ರೈತರು ಇಲ್ಲಿಂದ ಬರಿಗೈಯಲ್ಲಿ ಹೋಗುವ ಮಾತೇ ಇಲ್ಲ; ರಾಹುಲ್ ಗಾಂಧಿ
ನವದೆಹಲಿ, ಡಿಸೆಂಬರ್ 24: "ಈ ಬಂಡವಾಳಶಾಹಿ ಸರ್ಕಾರದಲ್ಲಿ ಯಾರಿಗೆ ಬೇಕಾದರೂ "ಭಯೋತ್ಪಾದಕರು" ಎಂಬ ಹಣೆಪಟ್ಟಿ ಕಟ್ಟಿಬಿಡಬಹುದು. ರೈತರು, ನೌಕರರು, ಅಷ್ಟೇ ಏಕೆ ಮೋಹನ್ ಭಾಗವತ್ ಅವರನ್ನೂ ಹೀಗೇ ನೋಡಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ.
ದೆಹಲಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ರೈತರು ಕೈಗೊಂಡಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ರಾಹುಲ್ ಗಾಂಧಿ ಮುಂದಾಳತ್ವದ ಕಾಂಗ್ರೆಸ್ ನಿಯೋಗ ಗುರುವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಕೃಷಿ ಕಾಯ್ದೆ ವಿರುದ್ಧವಾಗಿ ಎರಡು ಕೋಟಿ ರೈತರ ಸಹಿ ಸಂಗ್ರಹಿಸಿದ ಜ್ಞಾಪನಾ ಪತ್ರವನ್ನು ಸಲ್ಲಿಸಿದೆ. ಈ ಸಂದರ್ಭ ಮೋದಿ ಸರ್ಕಾರದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಮುಂದೆ ಓದಿ...
"ರೈತರು ಬರಿಗೈಯಲ್ಲಿ ಹೋಗುವ ಮಾತಿಲ್ಲ"
"ನಾನು ಪ್ರಧಾನಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಈ ರೈತರು ಈ ಕಾಯ್ದೆಗಳು ರದ್ದಾಗುವವರೆಗೂ ವಾಪಸ್ ಹೋಗುವುದಿಲ್ಲ. ಈ ಕಾಯ್ದೆಗಳನ್ನು ಸರ್ಕಾರ ವಾಪಸ್ ಪಡೆಯಲೇಬೇಕು. ಈ ಕುರಿತು ವಿರೋಧ ಪಕ್ಷಗಳು ರೈತರಿಗೆ ಬೆಂಬಲಕ್ಕೆ ನಿಲ್ಲಲಿವೆ" ಎಂದು ಎಚ್ಚರಿಕೆ ನೀಡಿದರು.
ರೈತರ ಪರ ಮೆರವಣಿಗೆ: ಪ್ರಿಯಾಂಕಾ ಗಾಂಧಿ ಬಂಧನ, ರಾಷ್ಟ್ರಪತಿ ಭೇಟಿ ಮಾಡಿದ ರಾಹುಲ್
"ಬಂಡವಾಳಶಾಹಿಗಳಿಗೆ ಹಣ ಮಾಡಿಕೊಡುತ್ತಿದ್ದಾರೆ"
"ಈ ಕಾಯ್ದೆಗಳು ರೈತ ವಿರೋಧಿಯಾಗಿವೆ. ಕಾಯ್ದೆ ವಿರುದ್ಧ ಇಡೀ ದೇಶದ ರೈತರೇ ತಿರುಗಿಬಿದ್ದಿದ್ದಾರೆ. ಆದರೆ ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲ. ನಿಮ್ಮ ಊಹೆಯಲ್ಲಿ ಮಾತ್ರ ಪ್ರಜಾಪ್ರಭುತ್ವ ಇರಬಹುದು, ಆದರೆ ವಾಸ್ತವದಲ್ಲಿಲ್ಲ. ಬಂಡವಾಳಶಾಹಿಗಳಿಗೆ ಮೋದಿ ಹಣ ಮಾಡಿಕೊಡುತ್ತಿದ್ದಾರೆ. ಮೋದಿ ವಿರುದ್ಧ ಯಾರೇ ನಿಂತರೂ ಅವರನ್ನು ಭಯೋತ್ಪಾದಕರು ಎಂದು ಕರೆಯಲಾಗುತ್ತಿದೆ. ಅದು ರೈತರಾಗಿರಲಿ, ಕಾರ್ಮಿಕರಾಗಿರಲಿ, ಮೋಹನ್ ಭಾಗವತ್ ಆಗಿರಲಿ, ಯಾರನ್ನೂ ನೋಡುವುದಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಭಾರತ ಅಸಮರ್ಥ ವ್ಯಕ್ತಿಯನ್ನು ಹೊಂದಿದೆ"
