ರೈತ ಮುಖಂಡ ಯು. ಬಸವರಾಜು ಬಿಡುಗಡೆಗೆ ಸಿಪಿಐಎಂ ಆಗ್ರಹ
ಬೆಂಗಳೂರು/ ಕಲಬುರಗಿ, ಜೂನ್ 24: ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಮತ್ತು ಹೋರಾಟ ನಿರತ ರೈತರನ್ನು ಬಿಡುಗಡೆ ಮಾಡಲು ಸಿಪಿಐ(ಎಂ) ರಾಜ್ಯ ಸಮಿತಿಯ ಆಗ್ರಹ ಮತ್ತು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದೆ.
ಓರಿಯಂಟ್ ಸಿಮೆಂಟ್ ಕಂಪನಿಯು ರೈತರಿಂದ ಭೂಮಿ ಖರೀದಿಸುವಲ್ಲಿ ಆಗಿರುವ ಮೋಸ, ಅನ್ಯಾಯಗಳನ್ನು ಸರಿಪಡಿಸಬೇಕು, ಭೂಸ್ವಾದೀನ ಕಾಯ್ದೆ-2013 ರ ಅನ್ವಯ ನ್ಯಾಯಯುತ ಪರಿಹಾರವನ್ನು ನೀಡಬೇಕು, ಭೂಮಿಯನ್ನು ನೀಡಿದ ರೈತ ಕುಟುಂಬಗಳಿಗೆ ಉದ್ಯೋಗ ನೀಡಬೇಕು ಇತ್ಯಾದಿ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದರನ್ನು ಬಂಧಿಸಲಾಗಿದೆ.
ಹೋರಾಟ ನಿರತ ಮಹಿಳೆಯರು ಸೇರಿದಂತೆ ರೈತರನ್ನು ಹಾಗೂ ರೈತ ಮುಖಂಡ, ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಯು. ಬಸವರಾಜು ರವರನ್ನು ಕಲ್ಬುರ್ಗಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಬಂಧಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದ್ದು, ಕೂಡಲೇ ಎಲ್ಲರನ್ನು ಬಿಡುಗಡೆ ಮಾಡಬೇಕು ಮತ್ತು ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯ ಸರ್ಕಾರವನ್ನು ಸಿಪಿಐ(ಎಂ) ಪಕ್ಷದ ರಾಜ್ಯ ಸಮಿತಿಯು ಆಗ್ರಹಿಸಿದೆ.
ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಇಟಗಾ ಮತ್ತಿತರೆ ನಾಲ್ಕು ಗ್ರಾಮಗಳ ರೈತರಿಂದ ಸುಮಾರು 1750 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಾಗ ಓರಿಯಂಟ್ ಸಿಮೆಂಟ್ ಕಂಪನಿಯು ಅನೇಕ ಅಕ್ರಮಗಳನ್ನು ಎಸೆಗಿದೆ. ಈ ಅಕ್ರಮಗಳನ್ನು ಸರಿಪಡಿಸಬೇಕು, ಭೂಸ್ವಾಧೀನ ಕಾಯ್ದೆಯಂತೆ ಪರಿಹಾರ ನೀಡಿಕೆ, ಭೂಸಂತ್ರಸ್ಥರು ಕುಟುಂಬಗಳ ಮಕ್ಕಳಿಗೆ ಉದ್ಯೋಗ ನೀಡಿಕೆ, ಸಿಮೆಂಟ್ ಕಾರ್ಖಾನೆಯಿಂದ ಉಂಟಾಗುತ್ತಿರುವ ದೂಳಿನ ದುಷ್ಟಪರಿಣಾಮಗಳನ್ನು ತಡೆಗಟ್ಟುವುದು, ಇದರಿಂದ ಆಗಿರುವ ಬೆಳೆ ನಷ್ಟಕ್ಕೆ ಪರಿಹಾರ, ತೊಂದರೆಗೆ ಒಳಗಾಗಿರುವ ಗ್ರಾಮ ಅಭಿವೃದ್ಧಿಯಂತ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಎರಡು ದಿನ ಪಾದಯಾತ್ರೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ, ಜಿಲ್ಲಾಧಿಕಾರಿಗಳ ಅತ್ಯಂತ ಅನಾಗರೀಕವಾಗಿ ವರ್ತಿಸಿರುವುದನ್ನು ಸಿಪಿಐ(ಎಂ) ಖಂಡಿಸುತ್ತದೆ.
