ರೈತರ ಪರವಾಗಿ ಸಿಎಂ ಕುಮಾರಸ್ವಾಮಿಗೆ ಮತ್ತೆ ಟಾಂಗ್ ಕೊಟ್ಟ ದರ್ಶನ್
Recommended Video
ಬೆಂಗಳೂರು, ಏಪ್ರಿಲ್ 27: ಮಂಡ್ಯ ಚುನಾವಣಾ ಅಖಾಡಕ್ಕೆ ಸುಮಲತಾ ಅವರ ಪರವಾಗಿ ದರ್ಶನ್ ಅವರು ಇಳಿದಾಗಿನಿಂದಲೂ ಕುಮಾರಸ್ವಾಮಿ-ದರ್ಶನ್ ಅವರ ನಡುವೆ ಪರೋಕ್ಷ ಮಾತಿನ ಸಮರ ನಡೆಯುತ್ತಲೇ ಇದೆ. ಮತದಾನ ಮುಗಿದಿದ್ದರೂ ಸಹ ಮಾತಿನ ಸಮರ ಅಂತ್ಯವಾದಂತೆ ತೋರುತ್ತಿಲ್ಲ.
ಇಂದು ಬೆಂಗಳೂರಿನ ಕಾಲೇಜೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್ ಅವರು, 'ರೈತರ ಸಾಲಮನ್ನಾ ಮಾಡುವುದು ಬೇಡ, ಅವರು ಬೆಳೆದ ಬೆಲೆಗೆ ಸೂಕ್ತ ಬೆಲೆ ಕೊಡಲಿ ಸಾಕು, ಸಾಲವನ್ನು ಅವರೇ ತೀರಿಸುತ್ತಾರೆ' ಎಂದು ಹೇಳಿದ್ದಾರೆ.
ರೈತ ಸಾಲಮನ್ನಾ ಯೋಜನೆಯನ್ನು ತಂದು ಹೆಮ್ಮೆಯಿಂದ ಬೆನ್ನುತಟ್ಟಿಕೊಳ್ಳುತ್ತಿರುವ ಕುಮಾರಸ್ವಾಮಿ ಅವರನ್ನು ಉದ್ದೇಶವಾಗಿಟ್ಟುಕೊಂಡು ದರ್ಶನ್ ಅವರು ಈ ಮಾತುಗಳು ಹೇಳಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ.
ಪಶ್ಚಾತ್ತಾಪ ಪಡುತ್ತೀರಾ: 'ಜೋಡೆತ್ತು'ಗಳಿಗೆ ಕುಮಾರಸ್ವಾಮಿ ವಾರ್ನಿಂಗ್
ಬೆಂಗಳೂರಿನ ಬಿಐಟಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದರ್ಶನ್ ಅವರು, 'ಜೈ ಜವಾನ್, ಜೈ ಕಿಸಾನ್ ಎಂದು ಘೋಷ ವಾಕ್ಯವಿದೆ. ನಾನು ರೈತನೇ ರೈತನಿಲ್ಲದಿದ್ದರೆ ನಾವ್ಯಾರೂ ಇಲ್ಲ, ನಾವೆಲ್ಲಾ ಇಂದು ನೆಮ್ಮದಿಯಾಗಿ ಇದ್ದೀವೆಂದರೆ ಅದಕ್ಕೆ ಸೈನಿಕರು ಕಾರಣ ಅವರಿಬ್ಬರಿಗೂ ಸೆಲ್ಯೂಟ್' ಎಂದು ಹೇಳಿದರು.
'ಸಾಲಮನ್ನಾ ಬಗ್ಗೆ ಮುಂಚೆಯೇ ಮಾತನಾಡಬೇಕು ಎಂದುಕೊಂಡಿದ್ದೆ'
ರೈತರ ಸಾಲದ ಬಗ್ಗೆ ಈ ಹಿಂದೆಯೇ ಕೆಲವು ಕಡೆ ಮಾತನಾಡಬೇಕು ಎಂದುಕೊಂಡಿದ್ದೆ ಸಮಯ ಸೂಕ್ತವಾಗಿಲ್ಲವೆಂದು ಸುಮ್ಮನಾಗಿದ್ದೆ ಎಂದ ದರ್ಶನ್, ರೈತರ ಬೆಳೆಗೆ ಸೂಕ್ತ ಬೆಲೆ ಕೊಡಿ ಅವರೇ ಸಾಲ ತೀರಿಸುತ್ತಾರೆ, ಸಾಲಮನ್ನಾ ಮಾಡುವುದು ಬೇಡ ಎಂದು ಹೇಳಿದರು. ದರ್ಶನ್ ಅವರ ಈ ಮಾತನ್ನು ನೆರೆದಿದ್ದವರು ಭಾರಿ ಚಪ್ಪಾಳೆಯೊಂದಿಗೆ ಅನುಮೋದಿಸಿದರು.
