ವಿಶ್ವದ ದೊಡ್ಡ ಏತ ನೀರಾವರಿ ಯೋಜನೆ ವೀಕ್ಷಿಸಿದ ಚಾಮರಾಜನಗರ ರೈತರು
ಚಾಮರಾಜನಗರ, ಡಿ. 28: ನೆರೆಯ ತೆಲಂಗಾಣ ರಾಜ್ಯವು ಅನುಷ್ಠಾನಗೊಳಿಸಿರುವ ವಿಶ್ವದ ಅತಿ ದೊಡ್ಡ ಏತ ನೀರಾವರಿ ಪ್ರಾಜೆಕ್ಟ್ 'ಕಾಳೇಶ್ವರಂ ಏತ ನೀರಾವರಿ ಯೋಜನೆ' ಯನ್ನು ರಾಜ್ಯದ ಚಾಮರಾಜನಗರ ರೈತರು ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ. ಯೋಜನೆಯ ಜಾರಿಯಿಂದ ರೈತರಿಗೆ ಆಗಿರುವ ಅನುಕೂಲಗಳನ್ನು ಪರಮಾರ್ಶೆ ನಡೆಸಿದರು.
ಕಳೆದ ಮೂರು ದಿನಗಳಿಂದ ಕಾಳೇಶ್ವರಂ ಯೋಜನಾ ಪ್ರದೇಶದ ಪ್ರವಾಸದಲ್ಲಿರುವ ರೈತರು 2014ರಲ್ಲಿ ಚಾಮರಾಜನಗರದಲ್ಲಿ ಮೆಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಷರ್ ಸಂಸ್ಥೆಯು ಜಾರಿ ಮಾಡಿರುವ ಆಲಂಬೂರ್ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆ ನೀರು ಅಭಿವೃದ್ಧಿ ಸಂರಕ್ಷಣಾ ಸಮಿತಿ ಸದಸ್ಯರುಗಳಾಗಿದ್ದು, ತೆಲಂಗಾಣದ ಕಾಳೇಶ್ವರಂ ಯೋಜನಾ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲಿಸಿದರು.
ಚಾಮರಾಜನಗರದ ಆಲಂಬೂರ್ ಸಮೀಪ ಅನುಷ್ಠಾನಗೊಂಡಿರುವ ಕೆರೆ ತುಂಬಿಸುವ ಯೋಜನೆ ಯಶಸ್ವಿನಿಂದ ಲಾಭಪಡೆದುಕೊಂಡಿರುವ ಇಲ್ಲಿನ ರೈತರ ತಂಡವು ಕಾಳೇಶ್ವರಂ ಯೋಜನೆಯ ಮೇಡಿಗಡ್ಡ ಮತ್ತು ಭೂತಲದಲ್ಲಿ ನಿರ್ಮಾಣಗೊಂಡಿರುವ ಗಾಯಿತ್ರಿ ಪಂಪ್ ಹೌಸ್ ಸೇರಿದಂತೆ ಯೋಜನೆಯ ಅಳತೆ- ಆಕಾರ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಏನಿದು ಕಾಳೇಶ್ವರಂ:
ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ಏತ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾಳೇಶ್ವರಂ ಏತ ನೀರಾವತಿ ಯೋಜನೆ ಜಾರಿಯಲ್ಲಿ ದೇಶಿಯ ನಿರ್ಮಿತ ಬೃಹತ್ ಮೋಟಾರ್ಗಳು, ಭೂತಳದಲ್ಲಿ ಪಂಪ್ ಹೌಸ್ ನಿರ್ಮಾಣ, ಅತಿ ಹೆಚ್ಚು ಪ್ರದೇಶದಲ್ಲಿ ಕೃಷಿಗೆ ಅವಕಾಶ, ಕುಡಿಯುವ ನೀರು, ಮೀನುಗಾರಿಕೆ, ಕೈಗಾರಿಕೆಗೆ ನೀರು, ಪ್ರವಾಸೋದ್ಯಮಕ್ಕೆ ಅವಕಾಶ ಹೀಗೆ ಹತ್ತು ಹಲವು ಕ್ಷೇತ್ರಗಳಿಗೆ ಅನುಕೂಲವಾಗಿರುವುದೇ ಅಲ್ಲದೆ, ಹಲವು ಜಾಗತಿಕ ದಾಖಲೆಗಳಿಗೆ ಸಾಕ್ಷಿಯಾಗಿದೆ.
ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಯಿಂದ ಗುರುತ್ವಾಕರ್ಷಣ ದಿಕ್ಕಿಗೆ ಹರಿಯುತ್ತಿದ್ದ ಗೋಧಾವರಿ ನದಿ ನೀರನ್ನು ತಂತ್ರಜ್ಞಾನದ ಸಮರ್ಥ ಅಳವಡಿಕೆ ಮೂಲಕ ಭೂತಲದ ಪಂಪ್ ಹೌಸ್ಗಳಿಗೆ ಹರಿಸಿ 600 ಅಡಿಗಳಷ್ಟು ಎತ್ತರಕ್ಕೆ ಪಂಪ್ ಮಾಡುವ ಮೂಲಕ ವ್ಯರ್ಥವಾಗುತ್ತಿದ್ದ ನೀರಿನ ಸದ್ಬಳಕೆ ಮಾಡಿಕೊಳ್ಳಲಾಗಿದೆ. ಈ ಯೋಜನೆ ದೇಶದೆಲ್ಲೆಡೆ ದೊಡ್ಡ ಸದ್ದುಮಾಡಿದೆ.
ಭೂತಲದಲ್ಲಿ ಬಹುಮಹಡಿ ಕಟ್ಟಡವನ್ನು ನಾಚಿಸುವಂತೆ ನಿರ್ಮಿಸಿರುವ ಬೃಹತ್ತಾದ ಪಂಪ್ ಹೌಸ್ ಮೂಲಕ ಎತ್ತುವಳಿ ಮಾಡಲಾಗುವ ನೀರನ್ನು ಅಣೆಕಟ್ಟೆಗಳಲ್ಲಿ ಸಂಗ್ರಹಿಸಿ, ಕಾಲುವೆ ಮತ್ತು ಪೈಪ್ಗಳ ಮೂಲಕ ಕೆರೆಗಳಿಗೆ ಹರಿಸಿ ಅಲ್ಲಿಂದ ನೀರನ್ನು ಉಪಯೋಗಿಸಲಾಗುತ್ತಿದೆ. ಕಾಳೇಶ್ವರಂ ಏತ ನೀರಾವರಿ ಯೋಜನೆ ಯಶಸ್ವಿ ಜಾರಿಗೆ ಅನುವಾಗುವಂತೆ ಮೆಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಷರ್ ಸಂಸ್ಥೆಯು (ಎಂ.ಇ.ಐ.ಎಲ್) 15 ಬೃಹದಾಕಾರದ ಪಂಪಿಂಗ್ ಕೇಂದ್ರಗಳನ್ನು ನಿರ್ಮಿಸಿದ್ದು, 5,159 ಮೆಘಾ ವಾಟ್ ಪಂಪಿಂಗ್ ಸಾಮರ್ಥ್ಯದ 104 ಪಂಪ್ ಅಳವಡಿಸಿದೆ. ಈ ಪ್ರಮಾಣದ ನೀರು ಎತ್ತುವಳಿ ಸಾಧನಗಳ ಅಳವಡಿಕೆ ವಿಶ್ವದಲ್ಲೇ ಇದು ಪ್ರಪ್ರಥಮ ಎನ್ನಲಾಗಿದೆ.
ಪ್ರತಿ ನಿತ್ಯ 2 ಟಿಎಂಸಿ ನದಿ ನೀರನ್ನು ಎತ್ತುವಳಿ ಮಾಡುವ ಸಲುವಾಗಿ ಯೋಜನೆಯ ಪ್ಯಾಕೇಜ್-8 ರಡಿಯಲ್ಲಿ ಗಾಯಿತ್ರಿ ಭೂತಳ ಪಂಪ್ ಹೌಸ್ ನಿರ್ಮಿಸಿದೆ. ಇದೇ ರೀತಿ ಮೇಡಿಘಡ್ಡ ಲಕ್ಷ್ಮೀ ಪಂಪ್ ಹೌಸ್ (17 ಮೋಟಾರ್), ಅನ್ನಾರಾಂ ಸರಸ್ವತಿ (12 ಮೋಟಾರ್), ಸುಂಡಿಲ ಪಾರ್ವತಿ (14), ಅನ್ನಪೂರ್ಣ (4), ರಂಗನಾಯಕ ಸಾಗರ (4), 52 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಕೊಂಡಪೋಚಮ್ಮ ಪ್ಯಾಕೇಜ್ನಡಿ ಅಕ್ಕರಾಮ್ ಮತ್ತು ಮರುಕೋಕ್ಲು ಎಂಬಲ್ಲಿ ತಲಾ ಎರಡು ಮೋಟಾರ್ಗಳನ್ನು ಅಳವಡಿಸಲಾಗಿದೆ
