ಆಕ್ಸಿಜನ್ ಉತ್ಪಾದನೆಗೆ ಸಕ್ಕರೆ ಕಾರ್ಖಾನೆಗಳು ಮುಂದಾಗಿವೆ
ಕೋವಿಡ್-19 ಇಡೀ ದೇಶವನ್ನು ನಡುಗಿಸುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ. ಸಿಕ್ಕರೂ ಆಕ್ಸಿಜನ್ ಕೊರತೆ. ಕಡೆಗೆ ಸತ್ತರೂ ಸ್ಮಶಾನಗಳಲ್ಲಿ ಹೆಣಗಳ ಸಾಲು. ಪರಿಸ್ಥಿತಿ ಹೀಗಿರುವಾಗ ಸರ್ಕಾರದ ವ್ಯವಸ್ಥೆ ಎಲ್ಲದನ್ನೂ ನಿಭಾಯಿಸಲು ಸೋಲುತ್ತಿರುವುದನ್ನು ನೋಡುತ್ತಿದ್ದೇವೆ. ಪ್ರಸ್ತುತ ಬಿಕ್ಕಟ್ಟಿಗೆ ಖಾಸಗಿ ಸಂಸ್ಥೆಗಳು, ಕಂಪನಿಗಳು ಕೂಡಾ ಸಹಾಯ ಹಸ್ತ ಚಾಚುತ್ತಿರುವುದು ಕಾಣಬಹುದು.
ಕೋವಿಡ್ ಸಂಕಷ್ಟಕ್ಕೆ ಸಕ್ಕರೆ ಕಾರ್ಖಾನೆಗಳ ಸ್ಪಂದನೆ:
ತುರ್ತು ಸಂದರ್ಭಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಬೇಕಿರುವ ಪ್ರಾಣವಾಯು (ಆಕ್ಸಿಜನ್) ಕೊರತೆಯನ್ನು ದೇಶ ಎದುರಿಸುತ್ತಿದೆ. ಆಮ್ಲಜನಕ ಆಮದು ಮಾಡಿಕೊಳ್ಳುತ್ತಿರುವುದು ಒಂದು ಕಡೆಯಾದರೆ ಸ್ಥಳೀಯವಾಗಿ ಉತ್ಪಾದನಾ ಸಾಮರ್ಥ್ಯವೂ ಹೆಚ್ಚು ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ.
ಆದಾಗ್ಯೂ ಏರುತ್ತಿರುವ ಕೊರೊನಾ ಸೋಂಕಿನ ಪ್ರಕರಣಗಳು ಮತ್ತು ಆಕ್ಸಿಜನ್ ಬೆಡ್ ಹಾಗೂ ಐಸಿಯು ಬೆಡ್ ಗಳಿಗಾಗಿ ಬೇಡಿಕೆ ಹೆಚ್ಚಾಗಿರುವುದರಿಂದ ಎಲ್ಲಾ ಪ್ರಯತ್ನಗಳೂ "ಆನೆ ಹೊಟ್ಟೆಗೆ ಮೂರು ಕಾಸಿನ ಮಜ್ಜಿಗೆ" ಎನ್ನುವಂತಾಗಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಆಕ್ಸಿಜನ್ ಉತ್ಪಾದನೆಗೆ ಮುಂದೆ ಬಂದಿರುವುದು ಕತ್ತಲ ಹಾದಿಗೊಂದು ಮಿಣುಕು ದೀಪ ಕಂಡಂತಾಗಿದೆ.
ಹೌದು. ಮಹಾರಾಷ್ಟ್ರದ ಸುಮಾರು 70 ಸಕ್ಕರೆ ಕಾರ್ಖಾನೆಗಳು ಮೆಡಿಕಲ್ ಆಕ್ಸಿಜನ್ ಉತ್ಪಾದನೆ ಮಾಡಲು ಮುಂದಾಗಿವೆ. ಈಗಾಗಲೇ 25 ಸಕ್ಕರೆ ಕಾರ್ಖಾನೆಗಳು ಆಕ್ಸಿಜನ್ ಘಟಕಗಳನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿವೆ, ಇನ್ನುಳಿದ ಕಾರ್ಖಾನೆಗಳು ಶೀಘ್ರದಲ್ಲೇ ಉತ್ಪಾದನೆ ಆರಂಭ ಮಾಡುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಈ ಕಾರ್ಖಾನೆಗಳ ಮಧ್ಯಸ್ಥಿಕೆಯಿಂದ ಆಕ್ಸಿಜನ್ ಕೊರತೆಯನ್ನು ಕೊಂಚ ಮಟ್ಟಿಗೆ ನೀಗಿಸಲು ಸಹಕಾರಿಯಾಗಲಿದೆ ಎಂದು ನ್ಯಾಷನಲ್ ಫೆಡರೇಶನ್ ಆಫ್ ಕೋ-ಆಪರೇಟೀವ್ ಶುಗರ್ ಫ್ಯಾಕ್ಟರೀಸ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.
ಸದರಿ ಮಿಲ್ ಗಳನ್ನು ಆಕ್ಸಿಜನ್ ಉತ್ಪಾದನೆ ಮಾಡಲು ಮಾಡಿಫೈ ಮಾಡುವುದರೊಂದಿಗೆ ಎಥೆನಾಲ್ ಸರಬರಾಜು ಮಾಡಬೇಕಿರುವ ಕಾರ್ಖಾನೆಗಳು ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದೂ ಅವರು ಹೇಳಿದ್ದಾರೆ. ಪ್ರಸ್ತುತ ಸಂದರ್ಭಕ್ಕೆ ಪ್ರಾಣವಾಯು ಉತ್ಪಾದನೆ ಮಾಡುತ್ತಿರುವ ಶುಗರ್ ಫ್ಯಾಕ್ಟರಿಗಳು ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿವೆಯಾದರೂ, ಇದೊಂದು ಆದಾಯ ಕೊಡುವ ಉದ್ದಿಮೆಯೂ ಹೌದು ಎಂದ ಎಂಡಿ, ಮಹಾರಾಷ್ಟ್ರದ ಮಾದರಿಯಲ್ಲಿ ಇತರೆ ರಾಜ್ಯಗಳಲ್ಲಿಯೂ ಶುಗರ್ ಫ್ಯಾಕ್ಟರಿಗಳನ್ನು ಆಮ್ಲಜನಕ ಉತ್ಪಾದನೆ ಮಾಡಲು ಕೋರಲಾಗುವುದು, ಆ ಬಗ್ಗೆ ಚರ್ಚೆ ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಬಹುತೇಕ ಎಲ್ಲಾ ಶುಗರ್ ಫ್ಯಾಕ್ಟರಿಗಳು (ಒಂದೆರಡು ಹೊರತುಪಡಿಸಿ) ರಾಜಕಾರಣಿಗಳ ಮಾಲೀಕತ್ವದಲ್ಲಿಯೇ ಇವೆ. ನಮ್ಮನ್ನಾಳುವ ಈ ಧುರೀಣರು ಈ ಆಪತ್ಕಾಲದಲ್ಲಿ ಯಾವ ರೀತಿಯಾಗಿ ಸ್ಪಂದಿಸುತ್ತಾರೋ ಕಾದು ನೋಡಬೇಕು.