ಚಾಮರಾಜನಗರದ ರೈತರನ್ನು ಸಂಕಷ್ಟಕ್ಕೆ ತಳ್ಳಿದ ಈರುಳ್ಳಿ ಬೆಳೆ
ಚಾಮರಾಜನಗರ, ಮೇ 31: ಕುಸಿದ ದರ, ರೋಗದ ಭಯ, ಕಾರ್ಮಿಕರ ಸಮಸ್ಯೆ... ಹೀಗೆ ಹಲವು ಸಮಸ್ಯೆಗಳಿಂದ ಈರುಳ್ಳಿ ಬೆಳೆದಿರುವ ಜಿಲ್ಲೆಯ ರೈತರು ಬಳಲುತ್ತಿದ್ದು, ಇದೀಗ ಇಲ್ಲಿನ ರೈತರಿಗೆ ಈರುಳ್ಳಿ ಬಗ್ಗೆ ಮಾತನಾಡುವಾಗಲೆಲ್ಲ ಕಣ್ಣೀರು ಬರುವಂತಾಗಿದೆ.
ಈ ಬಾರಿ ರೈತರ ನಸೀಬು ಸರಿಯಿಲ್ಲದಂತಾಗಿದೆ. ನೀರಿನ ಸಮಸ್ಯೆ, ರೋಗಬಾಧೆಯನ್ನು ಮೀರಿ ಒಂದಷ್ಟು ರೈತರು ಈರುಳ್ಳಿಯನ್ನು ಬೆಳೆದಿದ್ದರೂ ಸಮರ್ಪಕ ಬೆಲೆಯಿಲ್ಲದೆ ಕಣ್ಣೀರಿಡುವಂತಾಗಿದೆ. ಟೊಮಾಟೊ, ಎಲೆಕೋಸು, ಕಲ್ಲಂಗಡಿ ಮೊದಲಾದ ಬೆಳೆಯನ್ನು ಬೆಳೆದ ರೈತರು ಈಗಾಗಲೇ ಸಂಕಷ್ಟಕ್ಕೀಡಾಗಿದ್ದಾರೆ. ಅವರ ನಡುವೆ ಈರುಳ್ಳಿ ಬೆಳೆದ ರೈತನಲ್ಲಿ ಒಂದಿಷ್ಟು ಆಶಾಭಾವನೆ ಮೂಡಿತ್ತು. ಆದರೆ ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಕೇರಳ ಮತ್ತು ತಮಿಳುನಾಡಿನಿಂದ ವ್ಯಾಪಾರಿಗಳು ಇಲ್ಲಿನ ಮಾರುಕಟ್ಟೆಗೆ ಆಗಮಿಸದ ಹಿನ್ನೆಲೆಯಲ್ಲಿ ಬೇಡಿಕೆ ಕುಸಿತಗೊಂಡಿದ್ದು, ಬೆಳೆ ಬೆಳೆಯಲು ಮಾಡಿದ ಖರ್ಚು ಬಾರದ ಪರಿಸ್ಥಿತಿ ಬಂದೊದಗಿದೆ.
ಈರುಳ್ಳಿ ಬೆಳೆದ ರೈತರನ್ನು ಮತ್ತೆ ಸಂಕಷ್ಟಕ್ಕೆ ದೂಡಿರುವ ಟ್ವಿಸ್ಟರ್ ಶಿಲೀಂಧ್ರ ರೋಗ
ಕಳಪೆ ಬಿತ್ತನೆ ಬೀಜದಿಂದ ರೋಗ
ಈ ಹಿಂದೆ ಈರುಳ್ಳಿ ಬೆಲೆ ಗಗನಕ್ಕೇರಿತ್ತು. ಜತೆಗೆ ಸಣ್ಣ ಈರುಳ್ಳಿಗೆ ದೊರೆಯುತ್ತಿದ್ದ ಬೆಲೆಯನ್ನು ಗಮನಿಸಿದ ರೈತರು ತಾವು ಬೆಳೆದರೆ ಒಂದಷ್ಟು ಲಾಭ ಸಿಗಬಹುದೇನೋ ಎಂಬ ಉದ್ದೇಶದಿಂದ 50 ಕಿಲೋ ತೂಕದ ಒಂದು ಚೀಲದ ಬಿತ್ತನೆ ಈರುಳ್ಳಿಗೆ 6 ರಿಂದ 7 ಸಾವಿರ ರೂಪಾಯಿ ನೀಡಿ ಖರೀದಿಸಿ ತಮ್ಮ ಜಮೀನಿನಲ್ಲಿ ನಾಟಿ ಮಾಡಿದ್ದರು. ಇದಕ್ಕೆ ಕಾರಣವೂ ಇತ್ತು. ಲಾಕ್ ಡೌನ್ ಇಲ್ಲದೆ ಹೋಗಿದ್ದರೆ ತಮಿಳುನಾಡಿನಿಂದ ಉತ್ತಮ ಬಿತ್ತನೆ ಬೀಜ ತರಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಲಾಕ್ ಡೌನ್ ಕಾರಣ ಸ್ಥಳೀಯವಾಗಿ ದೊರೆಯುವ ಬಿತ್ತನೆ ಬೀಜವನ್ನೇ ರೈತರು ಬಳಸಿದ್ದರು.
