ಅಭಿಪ್ರಾಯ ಬದಲಾಗಬಹುದು: ಕೃಷಿ ಕಾಯ್ದೆ ಸಮಿತಿ ಆಯ್ಕೆಗೆ ಸಿಜೆಐ ಸಮರ್ಥನೆ
ನವದೆಹಲಿ, ಜನವರಿ 19: ಮೂರು ಕೃಷಿ ಕಾಯ್ದೆಗಳ ಸಾಧಕ-ಬಾದಕಗಳ ಕುರಿತು ಸಮಾಲೋಚನೆ ನಡೆಸಲು ಸುಪ್ರೀಂಕೋರ್ಟ್ ನೇಮಿಸಿರುವ ಸಮಿತಿಯಿಂದ ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ಅಧ್ಯಕ್ಷ ಭೂಪಿಂದರ್ ಸಿಂಗ್ ಮನ್ ಹಿಂದೆ ಸರಿದ ಬಳಿಕ ಹೇಳಿಕೆ ನೀಡಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ, ಸಮಿತಿ ಸದಸ್ಯರು ತಮ್ಮ ಆಯ್ಕೆಗೂ ಮುನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಅವರ ಅಭಿಪ್ರಾಯಗಳು ಬದಲಾಗಬಹುದು ಎಂದು ಹೇಳಿದ್ದಾರೆ.
ನ್ಯಾಯಾಲಯ ರಚಿಸಿದ ಸಮಿತಿಗೆ ತಮ್ಮನ್ನು ಸೇರ್ಪಡೆಗೊಳಿಸಿದ ಎರಡು ದಿನಗಳ ಬಳಿಕ ಭೂಪಿಂದರ್ ಸಿಂಗ್ ಮನ್ ಅವರು ಅದರಿಂದ ಹಿಂದಕ್ಕೆ ಸರಿದಿದ್ದರು. 'ನಾನು ನನ್ನ ರೈತರು ಮತ್ತು ಪಂಜಾಬ್ ಜತೆಗೆ ಯಾವಾಗಲೂ ಇರುತ್ತೇನೆ' ಎಂದು ಹೇಳಿದ್ದರು. ಈ ಹಿಂದೆ ಕೃಷಿ ಕಾಯ್ದೆಗಳ ಪರ ನಿಲುವು ಪ್ರದರ್ಶಿಸಿದ್ದ ಮನ್ ವಿರುದ್ಧ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ಅವರು ಸಮಿತಿಯಿಂದ ಹೊರಗುಳಿಯಲು ತೀರ್ಮಾನಿಸಿದ್ದರು.
ಗಣರಾಜ್ಯೋತ್ಸವದಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿ; ಪೊಲೀಸರ ನಿರ್ಧಾರಕ್ಕೆ ಬಿಟ್ಟ ಕೋರ್ಟ್
ಯಾರ ಹೆಸರನ್ನೂ ಉಲ್ಲೇಖಿಸದ ಸಿಜೆಐ ಎಸ್ಎ ಬೊಬ್ಡೆ, 'ಕಾನೂನನ್ನು ಅರ್ಥ ಮಾಡಿಕೊಳ್ಳುವಲ್ಲಿ ಕೆಲವು ಗೊಂದಲಗಳಿವೆ. ಸಮಿತಿಯ ಭಾಗವಾಗುವುದಕ್ಕೂ ಮುನ್ನ ವ್ಯಕ್ತಿ ಹೊಂದಿದ್ದ ಅಭಿಪ್ರಾಯವು ಬಳಿಕ ಬದಲಾಗಬಹುದು. ಅಂತಹ ಸದಸ್ಯರು ಸಮಿತಿಯ ಭಾಗವಾಗಬಾರದು ಎನ್ನಲು ಸಾಧ್ಯವಿಲ್ಲ' ಎಂದಿದ್ದಾರೆ.
ಕೃಷಿ ಕಾಯ್ದೆ: ಅಮಿತ್ ಶಾ ಭರವಸೆಗೆ ಸೊಪ್ಪು ಹಾಕದ ರೈತರು
'ಒಬ್ಬ ವ್ಯಕ್ತಿ ಒಂದು ವಿಚಾರದ ಬಗ್ಗೆ ತನ್ನ ದೃಷ್ಟಿಕೋನಗಳನ್ನು ಹಂಚಿಕೊಂಡ ಮಾತ್ರಕ್ಕೆ, ಆತ ಸಮಿತಿಯ ಸದಸ್ಯನಾಗಲು ಅನರ್ಹನಾಗುವುದಿಲ್ಲ. ಸಾಮಾನ್ಯವಾಗಿ ಸಮಿತಿ ರಚನೆಯ ಕುರಿತು ವಿಚಿತ್ರವಾದ ಗ್ರಹಿಕೆ ಕೊರತೆ ಇರುತ್ತದೆ. ಅವರೆಲ್ಲ ನ್ಯಾಯಾಧೀಶರಲ್ಲ' ಎಂದು ಸಿಜೆಐ, ಸಮಿತಿಯ ರಚನೆಯನ್ನು ಸಮರ್ಥಿಸಿಕೊಂಡಿದ್ದಾರೆ.