ರೈತರಿಗೆ ಸರ್ಕಾರವೇ ಕೊಟ್ಟ ಹಣವನ್ನು ಮತ್ಯಾರೋ ಕೇಳುವುದು ತಪ್ಪಲ್ಲವೇ?
ಕೊರೊನಾ ಸಂಕಷ್ಟದಿಂದ ನಾವೆಲ್ಲರೂ ಮನೆಯಲ್ಲಿ ಬಂಧಿಯಾಗಿದ್ದೇವೆ. ಭವಿಷ್ಯದ ಬಗ್ಗೆ ಎಲ್ಲ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರೂ ಚಿಂತೆಗೀಡಾಗಿದ್ದಾರೆ. ಪ್ರತೀ ದಿನ ಸಮಸ್ಯೆಗಳ ಜತೆಯಲ್ಲಿಯೇ ಒದ್ದಾಡುವ ರೈತ ಸಮುದಾಯವಂತೂ ಮತ್ತೂ ಸಂಕಷ್ಟದ ದಿನಗಳನ್ನು ಎದುರಿಸಲಿದೆ ಎಂಬುದಂತೂ ಪಕ್ಕಾ.
ಇಂಥ ಹೊತ್ತಲ್ಲಿ ಭಾರತ ಸರ್ಕಾರ 'ರೈತ ಸಮ್ಮಾನ್'ನ ಹೆಸರಲ್ಲಿ ರೈತರಿಗೆ ಚಿಕ್ಕಾಸು ಕೊಡುತ್ತಿದೆಯಷ್ಟೇ. ಇದರಿಂದ ತುಂಬಾ ಜನರಿಗೆ ಅನುಕೂಲವಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ - ಕೊರೊನಾ ವಿರುದ್ಧ ಹೋರಾಟಕ್ಕೆ ಸರ್ಕಾರಕ್ಕೆ ಹಣದ ಅಗತ್ಯವಿದೆ. ಪ್ರತಿ ಪ್ರಜೆಯೂ ಸರ್ಕಾರದ ಜತೆಗೆ ನಿಲ್ಲಬೇಕು, ಆರ್ಥಿಕವಾಗಿ ಕೈಜೋಡಿಸಬೇಕು ಎಂಬುದೆಲ್ಲವೂ ನಿಜ. ಆದರೆ ರೈತರಿಗೆ ಸರ್ಕಾರವೇ ಕೊಟ್ಟ ಹಣವನ್ನು 'ವಾಪಸ್ ಕೊಡಿ' ಎಂದು ಮತ್ಯಾರೋ ಕೇಳಿದರೆ ತಪ್ಪಾದೀತು.
ಸ್ವಯಂಪ್ರೇರಿತರಾಗಿ
ಬೆಳೆ
ನಾಶಪಡಿಸಿಕೊಂಡಲ್ಲಿ
ಪರಿಹಾರವಿಲ್ಲ:
ಬಿ.ಸಿ.ಪಾಟೀಲ್
ಸ್ವಯಂ ಸ್ಫೂರ್ತಿಯಿಂದರೆ ಕೊಟ್ಟರೆ ಸರಿ
ಸ್ವಯಂ ಸ್ಫೂರ್ತಿಯಿಂದ ವ್ಯಕ್ತಿಯೊಬ್ಬ ಕೊಟ್ಟರೆ ಒಪ್ಪಬಹುದು. ಆದರೆ ಬೇರೆಯವರು ಮನೆಮನೆ ತಿರುಗಿ, ಸಂಗ್ರಹಿಸುವುದು ತಪ್ಪಾಗುತ್ತದೆ. ಕಳೆದ ಕೆಲವು ದಿನಗಳಿಂದ ವಾಟ್ಸಾಪ್ ನಲ್ಲಿ ಈ ಬಗ್ಗೆ ಹರಿದಾಡುತ್ತಿರುವ ಮೆಸೇಜುಗಳನ್ನು ಗಮನಿಸಿದ್ದೇನೆ, ಭಾವುಕನಾಗಿದ್ದೇನೆ. ಸಾಮಾನ್ಯವಾಗಿ ರೈತರಿಗೆ ತುಸು ಜಾಸ್ತಿಯೇ ಭಾವುಕತೆ. ಮಾತಿಗೆ ಮರುಳಾಗುತ್ತಾರೆ. ಇದರಿಂದ ತೊಂದರೆಗೀಡಾಗುವವರೂ ಇವರೇ ಎಂಬುದು ಮಾತ್ರ ಎಷ್ಟೋ ಜನಕ್ಕೆ ಗೊತ್ತಿರಲಿಕ್ಕಿಲ್ಲ.
