ಕೊರೊನಾ 2ನೇ ಅಲೆ ಅಬ್ಬರ: ಕೇರಳದಿಂದ ತಗ್ಗಿದ ತರಕಾರಿ ಬೇಡಿಕೆ; ರೈತರಲ್ಲಿ ಆತಂಕದ ಕಾರ್ಮೋಡ
ಮೈಸೂರು, ಏಪ್ರಿಲ್ 3: ವಿಶ್ವವನ್ನೇ ತಲ್ಲಣಗೊಳಿಸಿದ್ದ ಮಹಾಮಾರಿ ಕೊರೊನಾ ಅಟ್ಟಹಾಸದಿಂದ ಬುಡಮೇಲಾಗಿದ್ದ ಇಡೀ ವ್ಯವಸ್ಥೆ, ನಿಧಾನಗತಿಯಲ್ಲಿ ಚೇತರಿಕೆಯ ಹಾದಿಯತ್ತ ಸಾಗುತ್ತಿದೆ ಎನ್ನುವ ಹೊತ್ತಿನಲ್ಲೇ ಕೊರೊನಾ ವೈರಸ್ ಮತ್ತೆ ಅಬ್ಬರಿಸಲು ಶುರು ಮಾಡಿರುವುದು ಜನರಲ್ಲಿ ಆತಂಕ ಮೂಡಿಸಿದ್ದರೆ. ಮತ್ತೊಂದೆಡೆ ಕೃಷಿಯನ್ನೇ ನಂಬಿ ಬದುಕು ದೂಡುವ ಅನ್ನದಾತನ ಜೀವನದ ಮೇಲೆ ಸವಾರಿ ಮಾಡಲು ಆರಂಭಿಸಿದೆ.
ಅಗತ್ಯ ವಸ್ತುಗಳ ಬೆಲೆ ಆಕಾಶಕ್ಕೆ ಏರುತ್ತಿರುವ ಈ ಸಂದರ್ಭದಲ್ಲಿ ತರಕಾರಿಗಳ ಬೆಲೆ ಪಾತಾಳಕ್ಕೆ ಕುಸಿಯುತ್ತಾ ಸಾಗಿರುವುದು ರೈತರ ಬದುಕಿನ ಮೇಲೆ ಬರೆ ಎಳೆದಂತಾಗಿದೆ. ಪರಿಣಾಮ ಕೊರೊನಾ ದೂರವಾಗಿ ಬದುಕು ಹಸನಾಗಲಿದೆ ಎಂಬ ಕನಸು ಕಟ್ಟಿಕೊಂಡಿದ್ದ ರೈತರನ್ನು ಕಂಗಾಲಾಗಿಸಿದೆ. ಒಂದೆಡೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಪ್ರಸ್ತುತ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯತ್ತ ಮುಖಮಾಡಿದ್ದರೆ, ತರಕಾರಿ ಬೆಲೆ ಮಾತ್ರ ಇಳಿಮುಖವಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಚಿತ್ರದುರ್ಗದಲ್ಲಿ ಹೂವಿನ ಬೆಳೆಗೆ 'ನುಸಿ ಹುಳಗಳ ಕಾಟ'; ಸಂಕಷ್ಟದಲ್ಲಿ ರೈತರು
ರೈತರನ್ನು ಆತಂಕಕ್ಕೆ ದೂಡಿದೆ
ಅದರಲ್ಲೂ, ಮೈಸೂರು ಭಾಗದ ರೈತರು ವಾರ್ಷಿಕ ಬೆಳೆ ಹೊರತುಪಡಿಸಿ, ತರಕಾರಿ ಹಾಗೂ ಹೈನುಗಾರಿಕೆ ಮೇಲೆ ಹೆಚ್ಚಾಗಿ ಅವಲಂಬಿಸಿದ್ದಾರೆ. ಆದರೆ, ಕೊರೊನಾ ಎಂಬ ಮಹಾಮಾರಿಯ ಎರಡನೇ ಅಲೆ ಮೈಸೂರು ಭಾಗದಲ್ಲಿ ಆರಂಭವಾಗಿರುವುದು ತರಕಾರಿ ಬೆಳೆಯುವ ರೈತರನ್ನೂ ಆತಂಕಕ್ಕೆ ದೂಡಿದೆ.
ವ್ಯಾಪಾರ ವಹಿವಾಟು ಭಾಗಶಃ ಕುಸಿತ
ಅಷ್ಟೇ ಅಲ್ಲದೆ, ನೆರೆಯ ಕೇರಳ ಮಾರುಕಟ್ಟೆಯನ್ನೇ ನಂಬಿರುವ ಇಲ್ಲಿನ ರೈತರು ಬೆಳೆಗಳನ್ನು ಬೆಳೆಯುತ್ತಿದ್ದು, ಕೊರೊನಾ ಎರಡನೇ ಅಲೆ ಕೇರಳದಲ್ಲಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಭಾಗಶಃ ಕುಸಿತ ಕಂಡಿದೆ. ಪರಿಣಾಮ ಮೈಸೂರು ಭಾಗದಿಂದ ಕೇರಳಕ್ಕೆ ಪೂರೈಕೆಯಾಗುತ್ತಿದ್ದ ತರಕಾರಿ ವ್ಯಾಪಾರ, ವಹಿವಾಟಿನ ಮೇಲೆ ಕೆಟ್ಟ ಪರಿಣಾಮ ಬೀರಿದೆ.
