'ಸಾಲ ಮನ್ನಾ ಬದಲು, ರೈತರಿಗೆ ನಗದು ವರ್ಗಾವಣೆಯೇ ಉತ್ತಮ'
ನವದೆಹಲಿ, ಜನವರಿ 22: ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರಕಾರಕ್ಕೆ ದೇಶಾದ್ಯಂತ ಒತ್ತಡ ಕೇಳಿಬರುತ್ತಿದೆ. ಆದರೆ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಪ್ರಕಾರ, ಕೃಷಿ ಸಾಲ ಮನ್ನಾದಿಂದ ರೈತರ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡಲು ಸಾಧ್ಯವಿಲ್ಲ.
ಅದರ ಬದಲಿಗೆ ನಗದು ವರ್ಗಾವಣೆಯೇ ಉತ್ತಮ ಪರಿಹಾರ ಆಗಲಿದೆ ಎಂಬುದು ಅವರ ಅಭಿಪ್ರಾಯ. "ಕೃಷಿ ವಲಯದ ಮೇಲೆ ಅಪಾರ ಪ್ರಮಾಣದ ಒತ್ತಡವಿದೆ. ನನ್ನ ಪ್ರಕಾರ, ಸಾಲ ಮನ್ನಾದಿಂದ ಕೃಷಿಯ ಯಾವುದೇ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರ ಮಾಡಲು ಸಾಧ್ಯವಿಲ್ಲ" ಎಂದು ಸಿಎನ್ ಬಿಸಿ ಟಿವಿ-18 ಮಾಧ್ಯಮಕ್ಕೆ ತಿಳಿಸಿದ್ದಾರೆ.
ಗೀತಾ ಗೋಪಿನಾಥ್ ಐಎಂಎಫ್ ನೂತನ ಮುಖ್ಯ ಆರ್ಥಿಕ ತಜ್ಞೆ
ಕೃಷಿ ಸಾಲ ಮನ್ನಾಕ್ಕಿಂತ ನಗದು ವರ್ಗಾವಣೆ ಉತ್ತಮ. ಉತ್ತಮ ತಂತ್ರಜ್ಞಾನ, ಇಳುವರಿ ಹೆಚ್ಚಿಸುವಂಥ ಬೀಜ ಒದಗಿಸುವ ಮೂಲಕ ಸರಕಾರವು ಕೃಷಿಗೆ ಪೂರಕವಾದ ಕೆಲಸಗಳನ್ನು ಕೈಗೊಳ್ಳಬೇಕು. ಲೋಕಸಭೆ ಚುನಾವಣೆ ಇನ್ನೇನು ನಡೆಯಲಿದ್ದು, ಅದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹಲವು ರಾಜ್ಯ ಸರಕಾರಗಳು ಕೃಷಿ ಸಾಲ ಮನ್ನಾ ಮಾಡಿವೆ.
ಚುನಾವಣೆ ಪ್ರಚಾರದ ವೇಳೆಯೇ ಮಾತು ಕೊಟ್ಟು, ಆ ನಂತರ ಮೂರು ರಾಜ್ಯಗಳ ವಿಧಾನಸಭೆ (ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ ಗಢ) ಅಧಿಕಾರ ಹಿಡಿದ ಕಾಂಗ್ರೆಸ್, ತಕ್ಷಣ ಕೃಷಿ ಸಾಲ ಮನ್ನಾ ಘೋಷಣೆ ಮಾಡಿತು. ಆ ನಂತರ ಒತ್ತಡಕ್ಕೆ ಸಿಲುಕಿದ ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್ ಹಾಗೂ ಅಸ್ಸಾಮ್ ನಲ್ಲೂ ಸಾಲ ಮನ್ನಾ ಘೋಷಿಸಲಾಯಿತು.
ಇಡೀ ದೇಶಕ್ಕೆ ಅನ್ವಯ ಆಗುವಂತೆ ಕೃಷಿ ಸಾಲ ಮನ್ನಾ ಮಾಡದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿದ್ದೆ ಅಥವಾ ವಿಶ್ರಾಂತಿಗೆ ಬಿಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದರು. ಆದರೆ, ಕೃಷಿ ಸಾಲ ಮನ್ನಾ ವಿಚಾರವನ್ನು ಚುನಾವಣೆ ಗಿಮಿಕ್ ಎಂದು ಹೀಗಳೆದಿದ್ದ ಪ್ರಧಾನಿ ಮೋದಿ, ರೈತರಿಗೆ ನೇರವಾಗಿ ಅನುಕೂಲ ವರ್ಗಾವಣೆ ಮಾಡುವ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದರು.
ರೈತರಿಗೆ ಸುಳ್ಳು ಹೇಳಬೇಡಿ: ರಾಹುಲ್ ಗಾಂಧಿಗೆ ಮೋದಿ ಸಲಹೆ
ಕೃಷಿ ಸಾಲ ಮನ್ನಾಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಂ ರಾಜನ್ ವಿರೋಧ ವ್ಯಕ್ತಪಡಿಸಿದ್ದರು. ರಾಜಕೀಯ ಭರವಸೆಯಾಗಿ ಕೃಷಿ ಸಾಲ ಮನ್ನಾ ಘೋಷಣೆ ಮಾಡದಂತೆ ನಿಯಮ ರೂಪಿಸಲು ಚುನಾವಣೆ ಆಯೋಗವನ್ನು ಕೇಳಿಕೊಂಡಿದ್ದರು.
ರೈತರ ಬಳಿಯಲ್ಲಿರುವ ಕೃಷಿ ಭೂಮಿಯ ಆಧಾರದಲ್ಲಿ ಇಂತಿಷ್ಟು ನಗದು ವರ್ಗಾವಣೆ ಆಗಬೇಕು ಎಂಬ ನಿಯಮಕ್ಕೆ ರಘುರಾಂ ರಾಜನ್ ಕೂಡ ಬೆಂಬಲಿಸಿದ್ದರು. ರೈತಬಂಧು ಯೋಜನೆ ಎಂದು ತೆಲಂಗಾಣ ರಾಜ್ಯ ಸರಕಾರ ಇದೇ ರೀತಿ ಅನುಷ್ಠಾನಕ್ಕೆ ತಂದಿತ್ತು.
ರೈತರ ಸಾಲಮನ್ನಾ ವಿಳಂಬಕ್ಕೆ ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ಗೀತಾ ಗೋಪಿನಾಥ್, ಕೃಷಿ ವಲಯ- ಉದ್ಯೋಗ ಸೃಷ್ಟಿ ಎನ್ ಡಿಎ ಸರಕಾರದ ಪಾಲಿಗೆ ಅತಿ ಮುಖ್ಯ ಸಂಗತಿಗಳು. ಈ ವರ್ಷದ ಆರ್ಥಿಕತೆಯ ಮುಖ್ಯ ಸವಾಲು ಇವೇ ಆಗಿರಲಿವೆ. ಈ ವರ್ಷ ಸಕಾರಾತ್ಮಕ ಅಭಿವೃದ್ಧಿ ಆಗಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.