ಶ್ರೀಗಂಧದ ಸಹವಾಸವೇ ಬೇಡ; ಚಿತ್ರದುರ್ಗ ರೈತನ ಗೋಳಾಟ
ಚಿತ್ರದುರ್ಗ, ನವೆಂಬರ್ 4: ಇತ್ತೀಚಿನ ವರ್ಷಗಳಲ್ಲಿ ಸರ್ಕಾರ, ರೈತರಿಗೆ ಶ್ರೀಗಂಧ ಬೆಳೆಯಲು ಅನುಮತಿ ನೀಡಿದೆ. ಅದಕ್ಕೆ ಸಬ್ಸಿಡಿ ನೀಡಿ ಖರೀದಿಸುತ್ತಿದೆ ಕೂಡ. ಆದರೆ ಇಲ್ಲೊಬ್ಬ ರೈತ ಶ್ರೀಗಂಧವನ್ನು ಬೆಳೆದು ಹೈರಾಣಾಗಿ ಹೋಗಿದ್ದಾರೆ. ಇದರ ಸಹವಾಸವೇ ಸಾಕು ಎನ್ನುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿ ಗ್ರಾಮದ ರೈತ ದಿನೇಶ್ ತಮ್ಮ ಜಮೀನಿನಲ್ಲಿ ಶ್ರೀಗಂಧವನ್ನು ಬೆಳೆದು ಅದನ್ನು ಕಾಪಾಡಿಕೊಳ್ಳಲು ಸಾಧ್ಯವಾಗದೇ ಕಂಗೆಟ್ಟುಹೋಗಿದ್ದಾರೆ. ಈ ರೈತನ ಗೋಳು ಕೇಳುವವರೇ ಇಲ್ಲದಂತಾಗಿದೆ.
ಗಂಧದ ನಾಡಾಗಿದ್ದ ಮೈಸೂರಿನಲ್ಲೀಗ ಕಣ್ಮರೆಯಾಗುತ್ತಿದೆ ಶ್ರೀಗಂಧ
ತಾನು ಕೆಲವು ವರ್ಷಗಳಿಂದ ಬೆಳೆದಿರುವ ಶ್ರೀಗಂಧದ ಮರಗಳಿಗೆ ಕಳ್ಳರು ಕೊಡಲಿ ಹಾಕಿ ಕಳವು ಮಾಡುತ್ತಲೇ ಇದ್ದಾರೆ. ಪದೇ ಪದೇ ಕಳ್ಳತನ ನಡೆಯುತ್ತಲೇ ಇದೆ. ಈ ಕುರಿತು ಪೊಲೀಸ್ ಠಾಣೆಗೆ ಹೋಗಿ ಶ್ರೀಗಂಧದ ಮರಗಳನ್ನು ರಕ್ಷಿಸಿ ಕೊಡಿ ಎಂದು ದೂರು ಕೊಟ್ಟರೆ ಅಲ್ಲಿನ ಪೊಲೀಸರು, ಅರಣ್ಯ ಇಲಾಖೆಗೆ ಹೋಗಿ ಇದು ನಮಗೆ ಬರುವುದಿಲ್ಲ ಎಂದು ಕೈಚೆಲ್ಲಿದ್ದಾರೆ. ಅರಣ್ಯ ಇಲಾಖೆಗೆ ಹೋದರೆ, ಪೊಲೀಸರಿಗೆ ದೂರು ನೀಡಿ ಎಂದು ಅವರೂ ಸಬೂಬು ಹೇಳಿ ಕಳಿಸುತ್ತಿದ್ದಾರೆ ಎಂದು ಬೇಸರ ತೋಡಿಕೊಂಡಿದ್ದಾರೆ.
ಇದರಿಂದ ಕಂಗಾಲಾಗಿ ಹೋಗಿರುವ ದಿನೇಶ್, ಕಷ್ಟಬಿದ್ದು ಶ್ರೀಗಂಧದ ಮರಗಳನ್ನು ಬೆಳೆದು ಕಳ್ಳರ ಪಾಲು ಮಾಡುವಂತಾಗಿದೆ. ಹಾಗಿದ್ದರೆ ನಾವೇಕೆ ಇದನ್ನು ಬೆಳೆಯಬೇಕು? ಅರಣ್ಯ, ಪೊಲೀಸ್ ಇಲಾಖೆ ಬೇಜವಾಬ್ದಾರಿತನದಿಂದ ರೈತರಿಗೆ ಕಷ್ಟ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.