ಆಕಸ್ಮಿಕ ಬೆಂಕಿಗೆ 22 ಟ್ರ್ಯಾಕ್ಟರ್ ಲೋಡ್ ಮೆಕ್ಕೆಜೋಳ ಆಹುತಿ
ದಾವಣಗೆರೆ, ನವೆಂಬರ್ 06: ಆಕಸ್ಮಿಕವಾಗಿ ಬೆಂಕಿ ತಗುಲಿ 22 ಟ್ರ್ಯಾಕ್ಟರ್ ಲೋಡ್ ಮೆಕ್ಕೆಜೋಳ ಸುಟ್ಟು ಕರಕಲಾಗಿರುವ ಘಟನೆ ದಾವಣಗೆರೆಯ ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ನಡೆದಿದೆ.
ನ.5ರ ಗುರುವಾರ ಈ ಘಟನೆ ನಡೆದಿದ್ದು, ಇದರಿಂದ ಆರು ಲಕ್ಷ ಮೌಲ್ಯದ ಮೆಕ್ಕೆಜೋಳ ಬೆಳೆ ನಾಶವಾಗಿದೆ. ಶಾಂತಮ್ಮ ಎಂಬುವರ 20 ಲೋಡ್, ಕರಿಬಸಪ್ಪ ಎಂಬುವರಿಗೆ ಸೇರಿದ 2 ಲೋಡ್, ಒಟ್ಟು 22 ಟ್ರ್ಯಾಕ್ಟರ್ ಲೋಡ್ ಮೆಕ್ಕೆಜೋಳಕ್ಕೆ ಬೆಂಕಿ ತಗುಲಿ ನಾಶವಾಗಿದೆ.
ಪಂಜಾಬ್ ನಲ್ಲಿ ತಾವೇ ಬೆಳೆದ ಬೆಳೆಗೆ ಬೆಂಕಿ ಹಚ್ಚಿದ ರೈತರು
ಜಮೀನಿನಿಂದ ಮೆಕ್ಕೆಜೋಳವನ್ನು ತಂದು ಕಣದಲ್ಲಿ ಒಟ್ಟು ಹಾಕಿದ್ದರು. ಈ ಸಂದರ್ಭ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೆಂಕಿ ನಂದಿಸಲು ಪ್ರಯತ್ನ ಪಟ್ಟರೂ ಅಷ್ಟರಲ್ಲಿ ಮುಕ್ಕಾಲು ಪಾಲು ಮೆಕ್ಕೆಜೋಳ ನಾಶವಾಗಿತ್ತು. ಶಾಂತಮ್ಮ ಅವರ 500 ಕ್ವಿಂಟಾಲ್, ಕರಿಬಸಪ್ಪ ಅವರ 50 ಕ್ವಿಂಟಾಲ್ ಮೆಕ್ಕೆಜೋಳ ಸುಟ್ಟು ಹೋಗಿ ಅಂದಾಜು 6 ಲಕ್ಷಕ್ಕೂ ಅಧಿಕ ನಷ್ಟವಾಗಿರುವುದಾಗಿ ತಿಳಿದುಬಂದಿದೆ.
ಕಷ್ಟಪಟ್ಟು ಬೆಳೆದು ಕೈಗೆ ಬಂಧಿದ್ದ ಬೆಳೆ ಹೀಗೆ ಸುಟ್ಟು ಕರಕಲಾಗಿರುವುದನ್ನು ಕಂಡು ಈ ರೈತರು ಕಂಗಾಲಾಗಿದ್ದಾರೆ.