ವಿಶೇಷ ಲೇಖನ: ರೈತರಿಗೆ "ಕೊರೊನಾ ರಿಲೀಫ್ ಫಂಡ್" ಅತಿ ಅಗತ್ಯ
ಜಾಗತಿಕವಾಗಿ ಜೀವ ಭಯ ಹುಟ್ಟಿಸಿರುವ ಚೀನಿ ಮೂಲದ ಕೊರೋನ ವೈರಸ್ ನಗರ ಪಟ್ಟಣಗಳಲ್ಲದೇ ಗ್ರಾಮೀಣ ಭಾಗಗಳನ್ನು ಹಿಂಡುತ್ತಿದೆ. ಕೊರೊನಾ ಸೊಂಕು ತಗುಲಿ ಸಾವಿಗೀಡಾಗುತ್ತಿರುವುದು ಒಂದೆಡೆಯಾದರೆ ಕೊರೊನಾ ತಡೆಯಲು ತೆಗೆದುಕೊಳ್ಳಲೇ ಬೇಕಾಗಿದ್ದ ಕ್ರಮಗಳಿಂದ ತೀವ್ರ ಮಟ್ಟದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಆಹಾರ ಭದ್ರತೆ ವಿಷಯಗಳಲ್ಲಿ ಅತೀವ ಹಿನ್ನಡೆಯಾಗಿದೆ. ಪ್ರತಿಯೋರ್ವರೂ ವೈಯಕ್ತಿಕವಾಗಿ 'ಸ್ವ-ಬಂಧನ' ಹಾಕಿಕೊಂಡು ಕೊರೊನಾ ವೈರಸ್ ನಮ್ಮಿಂದ ಬೇರೆಯವರಿಗೆ ಹಾಗೂ ಬೇರೆಯವರಿಂದ ನಮಗೆ ಹರಡದಂತೆ ಎಚ್ಚರಿಕೆ ಅಗತ್ಯ ಮತ್ತು ಈ ವಿಷಯದಲ್ಲಿ ಸರಿಯಾದ ಮಾಹಿತಿ ಇಲ್ಲದವರಿಗೆ ಜಾಗೃತಗೊಳಿಸಿ ರೋಗಮುಕ್ತ ಸಮಾಜ ನಿರ್ಮಾಣದತ್ತ ಜವಾಬ್ದಾರಿಯಿಂದ ಸಾಗಬೇಕಿದೆ.
ವೈದ್ಯಲೋಕದ ಸವಾಲನ್ನು ಅರ್ಥೈಸುವುದೇ ಕಷ್ಟವಾಗಿದೆ. ಕೊರೊನಾ ಹಿಮ್ಮೆಟ್ಟಿಸಲು ಅಗತ್ಯ ಔಷಧ ಕಂಡುಹಿಡಿದು, ಪರೀಕ್ಷಿಸಿ ಜನರಿಗೆ ಸುಲಭವಾಗಿ ದೊರಕುವಂತೆ ಮಾಡುವ ಸವಾಲು ನಮ್ಮೆದುರಿಗಿದೆ. ಆದರೆ ಇಂಥ ಸನ್ನಿವೇಷದ ಇನ್ನೊಂದು ಮುಖ ಅಚ್ಚರಿ ಉಂಟುಮಾಡಿದೆ. ಕೊರೋನಾ ತಡೆಗೆ ಜಾರಿಗೊಳಿಸಲಾದ ಲಾಕ್ ಡೌನ್ ವ್ಯವಸ್ಥೆಯ ಆರಂಭದಿಂದಲೂ ಈ ವರೆಗೆ ಖಾಸಗೀ ಆಸ್ಪತ್ರೆಗಳಿಗೆ ಜನರ ಬೇಟಿ ಸಂಪೂರ್ಣ ಕಡಿಮೆಯಾಗಿದೆ. ಗಿಜಿ ಗಿಜಿ ಎನ್ನುತ್ತಿದ್ದ ಸ್ಕ್ಯಾನಿಂಗ್, ರಕ್ತ ಪರೀಕ್ಷಾ ಘಟಕಗಳೇ ಮುಂತಾದವು ಖಾಲಿ ಖಾಲಿ!!! ಉಳಿದ ರೋಗಗಳೆಲ್ಲಾ ಎಲ್ಲಿ ಹೋದವು ಎಂಬಂತಾಗಿದೆ.
