ಈರುಳ್ಳಿ ಬೆಳೆದ ರೈತರನ್ನು ಮತ್ತೆ ಸಂಕಷ್ಟಕ್ಕೆ ದೂಡಿರುವ ಟ್ವಿಸ್ಟರ್ ಶಿಲೀಂಧ್ರ ರೋಗ
ಚಾಮರಾಜನಗರ, ಮೇ 07: ಲಾಕ್ ಡೌನ್ ನಿಂದಾಗಿ ರಾಜ್ಯದಾದ್ಯಂತ ರೈತರಿಗೆ ಸಮಸ್ಯೆ ಎದುರಾಗಿದೆ. ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ, ಅವುಗಳಿಗೆ ಸೂಕ್ತ ಬೆಲೆಯೂ ಸಿಗದೇ ಕಷ್ಟ ಅನುಭವಿಸುತ್ತಿದ್ದಾರೆ.
ಆದರೆ ಈ ಸಮಸ್ಯೆಗಳ ನಡುವೆ ಚಾಮರಾಜನಗರದಲ್ಲಿ ಕೆಲವೆಡೆ ಈರುಳ್ಳಿ ಬೆಳೆದಿದ್ದ ರೈತರು ಫಸಲಿನ ಕನಸು ಕಾಣುತ್ತಿದ್ದಾಗಲೇ, ಬೆಳೆಗೆ ಟ್ವಿಸ್ಟರ್ ಶಿಲೀಂಧ್ರ ರೋಗ ಕಾಣಿಸಿಕೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈರುಳ್ಳಿ ಬೆಳೆಯಲ್ಲಿ ರೋಗ
ಕಷ್ಟದ ನಡುವೆಯೂ ಶ್ರಮಪಟ್ಟು ಬೆಳೆದ ಈರುಳ್ಳಿ ತಮ್ಮನ್ನು ಕಾಪಾಡಬಹುದೆಂದು ನಂಬಿದ್ದ ರೈತರಲ್ಲಿ ನಿರಾಸೆಯ ಕಾರ್ಮೋಡ ಸುಳಿಯುವಂತೆ ಮಾಡಿದೆ. ಈಗಾಗಲೇ ಗುಂಡ್ಲುಪೇಟೆ ತಾಲೂಕಿನ ಹಂಗಳ, ದೇಶಿಪುರ, ಬರಗಿ, ಹೊಂಗಹಳ್ಳಿ, ಚೆನ್ನಮಲ್ಲೀಪುರ ಮುಂತಾದ ಪ್ರದೇಶಗಳಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಗೆ ರೋಗ ಕಂಡು ಬಂದಿದ್ದು ಇದರಿಂದ ಎಕರೆಗೆ ಸುಮಾರು ಎಪ್ಪತ್ತು ಕ್ವಿಂಟಾಲ್ ನಷ್ಟು ಇಳುವರಿಯ ಕನಸು ಕಂಡಿದ್ದ ರೈತರು ತಲೆಮೇಲೆ ಕೈಹೊತ್ತು ಕುಳಿತು ಕೊಳ್ಳುವ ಸ್ಥಿತಿ ಬಂದೊದಗಿದೆ.
'ರಾಜ್ಯದ 30 ಜಿಲ್ಲೆಗಳ ಕೃಷಿ ಪರಿಸ್ಥಿತಿಯ ಸಮಗ್ರ ವರದಿ ತಯಾರು'
ಈರುಳ್ಳಿ ಬೆಳೆದವರಲ್ಲಿತ್ತು ಆಶಾ ಭಾವನೆ
ಈಗಾಗಲೇ ಕಲ್ಲಂಗಡಿ, ಎಲೆಕೋಸು, ಟೊಮೆಟೋ ಬೆಳೆದಿದ್ದ ರೈತರು ನಷ್ಟ ಅನುಭವಿಸಿದ್ದರು. ಆದರೆ ಈರುಳ್ಳಿ ಬೆಳೆದವರು ಒಂದಷ್ಟು ಆಶಾಭಾವನೆ ಹೊಂದಿದ್ದರು. ಸಾಮಾನ್ಯವಾಗಿ ಈರುಳ್ಳಿ ಬೆಳೆಯಲು ಮೂರು ತಿಂಗಳ ಅವಧಿ ಬೇಕಾಗುತ್ತದೆ. ಆದರೆ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈತರು, ಈ ರೋಗ ಇನ್ನಷ್ಟು ವ್ಯಾಪಿಸಿ ನಷ್ಟ ಅನುಭವಿಸಬಹುದೆಂಬ ಕಾರಣಕ್ಕೆ ಈಗಲೇ ಕೀಳಲು ಆರಂಭಿಸಿದ್ದಾರೆ. ಕೇವಲ ಎರಡೂವರೆ ತಿಂಗಳಲ್ಲಿ ಈರುಳ್ಳಿ ಕೀಳುತ್ತಿರುವುದರಿಂದ ಇಳುವರಿ ಕಡಿಮೆಯಾಗಿದೆ.
