ಚಿತ್ರದುರ್ಗ: ಲಾಕ್ಡೌನ್ ಪರಿಣಾಮದಿಂದ ಹೂ ಬೆಳೆಗಾರರಿಗೆ ಭಾರೀ ನಷ್ಟ
ಚಿತ್ರದುರ್ಗ, ಮೇ 19: ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆಯಿಂದ ಚಿತ್ರದುರ್ಗ ಜಿಲ್ಲೆಯ ಹೂವು ಬೆಳೆಗಾರರು ಕೂಡ ಕಂಗಾಲಾಗಿದ್ದಾರೆ. ತಾವು ಬೆಳೆದಿರುವ ಸುಗಂಧರಾಜ, ಸೇವಂತಿ, ಮಲ್ಲೆ ಹೂ, ಗುಲಾಬಿ, ಚಿಂತಾಮಣಿ ಸೇರಿದಂತೆ ವಿವಿಧ ಬಗೆಯ ಹೂಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಕಣ್ಣೀರು ಹಾಕುತ್ತಿದ್ದಾರೆ.
ಹಿರಿಯೂರು ತಾಲ್ಲೂಕಿನಲ್ಲಿ ಸಾಕಷ್ಟು ಹೂ ಬೆಳೆಗಾರಿದ್ದಾರೆ. ತಾಲೂಕಿನ ತವಂದಿ ಗ್ರಾಮದ ಹೂ ಬೆಳೆಗಾರ ಪ್ರಶಾಂತ್ ಅವರು ಪ್ರತಿವರ್ಷ ಮಲ್ಲೆ ಹೂ ಬೆಳೆದು ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದರು. ಇದೀಗ ಲಾಕ್ಡೌನ್ ಎಫೆಕ್ಟ್ ನಿಂದ ಹೂ ಕೇಳುವವರಿಲ್ಲದಂತಾಗಿದೆ. ಪ್ರತಿನಿತ್ಯ 6 ರಿಂದ 8 ಕೆಜಿ ಹೂವು ಬರುತ್ತಿತ್ತು. ಜಿಲ್ಲೆಯಲ್ಲಿ ಯಾವುದೇ ಶುಭ ಸಮಾರಂಭಗಳು, ದೇವರ ಉತ್ಸವಗಳು, ದೇವಾಲಯದ ಪೂಜೆ ಪುನಸ್ಕಾರಗಳು ಇವೆಲ್ಲವೂ ಬಂದ್ ಆಗಿರುವುದರಿಂದ ಹೂ ಕೇಳುವವರಿಲ್ಲ, ಕೊಳ್ಳುವವರೂ ಇಲ್ಲದಂತಾಗಿದೆ.
ಹೂವಿನ ಬೆಳೆಯನ್ನು ನಂಬಿಕೊಂಡು ಜೀವನ
ಹಿರಿಯೂರು ಮಾರುಕಟ್ಟೆಯಲ್ಲಿ ಮಲ್ಲೆ ಹೂವಿನ ದರ 5 ರಿಂದ 10 ರೂ ಆಗಿದೆ. 100 ರೂಪಾಯಿಗೆ 13 ರಿಂದ 17 ಮಾರು ಅಳೆಯಲಾಗುತ್ತದೆ. ಇದರಿಂದ ಹೂ ಬಿಡಿಸುವ ಕೂಲಿ, ಕಟ್ಟುವವರಿಗೆ, ಕಮೀಷನ್ ಸೇರಿದಂತೆ ನಮಗೆ ಏನು ಸಿಗುವುದಿಲ್ಲ, ಹೂವಿನ ಬೆಳೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದೆವೆ. ಈಗೆ ಲಾಕ್ಡೌನ್ ಮುಂದುವರೆದರೆ ಮುಂದೆ ಜೀವನ ತುಂಬಾ ಕಷ್ಟಕರವಾಗುತ್ತದೆ. ಸರ್ಕಾರದಿಂದ ಕೊಡುವ 3-5 ಸಾವಿರ ಪ್ಯಾಕೇಜ್ ಯಾವುದಕ್ಕೂ ಸಾಲಲ್ಲ, ಮೂರು ಸಾವಿರ ಪ್ಯಾಕೇಜ್ ಪಡಿಯಬೇಕೆಂದರೆ ಅರ್ಜಿ ಹಾಕುವುದಕ್ಕೆ 500 ರೂ. ಖರ್ಚು ಆಗುತ್ತದೆ. ನಾವು ವಾರದಲ್ಲೇ 5 ಸಾವಿರಕ್ಕಿಂತ ಹೆಚ್ಚು ಆದಾಯ ಗಳಿಸುತ್ತಿದ್ವಿ ಎಂದು ಹೂವಯ ಬೆಳೆಗಾರ ಪ್ರಶಾಂತ್ ಬೇಸರ ವ್ಯಕ್ತಪಡಿಸಿದರು.