ನೇರ ಮಾರುಕಟ್ಟೆ; ಲಾಕ್ ಡೌನ್ ನಡುವೆ ಲಾಭ ಕಂಡ ರೈತ
ರೈತ ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ಹಾಳಾಗುತ್ತಿದೆ. ಬಡ ಮತ್ತು ಮದ್ಯಮ ವರ್ಗದ ರೈತ.... ಎಲ್ಲೋ ಕೆಲವು ಹಣ್ಣು ಮತ್ತು ತರಕಾರಿಗಳನ್ನು ಹೊರತು ಪಡಿಸಿದರೆ, ಮಿಕ್ಕ ಬೆಳೆಗಳನ್ನು ಯಾವಾಗ ಮಾರಾಟ ಮಾಡುವುದು ಎಂಬುದೇ ಅನಿಶ್ಚಿತ. ಇದರಿಂದ ಹಿಂದೆಂದೂ ಕಾಣದ ಆರ್ಥಿಕ ಮುಗ್ಗಟ್ಟು ತಲೆದೋರಿದೆ. ಈ ಕೊರೊನಾ ಪರಿಣಾಮದ ನಂತರ ರೈತರು ಸಾಲ ಮರುಪಾವತಿಗೆ ಇನ್ನಿಲ್ಲದ ಕಷ್ಟಗಳನ್ನು ಅನುಭವಿಸಲಿದ್ದಾರೆ ಎಂಬುದು ಕಟು ಸತ್ಯ. ಸರಿಯಾಗಿ ವ್ಯಾಪಾರ ಆರಂಭವಾಗಿ ವ್ಯಾಪಾರಿ ಮಧ್ಯವರ್ತಿಗಳಲ್ಲಿ ಖರೀದಿ ಸ್ಫರ್ಧೆ ಪ್ರಾರಂಭವಾದಂತೂ ರೈತೋತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯಲಾರದು.
ಕೃಷಿಭೂಮಿ ನಿರ್ವಹಣೆಯೂ ಅತ್ಯಂತ ಅಗತ್ಯ
ಈ ಲಾಕ್ ಡೌನ್ ನಂತರ ಆರ್ಥಿಕ ಮತ್ತು ಸರಕು ಸಾಗಾಣೆಯ ಬಿಕ್ಕಟ್ಟು ಶಮನವಾದ ಮೇಲೆಯೇ ರೈತೋತ್ಪನ್ನಗಳಿಗೆ ಸರಿಯಾದ ಬೆಲೆ ಸಿಗಬಹುದು. ಈ ಸನ್ನಿವೇಶ ನಿರ್ಮಾಣವಾಗಲು ಕನಿಷ್ಟ ಮೂರರಿಂದ ನಾಲ್ಕು ತಿಂಗಳು ಬೇಕಾಗಬಹುದು ಎಂಬುದು ತಜ್ಞರ ಅಭಿಪ್ರಾಯ. ಇದೇ ಸಂದರ್ಭದಲ್ಲಿ ಬೆಳೆ, ಕೊಯ್ಲೋತ್ತರ, ಮತ್ತು ಕೃಷಿಭೂಮಿ ನಿರ್ವಹಣೆಯೂ ಅತ್ಯಂತ ಅಗತ್ಯವಾದುದು. ಇಲ್ಲದಿದ್ದಲ್ಲಿ ಮುಂದಿನ ಆರ್ಥಿಕ ವರ್ಷದಲ್ಲಿ ನಷ್ಟವಾಗಲಿದೆ. ಇಂತಹ ಸನ್ನಿವೇಷಶದಲ್ಲಿ ರೈತರು ತಮ್ಮ ಕುಟುಂಬ, ಕೃಷಿ, ಪಶುಸಂಗೋಪನೆಗಳ ನಿರ್ವಹಣಾ ವೆಚ್ಚ ಹೊಂದಿಸಲು ಅತ್ಯಂತ ಕಷ್ಟಮಯ ವಾತಾವರಣ ಸೃಷ್ಟಿಯಾಗುತ್ತದೆ.
