, ಆದಾಯ ಹೆಚ್ಚಿಸಲು ಕ್ರಮ; ಸಚಿವ ತೋಮರ್
ನವದೆಹಲಿ ಜೂ.24: "ಕೃಷಿ ಕ್ಷೇತ್ರದಲ್ಲಿ ರೈತರ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರ ಕಟಾವಿನ ನಂತರ ಆಗುವ ಆರ್ಥಿಕ ನಷ್ಟವನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುತ್ತಿದೆ" ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.
ಸೋಲನ್ನಿಂದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟವು (ಎಫ್ ಐಸಿಸಿಐ) ಆನ್ ಲೈನ್ ಮೂಲಕ ಆಯೋಜಿಸಿದ್ದ 11ನೇ ಅಗ್ರೋ ಕೆಮಿಕಲ್ ಕಾನ್ ಕ್ಲೇವ್ನಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು. "ಕೃಷಿ ಯಲ್ಲಿ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಕಡಿಮೆ ಮಾಡಲು ಖಾಸಗಿ ವಲಯವು ಸರ್ಕಾರಗಳೊಂದಿಗೆ ಕೈ ಜೋಡಿಸಬೇಕು. ಖಾಸಗಿ ಸಂಸ್ಥೆಗಳ ಸಹಕಾರ ಸಾಧ್ಯವಾದರೆ ಕೃಷಿ ವಲಯದಲ್ಲಿ ಪ್ರಗತಿ ಸಾಧ್ಯ" ಎಂದು ಸಚಿವರು ಕರೆ ನೀಡಿದರು.
"ಕೃಷಿ ಪ್ರಧಾನ ದೇಶ ಭಾರತದಲ್ಲಿ ಆಹಾರ ಭದ್ರತೆ ಒಗಿಸುತ್ತಿರುವವರು ರೈತರು. ಅವರ ಆದಾಯ ಹೆಚ್ಚಿಸಬೇಕಿರುವುದು ಅತ್ಯವಶ್ಯಕ. ಅದಕ್ಕೂ ಮೊದಲು ಉತ್ಪಾದನೆ ಹೆಚ್ಚಾಗಬೇಕು. ಬೇಳೆ ಕಾಳುಗಳು, ಎಣ್ಣೆ ಕಾಳುಗಳ ವಿಚಾರದಲ್ಲಿ ದೇಶದಲ್ಲಿ ಉತ್ತಮ ಕೆಲಸಗಳು ಆಗುತ್ತಿವೆ" ಎಂದು ಸಚಿವರು ವಿವರಿಸಿದರು.
"ಕೃಷಿ ಪ್ರಕ್ರಿಯೆಯಲ್ಲಿ ಬಿತ್ತನೆ, ಬೆಳೆ ಬೆಳೆಯಲು ಅಗತ್ಯವಾದ ವೆಚ್ಚ ತಗ್ಗಿಸಿ ರೈತರಿಗೆ ಆದಾಯ ಹೆಚ್ಚಿಸಲು ಹಾಗೂ ಬೆಳೆ ಕಟಾವಿನ ನಂತರ ಉಂಟಾಗುತ್ತಿರುವ ಆರ್ಥಿಕ ಸಂಕಷ್ಟ ತಪ್ಪಿಸಲು ಕ್ರಮ ಕೈಗೊಳ್ಳಬೇಕಿದೆ" ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
ತಂತ್ರಜ್ಞಾನ ಬಳಕೆ ಮಾಡಬೇಕು
"ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ರೈತರು ದುಬಾರಿ ಬೆಳೆಗಳನ್ನು ಬೆಳೆಯಲು ತಂತ್ರಜ್ಞಾನ ಬಳಸಿಕೊಳ್ಳುವ ಅಗತ್ಯವಿದೆ. ಅದಕ್ಕಾಗಿ ಸರ್ಕಾರ ರೈತರನ್ನು ಪ್ರೋತ್ಸಾಹಿಸುತ್ತದೆ. ಕೃಷಿ ಬೆಳೆಗಳ ಉತ್ಪಾದನೆಯಲ್ಲಿ ಏಕರೂಪತೆ ಖಚಿತ ಮಾಡಿಕೊಳ್ಳುವುದು ಮತ್ತು ಕೃಷಿ ಉತ್ಪನ್ನಗಳ ಗುಣಮಟ್ಟ ಕುರಿತು ಪರಿಶೀಲನೆಯ ಕೆಲಸವು ಆಗುತ್ತಿದೆ" ಎಂದು ನರೇಂದ್ರ ಸಿಂಗ್ ತೋಮರ್ ಸಚಿವರು ಹೇಳಿದರು.
