ಚಿತ್ರದುರ್ಗದಲ್ಲಿ ಹೂವಿನ ಬೆಳೆಗೆ 'ನುಸಿ ಹುಳಗಳ ಕಾಟ'; ಸಂಕಷ್ಟದಲ್ಲಿ ರೈತರು
ಚಿತ್ರದುರ್ಗ, ಏಪ್ರಿಲ್ 2: ಹೂವಿನ ಬೆಳೆ ಚಿತ್ರದುರ್ಗ ಜಿಲ್ಲೆಯ ರೈತರ ಜೀವನಾಡಿ, ಸಾವಿರಾರು ರೈತರು ಜೀವನೋಪಾಯಕ್ಕಾಗಿ ಪುಷ್ಪ ಕೃಷಿಯನ್ನೇ ತಮ್ಮ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದಾರೆ.
ಇದನ್ನೇ ಲಾಭ ಮಾಡಿಕೊಂಡಿರುವ ನಕಲಿ ಔಷಧಿ ಮಾರಾಟ ಜಾಲ, ನುಸಿ ಕೀಟಗಳಿಗೆ ಉತ್ತಮ ಔಷಧಿ ಕೊಡುತ್ತೇವೆ ಎಂದು ರೈತರನ್ನು ಮೋಸ ಮಾಡಲು ಆರಂಭಿಸಿವೆ. ನಕಲಿ ಔಷಧಿ ದಂಧೆಗೆ ರೋಸಿಹೋಗಿರುವ ರೈತರು ನೋವು ತೋಡಿಕೊಂಡಿದ್ದಾರೆ.
ವಾಣಿವಿಲಾಸ ಜಲಾಶಯದ ನೀರಿಗೆ ರೈತ ಸಂಘದ ನಡುವೆ ಜಿದ್ದಾಜಿದ್ದಿ!
ಬೇಸಿಗೆ ಕಾಲದಲ್ಲೂ ಹೊಲದಲ್ಲಿ ಸಮೃದ್ಧಿಯಾಗಿ ಬೆಳೆದು ನಿಂತಿರುವ ಹೂವಿನ ಬೆಳೆಯನ್ನು ರೈತರು ಕಿತ್ತು ಹಾಕುತ್ತಿದ್ದಾರೆ. ಹೂವಿನ ಬೆಳೆಗೆ ಸಿಂಪಡಿಸುವ ರಾಶಿ-ರಾಶಿ ಔಷಧಿಗಳಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಪುಷ್ಪ ಕೃಷಿಯನ್ನು ನಂಬಿಕೊಂಡಿದ್ದ ಅನ್ನದಾತರು ಬೆಂಕಿಯಿಟ್ಟು ರೋಷ ಹೊರ ಹಾಕಿದರು.
ಹೂವಿನ ತೋಟಗಳನ್ನು ಆವರಿಸಿಕೊಳ್ಳುತ್ತಿರುವ ಕೀಟಗಳು
ಪುಷ್ಪ ಕೃಷಿಯನ್ನೇ ತಮ್ಮ ಜೀವನದ ಅಂಗವಾಗಿಸಿಕೊಂಡಿದ್ದ ಚಿತ್ರದುರ್ಗದ ಹುಣಸೇಕಟ್ಟೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರ ಬೆಳೆಗಳಿಗೆ "ನುಸಿ ಹುಳುಗಳ ಕಾಟ' ಮಿತಿಮೀರಿದೆ. ಲಕ್ಷ ಲಕ್ಷ ಖರ್ಚು ಮಾಡಿ ಬೆಳೆದ ಬೆಳೆ ಮೊಗ್ಗಿನಲ್ಲೇ ನುಸಿ ಹುಳುಗಳ ಆರ್ಭಟಕ್ಕೆ ಕಮರಿ ಹೋಗುತ್ತಿವೆ. ಕೀಟಗಳ ಆರ್ಭಟಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಬಗೆಬಗೆಯ ಔಷಧಿ ಸಿಂಪಡಿಸಿದರೆ ಕಡಿಮೆಯಾಗುವ ಬದಲು ಅಕ್ಕಪಕ್ಕದ ಹೂವಿನ ತೋಟಗಳನ್ನು ಆವರಿಸಿಕೊಳ್ಳುತ್ತಿರುವ ಕೀಟಗಳು, ಹೂಗಳನ್ನು ಬಿಡುವ ಮೊಗ್ಗಿನಲ್ಲೇ ಔಷಧಿ ಸಿಂಪಡಿಸಿದರೂ ವಿಪರೀತ ಕೀಟಬಾಧೆಗೆ ಅರಳುವ ಮುನ್ನವೇ ಹೂವುಗಳು ಕಮರಿ ಹೋಗುತ್ತಿವೆ. ಇದರಿಂದ ಸಿಟ್ಟಿಗೆದ್ದ ರೈತರು ನಕಲಿ ಔಷಧಿಗಳನ್ನು ಬೆಂಕಿಗೆ ಹಾಕಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರಿಗೆ ನಕಲಿ ಔಷಧಿ ವಿತರಣೆ
