ದಾವಣಗೆರೆ; ಮೆಕ್ಕೆಜೋಳ, ಅಡಿಕೆ ಖರೀದಿ ಕೇಂದ್ರ ಇನ್ನೂ ತೆರೆದಿಲ್ಲ
ದಾವಣಗೆರೆ, ಅಕ್ಟೋಬರ್ 3; ಮೆಕ್ಕೆಜೋಳ, ಭತ್ತ ಮತ್ತು ಅಡಿಕೆ ಖರೀದಿ ಕೇಂದ್ರ ತೆರೆಯಲು ಮುಂದಾಗದ ಸರ್ಕಾರದ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಬಣದ ಕಾರ್ಯಕರ್ತರು ಇಂದು ನಗರದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಖರೀದಿ ಕೇಂದ್ರ ತೆರೆಯುವ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸೆ.30ರ ಗಡುವು ನೀಡಲಾಗಿತ್ತು. ಆದರೆ ಸರ್ಕಾರ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯ ಮೊದಲ ಭಾಗವಾಗಿ ಇಂದು ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ ನಡೆಸಲಾಗಿದೆ ಎಂದರು.
ಭತ್ತದ ಬೆಳೆ ನಷ್ಟ ಪರಿಹಾರಕ್ಕೆ ದಾವಣಗೆರೆ ರೈತರಿಂದ ಪತ್ರ ಚಳವಳಿ
ಇದಾದ ನಂತರ ಮಾಯಕೊಂಡ ಹೋಬಳಿ ಮತ್ತು ಪ್ರತಿ ಗ್ರಾಮ ಪಂಚಾಯ್ತಿಗಳ ಮುಂದೆ ಸರ್ಕಾರ ಖರೀದಿ ಕೇಂದ್ರ ತೆರೆಯುವವರೆಗೆ ಅನಿರ್ದಿಷ್ಟ ಚಳುವಳಿ ನಡೆಸಲು ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಲಿಂಗರಾಜ ಪಾಮೇನಹಳ್ಳಿ, ಕಬ್ಬಳ ಪ್ರಸಾದ್, ಬಲ್ಲೂರು ಪರಶುರಾಮರೆಡ್ಡಿ, ಆವರಗೆರೆ ಇಟಗಿ ಬಸವರಾಜಪ್ಪ, ಆರ್.ಜಿ.ಬಸವರಾಜ ರಾಂಪುರ, ಮಾಯಕೊಂಡದ ಸಿ.ಟಿ.ನಿಂಗಪ್ಪ ಗೌಡ್ರ ಅಶೋಕ, ಆಲೂರು ಪರಮೇಶ್ವರಪ್ಪ, ಎನ್.ಟಿ.ಜಯನಾಯ್ಕನಾಗರಕಟ್ಟೆ, ಅಲೂರು ಮಂಜಪ್ಪ ಬಲ್ಲೂರು ಅಣ್ಣಪ್ಪ, ಅಣಬೇರು ಕುಮಾರಸ್ವಾಮಿ, ಆವರಗೆರೆ ಕಲ್ಲಪ್ಪ, ಬೂದಾಳ್ ಮಹೇಶ್, ಐ.ಆರ್.ಕರುಣಾ ಇತರರು ಭಾಗವಹಿಸಿದ್ದರು.