ಸಹಕಾರಿ ಕ್ಷೇತ್ರವನ್ನು ಕಡೆಗಣಿಸಲಾಗಿದೆ
ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟು ಜನಸಂಖ್ಯೆಯ 60-70% ಸಹಕಾರಿ ಸಂಘಗಳ ಸದಸ್ಯರೇ ಆಗಿದ್ದಾರೆ. ಈಗಾಗಲೇ ಸಾಲ ಪಡೆದಿರುತ್ತಾರೆ. ಈ ಅವಘಡದಲ್ಲಿ ರೈತರು ಸಾಲ ಮರುಪಾವತಿ ಮಾಡಲಾಗುತ್ತಿಲ್ಲ ಮತ್ತು ದೈನಂದಿನ ನಿರ್ವಹಣೆಗೆ ಅಗತ್ಯ ಹಣದ ಅವಶ್ಯಕತೆಯೂ ತೋರುತ್ತದೆ. ಸ್ವಂತ ಫಂಡ್ ಇರುವ ಸಹಕಾರಿ ಸಂಘಗಳು ಹೇಗೋ ನಿಭಾಯಿಸುತ್ತಿದೆ. ಇತರ ಸಂಘಗಳು ತೊಂದರೆಯಲ್ಲಿವೆ. ಲಾಕ್ ಡೌನ್ ನಂತಹ ಕೊರೋನ ನಿರ್ವಹಣೆಯ ಸಮಯದಲ್ಲಿ ಸಹಕಾರಿ ಕ್ಷೇತ್ರವನ್ನು ಕಡೆಗಣಿಸಲಾಗಿದೆ.
ಅಪಾರ್ಟ್ಮೆಂಟ್ಗೆ ಬಂತು ಹಣ್ಣು, ತರಕಾರಿ; ರೈತರ ಸಂಕಷ್ಟ ದೂರ
ಉತ್ತರಕನ್ನಡದಲ್ಲಿ ಗ್ರಾಮೀಣ ಭಾಗದ ಆಹಾರ ಕೊರತೆ ನೀಗುವಲ್ಲಿ ಸಹಕಾರಿ ಸಂಘಗಳು ದಿನಸು ಪೂರೈಕೆಯ ಮೂಲಕ ಮಹತ್ತರ ಪಾತ್ರ ವಹಿಸಿದೆ. ಗ್ರಾಮೀಣ ಸಹಕಾರಿ ಸಂಘಗಳಲ್ಲಿ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಎಲ್ಲದಿರುವುದರಿಂದ ಬೇಳೆಗಳು ಮಾರಾಟವಿಲ್ಲದೇ ಹಾಳಾಗುತ್ತಿದೆ. ಸರ್ಕಾರದಿಂದ ಬೆಳೆವಿಮೆ, ಮತ್ತು ಇತರ ಸೌಲಭ್ಯಗಳು ಸಹಕಾರಿ ಸಂಘಗಳ ಮೂಲಕ ಕೊಡಲ್ಪಡುವ ಹಣ ಸರಕಾರದಿಂಧ ಬರದೇ ಬಾಕಿಯಿದ್ದು ಸಹಕಾರಿ ಸಂಘಗಳು ಆರ್ಥಿಕ ಸಂಕಷ್ಟದತ್ತ ಸಾಗಿದೆ. ಗ್ರಾಮೀಣ ಸಹಕಾರಿ ಸಂಘಗಳಲ್ಲಿ ಸಾಲ ಮರುಪಾವತಿ ಇರುವ ರೈತರು 35-40%. ಇನ್ನುಳಿದ 60-65% ರೈತರಿಗೆ ಆಫ್ಟರ್ ಕೊರೊನಾ ಇಫೆಕ್ಟ್ ಭೂತದಂತೆ ಕಾಡಲಿದೆ.
ಕೃಷಿ ಕೂಲಿ ನೀಡುವವರಿಗೂ ಆರ್ಥಿಕ ಮುಗ್ಗಟ್ಟು
ಸಾಲಮನ್ನಾ ದಂತಹ ಸರ್ಕಾರಿ ನಿರ್ಣಯಗಳು ಅತ್ಯಂತ ಶೀಘ್ರ ಅನುಷ್ಠಾನ ಕಾಣಬೇಕು. ಇಲ್ಲದಿದ್ದರೆ ಸಾಲಮನ್ನಾ ಆಸೆಯಿಂದ ರೈತರು ಪಡೆದ ಸಾಲವನ್ನು ಮರುಪಾವತಿಸದೇ ಸಹಕಾರಿ ಸಂಘಗಳಲ್ಲಿ ಆರ್ಥಿಕ ಮುಗ್ಗಟ್ಟು ಆಗುತ್ತದೆ. ಹೀಗಿರುವಾಗ ಕೊರೋನಾದಂತಹ ಅವಘಡಗಳ ಸಂದರ್ಭದಲ್ಲಿ ಆರ್ಥಿಕ ನಿರ್ವಹಣೆ ಸಹಕಾರಿ ಸಂಘಗಳಿಗೆ ಪ್ರಬಲ ಸವಾಲಾಗಿ ಎದುರಾಗುತ್ತದೆ.