ಇನ್ನು ಚಿತ್ರದುರ್ಗ ಜಿಲ್ಲೆಯಾದ್ಯಂತ ಪುಷ್ಪ ಕೃಷಿಗೆ ಆವರಿಸಿರುವ ನುಸಿ ಕೀಟ ಬಾಧೆಯನ್ನು ಬಂಡವಾಳ ಮಾಡಿಕೊಂಡಿರುವ ನಕಲಿ ಔಷಧಿ ಅಂಗಡಿಗಳು, ರೈತರಿಗೆ ನಕಲಿ ಔಷಧಿಯನ್ನು ವಿತರಣೆ ಮಾಡುತ್ತಿರುವ ಬಗ್ಗೆ ಗಂಭೀರವಾಗಿ ಆರೋಪಿಸಿದ್ದಾರೆ. ಈಗಾಗಲೇ ಸರ್ಕಾರ ಹಲವು ಕಂಪನಿಗಳ ಔಷಧಿಗಳನ್ನು ಬ್ಯಾನ್ ಮಾಡಲಾಗಿದೆ.
ಬೆಳೆ ಮಾತ್ರ ರೈತನ ಕೈಗೆ ಸಿಗುತ್ತಿಲ್ಲ
ಆದರೆ ಕಾಳಸಂತೆಯಲ್ಲಿ ಮುಗ್ಧ ರೈತರ ಕಣ್ಣಿಗೆ ಮಣ್ಣೆರಚಿ ಯಾಮಾರಿಸುತ್ತಿದ್ದಾರೆ ಅನ್ನುವ ಅಂಶಗಳು ಬೆಳಕಿಗೆ ಬರುತ್ತಿದೆ. ಕನಕಾಂಬರ, ಸೇವಂತಿಗೆ, ಚೆಂಡು ಹೂವುಗಳನ್ನು ಬೆಳೆದು ರೈತರು ಕೈ ಸುಟ್ಟುಕೊಳ್ಳುತ್ತಿದ್ದಾರೆ. ಸಾವಿರಾರು ರೂಪಾಯಿ ಔಷಧಿ ಖರೀದಿಸಿ ಸಿಂಪಡಣೆ ಮಾಡಿದರೂ ಬೆಳೆ ಮಾತ್ರ ರೈತನ ಕೈಗೆ ಸಿಗದಿರುವುದು ರೈತರ ಕಣ್ಣೀರಿಗೆ ಕಾರಣವಾಗಿದೆ.
ರೈತರ ಆಕ್ರೋಶದ ಕಟ್ಟೆ ಹೊಡೆಯುವಂತೆ ಮಾಡಿದೆ
ಒಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ನಕಲಿ ಔಷಧಿ ಮಾರಾಟ ಜಾಲಕ್ಕೆ ಸಿಲುಕಿರುವ ಅನ್ನದಾತರು ಅತ್ತ ಅಸಲಿ ಔಷಧಿ ಸಿಗದೆ, ಇತ್ತ ಬೆಳೆಯೂ ಸಿಗದೆ ತ್ರಿಶಂಕು ಸ್ಥಿತಿಗೆ ತಲುಪಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಕೃಷಿ ಅಧಿಕಾರಿ ಸೇರಿದಂತೆ ಹಲವರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಹೇಳುತ್ತಾರೆ. ಬೆಳೆಗಳಿಗೆ ತಗಲುವ ಕೀಟಬಾಧೆಗೆ ಕ್ರಮ ಕೈಗೊಳ್ಳಬೇಕಾದ ಕೆವಿಕೆ, ಚಿತ್ರದುರ್ಗದ ಕೃಷಿ ವಿಜ್ಞಾನ ಕೇಂದ್ರಗಳು ಗಮನ ಹರಿಸದಿರುವುದು ರೈತರ ಆಕ್ರೋಶದ ಕಟ್ಟೆ ಹೊಡೆಯುವಂತೆ ಮಾಡಿದೆ. ಈಗಲಾದರೂ ಸಂಬಂಧಪಟ್ಟವರು ರೈತರ ಸಮಸ್ಯೆ ಆಲಿಸುತ್ತಾರಾ ಹೇಗೆ ಎಂಬುದನ್ನು ಕಾದುನೋಡಬೇಕಿದೆ.