ಧಾರವಾಡ ಕೃಷಿ ವಿವಿಯಲ್ಲಿ ಜೈವಿಕ ತಂತ್ರಜ್ಞಾನ ಪಾರ್ಕ್
ಬೆಂಗಳೂರು, ಫೆಬ್ರುವರಿ 25: ದಿನೇ ದಿನೇ ಹೆಚ್ಚುತ್ತಿರುವ ಆಹಾರದ ಬೇಡಿಕೆಯನ್ನು ಸರದೂಗಿಸಲು ರೈತರು ತಂತ್ರಜ್ಞಾನ ಆಧಾರಿತ ವೈಜ್ಞಾನಿಕ ಕೃಷಿಗೆ ಒತ್ತು ನೀಡಬೇಕು ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಯೋಜನೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್. ಆರ್. ಪಾಟೀಲ್ ಸಲಹೆ ನೀಡಿದ್ದಾರೆ.
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಜೈವಿಕ ತಂತ್ರಜ್ಞಾನ ಕೆಂದ್ರವೊಂದನ್ನು ತೆರೆಯಲಾಗುತ್ತಿದ್ದು ಇದಕ್ಕಾಗಿ 6.5 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.[ಕೈ ಗಡಿಯಾರದ ಗಲಾಟೆಯಲ್ಲಿ ದೊರೆಗೆ ಕಾಣದ ಕರುನಾಡ ಕುವರ]
ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಮಹಾಮಂಡಳಿಯ ಶತಮಾನೋತ್ಸವದ ಅಂಗವಾಗಿ ವೈಜ್ಞಾನಿಕ ಬೇಸಾಯ ವಿಚಾರವಾಗಿ ಇಂದು ಇಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಸಮಯದಲ್ಲಿ 30 ಕೋಟಿಯಿದ್ದ ಜನಸಂಖ್ಯೆ ಇಂದು 120 ಕೋಟಿ ದಾಟಿದೆ. ಆಹಾರದ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಆದರೆ ಇನ್ನೊಂದೆಡೆ ನಗರೀಕರಣ, ಕೈಗಾರಿಕರಣ, ವಸತಿ, ವಾಣಿಜ್ಯ ಮತ್ತಿತರ ಕಾರಣಗಳಿಗಾಗಿ ಕೃಷಿಭೂಮಿಗಳ ಬಳಕೆ ಹೆಚ್ಚಾಗುತ್ತಿದೆ. ಲಭ್ಯವಿರುವ ಸೀಮಿತ ಭೂಮಿಯಲ್ಲಿ ಹೆಚ್ಚೆಚ್ಚು ಆಹಾರಧಾನ್ಯ ಉತ್ಪಾದನೆ ಮಾಡುವ ಅನಿವಾರ್ಯತೆಯಲ್ಲಿ ನಾವಿದ್ದೇವೆ. ಕೃಷಿಕ್ಷೇತ್ರದಲ್ಲಿ ಆಗುವ ಸಂಶೋಧನೆ, ತಂತ್ರಜ್ಞಾನ, ರೋಗ ನಿರೋಧಕ ಗುಣವಿರುವ ಹಾಗೂ ಹೆಚ್ಚು ಇಳುವರಿ ನೀಡುವ ಹೊಸ ಹೊಸ ತಳಿಗಳನ್ನು ರೈತರು ಮುಕ್ತಮನಸ್ಸಿನಿಂದ ಬಳಸಬೇಕು. ಹಾಗಾದಾಗ ಮಾತ್ರ ಕೃಷಿ ಲಾಭದಾಯಕವಾಗಲು ಸಾಧ್ಯ. ಇದಕ್ಕೆ ಬಿಟಿ ಹತ್ತಿ ಒಂದು ನಿದರ್ಶನ ಎಂದು ಸಚಿವ ಪಾಟೀಲ್ ತಿಳಿಸಿದರು.
ಆಧುನಿಕ ಕೃಷಿ ಅಳವಡಿಸಿಕೊಳ್ಳಿ
ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮುನ್ನಡೆದರೆ ಕೃಷಿಯು ಖಂಡಿತವಾಗಿಯೂ ಲಾಭದಾಯಕವಾಗಲು ಸಾಧ್ಯ. ರಾಜ್ಯ ಸರ್ಕಾರವು ಕೃಷಿಯಲ್ಲಿ ಜೈವಿಕ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಪಾಟೀಲ್ ತಿಳಿಸಿದರು.
ಕೃಷಿ ಲಾಭದಾಯಕವಾಗಲಿ
ರೈತರು ಕೃಷಿಯಿಂದ ವಿಮುಖರಾಗದಂತೆ ನೋಡಿಕೊಳ್ಳಲು, ರೈತರ ಮಕ್ಕಳು ನಗರಕ್ಕೆ ವಲಸೆ ಬಾರದೆ ಹಳ್ಳಿಗಳಲ್ಲೆ ಉಳಿಯುವಂತೆ ಮಾಡಲು ಬೇಸಾಯವನ್ನು ಲಾಭದಾಯಕ ಹಾಗೂ ಆಕರ್ಷಕ ವೃತ್ತಿ ಮಾಡುವತ್ತ ನಾವೆಲ್ಲ ಗಮನ ಹರಿಸಬೇಕಾಗಿದೆ. ಅದಕ್ಕೆ ಸರ್ಕಾರ ಸಕಲ ಸಹಕಾರ ನೀಡಲಿದೆ ಎಂದು ತಿಳಿಸಿದರು.
ತಂತ್ರಜ್ಞಾನ ಬಳಸಿಕೊಳ್ಳಿ
ತಂತ್ರಜ್ಞಾನದಿಂದ ಕೃಷಿ ಅಭಿವೃದ್ಧಿ ಸಾಧ್ಯ. ಸ್ಮಾರ್ಟ್ ಸಿಟಿಗಳ ಜತೆಗೇ ಸ್ಮಾರ್ಟ್ ವಿಲೇಜ್ ಮಾಡುವತ್ತ ನಾವು ಗಮನ ನೀಡಬೇಕು ಎಂದು ಹೇಳಲು ಸಚಿವರು ಮರೆಯಲಿಲ್ಲ.
ಇ ಕಿಸಾನ್ ವಿಶೇಷ
ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಇ-ಕಿಸಾನ್ ಟ್ಯಾಬ್ ಮೂಲಕ ಮಾಹಿತಿ ತಂತ್ರಜ್ಞಾನ ಆಧಾರಿತ ಕೃಷಿಯನ್ನು ಅನುಷ್ಠಾನ ಮಾಡಲು ಶ್ರಮಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಇಲಾಖೆಗೆ ಸುತ್ತೋಲೆ ಹೊರಡಿಸಲಾಗುತ್ತದೆ ಎಂದು ತಿಳಿಸಿದರು.