ಮಕ್ಕಳು, ಮಹಿಳೆಯರು, ರೈತರು ಹಾಗು ರೈತ ಸಂಘದ ಮುಖಂಡರ ಜೊತೆ ಸೌಜನ್ಯದಿಂದ ಮಾತನಾಡದೇ ಎಲ್ಲವೂ ಕಾನೂನು ರೀತಿಯಲ್ಲಿಯೇ ನಡೆದಿವೆ, ಮನವಿ ಕೊಟ್ಟೂ ಹೋಗಿ, ನೋಡೋಣ ಎನ್ನುತ್ತಾ ಏರು ಧ್ವನಿಯಲ್ಲಿ ಮಾತನಾಡುತ್ತಾ ಸಿಮೆಂಟ್ ಕಂಪನಿಯನ್ನು ಸಮರ್ಥಿಸುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಈ ವರ್ತನೆಯನ್ನು ಪ್ರತಿಭಟಿಸಿದ ರೈತ ಮುಖಂಡರನ್ನು, ಮಕ್ಕಳು, ಮಹಿಳೆಯರನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶ ನೀಡಿದ್ದಾರೆ. ಕಲ್ಬುಗಿ ಜಿಲ್ಲಾಧಿಕಾರಿಗಳ ಈ ವರ್ತನೆಯನ್ನು ಸಿಪಿಐ(ಎಂ) ಖಂಡಿಸುತ್ತದೆ ಹಾಗು ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಮಧ್ಯಪ್ರವೇಶ ಮಾಡಿ, ರೈತರ ಬೇಡಿಕೆಗಳನ್ನು ಈಡೇರಿಸಬೇಕು ಮತ್ತು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕೆಂದು ಸಿಪಿಐ(ಎಂ) ರಾಜ್ಯ ಸಮಿತಿಯು ಆಗ್ರಹಿಸಿದೆ.
ರೈತ ಮುಖಂಡ ಯು. ಬಸವರಾಜು ಬಿಡುಗಡೆಗೆ ಆಗ್ರಹ:
ಓರಿಯಂಟ್ ಸಿಮೆಂಟ್ ಕಂಪನಿಯ ಭೂ ಕಬಳಿಕೆ ವಿರುದ್ಧ ರೈತರಿಗೆ ರಕ್ಷಣೆ ನೀಡುವಂತೆ ಗುಲ್ಬರ್ಗದಲ್ಲಿ ಪ್ರತಿಭಟಿಸುತ್ತಿದ್ದ ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜು ಮತ್ತು ಇತರ 33 ರೈತ ಮುಖಂಡರ, ರೈತ ಪ್ರತಿಭಟನಾಕಾರರ ಬಂಧನ ಕಾನೂನು ಬಾಹಿರ ಹಾಗೂ ಅನ್ಯಾಯ ಪ್ರತಿಭಟಿಸುವ ಹಕ್ಕಿನ ಮೇಲೆ ನಡೆದ ದಾಳಿ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಸಮಿತಿ ಉಗ್ರವಾಗಿ ಖಂಡಿಸುತ್ತದೆ.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಯೂ ಆಗಿರುವ ಯು. ಬಸವರಾಜು ಭೂ ಸ್ವಾಧೀನ ಕಾಯ್ದೆ ಉಲ್ಲಂಘಿಸಿ ಆಕ್ರಮವಾಗಿ ಕೃಷಿ ಭೂಮಿಯನ್ನು ಕಬಳಿಸಿದ್ದರಿಂದ ಸಂತ್ರಸ್ತರಾಗಿರುವ ರೈತರಿಗೆ ನ್ಯಾಯ ಒದಗಿಸಬೇಕೆಂದು ಚಿತ್ತಾಪುರ ತಾಲೂಕಿನ ಇಟಗಾ ಗ್ರಾಮದಿಂದ ಗುಲ್ಬರ್ಗ ಜಿಲ್ಲಾಧಿಕಾರಿ ಕಛೇರಿಯವರೆಗೂ ಪಾದಯಾತ್ರೆಯ ಪ್ರತಿಭಟನೆಗೆ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ನೊಂದ ರೈತರ ಅಹವಾಲು ಕೇಳದೇ ಗುಲ್ಬರ್ಗ ಜಿಲ್ಲಾಧಿಕಾರಿ ಅಹಂಕಾರದಿಂದ ವರ್ತಿಸಿ, ಹೋರಾಟ ನಿರತ ರೈತರನ್ನು ಬಂಧಿಸಲು ಪೊಲೀಸರನ್ನು ಛೂ ಬಿಟ್ಟಿರುವುದು ಸರ್ವಾಧಿಕಾರಿ ಅಹಂಕಾರದ ಪ್ರದರ್ಶನ ಮತ್ತು ಗಂಭೀರ ಕರ್ತವ್ಯ ಲೋಪ. ಅದ್ದರಿಂದ ಈ ಕೂಡಲೇ ಬಂಧಿತ ರೈತ ನಾಯಕರಾದ ಯು. ಬಸವರಾಜು, ಶರಣ ಬಸವ ಮಮಶೆಟ್ಟಿ, ಪಾಂಡುರಂಗ ಮಾವಿನಕೆರ್ ಸೇರಿದಂತೆ ಎಲ್ಲಾ 33 ರೈತರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಸಮಿತಿ ಆಗ್ರಹಿಸಿದೆ.
ನಮ್ಮದು ರೈತ ಪರ ಸರ್ಕಾರ ಎನ್ನುವ ಬಸವರಾಜು ಬೊಮ್ಮಾಯಿ ಈ ಕೂಡಲೇ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿ, ರೈತರ ನ್ಯಾಯಬದ್ದವಾದ ಅಹವಾಲುಗಳನ್ನು ಇತ್ಯಾರ್ಥ ಪಡಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ.
ಬಂಧನಕ್ಕೆ ಒಳಗಾದವರಲ್ಲಿ ಎರಡು ದಿನದಿಂದ ಪಾದಯಾತ್ರೆ ನಡೆಸಿ ದಣಿದಿದ್ದ ಸಣ್ಣ ಮಕ್ಕಳ ತಾಯಂದಿರು ಸೇರಿದಂತೆ 20 ಮಹಿಳೆಯರು ಕೂಡ ಸೇರಿದ್ದಾರೆ. ಓರಿಯಂಟ್ ಕಂಪನಿಯ ದೌರ್ಜನ್ಯ ದಿಂದ ನೊಂದಿದ್ದ ಅಸಹಾಯಕ ರೈತರಿಗೆ ಸಾಂತ್ವನ ಹೇಳುವ ಬದಲು ಸಣ್ಣ ಮಕ್ಕಳು, ಮಹಿಳೆಯರು ಎಂಬುದನ್ನು ನೋಡದೇ ಪೊಲೀಸ್ ದೌರ್ಜನ್ಯ ನಡೆಸಿರುವುದು ಜಿಲ್ಲಾಧಿಕಾರಿಗಳು ಓರಿಯಂಟ್ ಸಿಮೆಂಟ್ ಕಂಪನಿಗೆ ಎಷ್ಟು ನಿಷ್ಠರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ.
ಜನರ ಹಿತ ಕಾಪಾಡಲು ಇರುವ ಜಿಲ್ಲಾಧಿಕಾರಿ ಅಧಿಕಾರವನ್ನು ಕಂಪನಿ ದೌರ್ಜನ್ಯ ಬೆಂಬಲಿಸಲು ಬಳಸುತ್ತಿರುವುದು ದುರದೃಷ್ಟಕರ. ಜಿಲ್ಲಾಧಿಕಾರಿಗಳ ಈ ವರ್ತನೆ ಖಂಡನೀಯ. ಮಾನ್ಯ ಮುಖ್ಯಮಂತ್ರಿಗಳು, ಕೂಡಲೇ ಮಧ್ಯೆ ಪ್ರವೇಶಮಾಡಿ ಓರಿಯಂಟ್ ಸಿಮೆಂಟ್ ಕಂಪನಿ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತದೆ ಎಂದು ರೈತ ಸಂಘದ ಕಾರ್ಯದರ್ಶಿ ಬಯ್ಯಾರೆಡ್ಡಿ ಹೇಳಿದ್ದಾರೆ.
Recommended Video