"ನೀವು ಇನ್ನೊಬ್ಬರಿಂದ ನಿಯಂತ್ರಣಕ್ಕೊಳಪಟ್ಟಿರುವ ಅಸಮರ್ಥ ವ್ಯಕ್ತಿಯನ್ನು ಹೊಂದಿದ್ದೀರಿ. ಇದನ್ನು ಭಾರತ ಅರ್ಥ ಮಾಡಿಕೊಳ್ಳಬೇಕು. ಇದನ್ನು ಇಡೀ ಯುವಜನತೆ ಅರ್ಥೈಸಿಕೊಳ್ಳಬೇಕು. ಏನನ್ನೂ ಅರ್ಥ ಮಾಡಿಕೊಳ್ಳದ ವ್ಯಕ್ತಿಯು ಎಲ್ಲವನ್ನೂ ಅರ್ಥ ಮಾಡಿಕೊಂಡ ಮೂರ್ನಾಲ್ಕು ಮಂದಿಗಾಗಿ ಈ ವ್ಯವಸ್ಥೆ ನಡೆಸುತ್ತಿದ್ದಾರೆ. ಅವರ ಉದ್ದೇಶ ಒಂದೇ, ಭಾರತದ ಬಡ ಜನರಿಂದ ಬೃಹತ್ ಮೊತ್ತದ ಹಣವನ್ನು ಕಿತ್ತುಕೊಂಡು ತಮ್ಮ ಜೇಬಿನಲ್ಲಿಟ್ಟುಕೊಳ್ಳುವುದು" ಎಂದು ಹರಿಹಾಯ್ದಿದ್ದಾರೆ. ಸರ್ಕಾರ ಕಾಯ್ದೆ ವಿಚಾರವಾಗಿ ತನ್ನ ನಿಲುವಿನಿಂದ ಅಲುಗಾಡುತ್ತಿಲ್ಲ. ದೆಹಲಿಯಲ್ಲಿ ಪ್ರತಿಭಟನೆ ಕೈಗೊಂಡು ತಿಂಗಳಾಗುತ್ತಿದೆ. ಇನ್ನೂ ಈ ಬಿಕ್ಕಟ್ಟಿಗೆ ಕೊನೆ ಸಿಕ್ಕಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆ ಜಾಗದಿಂದ ಜಗ್ಗುವ ಮಾತೇ ಇಲ್ಲ; ಪಟ್ಟುಬಿಡದ ರೈತರು
ಪ್ರಿಯಾಂಕಾ ಗಾಂಧಿ ಬಂಧಿಸಿದ್ದ ಪೊಲೀಸರು
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಕೈಜೋಡಿಸಿರುವ ಕಾಂಗ್ರೆಸ್, ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ನಡೆಸುವ ಸಂದರ್ಭದಲ್ಲಿ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರರನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ರಾಹುಲ್ ಗಾಂಧಿ ಮುಂದಾಳತ್ವದ ಕಾಂಗ್ರೆಸ್ ನಿಯೋಗವು ಗುರುವಾರ ಬೆಳಿಗ್ಗೆ ಕೃಷಿ ಕಾಯ್ದೆಗಳ ವಿರುದ್ಧದ 2 ಕೋಟಿ ಸಹಿಗಳುಳ್ಳ ಜ್ಞಾಪನಾ ಪತ್ರವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಲು ರಾಷ್ಟ್ರಪತಿ ಭವನದತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಈ ಬಂಧನ ನಡೆದಿದೆ. ರಾಷ್ಟ್ರಪತಿ ಭವನದ ಕಡೆಗೆ ಸಾಗುತ್ತಿದ್ದ ಕಾಂಗ್ರೆಸ್ ಮೆರವಣಿಗೆಯನ್ನು ದೆಹಲಿ ಪೊಲೀಸರು ತಡೆದಿದ್ದರು. ಆದರೆ ರಾಹುಲ್ ಗಾಂಧಿ ಅವರು ರಾಷ್ಟ್ರಪತಿಯವರನ್ನು ಭೇಟಿ ಮಾಡಲು ತೆರಳಿದರು.