ರೈತರ ಟ್ರ್ಯಾಕ್ಟರ್ ರ್ಯಾಲಿ ವಿರುದ್ಧದ ಅರ್ಜಿ ವಾಪಸ್ ಪಡೆದ ಕೇಂದ್ರ
ನವದೆಹಲಿ, ಜನವರಿ 20: ಗಣರಾಜ್ಯೋತ್ಸವ ದಿನದಂದು ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ ರ್ಯಾಲಿ ನಿಲ್ಲಿಸುವಂತೆ ನಿರ್ದೇಶನ ಕೋರಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ಬುಧವಾರ ವಾಪಸ್ ಪಡೆದಿದೆ.
ಜನವರಿ 26ರ ಗಣರಾಜ್ಯೋತ್ಸವ ದಿನದಂದು ರೈತರು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದು, ಜಾಥಾದಿಂದ ನಗರದಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ ಗೆ ಅಡ್ಡಿಯಾಗುತ್ತದೆ. ಈ ಕಾರಣಕ್ಕೆ ರ್ಯಾಲಿ ನಡೆಸದಂತೆ ರೈತರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಈ ಹಿಂದೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿತ್ತು.
ಗಣರಾಜ್ಯೋತ್ಸವದಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿ; ಪೊಲೀಸರ ನಿರ್ಧಾರಕ್ಕೆ ಬಿಟ್ಟ ಕೋರ್ಟ್
ಜನವರಿ 18ರಂದು ಈ ಅರ್ಜಿ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್, ರೈತರ ಟ್ರ್ಯಾಕ್ಟರ್ ರ್ಯಾಲಿಗೆ ಅವಕಾಶ ಕೊಡುವುದು, ಬಿಡುವುದು ಪೊಲೀಸರಿಗೆ ಸೇರಿದ ವಿಚಾರ ಎಂದು ತಿಳಿಸಿ ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಿತ್ತು. ಇಂದು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಹಿಂದಿನ ಹೇಳಿಕೆಯನ್ನೇ ಪುನರುಚ್ಚರಿಸಿದೆ.
"ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಪೊಲೀಸರದ್ದು. ರೈತರ ಟ್ರ್ಯಾಕ್ಟರ್ ರ್ಯಾಲಿ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಪೊಲೀಸರಿಗೆ ಇರುತ್ತದೆ. ಈ ವಿಷಯದಲ್ಲಿ ನಾವು ಯಾವುದೇ ನಿರ್ದೇಶನ ನೀಡುವುದಿಲ್ಲ. ನೀವು ಬೇಕಿದ್ದರೆ ಈ ಅರ್ಜಿಯನ್ನು ಹಿಂಪಡೆಯಬಹುದು. ಅಧಿಕಾರದಲ್ಲಿರುವ ನೀವೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಆದೇಶ ಹೊರಡಿಸಲು ನಿಮಗೆ ಅಧಿಕಾರವಿದೆ. ಅದನ್ನು ಬಳಸಿಕೊಳ್ಳಿ" ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ಎಎಸ್ ಬೋಪಣ್ಣ, ವಿ ರಾಮಸುಬ್ರಹ್ಮಣಿಯಂ ಅವರನ್ನೊಳಗೊಂಡ ಪೀಠ ಬುಧವಾರ ತಿಳಿಸಿದೆ.
ಈ ಎಲ್ಲಾ ಬೆಳವಣಿಗೆಗಳಿಂದ ಕೇಂದ್ರ ಸರ್ಕಾರವು ಪೊಲೀಸರ ಮೂಲಕ ಸಲ್ಲಿಸಲಾಗಿದ್ದ ಅರ್ಜಿಯನ್ನು ಹಿಂಪಡೆದುಕೊಂಡಿದೆ.