ಕೊರೊನಾ ಲಾಕ್ಡೌನ್ ತಣ್ಣೀರೆರಚಿದೆ
ಚಿತ್ರದುರ್ಗ ತಾಲೂಕಿನ ಹಂಪಯ್ಯನಮಾಳಿಗೆ ಗ್ರಾಮದ ಸತೀಶ್ ರೆಡ್ಡಿ ಎಂಬ ರೈತ, ಸಾವಿರಾರು ರೂಪಾಯಿ ಖರ್ಚು ಮಾಡಿ ಮುಕ್ಕಾಲು ಎಕರೆಯಲ್ಲಿ ಸೇವಂತಿಗೆ ಹೂವು ಬೆಳೆದಿದ್ದಾರೆ. ಫಸಲು ತುಂಬಾ ಚೆನ್ನಾಗಿ ಬಂದಿದೆ. ಗಿಡದ ತುಂಬೆಲ್ಲ ಹೂ ಬೆಳೆದು ನಿಂತಿದೆ. ಆದರೆ ಬೆಳೆದು ನಿಂತಿರುವ ಹೂವನ್ನು ಕೇಳುವವರೇ ಇಲ್ಲದಂತಾಗಿದೆ. ಒಂದಿಷ್ಟು ಆದಾಯ ಬರುವ ನಿರೀಕ್ಷೆಯಲ್ಲಿದ್ದ ಸತೀಶ್ ರೆಡ್ಡಿಯ ಜೀವನಕ್ಕೆ ಕೊರೊನಾ ಲಾಕ್ಡೌನ್ತಣ್ಣೀರೆರಚಿದೆ.
ಹಿರಿಯೂರು ಮಾರುಕಟ್ಟೆಯಲ್ಲಿ ಮಾರಾಟ
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ತೇಕಲವಟ್ಟಿ ಗೊಲ್ಲರಹಟ್ಟಿ ಗ್ರಾಮದ ಬಹುತೇಕ 70ಕ್ಕೂ ಹೆಚ್ಚು ಕುಟುಂಬಗಳು ಜೀವನಕ್ಕೆ ಸುಗಂಧರಾಜ ಹೂ ಬೆಳೆ ಅವಲಂಬಿಸಿಕೊಂಡಿದ್ದಾರೆ. ಪ್ರತಿನಿತ್ಯ 25-30 ಕ್ವಿಂಟಾಲ್ ಸುಗಂಧರಾಜ ಹೂ ಬರುತ್ತದೆ. ದಾವಣಗೆರೆ, ಚಿತ್ರದುರ್ಗ, ತುಮಕೂರು, ಹಿರಿಯೂರು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈಗಿನ ಬೆಲೆ ಕೆಜಿಗೆ 150-200 ರೂಪಾಯಿ ಇದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮಾರುಕಟ್ಟೆಗೆ ಕೊಂಡೊಯ್ದ ಹೂ, ಗ್ರಾಮಕ್ಕೆ ವಾಪಸ್ ಬರುತ್ತಿದ್ದರಿಂದ ರಸ್ತೆಗೆ, ಮರದ ಬುಡಕ್ಕೆ ಸುರಿಯಲಾಗಿದೆ.
ಹೂವಿನ ಬೇಡಿಕೆ ಕೂಡ ಕಡಿಮೆಯಾಗಿದೆ
ಬಾಡಿಗೆ, ಕೂಲಿ ಎಲ್ಲ ತಲೆಮೇಲೆ ಬರುತ್ತದೆ ಏನು ಮಾಡಬೇಕು ಅಂತ ಗೊತ್ತಾಗ್ಲಿಲ್ಲ ಸರ್. ಜೀವನ ಸಾಗಿಸಲು ಆದಾಯದ ನಿರೀಕ್ಷೆಯಲ್ಲಿದ್ದ ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿಯಲ್ಲಿವೆ. ಫಸಲಿಗೆ ಬರುತ್ತಿದ್ದಂತೆ ಲಾಕ್ಡೌನ್ಘೋಷಣೆಯಾಗಿದೆ. ಹೀಗಾಗಿ ಸದ್ಯ ಗಿಡದಲ್ಲಿ ಅರಳಿ ಹಾಳಾಗುತ್ತಿದ್ದು, ಇತ್ತ ದಲ್ಲಾಳಿಗಳು ಸಹ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಆದರೆ ಈ ಹಣ ವಾಹನದ ಬಾಡಿಗೆಯೂ ಬಾರದ ಹಿನ್ನೆಲೆಯಲ್ಲಿ ಬೆಳೆಗಾರರಿಗೆ ದಿಕ್ಕು ತೊಚದಂತೆ ಆಗಿದೆ ಎಂದು ರೈತ ರಾಮಚಂದ್ರ ತೇಕಲವಟ್ಟಿ ಅಸಹಾಯಕತೆ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ ಅಂದಾಜು ಲಕ್ಷ ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದ ಹೂ ಬೆಳೆಗಾರರಿಗೆ ಲಾಕ್ಡೌನ್ನಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಮದುವೆ, ಸಭೆ-ಸಮಾರಂಭಗಳು ನಡೆಯದ ಕಾರಣ ಹೂವಿನ ಬೇಡಿಕೆ ಕೂಡ ಕಡಿಮೆಯಾಗಿದೆ. ಮುಂದೆಯೂ ಹೀಗೆ ಮುಂದುವರೆದರೆ ಏನು ಮಾಡಬೇಕು ಎಂದು ಚಿತ್ರದುರ್ಗದ ಹೂ ಬೆಳೆಗಾರರು ತಮ್ಮ ನೋವು ತೋಡಿಕೊಂಡಿದ್ದಾರೆ.