ಈರುಳ್ಳಿ ಬೆಲೆ ಏರಿಕೆ: ಆಮದು ನಿಯಮಗಳನ್ನು ಸಡಿಲಿಸಿದ ಕೇಂದ್ರ ಸರ್ಕಾರ
ನವದೆಹಲಿ, ಅಕ್ಟೋಬರ್ 22: ಪ್ರಮುಖವಾಗಿ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಚಂಡಮಾರುತದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳೆ ನಾಶವಾಗುತ್ತಿದೆ. ಇದರಿಂದ ಈರುಳ್ಳಿ ಬೆಲೆಯಲ್ಲಿ ವಿಪರೀತ ಏರಿಕೆಯಾಗುತ್ತಿದ್ದು, ಕಳೆದ ವರ್ಷದಂತೆಯೇ ಪ್ರತಿ ಕೆಜಿ ದರ 100-200ರೂ ದರವನ್ನು ದಾಟುವ ಭೀತಿ ಎದುರಾಗಿದೆ.
ಈರುಳ್ಳಿ ಉತ್ಪಾದನೆಗೆ ಹೊಡೆತ ಬಿದ್ದಿದ್ದು, ಪೂರೈಕೆ ತೀವ್ರ ಕುಸಿತ ಕಂಡಿದೆ. ಹೀಗಾಗಿ ಈಗಾಗಲೇ ಪ್ರತಿ ಕೆಜಿ ದರ 70 ರೂ. ಅನ್ನೂ ದಾಟಿದೆ. ಮುಂದಿನ ದಿನಗಳಲ್ಲಿ ದರ ಏರಿಕೆ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರ ಸರ್ಕಾರ ಈರುಳ್ಳಿ ಆಮದಿನ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿದೆ.
ಭಾರಿ ಮಳೆಯಿಂದಾಗಿ ಬೆಳೆ ಹಾನಿ; ಈರುಳ್ಳಿ ಬೆಲೆ ಗಗನಕ್ಕೆ
ಡಿಸೆಂಬರ್ 15ರವರೆಗೂ ಈರುಳ್ಳಿ ಆಮದು ಮೇಲಿನ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದ್ದು, ದೇಶದೊಳಗಿನ ಪೂರೈಕೆಗೆ ಉತ್ತೇಜನ ನೀಡುವ ಮೂಲಕ ಜನಸಾಮಾನ್ಯರ ಹೊರೆ ತಗ್ಗಿಸುವ ಪ್ರಯತ್ನ ಮಾಡಿದೆ. ಬೆಲೆ ಏರಿಕೆಗೆ ಕಡಿವಾಣ ಹಾಕಲು ತನ್ನ ಸಂಗ್ರಹಾಗಾರದಿಂದ ಮುಕ್ತ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆ ಮಾಡುವುದಾಗಿಯೂ ಕೇಂದ್ರ ಸರ್ಕಾರ ಹೇಳಿದೆ. ಮುಂದೆ ಓದಿ.
ಬೆಲೆ ಇಳಿಯುವ ಭರವಸೆ
ಖಾರಿಫ್ ಬೆಳೆಯ ಅಂದಾಜು 37 ಲಕ್ಷ ಟನ್ ಈರುಳ್ಳಿ ಮಂಡಿಗಳಿಗೆ ಆಗಮಿಸಲು ಶುರುವಾಗಿದೆ. ಇದು ಕೂಡ ದರ ಏರಿಕೆಗೆ ಕಡಿವಾಣ ಹಾಕಲು ನೆರವಾಗಲಿದೆ ಎಂದು ತಿಳಿಸಿದೆ. ಕಳೆದ 10 ದಿನಗಳಲ್ಲಿ ಈರುಳ್ಳಿ ಬೆಲೆಯಲ್ಲಿ ಕೆಜಿಗೆ 11.56 ರೂ ದಂತೆ ದರ ಏರಿಕೆಯಾಗಿದೆ. ಇದರಿಂದ ದೇಶದ ವಿವಿಧೆಡೆ ಈರುಳ್ಳಿ ಬೆಲೆ 51 ರೂ ದಾಟಿದೆ. ಇನ್ನೂ ಅನೇಕ ಕಡೆ ಈರುಳ್ಳಿ ಬೆಲೆ ಮತ್ತಷ್ಟು ಜಿಗಿತ ಕಂಡಿದೆ. ಕಳೆದ ವರ್ಷ ಈಅವಧಿಗೆ ಹೋಲಿಸಿದರೆ ಈರುಳ್ಳಿ ದರ ಈ ಬಾರಿ ಶೇ 12.13ರಷ್ಟು ಹೆಚ್ಚಿದೆ.
