ಗುತ್ತಿಗೆ ಜಮೀನಿನಲ್ಲಿ ಟೊಮೆಟೊ ಬೆಳೆದ ರೈತ; ಸ್ವಂತ ಜಮೀನು ಮಾರಿ ಸಾಲ ತೀರಿಸಿದ
ಚಿತ್ರದುರ್ಗ, ಜೂನ್ 4: ಹುಟ್ಟೂರಿನಿಂದ ಮತ್ತೊಂದು ಊರಿಗೆ ಬಂದ ರೈತನೊಬ್ಬ ಸುಮಾರು 25 ಎಕರೆ ಜಮೀನು ಗುತ್ತಿಗೆ ಪಡೆದು ಅದರಲ್ಲಿ 13 ಎಕರೆ ಹೊಲದಲ್ಲಿ ಟೊಮೆಟೊ ಬೆಳೆದು, ಅದರ ಸಾಲ ತೀರಿಸಲು ಸ್ವಂತ ಜಮೀನು ಮಾರಿದ ಘಟನೆಯೊಂದು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ದೇಶದಲ್ಲೇ ಎರಡನೇ ಮಾರುಕಟ್ಟೆ ಎಂದು ಕರೆಸಿಕೊಳ್ಳುವ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಟೊಮೆಟೊ ಕೊಂಡೊಯ್ದುರೂ, ನಿರೀಕ್ಷಿತ ಮಟ್ಟದ ಬೆಲೆ ಸಿಗದೆ ರೈತನೊಬ್ಬ ಪೇಚಿಗೆ ಸಿಲುಕಿದ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಆಲೂರು ಗ್ರಾಮದಲ್ಲಿ ನಡೆದಿದೆ.
ಸ್ವಂತ ಜಮೀನಿನಲ್ಲಿಯೂ ಟೊಮೆಟೊ, ಈರುಳ್ಳಿ ಬೆಳೆ
ಮೂಲತಃ ಕೊವೇರಹಟ್ಟಿಯ ರೈತ ಶಿವಣ್ಣನು ಆಲೂರು ಗ್ರಾಮದಲ್ಲಿ 1.25 ಲಕ್ಷಕ್ಕೆ 25 ಎಕರೆ ಜಮೀನು ಗುತ್ತಿಗೆ ಪಡೆದು ಹನ್ನೆರಡು ಲಕ್ಷ ರೂಪಾಯಿ ಖರ್ಚು ಮಾಡಿ ಟೊಮೆಟೊ ಬೆಳೆ ಹಾಗೂ ಐದು ಲಕ್ಷ ರೂಪಾಯಿ ಖರ್ಚು ಮಾಡಿ 12 ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದಕ್ಕೆ, ತನ್ನ ಸ್ವಂತ 20 ಎಕರೆ ಜಮೀನು ಮಾರಾಟ ಮಾಡಿ ಸಾಲ ತೀರಿಸಿ ಮರ್ಯಾದೆ ಉಳಿಸಿಕೊಂಡಿದ್ದಾನೆ.
ಹಿರಿಯೂರು ತಾಲ್ಲೂಕಿನ ಕೊವೇರಹಟ್ಟಿಯ ಶಿವಣ್ಣ ಎಂಬ ರೈತನು ತಮ್ಮ ಊರಿನ 35 ಎಕರೆಯಲ್ಲಿ ಟೊಮೆಟೊ, ಈರುಳ್ಳಿ ಬಿತ್ತನೆ ಮಾಡಿದ್ದರ ಜೊತೆಗೆ ಆಲೂರಿನಲ್ಲಿ 25 ಎಕರೆ ಜಮೀನು ಗುತ್ತಿಗೆ ಪಡೆದು ಅಲ್ಲಿಯೂ ಟೊಮೆಟೊ, ಈರುಳ್ಳಿ ಬೆಳೆದಿದ್ದರು. ಮಹಾಮಾರಿ ಕೊರೊನಾ ಸೋಂಕಿನಿಂದ ಲಾಕ್ಡೌನ್ ವಿಧಿಸಲಾಯಿತು. ಸಂಕಷ್ಟಕ್ಕೆ ಸಿಲುಕಿದ ರೈತನ ಬೆಳೆ ಸಂಪೂರ್ಣ ಹಾಳಾಗುವಂತೆ ಮಾಡಿತು. ರೈತ ಶಿವಣ್ಣ ಮಾಡಿದ ಸಾಲ ತೀರಿಸಲು ತನ್ನ 20 ಎಕರೆ ಜಮೀನು ಮಾರಾಟ ಮಾಡಿ ನೋವು ಅನುಭವಿಸುತ್ತಿದ್ದಾನೆ.