ಕೊರೊನಾ ಎರಡನೇ ಅಲೆಯ ನಂತರ ಮೈಸೂರು-ಕೇರಳ ನಡುವೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಸಂಚರಿಸುತ್ತಿದ್ದ ತರಕಾರಿ ವಾಹನಗಳ ಸಂಚಾರದಲ್ಲಿ ಭಾಗಶಃ ಕಡಿಮೆಯಾಗಿದೆ. ಕೇರಳದ ವರ್ತಕರು ಸಹ ಇಲ್ಲಿಗೆ ಬಂದು ಲಾರಿಗಳಲ್ಲಿ ತರಕಾರಿಯನ್ನು ಕೊಂಡೊಯ್ಯುತ್ತಿದ್ದರು. ಆದರೆ, ಇದೀಗ ಅವರ ಸುಳಿವು ಇಲ್ಲವಾಗಿರುವುದು ಈ ಭಾಗದ ರೈತರ ಬದುಕಿನ ಮೇಲೆ ಆತಂಕದ ಛಾಯೆ ಬೀರಿದೆ.
ತರಕಾರಿಗಳಿಗೆ ಮಾರುಕಟ್ಟೆ ದೊರೆಯುತ್ತಿಲ್ಲ
ಕೊರೊನಾ ಸೋಂಕು ಮತ್ತಷ್ಟು ಉಲ್ಬಣಗೊಂಡರೆ ತರಕಾರಿ ಪೂರೈಕೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಕಳೆದ ವರ್ಷ ರೈತರು ಕೊರೊನಾದ ನಿರೀಕ್ಷೆ ಇಲ್ಲದ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ತರಕಾರಿ ಬೆಳೆದಿದ್ದರು. ಆದರೆ, ಬೆಳೆದ ಬಹುತೇಕ ತರಕಾರಿಗಳಿಗೆ ಮಾರುಕಟ್ಟೆ ದೊರೆಯದೆ ಹೊಲದಲ್ಲಿಯೇ ನಾಶ ಮಾಡಿದ್ದರು. ಸಾಕಷ್ಟು ರೈತರು ಎಪಿಎಂಸಿಗೆ ತಂದು ಸೂಕ್ತ ಬೆಲೆ ದೊರೆಯದೆ ಮಾರುಕಟ್ಟೆಯಲ್ಲೇ ಸುರಿದು ಹೋದರು. ಕೊರೊನಾ ಎರಡನೇ ಅಲೆಯ ನಿರೀಕ್ಷೆಯಲ್ಲಿ ಇಲ್ಲದ ರೈತ ಈ ಬಾರಿಯೂ ಸಾಕಷ್ಟು ಪ್ರಮಾಣದಲ್ಲಿ ತರಕಾರಿ ಬೆಳೆದಿದ್ದಾರೆ. ಆದರೆ, ದಿನೇ ದಿನೇ ಸೋಂಕಿನ ಪ್ರಮಾಣ ಏರಿಕೆ ಕಾಣುತ್ತಿರುವುದು ಮತ್ತೆ ರೈತರನ್ನು ಸಂಕಷ್ಟಕ್ಕೆ ದೂಡಿದೆ.
ಟೊಮ್ಯಾಟೊ ದರ ಏರಿಕೆ ಕಾಣುತ್ತಿಲ್ಲ
2021ರ ಜನವರಿಯಲ್ಲಿ ಪ್ರತೀ ಕೆ.ಜಿ ಬೀನ್ಸ್ಗೆ 50 ರೂ. ವಹಿವಾಟು ನಡೆದಿದ್ದು, ಇದೀಗ 20 ರೂ.ಗಳಿಗೆ ಕುಸಿದಿದೆ. ಕೇರಳದಲ್ಲಿ ಹೆಚ್ಚಾಗಿ ಬಳಕೆ ಮಾಡುವ ಪೈರ್ ಜನವರಿಯಲ್ಲಿ 40 ರೂ. ಇದ್ದ ಬೆಲೆ, ಇದೀಗ 20 ರೂ.ಗೆ ಕುಸಿತ ಕಂಡಿದೆ. ಅದೇ ರೀತಿ ಬೆಂಡೆ 35 ರಿಂದ 10 ರೂ.ಗೆ, ಗುಂಡು ಬದನೆ 10 ರೂ.ನಿಂದ 5 ರೂ.ಗೆ ಇಳಿಕೆ ಕಂಡಿದೆ. ಟೊಮ್ಯಾಟೊ ದರ ನಿರೀಕ್ಷಿತ ಮಟ್ಟದಲ್ಲಿ ಏರಿಕೆ ಕಾಣುತ್ತಿಲ್ಲ. ಜನವರಿಯಲ್ಲಿ 13 ರೂ. ಇದ್ದ ಟೊಮ್ಯಾಟೊ ದರ ಇದೀಗ 7 ರೂ.ಗೆ ಇಳಿಕೆ ಕಂಡಿದೆ.