ಈರುಳ್ಳಿಯನ್ನು ಕೀಳುವುದೇ ಸಮಸ್ಯೆ
ಆದರೆ ಅದು ಕಳಪೆ ಗುಣಮಟ್ಟದಾಗಿತ್ತು. ಹೀಗಾಗಿ ನಾಟಿ ಮಾಡಿದಲ್ಲಿಯೇ ಕೊಳೆಯಲಾರಂಭಿಸಿತು. ಜೊತೆಗೆ ಬೆಳೆಗೂ ರೋಗ ಕಾಣಿಸಿಕೊಂಡಿತು. ಇದಕ್ಕೆ ರಾಸಾಯನಿಕ ಔಷಧಿ ಸಿಂಪಡಿಸಿ ಹೇಗೋ ಬೆಳೆಯನ್ನು ಉಳಿಸಿಕೊಂಡರೂ ಸರಿಯಾಗಿ ಇಳುವರಿ ಬರುತ್ತಿಲ್ಲ. ಹೇಗೋ ಕಷ್ಟಪಟ್ಟು ಬೆಳೆದ ಈರುಳ್ಳಿ ಈಗ ಕೊಯ್ಲಿಗೆ ಬಂದಿದ್ದು ಅದನ್ನು ಕೀಳುವುದೇ ಸಮಸ್ಯೆಯಾಗಿದೆ. ಏಕೆಂದರೆ ಈಗಾಗಲೇ ಗ್ರಾಮ ಪಂಚಾಯಿತಿಗಳು ನರೇಗಾ ಯೋಜನೆಯಡಿ ಕೆಲಸ ನೀಡಿರುವುದರಿಂದ ಸ್ಥಳೀಯ ಕಾರ್ಮಿಕರು ಅಲ್ಲಿಗೆ ಕೆಲಸಕ್ಕೆ ತೆರಳುತ್ತಿದ್ದು, ಈರುಳ್ಳಿ ಕೀಳಲು ಕೂಲಿ ಕಾರ್ಮಿಕರ ಸಮಸ್ಯೆ ತಲೆದೋರಿದೆ.
"ನನಗೆ ಸಹಾಯ ಬೇಡ, ಈರುಳ್ಳಿ ಖರೀದಿಸಿ"; ವಿಡಿಯೋ ಮಾಡಿ ಮನವಿ ಮಾಡಿದ ಹಿರಿಯೂರು ರೈತ
ಮಾರುಕಟ್ಟೆಯಲ್ಲಿ ಈರುಳ್ಳಿಗೆ ಕುಸಿದ ಬೇಡಿಕೆ
ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕ್ವಿಂಟಾಲ್ ಗೆ ಎರಡರಿಂದ ಮೂರು ಸಾವಿರ ಇತ್ತಾದರೂ ಅದು ಸದ್ಯ 1500ಕ್ಕೆ ಬಂದು ನಿಂತಿದೆ. ಈ ಬೆಲೆ ದೊರೆತರೆ ಈರುಳ್ಳಿ ಬೆಳೆಯಲು ಮಾಡಿದ ಖರ್ಚು ಕೂಡ ಬರುವುದಿಲ್ಲ. ಹೀಗಾಗಲು ಕಾರಣ ಹೊರಗಿನಿಂದ ವ್ಯಾಪಾರಿಗಳು ಬಾರದಿರುವುದು. ಇಲ್ಲಿನ ಈರುಳ್ಳಿಗೆ ಕೇರಳ ಮತ್ತು ತಮಿಳುನಾಡಿನಲ್ಲಿ ಹೆಚ್ಚಿನ ಬೇಡಿಕೆಯಿದೆ. ಆದರೆ ಇದೀಗ ಅಲ್ಲಿಂದ ವ್ಯಾಪಾರಿಗಳು ಬರುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತಗೊಂಡಿದೆ. ಆದ್ದರಿಂದ ಬೆಲೆಯಲ್ಲಿ ಇಳಿಕೆಯಾಗಿದೆ. ಅದು ರೈತರ ಮೇಲೆ ಪರಿಣಾಮ ಬೀರಿದೆ.
ರೈತನಿಗೆ ನೂರೆಂಟು ಸಮಸ್ಯೆಗಳು
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಹೆಚ್ಚಿನವರು ಸಣ್ಣ ಈರುಳ್ಳಿ ಬೆಳೆಯಲು ಮುಂದಾಗಿದ್ದರೆ, ಕೆಲವರು ಮಿಶ್ರಬೆಳೆಯಾಗಿಯೂ ಬೆಳೆದಿದ್ದರು. ಆದರೆ ಈ ಪೈಕಿ ಕಾಡಂಚಿನ ಹಂಗಳ, ಕಲ್ಲಿಗೌಡನಹಳ್ಳಿ, ಗೋಪಾಲಪುರ, ಬೇರಂಬಾಡಿ, ಚನ್ನಮಲ್ಲಿಪುರ, ದೇಶಿಪುರ, ಆಲತ್ತೂರು ಮಂಚಹಳ್ಳಿ ಮುಂತಾದ ಗ್ರಾಮಗಳಲ್ಲಿ ಬೆಳೆದ ಈರುಳ್ಳಿಗೆ ಕೊಳೆರೋಗ ಕಾಣಿಸಿಕೊಂಡಿದೆ. ಇದು ಇನ್ನೊಂದು ರೀತಿಯಲ್ಲಿ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಕೆಲವು ಸಮಯಗಳ ಹಿಂದೆ ಈರುಳ್ಳಿ ಕೊಳ್ಳುವವರು ಬೆಲೆ ಹೆಚ್ಚಳದಿಂದ ಕಣ್ಣೀರಿಡುವಂತಾಗಿತ್ತು. ಆದರೆ ಈಗ ಈರುಳ್ಳಿ ಬೆಳೆದ ರೈತನೇ ಹಲವು ಸಮಸ್ಯೆಗಳಿಂದ ಕಣ್ಣೀರಿಡುವಂತಾಗಿದೆ.