ವಿವಿಧ ನಿರ್ಬಂಧ ಸಡಿಲ
ಡಿಸೆಂಬರ್ 15ರವರೆಗೂ ಈರುಳ್ಳಿ ಆಮದು ಮಾಡಿಕೊಳ್ಳಲು ಪ್ಲಾಂಟ್ ಕ್ವಾರೆಂಟೈನ್ ಆರ್ಡರ್ (ಪಿಕ್ಯೂ) 2003 ಅಡಿ ಪೈಟೊಸ್ಯಾನಿಟರಿ ಸರ್ಟಿಫಿಕೇಟ್ (ಪಿಎಸ್ಸಿ) ಹೆಚ್ಚುವರಿ ಘೋಷಣೆ ಹಾಗೂ ಕೀಟ ನಿಯಂತ್ರಕದ ಮೇಲಿನ ಕೆಲವು ನಿಬಂಧನೆಗಳನ್ನು ಸಡಿಲಗೊಳಿಸಲಾಗಿದೆ.
ಬೆಳಗಾವಿಯಲ್ಲಿ ಮಳೆಯಿಂದ ನೆಲಕಚ್ಚಿದ 200 ಎಕರೆ ಈರುಳ್ಳಿ ಬೆಳೆ
ದೇಶದ ಹೈ ಕಮಿಷನರ್ಗಳಿಗೆ ಸೂಚನೆ
ದೇಶಕ್ಕೆ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಆಮದು ಮಾಡಿಕೊಳ್ಳಲು ಉತ್ತೇಜನ ನೀಡಲು ಸಂಬಂಧಿತ ದೇಶಗಳಲ್ಲಿನ ಹೈ ಕಮಿಷನರ್ಗಳು ವ್ಯಾಪಾರ ಕಂಪೆನಿಗಳನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ. ಈ ರೀತಿಯ ಆಮದು ಈರುಳ್ಳಿಗಳು ಯಾವುದೇ ಕೀಟ ನಿಯಂತ್ರಕಗಳು ಇಲ್ಲದೆ ಪಿಎಸ್ಸಿ ಆಧಾರದಲ್ಲಿ ಭಾರತದ ಬಂದರುಗಳಿಗೆ ಬರಲಿದೆ. ಬಂದರುಗಳಲ್ಲಿ ಭಾರತವೇ ಅವುಗಳಿಗೆ ಕೀಟ ನಿಯಂತ್ರಕಗಳನ್ನು ಬಳಸುತ್ತದೆ.
ಈರುಳ್ಳಿ ಬಿತ್ತನೆ ಮಾಡುವಂತಿಲ್ಲ
ಆಮದಾದ ಈರುಳ್ಳಿಗಳಲ್ಲಿ ಕೀಟ, ಹುಳುಗಳು ಕಂಡುಬಂದರೆ ಕೀಟನಿಯಂತ್ರಕಗಳನ್ನು ಸಿಂಪಡಿಸಿ ಅವುಗಳನ್ನು ನಿರ್ಮೂಲನೆ ಮಾಡಲಾಗುತ್ತದೆ. ಹೆಚ್ಚುವರಿ ಪರಿಶೀಲನಾ ಶುಲ್ಕವಿಲ್ಲದೆ ಅವುಗಳ ಸರಬರಾಜಗೆ ಅನುವು ಮಾಡಿಕೊಡಲಾಗುತ್ತದೆ. ಹೀಗೆ ಆಮದುದಾರರಿಂದ ಪಡೆದ ಈರುಳ್ಳಿಯನ್ನು ಸೇವನೆಗೆ ಮಾತ್ರವ ಬಳಸಬೇಕು, ಅವುಗಳನ್ನು ಬಿತ್ತನೆಗೆ ಉಪಯೋಗಿಸುವಂತಿಲ್ಲ.