ರೈತರಿಗೆ ಬೆಂಬಲ; ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಮೇಲೆ FIR
ನವದೆಹಲಿ, ಫೆಬ್ರುವರಿ 04: ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬೆಂಬಲಿಸಿ ಸ್ವೀಡನ್ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಮಾಡಿದ್ದ ಟ್ವೀಟ್ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಗ್ರೆಟಾ ಮೇಲೆ ದೆಹಲಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಗ್ರೆಟಾ ಟ್ವೀಟ್ ಗಳನ್ನು ಮಾಡಿದ್ದರು. "ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಜತೆ ನಾವಿದ್ದೇವೆ' ಎಂದು ಫೆಬ್ರುವರಿ 2ರಂದು ಗ್ರೇಟಾ ಟ್ವೀಟ್ ಮಾಡಿದ್ದರು. ಇದರೊಂದಿಗೆ ಡಾಕ್ಯುಮೆಂಟ್ ಒಂದನ್ನು ಹಂಚಿಕೊಂಡಿದ್ದ ಗ್ರೆಟಾ ಕೆಲವೇ ನಿಮಿಷಗಳಲ್ಲಿ ಅದನ್ನು ಡಿಲೀಟ್ ಮಾಡಿದ್ದರು. ನಂತರ ರೈತರ ಪ್ರತಿಭಟನೆ ಮತ್ತು ಅದರ ಪರ ಸೆಲೆಬ್ರಿಟಿಗಳು ಧ್ವನಿ ಎತ್ತುವುದರ ಹಿಂದೆ ವ್ಯವಸ್ಥಿತ ಸಂಚು ಇದೆ ಎಂದು ಡಿಲೀಟ್ ಆಗಿದ್ದ ಡಾಕ್ಯುಮೆಂಟ್ ಗಳಿಗೆ ಸಂಬಂಧಿಸಿದಂತೆ ಆರೋಪ ಕೇಳಿಬಂದಿತ್ತು.
ಟಾ ಟ್ವೀಟ್ನಿಂದ ಭಾರತ ವಿರುದ್ಧದ ಅಂತಾರಾಷ್ಟ್ರೀಯ ಸಂಚು ಬಹಿರಂಗವಾಯ್ತೇ?
ಆನಂತರ ಮತ್ತೊಂದು ಟ್ವೀಟ್ ಮಾಡಿದ್ದ ಅವರು, "ನಾನು ಈಗಲೂ ರೈತರಿಗೆ ಬೆಂಬಲವಾಗಿ ನಿಲ್ಲುತ್ತೇನೆ" ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು."ರೈತರ ಶಾಂತಿಯುತ ಪ್ರತಿಭಟನೆಗೆ ಬೆಂಬಲ ನೀಡುತ್ತೇನೆ. ಮಾನವ ಹಕ್ಕುಗಳ ವಿರುದ್ಧ ಯಾವುದೇ ದ್ವೇಷ, ಬೆದರಿಕೆ ಅಥವಾ ಉಲ್ಲಂಘನೆ ಈ ಬೆಂಬಲವನ್ನು ಬದಲಿಸಲು ಸಾಧ್ಯವಿಲ್ಲ" ಎಂದು ಬರೆದುಕೊಂಡಿದ್ದರು.
ಈ ಕುರಿತು ಸ್ಪಷ್ಟನೆ ನೀಡಿರುವ ದೆಹಲಿ ವಿಶೇಷ ಪೊಲೀಸ್ ಆಯುಕ್ತ ಪ್ರವೀರ್ ರಂಜನ್, ನಾವು ಯಾರ ಹೆಸರನ್ನೂ ಎಫ್ ಐಆರ್ ನಲ್ಲಿ ದಾಖಲಿಸಿಲ್ಲ. ಟ್ವೀಟ್ ನಲ್ಲಿನ ಟೂಲ್ ಕಿಟ್ ಕುರಿತು ತನಿಖೆ ನಡೆಸಲಾಗುತ್ತಿದೆ ಅಷ್ಟೆ ಎಂದು ತಿಳಿಸಿದ್ದಾರೆ.
ರೈತರ ಪ್ರತಿಭಟನೆ ಬೆಂಬಲಿಸಿ ಖ್ಯಾತ ಪಾಪ್ ಗಾಯಕಿ ರಿಹಾನಾ ಹಾಗೂ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ ಬರ್ಗ್ ಟ್ವೀಟ್ ಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇದಕ್ಕೆ ಭಾರತದ ವಿದೇಶಾಂಗ ವ್ಯವಹಾರ ಸಚಿವಾಲಯವೂ ಪ್ರತಿಕ್ರಿಯಿಸಿ, ಸೆಲೆಬ್ರಿಟಿಗಳು ಇಂಥ ವಿಚಾರವನ್ನು ಸರಿಯಾಗಿ ಅರ್ಥೈಸಿಕೊಂಡು ಪ್ರತಿಕ್ರಿಯೆ ನೀಡಬೇಕು ಎಂದು ಹೇಳಿದ್ದವು. ಈ ಸಂಗತಿ ಬೆನ್ನಲ್ಲೇ ವಿದೇಶಿ ಸೆಲೆಬ್ರಿಟಿಗಳು ಭಾರತದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೆಲವು ಬಾಲಿವುಡ್ ನಟ ನಟಿಯರು ಹಾಗೂ ಕ್ರಿಕೆಟಿಗರು ಟ್ವೀಟ್ ಮಾಡಿದ್ದರು.