ತೋಟಗಾರಿಕೆ ಬೆಳೆ ಹೆಚ್ಚಾಗಬೇಕು
"ಕೃಷಿಯ ಎಲ್ಲ ವಿಭಾಗದಲ್ಲೂ ರೈತರು ಸಬಲರಾಗಿ ಹೆಚ್ಚು ಇಳುವರಿ ಹಾಗೂ ಅಧಿಕ ಲಾಭ ಪಡೆಯಬೇಕು. ದೇಶದಲ್ಲಿ ತೋಟಗಾರಿಕೆ ಪ್ರಮಾಣ ಹೆಚ್ಚಾಗಬೇಕು. ಆಹಾರ ಧಾನ್ಯಗಳ ದೃಷ್ಟಿಯಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದ್ದರೂ, ಸಹ ಜಾಗತಿಕ ದೃಷ್ಟಿಯಿಂದ ನಾವು ಅಭಿವೃದ್ಧಿ ಹೊಂದಿದ, ಕೃಷಿಯಲ್ಲಿ ಮುಂದುವರಿದ ರಾಷ್ಟ್ರಗಳತ್ತ ನೋಡಬೇಕಿದೆ" ಎಂದು ಸಚಿವ ನರೇಂದ್ರ ಸಿಂಗ್ ತೋಮರ್ ರೈತರಿಗೆ ಕರೆ ನೀಡಿದರು.
ಕೃಷಿ ವಿಜ್ಞಾನ ಕೇಂದ್ರಗಳು ಸಹಕಾರ ನೀಡಬೇಕು
ಸಚಿವ ನರೇಂದ್ರ ಸಿಂಗ್ ತೋಮರ್, "ಸರ್ಕಾರದಿಂದ 10 ಸಾವಿರ ಫಾರ್ಮರ್ ಪ್ರೊಡ್ಯೂಸರ್ ಆರ್ಗನೈಜೇಷನ್ (ಎಫ್ಪಿಒ) ಗಳನ್ನು ರಚಿಸಲು ನಿರ್ಧರಿಸಲಾಗಿದೆ. ಇದರಿಂದ ಭವಿಷ್ಯದಲ್ಲಿ ರೈತರಿಗೆ ಹೆಚ್ಚಿನ ಲಾಭವಾಗಲಿದೆ. ಕೃಷಿಗೆ ಪೂರಕವಾಗಿ ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗೆ ನೆರವಾಗುವ ಜೊತೆಗೆ ಬೆಳೆ ವೈವಿದ್ಧೀಕರಣ ಪರಿಗಣಿಸಬೇಕು" ಎಂದರು.
|
ಶಾಲಾ ಪಠ್ಯದಲ್ಲಿ ಕೃಷಿ ಅಳವಡಿಕೆ
"ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಎಫ್ಐಸಿಸಿಐ ನಂತಹ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕು. ಕೃಷಿ ಕ್ಷೇತ್ರದ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಿಕೊಡಲು ಶಾಲಾಪಠ್ಯಗಳಲ್ಲಿ ಕೃಷಿಯ ವಿಷಯಗಳನ್ನು ಅಳವಡಿಸುವ ಪ್ರಯತ್ನಗಳು ನಡೆಯುತ್ತಿವೆ" ಎಂದು ಸಚಿವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ರಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಎಫ್ ಐಸಿಸಿಐ ಅಧಿಕಾರಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.