ಬಳ್ಳಾರಿಯಲ್ಲಿ ಸತತ ಮಳೆಗೆ ಮೆಕ್ಕೆಜೋಳ ಬೆಳೆ ಮೊಳಕೆಯೊಡೆದು ಹಾನಿ
ಬಳ್ಳಾರಿ, ಅಕ್ಟೋಬರ್ 15: ನಾಲ್ಕು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಕೆರೆತಾಂಡದ ರೈತರೊಬ್ಬರು ಕಟಾವು ಮಾಡಿ ರಾಶಿ ಹಾಕಿದ್ದ ಮೆಕ್ಕೆಜೋಳ ಬೆಳೆ ಮೊಳಕೆ ಹೊಡೆದಿದೆ.
ಮಳೆಗೆ ಮೊಳಕೆ ಹೊಡೆದ ಸುಮಾರು 100 ಕ್ವಿಂಟಲ್ ಮೆಕ್ಕೆಜೋಳವನ್ನು ರೈತ ಶಂಕರ್ ಅವರು 6 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದರು.
ಅದರಲ್ಲಿ ಒಂದಿಷ್ಟು ಬೆಳೆ ಮೊಳಕೆ ಹೊಡೆದಿದ್ದು, ಇನ್ನೊಂದಿಷ್ಟು ಮಳೆಯಿಂದ ಸಂಪೂರ್ಣ ತೊಯ್ದುಹೋಗಿದೆ. ಈ ಬಗ್ಗೆ ಗುತ್ತಿಗೆ ರೈತ ಶಂಕರ್ ಮಾತನಾಡಿ, ಮೆಕ್ಕೆಜೋಳವನ್ನು ಕಟಾವು ಮಾಡಿ ಬಿಸಿಲಿಗೆ ಒಣಗಿಸಲು ಹಾಕಲಾಗಿತ್ತು. ಸತತ ಮಳೆಯಿಂದ ಒಂದಿಷ್ಟು ಮಕ್ಕೆಜೋಳ ಮೊಳಕೆ ಹೊಡೆದರೆ ಇನ್ನೊಂದಿಷ್ಟು ಮಳೆ ನೀರಿನಿಂದ ತೊಯ್ದುಹೋಗಿದೆ ಎಂದು ನೋವು ತೋಡಿಕೊಂಡರು.
ಸುಮಾರು 100 ಕ್ವಿಂಟಲ್ ಕ್ಕಿಂತ ಹೆಚ್ಚು ಇಳುವರಿ ಬಂದಿತ್ತು. ಈಗ ಎಲ್ಲವೂ ಸಂಪೂರ್ಣ ನಾಶವಾಗಿದ್ದು, ಮುಂದೇ ಏನು ಮಾಡಬೇಕು ಎಂದು ದಿಕ್ಕು ತೋಚುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಾಯುಭಾರ ಕುಸಿತದಿಂದ ಈಗಾಗಲೇ ಗುಡುಗು, ಗಾಳಿ ಸಮೇತ ಮಳೆಯಾಗುತ್ತಿದೆ. ಬುಧವಾರ ಸುಮಾರು 20 ಕಿಲೋಮೀಟರ್ ವೇಗದಲ್ಲಿ ಸಾಗಿ, ಕರ್ನಾಟಕದ ಉತ್ತರ ಒಳನಾಡು ಮತ್ತು ಅದಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಪ್ರದೇಶಗಳನ್ನು, 40 ಕಿಲೋಮೀಟರ್ ವೇಗದಲ್ಲಿ ಕಲಬುರಗಿ ಮತ್ತು ಸೊಲ್ಲಾಪುರದಲ್ಲಿ 110 ಕಿಲೋಮೀಟರ್ ವೇಗದಲ್ಲಿ ಹಾದು ಹೋಗಿದೆ.
ಕರ್ನಾಟಕದ 6 ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ ಎರಡು ದಿನ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರೆಯಲಿದೆ
ಅಕ್ಟೋಬರ್ 15 ರಂದು ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಸಾಧಾರಣದಿಂದ ಕೂಡಿದ ಭಾರಿ ಮಳೆಯಾಗುವ ಸಾದ್ಯತೆ ಇದೆ.