ಗ್ರಾಮೀಣ ಭಾಗದ ಕೃಷಿ ಕೂಲಿ ಕಾರ್ಮಿಕರು ಪಡಿತರವನ್ನು ಪಡೆಯುತ್ತಾರಾದರೂ 8-10 ಕಿ.ಮಿ ಮನೆಗಳಿಗೆ ಒಯ್ಯುವುದು ಬಹಳ ಕಷ್ಟ. ಏಕೆಂದರೆ ಬಾಡಿಗೆ ವಾಹನಗಳು ದೊರೆಯುತ್ತಿಲ್ಲ. ಇವರೆಲ್ಲವು ಅಸಂಘಟಿತ ವಲಯಕ್ಕೆ ಸೇರುತ್ತಾರೆ ಆಧ್ದರಿಂದ ಸೌಲಭ್ಯಗಳು ಕಡಿಮೆ. ಲಾಕ್ ಡೌನ್ ಇಂದಾಗೆ ತಿಂಗಳುಗಟ್ಟಳೆ ಕೆಲಸದ ದಿನಗಳು ಕಡಿಮೆಯಾಗಿದೆ. ಕೃಷಿ ಕೂಲಿ ನೀಡುವವರಿಗೂ ಆರ್ಥಿಕ ಮುಗ್ಗಟ್ಟು ಎದುರಾದ್ದರಿಂದ ಕೂಲಿಯವರನ್ನು ಕರೆಯುವುದನ್ನು ನಿಲ್ಲಿಸಿದ್ದಾರೆ ಎಂದರೂ ತಪ್ಪಿಲ್ಲ. ಇದರಿಂದ ಕೂಲಿ ಕಾರ್ಮಿಕರು ಪ್ರಬಲ ಆರ್ಥಿಕ ಮುಗ್ಗಟ್ಟನ್ನು ಎದುರಿಸಲಿದ್ದಾರೆ.
ಗ್ರಾಮೀಣ ರೈತರಿಗೆ ಅಗತ್ಯ ನೆರವು ನೀಡಿ
ಕೃಷಿ-ತೋಟಗಾರಿಕಾ ಉತ್ಪನ್ನಗಳ ವ್ಯಾಪಾರಿಗಳು ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಎಷ್ಟು ಕಾಲ ಬೇಕಾಗಬಹುದು ಎಂಬುದು ಅನಿಶ್ಚಿತ. ಲಾಕ್ ಡೌನ್ ನಂತರ ಸರಕು ಸಾಗಣೆ ವ್ಯವಸ್ಥೆ ತಹಬಂದಿಗೆ ಬರಬೇಕು. ಈ ಮೊದಲು ಕಳುಹಿಸ್ಪಟ್ಟ ಸರಕಿನ ಹಣ ವಸೂಲಿಯಾಗಬೇಕು. ಆ ನಂತರವಷ್ಟೇ ಮಹಸೂಲು ಖರೀದಿಯ ಟೆಂಡರ್ ಪ್ರಕ್ರಿಯೆಯಲ್ಲಿ ತೊಡಗುತ್ತಾರೆ. ಕೊರೋನಾ ನಂತರ ಇದಕ್ಕೆ ಇನ್ನೆಷ್ಟು ಕಾಲ ಬೇಕು ಎಂಬುದು ಗೊತ್ತಿಲ್ಲ.