ಹೀಗೆ ಆಧುನಿಕ ತಂತ್ರಜ್ಞಾನದ ಬಳಕೆ ಮೂಲಕ ಯಶಸ್ವಿಯಾಗಿ ಜಾರಿ ಆಗಿರುವ ಕಾಳೇಶ್ವರಂ ಯೋಜನೆ ಮುಂದಿನ 10 ವರ್ಷಗಳಲ್ಲಿ ತೆಲಂಗಾಣ ರಾಜ್ಯದ ಚಿತ್ರಣವನ್ನೇ ಬದಲಿಸಲಿದೆ ಎಂದು ಹೇಳಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಹೆಮ್ಮೆಯ ಪ್ರತೀಕವಾಗಿದ್ದ ಈ ಬೃಹತ್ ಏತ ನೀರಾವರಿ ಯೋಜನೆ ಬಗ್ಗೆ ಜಾಗತಿಕ ಚಾನೆಲ್ ಡಿಸ್ಕವರಿ ಸಹ ವಿಶೇಷ ಕಾರ್ಯಕ್ರಮ ರೂಪಿಸಿ ಪ್ರಸಾರ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಾಳೇಶ್ವರಂ ಮಾದರಿ
"ಚಾಮರಾಜನಗರದಲ್ಲೂ 2014ರಿಂದ ಆಲಂಬೂರು ಕೆರೆ ತುಂಬಿಸುವ ಯೋಜನೆ ಯಶಸ್ವಿಯಾಗಿ ನಡೆದಿದೆ. ನಮಗೆ ಅನುಕೂಲವೂ ಆಗಿದೆ. ಆದರೆ ಇಲ್ಲಿ ಪ್ರತಿ ನಿತ್ಯ 2 ಟಿಎಂಸಿ ನೀರನ್ನು ನದಿಯಿಂದ ಎತ್ತುವುದು ಸಾಮಾನ್ಯವಾದ ಕೆಲಸವಲ್ಲ, ಇಂತಹ ಬೃಹತ್ ಕೆಲಸ ಇಲ್ಲಿ ಆಗಿದೆ. ಕರ್ನಾಟಕವೂ ಸೇರಿದಂತೆ ಇತರೆ ರಾಜ್ಯಗಳಲ್ಲೂ ಕಾಳೇಶ್ವರಂನಂತಹ ಯೋಜನೆಗಳನ್ನು ರೂಪಿಸುವ ಮೂಲಕ ಕೃಷಿಗೆ ಆದ್ಯತೆ ನೀಡಬೇಕು."
ಗುರುಮೂರ್ತಿ, ರೈತ
"ಇಲ್ಲಿ ಕಾಳೇಶ್ವರಂ ನೋಡಿ ಇದು ಎಷ್ಟು ಬೃಹತ್ತಾದ ಯೋಜನೆ ಎಂದು ಎನಿಸಿದೆ. ಇದರಿಂದ ರೈತರಿಗೆ ಒಳಿತಾಗಿದೆ. ನಮ್ಮ ರಾಜ್ಯದ ಸಚಿವರೂ ಇದನ್ನು ಬಂದು ನೋಡಿ, ನಮ್ಮ ರಾಜ್ಯದಲ್ಲೂ ಈ ಮಾದರಿ ಯೋಜನೆಗಳನ್ನು ಜಾರಿ ಮಾಡಿದರೆ ರೈತ ಸಮುದಾಯಕ್ಕೆ ಒಳಿತಾಗಲಿದೆ."-ಎಂ. ಗುರುಸ್ವಾಮಿ
"ನಾವು ಚಾಮರಾಜನಗರ ಭಾಗದಿಂದ ಇಲ್ಲಿಗೆ ಬಂದಿದ್ದೇವೆ. ನಮ್ಮಲ್ಲಿ 21 ಕೆರೆಗಳನ್ನು ತುಂಬುವ ಯೋಜನೆ ಉತ್ತಮವಾಗಿ ಜಾರಿ ಆಗಿತ್ತು. ಅದರಿಂದ ಇಲ್ಲಿಗೆ ಕಾಳೇಶ್ವರಂ ಯೋಜನೆ ನೋಡಲು ಬಂದೆವು, ಈ ಯೋಜನೆಯಿಂದ ಲಕ್ಷ ಕೋಟಿ ಎಕರೆಗೆ ನೀರಾವರಿ ಸಾಧ್ಯವಾಗಿದೆ. ದೇಶದ ಎಲ್ಲೆಡೆ ಇಂತಹ ಯೋಜನೆಗಳು ಜಾರಿ ಆಗಬೇಕು." ಎಚ್.ಕೆ. ನಾಗರಾಜ್