ಎಚ್ಡಿಕೆಯನ್ನು ಎದುರಾಕಿಕೊಂಡ 'ಜೋಡೆತ್ತು'ಗಳ ಧೈರ್ಯ ಮೆಚ್ಚಲೇಬೇಕು: ಏನಂತೀರಾ?
'ಯಾವನೋ ಡಿ-ಬಾಸ್ ಅಂತೆ' ಅಂದಿದ್ರು ಕುಮಾರಸ್ವಾಮಿ
ಮಂಡ್ಯ ಚುನಾವಣೆ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ಎದುರಾಳಿ ಸುಮಲತಾ ಅವರ ಪರವಾಗಿ ದರ್ಶನ್ ಅವರು ಪ್ರಚಾರ ಮಾಡಿದ್ದು ಕುಮಾರಸ್ವಾಮಿ ಅವರಿಗೆ ಅಸಹನೀಯವೆನಿಸಿತ್ತು. 'ಯಾವನೋ ಡಿ-ಬಾಸ್ ಅಂತೆ' ಎಂದು ಏಕವಚನದಲ್ಲಿಯೇ ಕುಮಾರಸ್ವಾಮಿ ಅವರು ದರ್ಶನ್ ಅವರನ್ನು ಸಂಭೋದಿಸಿ ಮಾತನಾಡಿದ್ದರು, ಇದು ಇವರಿಬ್ಬರ ಮಧ್ಯೆ ವೈಷಮ್ಯ ಹುಟ್ಟುಹಾಕಿತ್ತು.
ಮಂಡ್ಯ: ತನ್ನ ವಿರುದ್ಧ ಮಾಡಿದ ಟೀಕೆಗಳಿಗೆ ಉತ್ತರ ನೀಡಿದ ಡಿ-ಬಾಸ್
ದರ್ಶನ್ ರೈತನಲ್ಲವೆಂದ ಕುಮಾರಸ್ವಾಮಿಗೆ ಸವಾಲು ಹಾಕಿದ್ದರು
ಚುನಾವಣೆಯ ಸಮಯದಲ್ಲಿ ಮೌನವಾಗಿಯೇ ಇದ್ದ ದರ್ಶನ್ ಅವರು, ಬಹಿರಂಗ ಪ್ರಚಾರದ ಕೊನೆಯ ದಿನ ಬೃಹತ್ ಸಮಾವೇಶದಲ್ಲಿ ಕುಮಾರಸ್ವಾಮಿ ಅವರ ಎಲ್ಲ ವೈಯಕ್ತಿಕ ಟೀಕೆಗಳಿಗೂ ಉತ್ತರ ನೀಡಿದ್ದರು, 'ನಾನು ರೈತ, ನೀವು ಒಂದು ಚೆಂಬು ಹಾಲು ಕರೆದು ತೋರಿಸಿ ಆಗ ಒಪ್ಪಿಕೊಳ್ಳುತ್ತೇನೆ' ಎಂದು ಸವಾಲು ಹಾಕಿದ್ದರು.
ನಟ ದರ್ಶನ್ ಫಾರ್ಮ್ ಹೌಸ್ ಮೇಲೆ ನಡೆದಿದ್ದು ಐಟಿ ದಾಳಿಯಲ್ಲ!
ಮತ್ತೊಂದು ಸುತ್ತಿನ ಮಾತಿನ ಸಮರಕ್ಕೆ ನಾಂದಿ?
ಮಂಡ್ಯ ಚುನಾವಣೆ ಸಮಯದಲ್ಲಿ ಪ್ರಾರಂಭವಾಗಿದ್ದ ಇಬ್ಬರ ನಡುವಿನ ಮಾತಿನ ಸಮರ ಮತದಾನ ಮುಗಿದು ಎರಡು ವಾರವಾಗುತ್ತಾ ಬಂದರೂ ಇನ್ನೂ ಮುಗಿದಂತೆ ಕಾಣುತ್ತಿಲ್ಲ. ದರ್ಶನ್ ಅವರ ಇಂದಿನ ಹೇಳಿಕೆ ಕುಮಾರಸ್ವಾಮಿ ಅವರನ್ನು ಕೆರಳಿಸುವ ಸಾಧ್ಯತೆ ಇದೆ. ಏಕೆಂದರೆ ಸಾಲಮನ್ನಾ ಯೋಜನೆ ಕುಮಾರಸ್ವಾಮಿ ಅವರ ಕನಸಿನ ಯೋಜನೆಯಾಗಿದೆ, ಇದನ್ನು ದರ್ಶನ್ ಅವರು ಇಂದು ಟೀಕಿಸಿದ್ದಾರೆ. ದರ್ಶನ್ ಅವರ ಇಂದಿನ ಹೇಳಿಕೆ ಮತ್ತೊಂದು ಸುತ್ತಿನ ಮಾತಿನ ಸಮರಕ್ಕೆ ನಾಂದಿ ಆಗುವಂತಿದೆ.