ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷ ತಡೆಹಿಡಿಯಲು ಕೇಂದ್ರ ಸರ್ಕಾರ ಸಿದ್ಧ
ನವದೆಹಲಿ, ಜನವರಿ 20: ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಇನ್ನು ಒಂದೂವರೆ ವರ್ಷದವರೆಗೂ ತಡೆಹಿಡಿಯಲು ಕೇಂದ್ರ ಸರ್ಕಾರ ಸಿದ್ಧವಿದ್ದು, ಅಫಿಡವಿಟ್ನಲ್ಲಿ ಸುಪ್ರೀಂಕೋರ್ಟ್ಗೆ ಈ ಮಾಹಿತಿ ನೀಡಲಿದೆ ಎಂದು ಬುಧವಾರ ಸರ್ಕಾರದ ಜತೆ ಹತ್ತನೇ ಸುತ್ತಿನ ಮಾತುಕತೆ ನಡೆಸಿದ ಬಳಿಕ ರೈತರು ಹೇಳಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಕೃಷಿ ಕಾಯ್ದೆಗಳನ್ನು ಜಾರಿಗೆ ತರುವುದಕ್ಕೆ ಕಳೆದ ವಾರ ತಾತ್ಕಾಲಿಕ ತಡೆ ನೀಡಿದ್ದ ಸುಪ್ರೀಂಕೋರ್ಟ್, ಕಾಯ್ದೆಯ ಕುರಿತು ಎರಡೂ ಕಡೆಯ ಅಭಿಪ್ರಾಯ, ವಾದಗಳನ್ನು ಆಲಿಸಲು ವಿಶೇಷ ಸಮಿತಿಯೊಂದನ್ನು ರಚಿಸಿತ್ತು. ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ ನಡುವೆ ನಡೆದ ಒಂಬತ್ತು ಸುತ್ತಿನ ಮಾತುಕತೆಗಳು ಯಾವುದೇ ಫಲಿತಾಂಶ ನೀಡದೆ ಅಂತ್ಯಗೊಂಡ ಬಳಿಕ ಈ ಆದೇಶ ನೀಡಲಾಗಿತ್ತು.
ರೈತರ ಟ್ರ್ಯಾಕ್ಟರ್ ರ್ಯಾಲಿ ವಿರುದ್ಧದ ಅರ್ಜಿ ವಾಪಸ್ ಪಡೆದ ಕೇಂದ್ರ
'ಹತ್ತನೇ ಸುತ್ತಿನ ಮಾತುಕತೆಯಲ್ಲಿ ಕೇಂದ್ರ ಸರ್ಕಾರ ನಮ್ಮ ಮುಂದೆ ಹೊಸ ಪ್ರಸ್ತಾಪ ಇರಿಸಿದೆ. ಮೂರು ಕೃಷಿ ಕಾಯ್ದೆಗಳ ಜತೆಗೆ ನಮ್ಮ ಎಲ್ಲ ಬೇಡಿಕೆಗಳನ್ನು ಪರಿಗಣಿಸುವ ಸಲುವಾಗಿ ವಿಶೇಷ ಸಮಿತಿ ರಚಿಸಲು ಸಿದ್ಧವಾಗಿದೆ. ಈ ಪ್ರಸ್ತಾಪವನ್ನು ಪರಿಗಣಿಸುತ್ತೇವೆ' ಎಂದು ಅಖಿಲ ಭಾರತ ಕಿಸಾನ್ ಸಭಾದ ಬಾಲ್ಕಿಶನ್ ಸಿಂಗ್ ಬ್ರಾರ್ ಹೇಳಿದ್ದಾರೆ.
'ಸಮಿತಿಯು ತನ್ನ ಪರಾಮರ್ಶೆಗಳನ್ನು ಪೂರ್ಣಗೊಳಿಸುವವರೆಗೂ ಮುಂದಿನ ಒಂದೂವರೆ ವರ್ಷದವರೆಗೆ ಎಲ್ಲ ಮೂರು ಕೃಷಿ ಕಾಯ್ದೆಗಳ ಅನುಷ್ಠಾನವನ್ನು ಸರ್ಕಾರ ತಡೆಹಿಡಿಯುವುದಾಗಿ ಪ್ರಸ್ತಾಪ ಸಲ್ಲಿಸಿದೆ' ಎಂದು ಅವರು ತಿಳಿಸಿದ್ದಾರೆ.
ಕೃಷಿ ಕಾಯ್ದೆಗಳ ಕಥೆ: ರೈತರಿಗೆ ಸಮಾಧಾನ ನೀಡದ "ಸಂಧಾನ" ಸಭೆಗಳ ಸಾಲು!
ಇಂದಿನ ಸಭೆಯಲ್ಲಿ ಸರ್ಕಾರ ಮುಂದಿಟ್ಟ ಪ್ರಸ್ತಾಪವನ್ನು ನಾವು ಒಪ್ಪಿಕೊಂಡಿಲ್ಲ. ಮೂರು ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂಬ ನಿಲುವಿಗೆ ನಾವು ಅಂಟಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಸರ್ಕಾರ ಮತ್ತು ರೈತ ಪ್ರತಿನಿಧಿಗಳ ನಡುವಿನ ಮುಂದಿನ ಸಭೆಯು ಜನವರಿ 22ರಂದು ನಡೆಯಲಿದೆ.