ಈರುಳ್ಳಿಗೆ ಟ್ವಿಸ್ಟರ್ ಶೀಲೀಂಧ್ರ ರೋಗ
ಟ್ವಿಸ್ಟರ್ ಶಿಲೀಂಧ್ರ ರೋಗ ಈರುಳ್ಳಿಗೆ ತಗುಲಿದರೆ ಈರುಳ್ಳಿ ಎಲೆಗಳು ಹಾಗೂ ಕಾಂಡದ ಭಾಗವು ತಿರುಚಿಕೊಂಡಂತಾಗಿ ನೆಲಕ್ಕೆ ಬೀಳುತ್ತದೆ, ರೋಗದ ತೀವ್ರತೆ ಹೆಚ್ಚಾದಲ್ಲಿ ಸುಟ್ಟಂತೆ ಆಗುತ್ತದೆ ಮತ್ತು ಬೆಳವಣಿಗೆ ಕುಂಠಿತವಾಗುತ್ತದೆ. ಈ ರೋಗವು ಗಾಳಿಯ ಮುಖಾಂತರ ಹರಡುತ್ತದೆ. ಇದನ್ನು ನಿಯಂತ್ರಿಸಲು ಮಣ್ಣಿನ ತೇವಾಂಶ ಕಡಿಮೆ ಮಾಡಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅನಿವಾರ್ಯವಾಗಿದೆ. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ, ಚನ್ನಮಲ್ಲಿಪುರ, ಹೊಂಗಹಳ್ಳಿ, ಬರಗಿ, ದೇಶಿಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿ ಬೆಳೆಯಲಾಗಿರುವ ಈರುಳ್ಳಿ ಬೆಳೆಯ ತಾಕುಗಳಿಗೆ ಕಂಡು ಬಂದಿರುವ ರೋಗಗಳನ್ನು ಗುರುತಿಸಿ ರೈತರಿಗೆ ನಿಯಂತ್ರಣದ ಕುರಿತಂತೆ ಮಾಹಿತಿ ನೀಡಿದ್ದಾರೆ.
ವಾಟ್ಸಪ್, ಫೇಸ್ ಬುಕ್ ಮೂಲಕ ಮಾವು ಮಾರಿ ಮಾದರಿಯಾದ ರೈತ!
ಅವಧಿಗೆ ಮುನ್ನವೇ ಬೆಳೆ ಕೀಳುತ್ತಿರುವ ರೈತರು
ರೋಗ ನಿಯಂತ್ರಣಕ್ಕೆ ಮಿಥೈಲ್ ಒಂದು ಗ್ರಾಂನ್ನು ಪ್ರತಿ ಲೀಟರ್ ನೀರಿನಲ್ಲಿ ಅಥವಾ ಹೆಕ್ಸಕೋನ ಜೋಲ್ ಒಂದು ಮಿಲಿಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡುವಂತೆಯೂ, ಐದರಿಂದ ಆರು ದಿನಗಳ ನಂತರ ಬೋರಾನ್ ಜಿಂಕ್ ಮತ್ತು ಮ್ಯಾಂಗನೀಸ್ ಲಘು ಪೋಷಕಾಂಶ ಎರಡು ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡುವಂತೆ ಚಾಮರಾಜನಗರದ ಕೃಷಿ ವಿಜ್ಞಾನ ಕೇಂದ್ರದ ರೋಗ ತಜ್ಞ ಡಾ. ಬಿ.ಪಂಪನಗೌಡ ತಿಳಿಸಿದ್ದಾರೆ. ಇನ್ನು ರೋಗಕ್ಕೆ ಹೆದರಿ ರೈತರು ಈರುಳ್ಳಿಯನ್ನು ಅವಧಿಗೆ ಮುನ್ನವೇ ಕೀಳುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದ್ದು ರೈತರು ನಷ್ಟ ಅನುಭವಿಸುವಂತಾಗಿದೆ.