ಲಾಕ್ಡೌನ್ ಕಣ್ಣಲ್ಲಿ ಕಣ್ಣೀರು ತರಿಸಿದೆ
25 ಎಕರೆ ಜಮೀನು ಗುತ್ತಿಗೆ ಪಡೆದು, ಅದರಲ್ಲಿ 13 ಎಕರೆ ಹೊಲದಲ್ಲಿ ಐದು ಲಕ್ಷ ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆ ಬೆಳೆದರೆ, 2.5 ಲಕ್ಷ ರೂ. ಆದಾಯ ಬಂದಿತ್ತು. ಉಳಿದ 12 ಎಕರೆಯಲ್ಲಿ ಟೊಮೆಟೊ ಬೆಳೆದು ಒಂದೆರಡು ಕಾಸು ಆದಾಯ ಪಡೆಯೋಣ ಎಂದು ಖುಷಿಯಲ್ಲಿ ಚಳ್ಳಕೆರೆಯಿಂದ 448 ತಳಿಯ ಟೊಮೆಟೊ ಸಸಿಗಳನ್ನು 50 ಪೈಸೆಯಂತೆ 22 ಸಾವಿರ ಸಸಿ ನಾಟಿ ಮಾಡಲಾಯಿತು.
ಟೊಮೆಟೊ ಬಳ್ಳಿ ನೆಲಕ್ಕೆ ಬಿಳದಿರಲಿ ಎಂದು ಗಿಡಕ್ಕೆ ಕೋಲು ನಿಲ್ಲಿಸಿ, ದಾರ, ತಂತಿ ಕಟ್ಟಿ ಪಕ್ಕದ ಹೊಲದವರಿಂದ ನೀರು ಬಿಡಿಸಿಕೊಳ್ಳುವುದರ ಜೊತೆಗೆ ಕೋಳಿ ಗೊಬ್ಬರ ಹಾಕಿದ್ದರಿಂದ ಒಂದೊಂದು ಗಿಡದಲ್ಲಿ 3-5 ಕೆಜಿ ಹಣ್ಣುಗಳು ಬಂದಿದ್ದನ್ನು ನೋಡಲು ಎರಡು ಕಣ್ಣುಗಳು ಸಾಲದರ ಜೊತೆಗೆ ರೈತನ ಸಂತೋಷಕ್ಕೆ ಪಾರವೇ ಇಲ್ಲದಂತಾಗಿತ್ತು. ಉತ್ತಮ ಇಳುವರಿ ಬಂದಿದ್ದನ್ನು ನೋಡಿ ರೈತನ ಮನಸ್ಸಿಗೆ ತುಂಬಾ ಆನಂದವಾಯಿತು. ಲಾಭ ಕಾಣುವ ನಿರೀಕ್ಷೆಯಲ್ಲಿದ್ದ ಬೆಳೆಗಾರನ ಮನಸ್ಸಿಗೆ ಲಾಕ್ಡೌನ್ ಕಣ್ಣಲ್ಲಿ ಕಣ್ಣೀರು ತರಿಸಿದೆ ಎನ್ನುತ್ತಾರೆ ರೈತ ಶಿವಣ್ಣ.
ಒಂದು ಬಾಕ್ಸ್ಗೆ 30-40 ರೂಪಾಯಿ
"ದೂರವಾಣಿ ಮೂಲಕ ಒನ್ಇಂಡಿಯಾ ಕನ್ನಡ ಪ್ರತಿನಿಧಿ ಜೊತೆ ಮಾತನಾಡಿದ ರೈತ ಶಿವಣ್ಣ, ""ಸರ್ 25 ಎಕರೆ ಜಮೀನನ್ನು 1 ಲಕ್ಷ 25 ಸಾವಿರ ಕೊಟ್ಟು ಗುತ್ತಿಗೆ ಪಡೆದು, 13 ಎಕರೆಯಲ್ಲಿ ಕಳೆ, ಗೊಬ್ಬರ, ಡ್ರಿಪ್, ಮೋಟಾರು, ಪಂಪ್, ಪೈಪ್ ಇತರೆ ಸೇರಿದಂತೆ ಸಾಲ ಮಾಡಿ ಸುಮಾರು 10-12 ಲಕ್ಷ ರೂಪಾಯಿ ಖರ್ಚು ಮಾಡಿ ಟೊಮೆಟೊ ಬೆಳೆದಿದ್ವಿ, ಫಸಲು ಚೆನ್ನಾಗಿ ಬಂದಿತ್ತು. ನೋಡಲು ಕಣ್ಣುಗಳೇ ಸಾಲದಾಗಿತ್ತು. ಪ್ರತಿದಿನ 1000-1500 ಬಾಕ್ಸ್ ಹಣ್ಣುಗಳನ್ನು ಹಿರಿಯೂರು, ಚಿತ್ರದುರ್ಗ ಜಿಲ್ಲೆಯಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲದಿರುವುದರಿಂದ ಕಳೆದ ಹದಿನೈದು ದಿನಗಳ ಹಿಂದೆ ಕೋಲಾರ ಎಪಿಎಂಸಿ ಮಾರುಕಟ್ಟೆಗೆ 1500 ಬಾಕ್ಸ್ ಕೊಂಡೊಯ್ಯಲಾಯಿತು. 15 ಕೆಜಿ ಇರುವ ಒಂದು ಬಾಕ್ಸ್ಗೆ 30-40 ರೂಪಾಯಿಗೆ ಮಾರಾಟವಾಯಿತು. ಸುಮಾರು 60 ಸಾವಿರ ಬಂದಿತ್ತು. ಕೀಳುವ ಕೂಲಿ, ಲಾರಿ ಬಾಡಿಗೆ, ಹಮಾಲಿ, ಎಲ್ಲ ಸೇರಿ ಕೈಯಿಂದಲೇ 20 ಸಾವಿರ ಕೊಡಬೇಕಾಯಿತು.''