ಈ ವರೆಗೆ ಅವಗಾಹನೆಗೆ ಬಂದ ಸಮಸ್ಯೆಗಳು ಮತ್ತು ಮುಂದೆ ಬರಬಹುದಾದ ಸಮಸ್ಯೆಗಳು ಎಲ್ಲಾ ಕ್ಷೇತ್ರವನ್ನು ಆವರಿಸಿದೆ. ಒಂದು ದೇಶದ, ರಾಜ್ಯದ, ಸುಸ್ಥಿರ ಅಭೀವೃದ್ದೀಗೆ ರೈತರ ಕೊಡುಗೆ ಅತಿ ಮಹತ್ವದ್ದು. ಆದ್ದರಿಂದ "ಕೊರೋನಾ ರಿಲೀಫ್ ಫಂಡ್" ಸ್ಥಾಪಿಸುವ ಅಗತ್ಯವಿದೆ. ಸರಕಾರ ನಬಾರ್ಡ, ರಾಷ್ಟ್ರೀಕೃತ ಬ್ಯಾಂಕ್ಗಳು ಮತ್ತು ಜಿಲ್ಲಾ ಮಧ್ಯವರ್ತಿ ಬ್ಯಾಂಕ್ಗಳು ಅಗತ್ಯ ಹಣಕಾಸು ನೆರವು ನೀಡಿ ಸಹಕಾರಿ ಸಂಘಗಳ ಮೂಲಕ ಗ್ರಾಮೀಣ ರೈತರಿಗೆ ಅಗತ್ಯ ನೆರವು ನೀಡಿ ಕೊರೊನಾ ಅವಘಢದಿಂದ ಚೇತರಿಸಿಕೊಳ್ಳಲು ಸಹಾಯ ಹಸ್ತ ನೀಡಬೇಕು.
ಆರ್ಥಿಕ ಸ್ವಾತಂತ್ರ್ಯ ಸಿಗಬೇಕಿದೆ
ಪ್ರತೀ ಸಹಕಾರಿ ಸಂಘದಲ್ಲು ಸೆಲ್ಫ್ ಲೈಪ್ ಹೆಚ್ಚಿಸುವ ಕೋಲ್ಡ್ ಸ್ಟೋರೇಜ್ ನಂತಹ ಮೂಲ ಸೌಕರ್ಯ ವ್ಯವಸ್ಥೆಯನ್ನು ಜಾರಿಗೊಳಿಸಬೇಕು, ಇದರಿಂದ ಬಡ ಮತ್ತು ಮಧ್ಯಮ ವರ್ಗದ ರೈತರಿಗೂ ಬೆಳೆಯ ಗುಣ ಮಟ್ಟ ಕಾಯ್ದು ಉತ್ತಮ ಬೆಲೆ ಬಂದಾಗ ಮಾರಾಟ ಮಾಡಲು ಅನುಕೂಲವಾಗುತ್ತದೆ. ಇವೆಲ್ಲ ಸಮಸ್ಯೆಗಳೆಲ್ಲವೂ ಶ್ರೀಮಂತರನ್ನು ಅಷ್ಟಾಗಿ ಬಾಧಿಸುತ್ತಿಲ್ಲ. ತಮ್ಮ ಬೆಳೆಯನ್ನು ವೈಜ್ಞಾನಿಕವಾಗಿ ರಕ್ಷಿಸಿ ಮುಂದೆ ಉತ್ತಮ ಬೆಲೆ ಬಂದಾಗ ಮಾರುವ ಆರ್ಥಿಕ ಸ್ವಾತಂತ್ರ್ಯ ಅವರಿಗಿದೆ. ಇಂಥ ಪರಿಸ್ಥಿತಿಯಲ್ಲಿಯೂ ಬಡವ ಇನ್ನಷ್ಟು ಬಡವನಾಗುವ ಮತ್ತು ಶ್ರೀಮಂತ ಇನ್ನಷ್ಟು ಶ್ರೀಮಂತನಾಗುವ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಒಟ್ಟಾರೆ ಇಂದಿನ ಕೊರೋನ ಪರಿಸ್ಥಿತಿಯ ಅನುಭವದ ಆಧಾರದಲ್ಲಿ ಮುಂದಿನ ದಿನಗಳಲ್ಲೂ ಯಾವುದೇ ಅವಘಡಗಳು ಸಂಭವಿಸಿದಾಗ ಅದರ ನಿಭಾವಣೆಗೆ ಅಗತ್ಯವಾದ ಯೋಜನೆ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಇಂದಿನ ಅಗತ್ಯಗಳಲ್ಲಿ ಪ್ರಮುಖವಾದುದು.