ಕೃಷಿ ಕ್ಷೇತ್ರದ ನಿರ್ನಾಮಕ್ಕೆ ಕೇಂದ್ರ ಕಸರತ್ತು ನಡೆಸುತ್ತಿದೆ; ರಾಹುಲ್ ಗಾಂಧಿ
ನವದೆಹಲಿ, ಜನವರಿ 19: "ಭಾರತೀಯ ಕೃಷಿ ಕ್ಷೇತ್ರವನ್ನು ನಿರ್ನಾಮ ಮಾಡಲು ಕೇಂದ್ರ ಸರ್ಕಾರ ಈ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷಿ ಕಾಯ್ದೆ ಸಂಬಂಧಿ ದೆಹಲಿಯಲ್ಲಿ ರೈತರ ಹೋರಾಟ ಮುಂದುವರೆದಿದ್ದು, ಮಂಗಳವಾರ ನಡೆಯಬೇಕಿದ್ದ ಹತ್ತನೇ ಸುತ್ತಿನ ಮಾತುಕತೆಯನ್ನು ಮುಂದೂಡಲಾಗಿದೆ. ಈ ಸಂದರ್ಭ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, "ನಾನು ಈ ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟಕ್ಕೆ ಬೆಂಬಲ ನೀಡುತ್ತೇನೆ. ಪ್ರತಿಯೊಬ್ಬರೂ ರೈತರಿಗೆ ಬೆಂಬಲ ನೀಡಲೇಬೇಕು" ಎಂದು ಹೇಳಿದರು. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲು ನಿರಾಕರಿಸಿದರು. ಮುಂದೆ ಓದಿ...
"ರೈತರಿಗಷ್ಟೇ ಅಲ್ಲ, ಮಧ್ಯಮ ವರ್ಗದವರಿಗೂ ಅನ್ಯಾಯ"
ಕೇಂದ್ರ ಪರಿಚಯಿಸಿರುವ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಮಂಗಳವಾರ ಕಿರುಪುಸ್ತಕವನ್ನೂ ಬಿಡುಗಡೆಗೊಳಿಸಿದರು. ಈ ಕಾಯ್ದೆಗಳನ್ನು ಪರಿಚಯಿಸಿರುವ ಸರ್ಕಾರ ರೈತರೊಬ್ಬರ ಮೇಲೆ ದೌರ್ಜನ್ಯ ನಡೆಸುತ್ತಿಲ್ಲ. ಮಧ್ಯಮ ವರ್ಗದ ಹಾಗೂ ದೇಶದ ಪ್ರತಿ ಯುವಜನತೆಗೂ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಕೃಷಿ ಕಾಯ್ದೆಯ ನ್ಯೂನತೆ ತಿಳಿಸಲು ನಿಮ್ಮ ಸಹಕಾರ ಬೇಕು: ರಾಹುಲ್ ಗಾಂಧಿ
ಚೀನಾ ಕುರಿತು ಪ್ರಧಾನಿ ಮೋದಿಗೆ ಪ್ರಶ್ನೆ
ಚೀನಾ ವಿವಾದದ ಬಗ್ಗೆಯೂ ಪ್ರಸ್ತಾಪ ಮಾಡಿರುವ ರಾಹುಲ್ ಗಾಂಧಿ, ಅರುಣಾಚಲ ಪ್ರದೇಶದಲ್ಲಿ ಚೀನಾ ಹಳ್ಳಿಯನ್ನು ನಿರ್ಮಿಸಿದೆ ಎನ್ನಲಾಗುತ್ತಿದೆ. ರಾಷ್ಟ್ರೀಯ ಭದ್ರತೆ ಈಗ ಎಲ್ಲಿದೆ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅರುಣಾಚಲ ಪ್ರದೇಶ ಮತ್ತು ಟಿಬೆಟ್ ಗಡಿ ವಿವಾದಿತ ಸ್ಥಳದಲ್ಲಿ ಚೀನಾ ನೂರು ಮನೆಗಳ ಗ್ರಾಮ ನಿರ್ಮಿಸಿದೆ ಎಂದು ಬಿಜೆಪಿ ಸಂಸದ ತಾಪಿರ್ ಗಾವೋ ಹೇಳಿದ್ದರು. ಇದಕ್ಕೆ ಉತ್ತರ ಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದರು.
"ಒಂಬತ್ತು ಮಾತುಕತೆಯಲ್ಲೂ ಬಿಕ್ಕಟ್ಟಿಗೆ ಅಂತ್ಯ ಸಿಕ್ಕಿಲ್ಲ"
ದೆಹಲಿ ಗಡಿಗಳಲ್ಲಿ ಸಾವಿರಾರು ರೈತರು ಸುಮಾರು ಎರಡು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದುವರೆಗೂ ಕೇಂದ್ರ ಹಾಗೂ ರೈತರ ನಡುವೆ ಒಂಬತ್ತು ಮಾತುಕತೆಗಳು ನಡೆದಿವೆ. ಆದರೂ ಈ ಬಿಕ್ಕಟ್ಟಿಗೆ ಅಂತ್ಯವಾಡಲು ಸಾಧ್ಯವಾಗಿಲ್ಲ. ಈಗ ಮತ್ತೆ ಹತ್ತನೇ ಮಾತುಕತೆಯನ್ನು ಮುಂದೂಡಿದೆ. ಕೇಂದ್ರ ಕೃಷಿ ಕಾಯ್ದೆಗಳನ್ನು ಹಿಂಪಡೆಯಲೇಬೇಕಿದೆ ಎಂದು ಆಗ್ರಹಿಸಿದರು.
ನವೆಂಬರ್ 26ರಿಂದಲೂ ಪ್ರತಿಭಟನೆ
ಕೇಂದ್ರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ 26ರಿಂದಲೂ ದೆಹಲಿ ಗಡಿಗಳಲ್ಲಿ ಸುಮಾರು 40 ರೈತ ಸಂಘಟನೆಯ ರೈತ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದುವೆರೆಗಿನ ಮಾತುಕತೆಗಳಲ್ಲಿ ರೈತರ ಪ್ರಮುಖ ಬೇಡಿಕೆಗಳಲ್ಲಿ ಒಮ್ಮತಕ್ಕೆ ಬರಲಾಗಿಲ್ಲ.