ಡಾಟಾ ಎಂಟ್ರಿ ಆಪರೇಟರ್ ಕೈಚಳಕ; ಅರ್ಧ ಎಕರೆಗೆ 10 ಸಾವಿರ ಪರಿಹಾರ, ನಾಲ್ಕು ಎಕರೆಗೆ 7 ಸಾವಿರ
ಮಡಿಕೇರಿ, ಜನವರಿ 9: ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವ ಪರಿಹಾರ ಹಣಕ್ಕಾಗಿ ರಾಜ್ಯದಲ್ಲಿ ಲಕ್ಷಾಂತರ ರೈತರು ಕಾಯುತ್ತಿದ್ದಾರೆ. ಸರ್ಕಾರ ನೀಡುವ ಅರೆ ಕಾಸಿನ ಪರಿಹಾರಕ್ಕೆ ಶಪಿಸುತ್ತಲೂ ಇದ್ದಾರೆ.
ಆದರೆ ಕೊಡಗಿನ ಸೋಮವಾರಪೇಟೆ ತಾಲ್ಲೂಕು ಕಚೇರಿಯ ಡಾಟಾ ಎಂಟ್ರಿ ಆಪರೇಟರ್ ಒಬ್ಬ ತನ್ನ ಕೈಚಳಕದಿಂದ, ತನ್ನ ಕುಟುಂಬಕ್ಕೇ ರೂ. 1.11 ಲಕ್ಷ ಪರಿಹಾರ ಬರುವಂತೆ ಮಾಡಿಕೊಂಡ ಘಟನೆ ನಡೆದಿದೆ. ಬೆಳೆನಷ್ಟದ ಪರಿಹಾರಕ್ಕೆ ಸಂಬಂಧಪಟ್ಟ ಆರ್.ಟಿ.ಸಿ. ವಿವರಗಳನ್ನು ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡುವ ಡಾಟಾ ಎಂಟ್ರಿ ಆಪರೇಟರ್ ಓರ್ವ, ಸುಳ್ಳು ಮಾಹಿತಿ ನೀಡಿ ತನ್ನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಹಣವನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪ ಸಾಕ್ಷಿಗಳಿಂದ ಸಾಬೀತಾಗಿದ್ದು, ಈತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಯಡೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಫೋರ್ಜರಿ ಆರೋಪದಲ್ಲಿ ನಾಲ್ವರು ಸಹಾಯಕ ಪ್ರಾಧ್ಯಾಪಕರು
ತಾಲೂಕು ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಡಾಟಾ ಎಂಟ್ರಿ ಆಪರೇಟರ್ ಸಜಿತ್ ಎಂಬಾತ ತನ್ನ ಕೈಚಳಕದಿಂದ ತನ್ನ ಕುಟುಂಬದವರಿಗೆ ಒಟ್ಟು 1,11,997 ರೂ. ಪರಿಹಾರ ಲಭಿಸುವಂತೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಅರ್ಧ ಎಕರೆ ಇದ್ದವರಿಗೆ 10 ಸಾವಿರದಷ್ಟು ಪರಿಹಾರ ಬಂದಿದೆ. ನಾಲ್ಕೈದು ಎಕರೆ ಆರ್.ಟಿ.ಸಿ. ಇದ್ದವರಿಗೆ ಏಳು ಸಾವಿರ ರೂ. ಗಿಂತ ಕಡಿಮೆ ಮೊತ್ತದ ಪರಿಹಾರ ಹಣ ಬಿಡುಗಡೆಯಾಗಿದೆ. ಇಲ್ಲಿನ ಕೆಲ ಸಿಬ್ಬಂದಿ ಸಹಕಾರವಿಲ್ಲದೆ ಡಾಟಾ ಆಪರೇಟರ್ ಗಳು ಸುಳ್ಳು ಮಾಹಿತಿ ಕೊಟ್ಟು ಹಣ ಪಡೆಯಲು ಸಾಧ್ಯವಿಲ್ಲ. ಇದರಲ್ಲಿ ಶಾಮೀಲಾಗಿರುವ ಪ್ರತಿಯೊಬ್ಬರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಯಡೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕ್ರಿಮಿನಲ್ ಮೊಕದ್ದಮೆ: ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಸಿಬ್ಬಂದಿ ಇಂತಹ ಕೆಲಸ ಮಾಡಿರುವ ಬಗ್ಗೆ ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ತನಿಖೆ ಮಾಡಲಾಗುವದು. ಸುಳ್ಳು ಮಾಹಿತಿ ನೀಡಿ ಪಡೆದಿರುವ ಪರಿಹಾರದ ಹಣವನ್ನು ವಸೂಲಾತಿ ಮಾಡಲಾಗುವುದು. ಸಂಬಂಧಪಟ್ಟ ಗ್ರಾಮಲೆಕ್ಕಿಗರಿಗೂ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಲಾಗುವದು. ತಪ್ಪು ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವದು ಎಂದು ತಹಶೀಲ್ದಾರ್ ಗೋವಿಂದರಾಜ್ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.