ಟೊಮೆಟೊ ಬೆಳೆಯಿಂದ ಸುಮಾರು 15 ಲಕ್ಷ ನಷ್ಟ
""ಇಲ್ಲಿಂದ ಒಂದು ಬಾಕ್ಸ್ ಕೋಲಾರಕ್ಕೆ ತೆಗೆದುಕೊಂಡು ಹೋಗುವ ವೆಚ್ಚ 55 ರೂಪಾಯಿ ಆಗುತ್ತದೆ. ಲಾಭ ಬರುತ್ತದೆಂಬ ಸಂತೋಷದಿಂದ ಹೋದರೆ "ಬಂದ ದಾರಿಗೆ ಸುಂಕವಿಲ್ಲವೆಂಬ' ಗಾದೆ ಮಾತಿನಂತೆ ಮೈಮೇಲೆ ಬಂದಿದ್ದನ್ನು ನೋಡಿ, ಕಳೆದ ಹದಿನೈದು ದಿನಗಳಿಂದ ಉಳಿದ ಹಣ್ಣನ್ನು ಕೀಳದೆ ಗಿಡದಲ್ಲೇ ಹಾಗೆ ಬಿಟ್ಟಿವಿ ಸರ್. ಹೊಲದ ಕಡೆ ತಿರುಗಿ ನೋಡೋಣ ಅಂದರೂ ಮನಸ್ಸು ಬರುತ್ತಿಲ್ಲ. ಗುತ್ತಿಗೆ ಪಡೆದ ಜಮೀನಿನಲ್ಲಿ ಈರುಳ್ಳಿ, ಟೊಮೆಟೊ ಬೆಳೆಯಿಂದ ಸುಮಾರು 15 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಹುಟ್ಟೂರಾದ ಕೊವೇರಹಟ್ಟಿಯಲ್ಲಿ 60 ಎಕರೆ ಸ್ವಂತ ಜಮೀನಿನಲ್ಲಿ ಟೊಮೆಟೊ, ಈರುಳ್ಳಿ ಬೆಳೆದು 25 ಲಕ್ಷ ಸಾಲ ಆಗಿದೆ. ಸಾಲ ಕೊಟ್ಟವರು ಎಷ್ಟು ದಿನ ಕಾಯುತ್ತಾರೆ ಹೇಳಿ? ಹೀಗಾಗಿ ಜಮೀನು ಮಾರಿ ಕೊಟ್ಟವರ ಸಾಲ ತೀರಿಸಬೇಕಾಯಿತು'' ಎಂದು ರೈತ ಶಿವಣ್ಣ ಕೃಷಿಯಲ್ಲಿ ಉಂಟಾಗಿರುವ ಕಹಿ ಅನುಭವಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಲೇ ಬೇಸರ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ರೈತರು ಮಾತ್ರ ಈರುಳ್ಳಿ, ಟೊಮೆಟೊ, ಹೂವು, ತರಕಾರಿ ಸೇರಿದಂತೆ ಮತ್ತಿತರರ ಬೆಳೆಗಳನ್ನು ಬೆಳೆದು ಸಂಕಷ್ಟ ಅನುಭವಿಸುತ್ತಿರುವ ಘಟನೆಗಳು ಆಗಾಗ ಬೆಳಕಿಗೆ ಬರುತ್ತಿವೆ. ನಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸುತ್ತಾ ಕಾದು ನೋಡಬೇಕಿದೆ.