ಬಡವರ ಬಂಧು ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಭಾವುಕ ಮಾತು
ಬೆಂಗಳೂರು, ನವೆಂಬರ್ 22: ಕೆಲವು ದಿನಗಳಿಂದ ತಮ್ಮ ವಿರುದ್ಧ ಪ್ರಕಟವಾದ ಆಕ್ರೋಶ ಹಾಗೂ ತಮ್ಮ ಮಾತಿನಿಂದ ಎದುರಿಸಬೇಕಾಗಿ ಬಂದ ಪ್ರತಿಭಟನೆಯಿಂದ ಮನನೊಂದು ಇಂದುಯಾ ಕುಮಾರಸ್ವಾಮಿ ಅವರು ಮತ್ತೆ ಭಾವುಕರಾಗಿ ಮಾತನಾಡಿದರು.
ಬಡವರ ಬಂಧು ಕಾರ್ಯಕ್ರಮ ಉದ್ಘಾಟನೆ ವೇಳೆ ಮಾತನಾಡಿದ ಕುಮಾರಸ್ವಾಮಿ ಅವರು, ನಾನು ಏನೇ ಮಾಡಿದರೂ ಹಳದಿ ಕಣ್ಣಿನಿಂದಲೇ ನೋಡಲಾಗುತ್ತಿದೆ. ನಾನು ಏನೂ ಮಾಡುವುದು, ಮಾತನಾಡುವುದು ತಪ್ಪಾ? ಎಂದು ಪ್ರಶ್ನೆ ಮಾಡಿದರು.
ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ಆರಂಭ, ಮಾಧ್ಯಮಗಳಿಗೆ ನಿರ್ಬಂಧ
ಯಾರ್ಯಾರು ನಮ್ಮನ್ನು ಹೇಗೆಲ್ಲಾ ಬಳಸಿಕೊಂಡಿದ್ದಾರೆ ಎಂಬುದು ನನಗೆ ಗೊತ್ತಿದೆ, ಅದರ ಬಗ್ಗೆ ಬಹಿರಂಗ ಚರ್ಚೆಗೂ ನಾನು ಸಿದ್ಧವಿದ್ದೇನೆ ಎಂದ ಅವರು, ಪರೋಕ್ಷವಾಗಿ ಯಡಿಯೂರಪ್ಪ ಹೇಳಿದ್ದ ಅಧಿಕಾರಕ್ಕಾಗಿ ಮನೆ ಬಾಗಿಲಿಗೆ ಬಂದಿದ್ದರು ಹೇಳಿಕೆಗೆ ಎದುರು ಪ್ರತಿಕ್ರಿಯೆ ನೀಡಿದರು.
ಎಷ್ಟು ಕಾಲ ಅಧಿಕಾರದಲ್ಲಿ ಇರುತ್ತೇನೆಯೋ ಗೊತ್ತಿಲ್ಲಾ, ಗೂಟಾ ಹೊಡೆದುಕೊಂಡು ಇರಲು ನಾನು ಬಂದಿಲ್ಲ ಮತ್ತು ಈ ಪದವಿ ಶಾಶ್ವತ ಎಂದೇನೂ ನಾನು ತಿಳಿದುಕೊಂಡಿಲ್ಲ. ಆದರೆ ಸಿಕ್ಕ ಅವಕಾಶದಲ್ಲಿ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುವ ಕಾರ್ಯ ಮಾಡುತ್ತಿದ್ದೇನೆ ಎಂದು ಅವರು ಭಾವುಕರಾಗಿ ನುಡಿದರು.
ಹಣೆಬರಹ ಇದ್ದಂತೆ ಆಗುತ್ತದೆ
ನನ್ನ ಹಣೆಯ ಬರಹದಲ್ಲಿ ಎಷ್ಟು ದಿನ ಅಧಿಕಾರದಲ್ಲಿ ಇರಬೇಕು ಎಂದು ಬರೆದಿದೆಯೋ ಅಷ್ಟು ದಿನ ಇರುತ್ತೇನೆ ಆದರೆ ಬದುಕಿರುವವರೆಗೂ ರೈತರಿಗಾಗಿ ದುಡಿಯುತ್ತೇನೆ ಉಸಿರು ಇರುವವರೆಗೆ ರೈತರ ಶ್ರೇಯೋಭಿವೃದ್ಧಿಗಾಗಿ ಹೋರಾಡುತ್ತೇನೆ ಎಂದು ಸಿಎಂ ಹೇಳಿದರು.
ಪತ್ರಿಕಾಗೋಷ್ಠಿಗಳಲ್ಲಿ ಮಾತನಾಡಲ್ಲ
ನಾನು ಮಾತನಾಡುವ ಮಾತನ್ನು ತಿರುಚಿ ಅಥವಾ ವೈಭವೀಕರಿಸಿ ತೋರಿಸಲಾಗುತ್ತಿದೆ. ಹಾಗಾಗಿ ಇನ್ನು ಮುಂದೆ ನಾನು ಸುದ್ದಿಗೋಷ್ಠಿಗಳಲ್ಲಿ ಮಾತನಾಡುವುದೇ ಇಲ್ಲ. ಇನ್ನು ಮುಂದೆ ಏನಿದ್ದರೂ ಸಮಾವೇಶಗಳ ವೇದಿಕೆಗಳಲ್ಲಿ ಅಷ್ಟೆ ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಬಡ ವ್ಯಾಪಾರಸ್ಥರಿಗಾಗಿ ಬಡವರ ಬಂಧು ಯೋಜನೆ ಆರಂಭ
ವಿಲನ್ನಂತೆ ಬಿಂಬಿಸಲಾಗುತ್ತಿದೆ
ಕಬ್ಬು ಬೆಳೆಗಾರರ ವಿಚಾರದಲ್ಲಿ ನನ್ನನ್ನು ವಿಲನ್ ನಂತೆ ಬಿಂಬಿಸಲಾಗುತ್ತಿದೆ. ನಾನು ಆದರೆ ಅಧಿಕಾರಕ್ಕೆ ಬಂದಿರುವುದು ಈಗ ಕಬ್ಬು ಬೆಳೆಗಾರರ ಬಾಕಿ ಈಗಿನದ್ದಲ್ಲ ಬಹಳ ಹಳೆಯದ್ದು ಆದರೂ ನಾನು ಹಗಲು ರಾತ್ರಿ ಒಂದು ಮಾಡಿ, ಸಭೆಗಳನ್ನು ಮಾಡಿ ಬೆಳೆಗಾರರ ಸಮಸ್ಯೆ ಬಗೆಹರಿಸಲು ಯತ್ನಿಸುತ್ತಿದ್ದೇನೆ ಎಂದು ಅವರು ಹೇಳಿದರು.
ಬಿಜೆಪಿಯವರು ಅಧಿವೇಶನಕ್ಕೆ ಬರಲಿ
ಬಿಜೆಪಿಯವರು ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಬುರುಡೆ ಬಿಡುತ್ತಿದ್ದಾನೆ ಎನ್ನುತ್ತಿದ್ದಾರೆ. ಆದರೆ ನನ್ನ ಬಳಿ ನಾನು ಮಾಡಿದ ಕೆಲಸಗಳಿಗೆ ದಾಖಲೆಗಳಿವೆ. ಬೆಳಗಾವಿ ಅಧಿವೇಶನಕ್ಕೆ ಬರಲಿ ಅವರ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದರು.