ಸಿಂಘ ಗಡಿಯಲ್ಲಿ ಕಾಂಗ್ರೆಸ್ ಸಂಸದ ರವ್ನೀತ್ ಸಿಂಗ್ ಮೇಲೆ ಹಲ್ಲೆ
ನವದೆಹಲಿ, ಜನವರಿ 25: ದೆಹಲಿಯ ಸಿಂಘು ಗಡಿಯಲ್ಲಿ 'ಜನ್ ಸನ್ಸದ್' ಕಾರ್ಯಕ್ರಮದ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರವ್ನೀತ್ ಸಿಂಗ್ ಬಿಟ್ಟು ಅವರನ್ನು ತಳ್ಳಾಡಿ, ಹಲ್ಲೆ ನಡೆಸಿ ಅವರ ಟರ್ಬನ್ ಕಿತ್ತುಹಾಕಲಾಗಿದೆ.
ಭಾನುವಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಅಮೃತಸರದ ಕಾಂಗ್ರೆಸ್ ಸಂಸದ ಗುರ್ಜೀತ್ ಸಿಂಗ್ ಔಜ್ಲಾ ಮತ್ತು ಪಕ್ಷದ ಶಾಸಕ ಕುಲಬೀರ್ ಸಿಂಗ್ ಝೈರಾ ಅವರೊಂದಿಗೆ ತೆರಳಿದ್ದ ಲೂಧಿಯಾನಾದ ಸಂಸದ ರವ್ನೀತ್ ಅವರ ಮೇಲೆ ಗುರು ತೇಗ್ ಬಹದ್ದೂರ್ ಜಿ ಸ್ಮಾರಕದಲ್ಲಿ ಈ ದಾಳಿ ನಡೆದಿದೆ. ರವ್ನೀತ್ ಅವರ ವಾಹನವನ್ನು ಜಖಂಗೊಳಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ತಾಯಿಗೆ ರೈತನ ಭಾವುಕ ಪತ್ರ
'ಬಡಿಗೆ ಹಾಗೂ ಆಯುಧಗಳನ್ನು ಹಿಡಿದು ಬಂದ ಜನರ ಗುಂಪೊಂದು ನನ್ನ ಮೇಲೆ ಹಲ್ಲೆ ನಡೆಸಿದೆ. ಈ ದಾಳಿ ಅತ್ಯಂತ ವ್ಯವಸ್ಥಿತವಾಗಿ ನಡೆದಂತೆ ಕಾಣಿಸುತ್ತದೆ. ಕೆಲವು ದುಷ್ಕರ್ಮಿಗಳ ಕಾರಣಕ್ಕೆ ರೈತರ ಪ್ರತಿಭಟನೆ ಹಾಳಾಗಬಾರದು ಎಂಬ ಉದ್ದೇಶದಿಂದ ನಾವು ಕೂಡಲೇ ಅಲ್ಲಿಂದ ನಿರ್ಗಮಿಸಿದೆವು' ಎಂದು ರವ್ನೀತ್ ಸಿಂಗ್ ತಿಳಿಸಿದ್ದಾರೆ.
ಸ್ಮಾರಕದ ಬಳಿ ಕೆಲವು ಜನರು ತಮ್ಮ ಮೇಲೆ ಹಲ್ಲೆ ನಡೆಸಿದರು. ಟರ್ಬನ್ ಅನ್ನು ಎಳೆದು ಕಿತ್ತು, ತಳ್ಳಾಡಿದರು. ಇದೇ ವೇಳೆ ಕುಲ್ಬೀರ್ ಸಿಂಗ್ ಅವರ ಟರ್ಬನ್ ಅನ್ನು ಕೂಡ ಕಿತ್ತುಹಾಕಿದ್ದರು. ತಮ್ಮನ್ನು ರಕ್ಷಿಸಲು ಕೆಲವರು ಪ್ರಯತ್ನಿಸಿದರು. ವಾಹನದಲ್ಲಿ ಕೂರಿಸಲು ಮುಂದಾದಾಗ ದುಷ್ಕರ್ಮಿಗಳು ವಾಹನದ ಮೇಲೆ ಬಡಿಗೆಗಳಿಂದ ದಾಳಿ ನಡೆಸಿ ಗಾಜುಗಳನ್ನು ಒಡೆದುಹಾಕಿದರು ಎಂದು ಆರೋಪಿಸಿದ್ದಾರೆ.
ಈ ದಾಳಿಗೆ ಕಾರಣ ಏನು ಎನ್ನುವುದು ಸ್ಪಷ್ಟವಾಗಿಲ್ಲ. 'ಕೆಲವು ಕಿಡಿಗೇಡಿ ವ್ಯಕ್ತಿಗಳು ನಮ್ಮ ಮೂವರ ಮೇಲೆ ಮಾರಕ ದಾಳಿ ನಡೆಸುವ ಮೂಲಕ ಅಲ್ಲಿನ ಪರಿಸ್ಥಿತಿಯನ್ನು ಹಾಳುಗೆಡವಲು ಪ್ರಯತ್ನಿಸಿದರು. ಅವರ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ' ಎಂದು ಅವರು ಫೇಸ್ಬುಕ್ ಪುಟದಲ್ಲಿ ಹೇಳಿದ್ದಾರೆ.
ಟ್ರ್ಯಾಕ್ಟರ್ ಮೆರವಣಿಗೆ: ರೈತರಿಗೆ ಡೀಸೆಲ್ ನೀಡದಂತೆ ಪೊಲೀಸರ ಸೂಚನೆ
ಝೈರಾ ಅವರೂ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಇಂತಹ ಚಟುವಟಿಕೆಗಳಲ್ಲಿ ರೈತರು ಭಾಗಿಯಾಗಿರುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ ಇದುವರೆಗೂ ಈ ಘಟನೆ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.