ಮೊದಲೇ ಕಷ್ಟದಲ್ಲಿದ್ದವರಿಂದ ಹಣ ಕೇಳುವುದು ಸರಿಯೇ?
ಅಷ್ಟಕ್ಕೂ ಪಿಎಂ ಕೇರ್ ಗೆ ಧನಸಹಾಯ ಮಾಡುವುದು ತಪ್ಪೆಂದು ನಾನು ಹೇಳುತ್ತಿಲ್ಲ. ಸ್ವತಃ ನಾನೂ ಕೊಟ್ಟವನೇ. ಆದರೆ ಮೊದಲೇ ಸಾಕಷ್ಟು ಸಂಕಷ್ಟಗಳನ್ನು ದಾಟಲು ಹೆಣಗಾಡುತ್ತಿರುವವರನ್ನು ಪಕ್ಷದ ಹೆಸರು ಹೇಳಿಕೊಂಡೋ, ಸ್ಥಳೀಯ ಆಡಳಿತದ ಹೆಸರು ಹೇಳಿಕೊಂಡೋ ಅಥವಾ ಇನ್ನೇನೋ ಹೇಳಿ ಹಣ ಸಂಗ್ರಹಿಸುವುದನ್ನು ಒಪ್ಪಲಾಗದು. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಅಲ್ಲ - ರಾಜ್ಯದ ಬೇರೆ ಬೇರೆ ಭಾಗಗಳಲ್ಲೂ ನಡೆಯುತ್ತಿದೆ.
ಬದ್ಧತೆ ತೋರಲು ಹಣವೇ ಬೇಕಿಲ್ಲ
ರೈತರ ಸಾಮಾಜಿಕ ಬದ್ಧತೆ ತೋರಿಸಲು ಹಣವೇ ಮಾನಕ ಅಲ್ಲ. ನಾಳೆ ರೈತ ಮಕಾಡೆ ಮಲಗಿದರೆ ಮೇಲೆತ್ತಲು ಯಾರೂ ಬರುವುದಿಲ್ಲ. ಸ್ವತಃ ರೈತರೇ ಇದನ್ನು ಅರ್ಥ ಮಾಡಿಕೊಳ್ಳಬೇಕು. ನಿಶ್ಚಿತ ಆದಾಯದ ಉದ್ಯೋಗಿಗಳಿಗೆ ಅವಶ್ಯವಾಗಿಯೂ ಸಂಬಳ ಕಡಿತ ಆಗಿಯೇ ಆಗುತ್ತದೆ. ಆದರೆ ಪೂರ್ಣ ಅನಿಶ್ಚಿತತೆಯ ಬದುಕಿನ ರೈತರಿಂದ ಭಾವನಾತ್ಮಕ ಒತ್ತಡ ಹೇರಿ ಹಣ ವಸೂಲಿ ಮಾಡುವುದು ತರವಲ್ಲ.
ಪರಿಹಾರನ್ನು ನೇರ ಹಾಕಬಹುದು
ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೇರವಾಗಿ ಧನಸಹಾಯ ಮಾಡುವುದಕ್ಕೆ ಪ್ರತಿಯೊಬ್ಬರಿಗೂ ಅವಕಾಶ ಇದೆ. ಇವತ್ತು ಬೇರೆಲ್ಲ ವಿಷಯಗಳಿಗೆ ಮೊಬೈಲ್ ಜಾಲಾಡುವ ನಮಗೆ ಇದೊಂದು ಹೊಸ ವಿಷಯವೇ ಅಲ್ಲ. ಹಾಗಿರುವಾಗ ಮನೆ ಮನೆ ತಿರುಗಿ 'ಕೊಡೋದಿದ್ರೆ ಕೊಡಿ, ಒತ್ತಾಯವಿಲ್ಲ' ಅನ್ನುವ ಬದಲು, ನೇರವಾಗಿ ಕಳುಹಿಸುವ ತಾಂತ್ರಿಕತೆಯ ಬಗ್ಗೆ ತಿಳಿವಳಿಕೆ ಮೂಡಿಸಬಹುದು. ಪ್ರತಿಯೊಬ್ಬರಿಗೂ ತಾನು ಸರ್ಕಾರದ ಜತೆ ನಿಂತೆ ಎಂಬ ಸಾರ್ಥಕ್ಯದ ಭಾವವೂ ಮೂಡುತ್ತದೆ. ಹಣ ಸದ್ಬಳಕೆಯೂ ಆಗುತ್ತದೆ.