ರಫ್ ಅಂಡ್ ಟಫ್ ಹೋರಾಟಕ್ಕೆ ಗೌಡ್ರು ಸಿದ್ಧ
ಲಾಠಿಚಾರ್ಚ್ ಮಾಡಲು ಆದೇಶ ನೀಡುವುದು, ಇನ್ನೊಂದೆಡೆ ಕಣ್ಣೀರು ಸುರಿಸುವ ನಾಟಕ ಆಡುವುದು ಇದು ಸಿಎಂಗೆ ಆಟವಾಗಿ ಹೋಗಿದೆ ಎಂದು ಗೌಡರು ವ್ಯಂಗ್ಯವಾಡಿದ್ದಾರೆ. ಪದ್ಮನಾಭನಗರದ ಮನೆಯಲ್ಲಿ ನೈಸ್ ವಿರುದ್ಧ ಹೋರಾಟದ ರೂಪು ರೇಷೆ ಸಿದ್ಧತೆಗಾಗಿ ರೈತ ಮುಖಂಡರ ಜೊತೆ ದೇವೇಗೌಡರು ಸೋಮವಾರ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಡನೆ ಮಾತನಾಡುತ್ತಿದ್ದರು.
ಸರ್ಕಾರಕ್ಕೆ ಪಾಠ ಕಲಿಸುವ ಕಾಲ ಬಂದಿದೆ. ರೈತರ ಹೆಸರಿನಲ್ಲಿ ಆಣೆ, ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದು, ಈಗ ನಡುಬೀದಿಯಲ್ಲಿ ಅನ್ನದಾತರನ್ನು ಹಿಡಿದು ಹಿಗ್ಗಾಮುಗ್ಗ ಬಡಿಯುವುದು ಅಕ್ಷಮ್ಯ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೈತರನ್ನು ಮಧ್ಯರಾತ್ರಿ ಎಳೆದು ತಂದು ಜೈಲಿಗೆ ಹಾಕುತ್ತಿರುವುದು ಇವರ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಆರ್ ನಾಯಕ್ ಭೇಟಿ : ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್ ಆರ್ ನಾಯಕ್ ಅವರು ಇಂದು ಜೈಲಿನಲ್ಲಿರುವ ಅನ್ನದಾತರನ್ನು ಭೇಟಿ ಮಾಡಿದರು. ಬಿಜಿಎಸ್ ಆಸ್ಪತ್ರೆಯಲ್ಲಿರುವ ನೈಸ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ವೆಂಕಟಾಚಲ ಅವರ ಆರೋಗ್ಯವನ್ನು ವಿಚಾರಿಸಿದ ನಂತರ ಮಾತನಾಡಿ, ಈ ಪ್ರಕರಣದ ಕುರಿತು ಆಯೋಗ ಸ್ವಯಂಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದೆ ಎಂದರು.
ರೈತರ ಮೇಲೆ ಕೇಸ್ ಗಳ ಸರಮಾಲೆ: ನೈಸ್ ಯೋಜನೆಗೆ ಸಂಬಂಧಿಸಿದ ಮಹತ್ವದ ಸಭೆಗೆ ರೈತ ಮುಖಂಡರನ್ನೇ ಆಹ್ವಾನಿಸಿಲ್ಲ. ಅಕ್ರಮವಾಗಿ ಹೆಚ್ಚುವರಿ ಜಮೀನನ್ನು ಕಸಿದುಕೊಳ್ಳಲು ಸರ್ಕಾರ ಮುಂದಾಗಿದೆ. ಸುಪ್ರೀಂಕೋರ್ಟ್ ನ ಆದೇಶವನ್ನು ನೈಸ್ ಸಂಸ್ಥೆ ಗಾಳಿಗೆ ತೂರಿದೆ ಎಂದುಆರೋಪಿಸಿ ರೈತ ಮುಖಂಡರು ಪ್ರತಿಭಟನೆ ನಡೆಸಿದರು.
ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು, ಮಹಿಳೆಯರು, ಸಂಘ ಸಂಸ್ಥೆಗಳ ಮುಖಂಡರ ಮೇಲೆ ಲಾಠಿ ಪ್ರಹಾರ ಮಾಡಿದ ಪೊಲೀಸರು, ಮನಬಂದಂತೆ ಹೊಡೆದಿದ್ದಾರೆ.
ರೈತರ ಮೇಲೆ ಕಾನೂನು ಭಂಗ, ಪೊಲೀಸರ ಮೇಲೆ ಹಲ್ಲೆ, ಅಕ್ರಮ ಗುಂಪು, ಕಾನೂನು ಬಾಹಿತ ಚಟುವಟಿಕೆಯಲ್ಲಿ ಭಾಗಿ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಮುಂತಾದ ಗಂಭೀರ ಆರೋಪ ಹೊರೆಸಿ ಭಾರತೀಯ ದಂಡ ಸಂಹಿತೆ 120/ಬಿ, 146,147,148,341,427,353,332 ಹಾಗೂ 149 ಕಲಂಗಳಡಿಯಲ್ಲಿ ಕೇಸು ದಾಖಲಿಸಲಾಗಿದೆ.